CHITRADURGA NEWS | 08 MARCH 2026
ಚಿತ್ರದುರ್ಗ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಕಡಿತ ಮಾಡಿ ಹುದ್ದೆಗಳ ನೇಮಕಾತಿ ವಿರೋಧಿಸಿ ಬಿಜೆಪಿಯಿಂದ ಪಾದಯಾತ್ರೆ ಮಾಡಲು ತೀರ್ಮಾನಿಸಲಾಯಿತು.
ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಭಾನುವಾರ ಬಿಜೆಪಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಬೃಹತ್ ಜನಾಂದೋಲನ ಸಭೆಯ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತು.
ಇದನ್ನೂ ಓದಿ: ಅಡಿಕೆ ಧಾರಣೆ | 7 ಮಾರ್ಚ್ | ಇಂದಿನ ಮಾರುಕಟ್ಟೆಯಲ್ಲಿ ಯಾವ ಅಡಿಕೆಗೆ ಎಷ್ಟು ರೇಟ್
ಹೋರಾಟದ ನೇತೃತ್ವ ವಹಿಸಿರುವ ಮಾಜಿ ಶಾಸಕ ಕುಡುಚಿ ರಾಜೀವ್ ಮಾತನಾಡಿ, ಮಾರ್ಚ್ 22 ರಿಂದ ಚಿತ್ರದುರ್ಗದಿಂದ ಬೃಹತ್ ಹೋರಾಟದ ಪಾದಯಾತ್ರೆ ಆರಂಭವಾಗಲಿದ್ದು, ಒಂದು ಲಕ್ಷ ಜನ ಸೇರಲಿದ್ದಾರೆ ಎಂದರು.
ಮಾರ್ಚ್ 27 ರಂದು ಬೆಂಗಳೂರು ಪ್ರವೇಶ ಮಾಡಲಿದ್ದು, ಸರ್ಕಾರ ಆರಂಭದಲ್ಲೇ ನಮ್ಮ ಬಳಿ ಬಂದು ಎಸ್ಸಿ, ಎಸ್ಟಿ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ದಿನ ದಿನಕ್ಕೂ ಹೋರಾಟ ತೀವ್ರಗೊಳ್ಳುತ್ತದೆ. ಬೆಂಗಳೂರು ತಲುಪಿದ ಬಳಿಕೆ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 07 | ಹತ್ತಿ ರೇಟ್ ಎಷ್ಟಿದೆ?
ಚುನಾವಣೆ ಪೂರ್ವದಲ್ಲಿ ಚಿತ್ರದುರ್ಗದಲ್ಲಿ ಪರಿಶಿಷ್ಟರ ಸಮಾವೇಶ ನಡೆಸಿದ್ದ ಕಾಂಗ್ರೆಸ್ ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿತ್ತು. ಆದರೆ, ಸರ್ಕಾರ ಬಂದ ದಿನದಿಂದಲೂ ಅನ್ಯಾಯ ಮಾಡಿಕೊಂಡು ಬರುತ್ತಿದ್ದು, ಇದನ್ನು ಖಂಡಿಸಿ ಚಿತ್ರದುರ್ಗದಿಂದಲೇ ಹೋರಾಟಕ್ಕೆ ಕರೆ ಕೊಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಬಂಗಾರು ಹನುಮಂತು, ಸಿಮೆಂಟ್ ಮಂಜು, ಬಸವರಾಜ ದಡೆಸೂಗುರು, ಮಾಜಿ ಸಂಸದ ಉಮೇಶ್ ಜಾಧವ್, ಪ್ರತಾಪ್ ಗೌಡ, ಕೆ.ಟಿ.ಕುಮಾರಸ್ವಾಮಿ, ಉಮೇಶ್ ಕಾರಜೋಳ, ಮಾದಿಗ ದಂಡೋರದ ನರಸಪ್ಪ, ಫರ್ನಾಂಡಿಸ್, ಶಾಸಕಿ ಹೇಮಲತಾ ನಾಯಕ, ವೈ.ಸಂಪಂಗಿ, ದಿವಾಕರ್, ಬಳ್ಳಾರಿ ಹನುಮಂತಪ್ಪ, ಭಾರ್ಗವಿ, ದೀಪಕ್ ದೊಡ್ಡಯ್ಯ, ಸಂಜೀವ ಹೆಗಡೆ, ಸಾಮರಸ್ಯ ವಾದಿರಾಜ್, ಬಾಳೆಕಾಯಿ ರಾಮದಾಸ್ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 07 | ಹತ್ತಿ ರೇಟ್ ಎಷ್ಟಿದೆ?
