ಮುಖ್ಯ ಸುದ್ದಿ
ಲಾರಿ ಮುಷ್ಕರಕ್ಕೆ ಕೋಟೆನಾಡಿನಲ್ಲಿ ಮಿಶ್ರ ಪ್ರತಿಕ್ರಿಯೆ | ಹೊರ ರಾಜ್ಯಕ್ಕೆ ಹೋಗಬೇಕಾದ ಮಾಲು ಎಪಿಎಂಸಿ ಮಾರುಕಟ್ಟೆಯಲ್ಲಿ ಬಾಕಿ

CHITRADURGA NEWS | 18 JANUARY 2024
ಚಿತ್ರದುರ್ಗ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಕಠಿಣವಾದ ಹಿಟ್ ಅಂಡ್ ರನ್ ಕಾನೂನು ಹಿಂಪಡೆಯಲು ಒತ್ತಾಯಿಸಿ ದೇಶಾದ್ಯಂತ ನಡೆಯುತ್ತಿರುವ ಲಾರಿಗಳ ಮುಷ್ಕರಕ್ಕೆ ಕೋಟೆನಾಡು ಚಿತ್ರದುರ್ಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ನಗರದ ರಸ್ತೆ, ಮಾರುಕಟ್ಟೆ ಸೇರಿದಂತೆ ಅಲ್ಲಲ್ಲಿ ಲಾರಿಗಳ ಓಡಾಟ ಕಂಡು ಬರುತ್ತಿತ್ತು. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯಾಹ್ನದ ನಂತರ ಮುಷ್ಕರ ಇರುವುದರಿಂದ ಲೋಡಿಂಗ್-ಅನ್ಲೋಡಿಂಗ್ ಮಾಡುವುದು ಬೇಡ ಎಂದು ಸಂಘಟನೆಯವರು ತಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಜನವರಿ 23ಕ್ಕೆ ಚಿತ್ರದುರ್ಗ ಬಂದ್ ಕರೆ
ಲಾರಿ ಮಾಲಿಕರು, ಚಾಲಕರ ಈ ಕ್ರಮಕ್ಕೆ ಹಮಾಲರ ಸಂಘದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಷ್ಕರ ಮಾಡುವುದಿದ್ದರೆ ಮೊದಲೇ ನಮಗೆ ಮಾಹಿತಿ ನೀಡಬೇಕಾಗಿತ್ತು. ಏಕಾಏಕಿ ಲೋಡಿಂಗ್ ತಡೆದರೆ ಉಳಿದರ್ಧ ಮಾಲನ್ನು ಏನು ಮಾಡುವುದು. ನಾಳೆ ಬರುವ ಆವಕವನ್ನು ಎಲ್ಲಿ ಇಳಿಸಬೇಕು ಎಂದು ಪ್ರಶ್ನಿಸಿದರು.

ಬುಧವಾರ ಸಂಜೆ ಕೂಡಾ ಕೆಲವರು ಮುಷ್ಕರದಲ್ಲಿ ಭಾಗಿಯಾದ ಕಾರಣ ಹೊರ ರಾಜ್ಯಗಳಿಗೆ ಹೋಗಬೇಕಾಗಿದ್ದ ಮೆಕ್ಕೆಜೋಳ, ಸೂರ್ಯಕಾಂತಿ ಮಾರುಕಟ್ಟೆಯಲ್ಲಿ ಉಳಿದಿತ್ತು.
ಗುರುವಾರದ ಮಾರುಕಟ್ಟೆಗೆ ಹತ್ತಿ ಮಾತ್ರ ಬಂದಿದ್ದರಿಂದ ಹೆಚ್ಚು ವಹಿವಾಟು ಇರಲಿಲ್ಲ. ಇದರಿಂದ ದಲ್ಲಾಲಿ ಮಂಡಿಗಳ ಬಳಿ ಜಾಗದ ಸಮಸ್ಯೆ ಸೃಷ್ಟಿಯಾಗದ ಕಾರಣ, ಮಂಡಿ ಮಾಲಿಕರು, ಬರಗಾಲದ ಕಾರಣಕ್ಕೆ ಹೆಚ್ಚು ಆವಕ ಇಲ್ಲ. ಹಾಗಾಗಿ ಮುಷ್ಕರದ ಕಾರಣಕ್ಕೆ ಉಳಿದಿರುವ ಚೀಲಗಳನ್ನು ಗೋದಾಮಿನಲ್ಲಿ ಇಡಬಹುದು ಎಂದು ತಿಳಿಸಿದರು.
