
ಮನೆ ಮತ್ತು ಮನಗಳಿಗೆ ಸಿದ್ದರಾಮೇಶ್ವರ ಎಂಬ ಸಂಕಲ್ಪದೊಂದಿಗೆ ಸಮಾಜ ಪರಿವರ್ತನೆಗೆ ಹೊರಟ ಯುವ ಸನ್ಯಾಸಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ದುಡಿಯುವ ಸಮುದಾಯವನ್ನು ದುಶ್ಚಟಮುಕ್ತಗೊಳಿಸುವ ಪ್ರಯತ್ನವನ್ನು ನಿರಂತರವಾಗಿ ನಡೆಸುತ್ತಿದ್ದಾರೆ.
ಗ್ರಾಮ ಮಟ್ಟದಿಂದ ಆರಂಭಿಸಿ ಇಂದು ರಾಷ್ಟ್ರೀಯ ಭೋವಿ ಜನೋತ್ಸವ ಎಂಬ ಬೃಹತ್ ವೇದಿಕೆವರೆಗೆ ನಡೆಸಿದ ಅಭಿಯಾನಕ್ಕೆ ಈಗ 25 ಸಂವತ್ಸರಗಳು.

ಇದನ್ನೂ ಓದಿ: ಬದುಕು ಬೋರಾದಾಗ ರಿಫ್ರೆಶ್ ಆಗಲು ಜೋಗಿಮಟ್ಟಿಗೆ ಬನ್ನಿ | ಇಲ್ಲಿನ ಹಸಿರು, ಗಾಳಿ, ನೋಟ ನಿಮ್ಮನ್ನು ರೀಚಾರ್ಜ್ ಮಾಡುತ್ತೆ
ಸಮಾಜದ ಸಂಘಟನೆ ಎನ್ನುವ ಸವಾಲು ಸ್ವೀಕರಿಸಿದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಖಾವಿಧಾರಿಯಾಗಿ 25 ವಸಂತಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ತಾವು ಕ್ರಮಿಸಿದ ಹಾದಿಯ ಸಿಂಹಾವಲೋಕನ ಮಾಡಿದಾಗ ಸಾಕಷ್ಟು ಹೆಜ್ಜೆ ಗುರುತುಗಳು ಗೋಚರಿಸುತ್ತಿವೆ.
ಆದರೆ, ಇಷ್ಟಕ್ಕೆ ಮೈಮರೆಯದ ಸ್ವಾಮೀಜಿ, ಸಾಗಿದ್ದು, ಕಡಿಮೆ, ಸಾಗಬೇಕಾಗಿದ್ದು ಬಹಳ. ಬಾಬಾ ಸಾಹೇಬ್ ಅಂಬೇಡ್ಕರರೇ ನಮಗೆ ಪಥದರ್ಶಕರು. ಅವರು ಮಾಡಿದ ಕೆಲಸದಲ್ಲಿ ನಾವು ಶೇ.1 ರಷ್ಟನ್ನೂ ಮಾಡಿಲ್ಲ ಎನ್ನುವ ಎಚ್ಚರಿಕೆಯನ್ನೂ ಹೊಂದಿದ್ದಾರೆ.
ಇದನ್ನೂ ಓದಿ: ಬಯಲು ಸೀಮೆಯ ಊಟಿ | ಸ್ವರ್ಗವ ನಾಚಿಸುವ ಜೋಗಿಮಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು..!
ಭಾರತ ಜಗದ್ಗುರು ಆಗಬೇಕು ಎನ್ನುವ ಕಲ್ಪನೆ ಇದ್ದರೆ ಸಾಲದು. ಹಾಗಾಗಲು ಇಲ್ಲಿನ ಪ್ರತಿಯೊಬ್ಬರ ಬದುಕಿನಲ್ಲೂ ಸುಧಾರಣೆ ಆಗಬೇಕು. ನಾವೇ ಸರ್ಕಾರ ಆಗಬೇಕು. ಉದ್ಯೋಗ ಹರಸಿ ಹೋಗುವುದಕ್ಕಿಂತ, ಉದ್ಯೋಗ ಸೃಷ್ಟಿಸುವವರಾಗಬೇಕು. ಇಂದಿನ ತಂತ್ರಜ್ಞಾನ, ವಿಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಭವಿಷ್ಯದಲ್ಲಿ ಮುಖ್ಯವಾಹಿನಿಗೆ ಬಂದು ಇತರೆ ಸಮಾಜಗಳ ಸಮನಾಂತರವಾಗಿ ನಿಲ್ಲಬಹುದು. ಭವಿಷ್ಯದಲ್ಲಿ ಸರ್ಕಾರದ ಸೌಲಭ್ಯಗಳಿಲ್ಲದೆಯೂ ಬದುಕು ಕಟ್ಟಿಕೊಂಡು ಸರ್ಕಾರಕ್ಕೆ ಆಧಾರವಾಗುವ ಸುಭದ್ರ ಸಮಾಜ ನಿರ್ಮಾಣ ಮಾಡಬೇಕು ಎನ್ನುವ ಆಶಯ.