ವೇದಿಕೆಯ ಎಡ ಭಾಗದಲ್ಲಿ ವಾಲ್ಮೀಕಿ, ಅಂಬೇಡ್ಕರ್, ಸರ್ದಾರ್ ಸೇವಾಲಾಲ್, ಒನಕೆ ಓಬವ್ವ, ಸಿದ್ದರಾಮೇಶ್ವರರು, ಬಾಬು ಜಗಜೀವನ್ ರಾಂ, ಭಾರತ ಮಾತೆ, ಪಂಡಿತ್ ದೀನ ದಯಾಳ್ ಉಪಾಧ್ಯ, ಶಾಮಪ್ರಸಾದ್ ಮುಖರ್ಜಿ ಭಾವಚಿತ್ರಗಳನ್ನು ಇಡಲಾಗಿತ್ತು.
********
“ಹಿಂದಿನ ಬಿಜೆಪಿ ಸರ್ಕಾರವು ಮೂರು ದಶಕಗಳ ಹೋರಾಟಕ್ಕೆ ಮನ್ನಣೆ ನೀಡಿ ಎಸ್ಸಿ, ಎಸ್ಟಿ ಒಳಮೀಸಲಾತಿ ಹಂಚಿಕೆ ಮಾಡಿತ್ತು. ಆದರೆ ಇಂದು ಕಾಂಗ್ರೆಸ್ ಸರ್ಕಾರ ನಮ್ಮ ಧ್ವನಿಯನ್ನು ಹತ್ತಿಕ್ಕುತ್ತಿದೆ. ದಲಿತರು ಕಾಂಗ್ರೆಸ್ಸಿನ ಗುಲಾಮರಲ್ಲ. ಮೀಸಲಾತಿ ಹೆಚ್ಚಿಸಿದ್ದು ಅಂಬೇಡ್ಕರ್ ಅವರ ಕೊಡುಗೆಯೇ ಹೊರತು ಸಿದ್ದರಾಮಯ್ಯ ಅವರದ್ದಲ್ಲ. ಈಗ ಮೀಸಲಾತಿ ಕಡಿತದಿಂದ ನೀಟ್ ಹಾಗೂ ಸಿಇಟಿ ಬರೆದ ಲಕ್ಷಾಂತರ ಮಕ್ಕಳ ಭವಿಷ್ಯ ಮಂಕಾಗಿದೆ.
| ಬಿ.ಶ್ರೀರಾಮುಲು, ಮಾಜಿ ಸಚಿವ.
ಇದನ್ನೂ ಓದಿ: ಪಾಲಕ್ ತಿನ್ನುವಾಗ ನೀವು ಮಾಡುವಂತಹ ಈ 3 ತಪ್ಪುಗಳು ನಿಮ್ಮ ಆರೋಗ್ಯವನ್ನು ಹದಗೆಡಿಸಬಹುದು
“ಕರ್ನಾಟಕದ ಪರಿಶಿಷ್ಟರು ಅಜ್ಞಾನಿಗಳು ಎಂದು ಕಾಂಗ್ರೆಸ್ ಭಾವಿಸಿದೆ. ಮೀಸಲಾತಿ ಎಂದರೆ ಕೇವಲ ಹಾಸ್ಟೆಲ್ ತೆರೆಯುವುದಲ್ಲ, ಅದು ನಮ್ಮ ಹಕ್ಕು. ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು 42 ಸಾವಿರ ಕೋಟಿ ರೂ. ಎಸ್ಸಿಪಿ/ಟಿಎಸ್ಪಿ ಹಣವನ್ನು ಗ್ಯಾರೆಂಟಿಗಳಿಗೆ ಡೈವರ್ಟ್ ಮಾಡಿದ್ದಾರೆ. ಈ ಅನ್ಯಾಯದ ವಿರುದ್ಧ ಐದಾರು ಜಿಲ್ಲೆಗಳ ಜನತೆ ತೊಡೆ ತಟ್ಟಿದರೆ ಸರ್ಕಾರ ಉಳಿಯುವುದಿಲ್ಲ.”
| ಎ.ನಾರಾಯಣಸ್ವಾಮಿ, ಮಾಜಿ ಸಚಿವರು.
