CHITRADURGA NEWS | 10 AUGUST 2026
ಚಿತ್ರದುರ್ಗ: ಶಿವಶಿಂಪಿ ಸಮುದಾಯವು ಸಂಘಟನೆಯ ಜೊತೆಗೆ ಮುಂದಿನ ಪೀಳಿಗೆಗೆ ಶಿಕ್ಷಣ, ಸಂಸ್ಕಾರ ಹಾಗೂ ಸಮಾಜದ ಆದರ್ಶಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಕರೆ ನೀಡಿದರು.
ಇದನ್ನೂ ಓದಿ: ಮನೆ ಮನೆಗೆ ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಉಚಿತ ಶಿಕ್ಷಣ–ಸೌಲಭ್ಯ | ಶಾಸಕ ಚಂದ್ರಪ್ಪ
ನಗರದ ಮದಕರಿ ವೃತ್ತದಲ್ಲಿರುವ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ ವತಿಯಿಂದ ಭಾನುವಾರ ಆಯೋಜಿಸಿದ್ದ ಕುಲಗುರು ಶ್ರೀ ಶಿವದಾಸಿಮಯ್ಯ ಜಯಂತಿ, ಸಮಾಜದ ರಜತ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿವಶಿಂಪಿ ಸಮುದಾಯದ ಮೂಲ ಪುರುಷರಾದ ಶಿವದಾಸಿಮಯ್ಯ ಅವರ ಕಾಯಕನಿಷ್ಠೆ ಮತ್ತು ತತ್ವಗಳನ್ನು ಸಮುದಾಯ ಇಂದಿಗೂ ಜೀವನದಲ್ಲಿ ಅಳವಡಿಸಿಕೊಂಡು ಬರುತ್ತಿದೆ. ಕೇವಲ ಆರಾಧ್ಯ ದೈವಗಳ ಹೆಸರನ್ನು ಇಟ್ಟುಕೊಳ್ಳುವುದಕ್ಕಿಂತ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದರು.
ಮಕ್ಕಳನ್ನು ಶಾಲಾ ಹಂತದಲ್ಲಿ ಕೇವಲ ಉಡುಪಿನ ಸ್ಪರ್ಧೆಗಳಿಗೆ ಸೀಮಿತಗೊಳಿಸದೆ, ಶಿಕ್ಷಣದ ಜತೆಗೆ ಸಂಸ್ಕಾರಕ್ಕೂ ಆದ್ಯತೆ ನೀಡಬೇಕು. ಸಮಾಜಕ್ಕೆ ಅನುಕೂಲಕರ ಹಾಗೂ ಕಲುಷಿತವಿಲ್ಲದ ವಾತಾವರಣ ನಿರ್ಮಿಸುವ ಹೊಣೆಗಾರಿಕೆ ಪೋಷಕರ ಮೇಲಿದೆ. ಮುಂದಿನ 50ನೇ ವರ್ಷದ ಸುವರ್ಣ ಮಹೋತ್ಸವದ ವೇಳೆಗೆ ಇಂದಿನ ಯುವ ಪೀಳಿಗೆ ಸಮಾಜವನ್ನು ಮುನ್ನಡೆಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: ಸಾವಯವ ಸಮಗ್ರ ಕೃಷಿ ಪದ್ಧತಿ ಕುರಿತು ಮೂರು ದಿನಗಳ ಉಚಿತ ವಸತಿಯುಕ್ತ ತರಬೇತಿ
ಮುಂದಿನ ಐದು ವರ್ಷಗಳಲ್ಲಿ ಸಮುದಾಯದಿಂದ ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಹುದ್ದೆಗಳಿಗೆ ಯುವಕರನ್ನು ರೂಪಿಸುವ ಸಂಕಲ್ಪ ಮಾಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಗತ್ಯ ಪ್ರೋತ್ಸಾಹ ಮತ್ತು ಪೋಷಣೆ ನೀಡಬೇಕು. ರಜತ ಮಹೋತ್ಸವವು ಕೇವಲ ಆಚರಣೆಗೆ ಸೀಮಿತವಾಗದೆ, ಸಂಘಟಿತ ಹಾಗೂ ಪ್ರಗತಿಪರ ಸಮುದಾಯ ನಿರ್ಮಾಣಕ್ಕೆ ಹೊಸ ಸಂಕಲ್ಪದ ವೇದಿಕೆಯಾಗಬೇಕು ಎಂದರು.
ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಶಿವಶಿಂಪಿ ಸಮಾಜವು ಕಳೆದ 25 ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಸಮಾಜಕ್ಕೆ ಸ್ವಂತ ಕಟ್ಟಡ ಹಾಗೂ ಜಾಗದ ಅಗತ್ಯವಿದ್ದು, ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಸಿಎ ಸೈಟ್ ಪಡೆದುಕೊಂಡು ಭವನ, ಕಚೇರಿ ಮತ್ತು ಗ್ರಂಥಾಲಯ ನಿರ್ಮಿಸಿಕೊಳ್ಳಬೇಕು. ಈ ಕಾರ್ಯಕ್ಕೆ ಸೂಕ್ತ ಅನುದಾನ ಹಾಗೂ ಶಾಸಕರು ಮತ್ತು ಸಂಸದರ ನಿಧಿಯಿಂದ ನೆರವು ಕೊಡಿಸಲು ಸಹಕರಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಮಳೆ ಕೊರತೆ | ಬೆಳೆ ಹಾನಿ ಪ್ರದೇಶಗಳಿಗೆ ಸಚಿವ ಟಿ.ರಘುಮೂರ್ತಿ ಭೇಟಿ | ಬೆಳೆ ವಿಮೆಗೆ ಸೂಚನೆ
ಚಿತ್ರದುರ್ಗ ನಗರದ ಆರ್ಥಿಕ ಬೆಳವಣಿಗೆಯಲ್ಲಿ ಶಿವಶಿಂಪಿ ಸಮಾಜದ ವ್ಯಾಪಾರಿಗಳು ಹಾಗೂ ಶ್ರಮಿಕರ ಕೊಡುಗೆ ಅಪಾರವಾಗಿದೆ. ಹಿಂದೆ ದೊಡ್ಡಪೇಟೆ ಭಾಗದಲ್ಲಿ ಸಮಾಜದ ಜವಳಿ ಹಾಗೂ ಆಭರಣ ವ್ಯಾಪಾರಿಗಳು ಪ್ರಮುಖ ಪಾತ್ರ ವಹಿಸಿದ್ದರು. ಸಮಾಜದ ಯುವಕರು ಹಾಗೂ ಪದಾಧಿಕಾರಿಗಳು ಚುರುಕಾಗಿ ಸಂಘಟಿತರಾಗಿ ಸ್ವಂತ ಭವನ ನಿರ್ಮಾಣ ಸೇರಿದಂತೆ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ವಿಶ್ರಾಂತ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ ಜವಳಿ ಮಾತನಾಡಿ, ಶಿವಶಿಂಪಿ ಸಮುದಾಯವು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಮುನ್ನಡೆಯಲು ಬಲವಾದ ಮತ್ತು ಸುಸಂಘಟಿತ ಸಂಸ್ಥೆಯ ಅಗತ್ಯವಿದೆ. ಸಮುದಾಯದ ಜನರು ವಿವಿಧ ಕ್ಷೇತ್ರಗಳಲ್ಲಿ ವೈಯಕ್ತಿಕ ಸಾಧನೆ ಮಾಡಿದ್ದರೂ, ಇಡೀ ಸಮುದಾಯವನ್ನು ಒಂದೇ ಸೂರಿನಡಿ ತರುವ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದರು.