ಬಾಗಲಕೋಟೆ ಜಿಲ್ಲೆ ಇಳಕಲ್ಲಿನ ಯಂಕಪ್ಪ ಬಂಡೆ ಅವರು ಭೋವಿ ಸಮಾಜದ ಸಂಘಟನೆಗೆ ಅಡಿಗಲ್ಲು ಹಾಕಿದ್ದಾರೆ. ಇದೇ ಮೂಲ ತತ್ವದಲ್ಲಿ ಭೋವಿ ಗುರುಪೀಠ ಮುನ್ನಡೆಯುತ್ತಿದೆ.
ಕಾಲ ಕಾಲಕ್ಕೆ ಸಮುದಾಯದ ಬಳಿ ಮೂಢ ನಂಬಿಕೆ, ಅಂಧಾಚಾರಗಳ ಬಗ್ಗೆ ಮೂಡಿಸಿದ ಜಾಗೃತಿಯ ಪರಿಣಾಮ 100ಕ್ಕಿಂತ ಹೆಚ್ಚು ಹಳ್ಳಿಗಳು ಪ್ರಾಣಿಬಲಿ ನಿಷೇಧಿತ ಗ್ರಾಮವಾಗಿವೆ. ಮೂಲತಃ ಮಾಂಸಾಹಾರಿಗಳಾದರೂ, ಸಿದ್ಧರಾಮೇಶ್ವರರ ತತ್ವಗಳನ್ನು ಅನುಸರಿಸಿಕೊಂಡು, ಜಾತ್ರೆಗಳನ್ನೇ ಜಾಗೃತಿ ಕೇಂದ್ರವಾಗಿ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯ ಅಚ್ಚರಿ ಬಾಂಡ್ರಾವಿ ಕಮರದ ಕಾಡು | ಕಾಯಕಕ್ಕೆ ಸಂದ ಅತೀ ದೊಡ್ಡ ಗೌರವ ಕಾಡಿಗೆ ವನಪಾಲಕನ ಹೆಸರೇ ನಾಮಕರಣ
ಕಲ್ಲು ಮಣ್ಣು ನಂಬಿ ಬದುಕುವ ಅರೆ ಅಲೆಮಾರಿ ಸಮುದಾಯ ಭೋವಿ ಕುಲವಾಗಿದೆ. ಅಕ್ಷರದ ವಾರಸುದಾರಿಕೆ ಇಲ್ಲದೆ ಬಂದ ಈ ಜನಾಂಗದ ಕೂಲಿ ಕಾರ್ಮಿಕರ ಮಕ್ಕಳು ಬಾಲ ಕಾರ್ಮಿಕರಾಗಬಾರದು ಎನ್ನುವ ಎಚ್ಚರಿಕೆ ವಹಿಸಿ ನಮ್ಮ ಮಠಗಳಲ್ಲಿ ಶಿಕ್ಷಣ ಕೊಡಿಸಲಾಗುತ್ತಿದೆ. ಇತ್ತೀಚಿನ ದಿನಮಾನಗಳಲ್ಲಿ ಭೋವಿ ಸಮುದಾಯ ಗಳಿಕೆ, ಉಳಿಕೆ ಹಾಗೂ ಬಳಕೆಯ ಸೂತ್ರದ ಹಾದಿ ಹಿಡಿಯುತ್ತಿದೆ.