*******
ಶೋಷಿತರು, ನಿರ್ಲಕ್ಷ್ಯಕ್ಕೆ ಒಳಗಾದವರ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಆದರೆ, ಕಾಂಗ್ರೆಸ್ ಕುಮ್ಮಕ್ಕಿನಿಂದ ಶೇ.೫೬ ರಷ್ಟಿದ್ದ ಮೀಸಲಾತಿ ಪ್ರಮಾಣಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಬಂದಿದೆ. ಇದಕ್ಕೆ ಮೇಲ್ಮನವಿ ಸಲ್ಲಿಸಿಲ್ಲ.
| ಗೋವಿಂದ ಎಂ. ಕಾರಜೋಳ, ಸಂಸದರು.
ಇದನ್ನೂ ಓದಿ: ಹಸಿ ಪಪ್ಪಾಯ ಮಹಿಳೆಯರ ಈ ಸಮಸ್ಯೆಗಳಿಗೆ ರಾಮಬಾಣವಂತೆ
ನಮ್ಮ ಹಕ್ಕುಗಳನ್ನು ಶಾಸನ ಸಭೆಯಲ್ಲಿ ಹಾಗೂ ಸರ್ಕಾರದಲ್ಲಿ ರಕ್ಷಣೆ ಮಾಡಿಕೊಳ್ಳಲು ಆಗದಿದ್ದರೆ ಜನರ ಬಳಿಗೆ ಹೋಗಿ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಆ ಕೆಲಸವನ್ನು ಬಿಜೆಪಿ ಮೂಲಕ ಪರಿಶಿಷ್ಟರು ಮಾಡುತ್ತಿದ್ದೇವೆ.
| ಎನ್.ಮಹೇಶ್, ಮಾಜಿ ಸಚಿವರು.
*******
ಮದಕರಿ ನಾಯಕರ ಜನ್ಮಭೂಮಿಯಲ್ಲಿ ಸರ್ಕಾರದ ವಿರುದ್ಧ ಹೋರಾಟಕಕೆ ತೀರ್ಮಾನ ಮಾಡಿದ್ದೇವೆ. ಇದು ಮಾಡು ಇಲ್ಲವೆ ಮಡಿ ಹೋರಾಟ. ಸತ್ತರೂ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಪರಿಶಿಷ್ಟರ ಮೀಸಲಾತಿ ಪಡೆದೇ ಮನೆ ಸೇರುತ್ತೇವೆ.
| ಶಿವನಗೌಡ ನಾಯಕ, ಮಾಜಿ ಸಚಿವರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ನಾಳೆ ಬಿಜೆಪಿ ಬೃಹತ್ ಜನ ಆಂದೋಲನ ಪೂರ್ವಭಾವಿ ಸಭೆ
ಕಳೆದ ಚುನಾವಣೆ ಸಂದರ್ಭದಿಂದಲೇ ಕಾಂಗ್ರೆಸ್ ಮೀಸಲಾತಿ ಕುರಿತು ಗೊಂದಲ ಮೂಡಿಸಿ ನಮ್ಮ ಸರ್ಕಾರ ಕೆಡವಿದೆ. ಈಗ ಚಿತ್ರದುರ್ಗದಿಂದ ಹೋರಾಟ ಪ್ರಾರಂಭವಾಗಲಿ.
| ಎಂ.ಚಂದ್ರಪ್ಪ, ಹೊಳಲ್ಕೆರೆ ಶಾಸಕರು.
******
ಇದು ನಮ್ಮ ಅಳಿವು, ಉಳಿವಿನ ಪ್ರಶ್ನೆ. ಗುರಿ ಮುಟ್ಟುವವರೆಗೆ ಹೋರಾಟ ನಡೆಯಲಿ. ಮೀಸಲಾತಿ ಕೈ ತಪ್ಪಿದರೆ ಪರಿಶಿಷ್ಟರ ನಾಲ್ಕು ಸಾವಿರ ಹುದ್ದೆಗಳು ಕೈ ತಪ್ಪಲಿವೆ. ಇದು ನಮ್ಮ ಉಳಿವಿಗಾಗಿ ನಡೆಯುತ್ತಿರುವ ಹೋರಾಟ ಅಲ್ಲ. ಸಮುದಾಯದ ಉಳಿವಿಗಾಗಿ.
| ರಾಜುಗೌಡ, ಮಾಜಿ ಶಾಸಕ.
********

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