ಬಟ್ಟೆ ತಯಾರಿಕೆ ಮತ್ತು ಕಾಯಕ ಸಿದ್ಧಾಂತವು ಶಿವಸಿಂಪಿ ಸಮುದಾಯದ ಪವಿತ್ರ ಹಿನ್ನೆಲೆಯಾಗಿದೆ. ಅಜ್ಞಾನವನ್ನು ಕತ್ತರಿಸಿ ಸುಜ್ಞಾನವನ್ನು ಜೋಡಿಸುವ ಕತ್ತರಿಯಂತೆ ಹಾಗೂ ಭಕ್ತಿಯ ದಾರದಿಂದ ಸಮಾಜವನ್ನು ಬೆಸೆಯುವ ಕಾರ್ಯವನ್ನು ಸಮುದಾಯದ ಕಾಯಕ ಪ್ರತಿನಿಧಿಸುತ್ತದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆ ಇರುವ ಶಿವಸಿಂಪಿ ಸಮುದಾಯದ ಜನರನ್ನು ಒಗ್ಗೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಇದನ್ನೂ ಓದಿ: ನೂತನ SJM ನರ್ಸಿಂಗ್ ಕಾಲೇಜು ಕಟ್ಟಡ ಉದ್ಘಾಟನೆ
ಸಮಾಜದ ಹಿರಿಯರು ಹಾಗೂ ಸಾಧಕರ ಕೊಡುಗೆಗಳನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ಹಿನ್ನೆಲೆಯಲ್ಲಿ ರಾಜ್ಯದ ಶಿವಶಿಂಪಿ ಸಮುದಾಯದ ಹಿರಿಯರು ಮತ್ತು ಸಾಧಕರ ಮಾಹಿತಿಯನ್ನು ಒಳಗೊಂಡ ವಿಶೇಷ ಸ್ಮರಣ ಸಂಚಿಕೆ ಹೊರತಂದಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗದ ಬೆಕ್ಕಿನ ಕಲ್ಮಠದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಯೋಗವನ ಬೆಟ್ಟದ ಅಧ್ಯಕ್ಷರು ಹಾಗೂ ಶ್ರೀ ಬೃಹನ್ಮಠ ಮತ್ತು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ತುಮಕೂರು ಜಿಲ್ಲೆಯ ತಂಗನಹಳ್ಳಿಯ ಶ್ರೀ ಅನ್ನಪೂರ್ಣೇಶ್ವರಿ ಸುಕ್ಷೇತ್ರದ ಶ್ರೀ ಬಸವ ಮಹಾಲಿಂಗಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಇದನ್ನೂ ಓದಿ: ಸಮಗ್ರ ಕೃಷಿ ಪದ್ಧತಿಯಿಂದ ವರ್ಷವಿಡೀ ನಿರಂತರ ಆದಾಯ | ರಜನೀಕಾಂತ
ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ ಅಧ್ಯಕ್ಷ ಪಿ.ಎಸ್. ಶಂಭುಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಎಸ್.ಕೆ. ಬಸವರಾಜನ್, ಜಿಲ್ಲಾ ಲಿಂಗಾಯತ ಶಿವಶಿಂಪಿ ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ ಜಯದೇವಮೂರ್ತಿ, ಕಲಬುರಗಿಯ ಕಲ್ಯಾಣ ಕರ್ನಾಟಕ ಶಿವಶಿಂಪಿ ಸಮಾಜದ ಅಧ್ಯಕ್ಷ ವಿಜಯಕುಮಾರ್ ಹಳಕಟ್ಟಿ, ಬೆಂಗಳೂರಿನ ಶಿವಶಿಂಪಿ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷ ಗಂಗಾಧರ ಯಾವಗಲ್, ವಿಜಯಪುರದ ಶಿವಶಿಂಪಿ ಸಮಾಜದ ಅಧ್ಯಕ್ಷ ಎಸ್.ಎಂ. ಸಿಂದಗಿ, ಸೊಲ್ಲಾಪುರದ ಶಿವದಾಸಿಮಯ್ಯ ಶಿವಸಿಂಪಿ ಸಮಾಜದ ಟ್ರಸ್ಟಿ ಶಿವಶಂಕರ (ರಾಜು) ಚೊಳ್ಳೆ, ಶಿವದಾಸಿಮಯ್ಯ ಶಿವಶಿಂಪಿ ಸಮಾಜದ ಅಧ್ಯಕ್ಷ ದಯಾನಂದ ವಿಜಾಪುರೆ, ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ ಕಾರ್ಯದರ್ಶಿ ಇ.ಕೆ. ಮಲ್ಲಿಕಾರ್ಜುನ್ ಹಾಗೂ ಉಪಾಧ್ಯಕ್ಷ ಡಿ.ವಿ. ಮುರಗೇಶ್ ಸೇರಿದಂತೆ ಸಮಾಜದ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