37 ವರ್ಷ ತಾರುಣ್ಯದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಪೂರ್ವಶ್ರಮದಲ್ಲಿ ನಿಜಗುಣೇಶ್ವರಸ್ವಾಮಿ ಆಗಿದ್ದರು. 1986 ಜುಲೈ 18ರಂದು ದಾವಣಗೆರೆಯಲ್ಲಿ ಜನಿಸಿದ ಶ್ರೀಗಳು ಮನೆಯಲ್ಲಿದ್ದ ಅಧ್ಯಾತ್ಮದ ವಾತಾವರಣದಲ್ಲೇ ಬೆಳೆದವರು. ಬಾಲ್ಯದಲ್ಲೇ ಪೂಜೆ, ಪಾಠ, ಪ್ರವಚನಗಳ ರಕ್ತಗತವಾಗಿದ್ದವು.
ಇದನ್ನೂ ಓದಿ: ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಿ | ಎಡಿಸಿ ಬಿ.ಟಿ.ಕುಮಾರಸ್ವಾಮಿ
ಬಾಲ್ಯದಿಂದಲೇ ರಾಮಾಯಣ, ಮಹಾಭಾರತದ ಕತೆ ಕೇಳುತ್ತಾ ಬೆಳೆದ ಇಮ್ಮಡಿ ಶ್ರೀಗಳು, ದಾವಣಗೆರೆಯಲ್ಲಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರಿಗೆ ಪ್ರಸಾದ ನೀಡಲು ಮಠಕ್ಕೆ ಹೋಗುತ್ತಿದ್ದಾಗ ಅಲ್ಲಿ ಗುರುಗಳು ನೀಡಿದ ನಿಜಗುಣ ಶಿವಯೋಗಿ, ವಿವೇಕಾನಂದ, ಸಿದ್ದರಾಮೇಶ್ವರ ಜೀವನ ಚರಿತೆ, ಜ್ಞಾನ ಮಾರ್ಗದ ಜ್ಞಾನಸಿಂಧು ಕೃತಿಗಳು ಬದುಕಿಗೆ ಹೊಸ ದಿಕ್ಕು ನೀಡಿದವು.
1998ರಲ್ಲಿ ದಾವಣಗೆರೆಯ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಅವರಿಂದ ಲಿಂಗದೀಕ್ಷೆ (ಲಾಂಚನ ದೀಕ್ಷೆ) ಪಡೆದಾಗ ಇವರು ಅತೀ ಕಿರಿಯ ವಯಸ್ಸಿನ ಸನ್ಯಾಸಿ. ಎಳವೆಯಲ್ಲಿಯೇ ಸಮಾಜ ಸೇವೆಗಾಗಿ ಮುಡಿಪಾಗುತ್ತಾರೆ. ಆನಂತರ 1999ರಲ್ಲಿ ಚಿತ್ರದುರ್ಗ ಮುರುಘಾ ಮಠದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರಿಂದ ಸನ್ಯಾಸ ಧೀಕ್ಷೆ ಪಡೆದು ಬಸವತತ್ವ ಮೈಗೂಡಿಸಿಕೊಳ್ಳುತ್ತಾರೆ. ಹೀಗೆ ಸಾಗಿದ ಶ್ರೀಗಳ ಸಮಾಜಮುಖಿ ಬದುಕು ಹಾಗೂ ಸನ್ಯಾಸ ಜೀವನಕ್ಕೆ ಧೀಕ್ಷಾ ಮಹೋತ್ಸವದ ಸಂಭ್ರಮ.
ಇದನ್ನೂ ಓದಿ: ರಜತ ಮಹೋತ್ಸವ | ವಧು-ವರರ ಅನ್ವೇಷಣಾ ಸಮಾರಂಭ
ಮುರುಘಾ ಪರಂಪರೆಯಲ್ಲಿ ದಾನವಾಗಿ ಸಿಕ್ಕಿದ ಭೂಮಿಯಲ್ಲಿ ಪುಟ್ಟ ಗುಡಿಸಲು ಹಾಕಿಕೊಂಡು ಸಮಾಜದ ಕೆಲಸ ಆರಂಭಿಸುವ ಶ್ರೀಗಳ ಹಾದಿ ಕಲ್ಲು, ಮುಳ್ಳುಗಳಿಂದಲೇ ಕೂಡಿತ್ತು. ಕರಡಿ, ಚಿರತೆಗಳು ಓಡಾಡುವ ಜಾಗದಲ್ಲಿ ಶ್ರೀಗಳ ವಾಸ್ತವ್ಯ. ಹಾವು, ಚೇಳುಗಳು ಪಕ್ಕದಲ್ಲೇ ಹರಿದರೂ ಧೃತಿಗೆಡದೆ, ಅವುಗಳನ್ನು ಅವರ ಪಾಡಿಗೆ ಬಿಟ್ಟು ತಮ್ಮ ಕರ್ತವ್ಯ ಮುಂದುವರೆಸಿದ ಪರಿಣಾಮ ಈಗ ನಂದನವನದಂತಹ ವಾತಾವರಣ ನಿರ್ಮಾಣವಾಗಿದೆ. ವಿಶಾಲ ಜಾಗದಲ್ಲಿ ಶಿಕ್ಷಣ ಸಂಸ್ಥೆ, ಮಠ, ವಿದ್ಯಾರ್ಥಿನಿಲಯಗಳನ್ನು ಕಂಡಾಗ ಶ್ರೀಗಳ ಸಾಧನೆಗೆ ಹುಬ್ಬೇರಿಸುವಂತಾಗುತ್ತದೆ.

ಭಕ್ತರಿಗಾಗಿ ಮಿಡಿಯುವ ತಾಯಿ ಹೃದಯ:
ತೆಲುಗಿನಲ್ಲಿ ಹೇಳುವ ಗಾಧೆಯಂತೆ ಗುರುವನ್ನು ಗುಂಡಿಯಲ್ಲಿ ಮುಚ್ಚಿದ್ದೇವೆ, ನಮಗೆಲ್ಲಿಯ ಗುರು ಎನ್ನುವ ಮನಸ್ಥಿತಿಯಲ್ಲಿದ್ದ ಸಮುದಾಯವನ್ನು ಮುಗ್ದರು ಎನ್ನುತ್ತಲೇ ಅಪ್ಪಿಕೊಳ್ಳುವ ಕಾಯಕ ಮಾಡಿದ ಶ್ರೀಗಳು, ಮನೆ, ಮನಕ್ಕೆ ಸಿದ್ಧರಾಮೇಶ್ವರನನ್ನು ತಲುಪಿಸಲು ಹೊರಟ ಶ್ರೀಗಳು ಇಂದು ಲಕ್ಷಾಂತರ ಭಕ್ತರು ಮಠದ ಕಾರ್ಯಕ್ರಮಕ್ಕೆ ಹರಿದು ಬರುವಂತಹ ಸಂಘಟನೆ, ವಾತಾವರಣ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ರಜತ ಮಹೋತ್ಸವ | ಸಸಿ ನೆಟ್ಟ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ
ಸಮುದಾಯದ ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣ ವಂಚಿತರಾಗದಂತೆ ತಡೆದು ಯಾವುದೇ ಮಠದಲ್ಲಾದರೂ ಸೇರಿಸಿ ಶಿಕ್ಷಣ ಕೊಡಿಸುವುದರಿಂದ ಹಿಡಿದ, ಉನ್ನತ ಶಿಕ್ಷಣ, ವಿದೇಶಗಳಲ್ಲಿ ಶಿಕ್ಷಣ ಕೊಡಿಸಲು ಬೇಕಾಗ ಅಗತ್ಯ ಸಿದ್ಧತೆಗಳನ್ನು ಮಾಡಿದ ಪರಿಣಾಮ ಇಂದು ಮಠದಲ್ಲಿ ನಡೆಯುವ ಪ್ರತಿಭಾಪುರಸ್ಕಾರಕ್ಕೆ ನೂರಾರು ಅರ್ಜಿಗಳು ಬರುವಂತಾಗಿದೆ. ಐಎಎಸ್, ಐಪಿಎಸ್, ಕೆಎಎಸ್ನಂತಹ ಪರೀಕ್ಷೆಗಳಲ್ಲಿ ಸಾಧನೆ ಮಾಡಿದವರಿಗೂ ಪುರಸ್ಕರಿಸುವ ಕಾರ್ಯಕ್ರಮಗಳು ಸಮಾಜದ ಸುಧಾರಣೆಗೆ ಹಿಡಿದ ಕೈಗನ್ನಡಿ ಎನ್ನಬಹುದು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
