CHITRADURGA NEWS | 05 APRIL 2026
ಚಿತ್ರದುರ್ಗ: ದೇಶದ ಪ್ರಗತಿಯಲ್ಲಿ ನಮ್ಮ ಪ್ರಗತಿಯಿದೆ, ದೇಶದ ಉದ್ದಾರದಲ್ಲೇ ನಮ್ಮ ಉದ್ದಾರವಿದೆ ಎಂಬ ಬಾಬೂಜಿಯವರ ಮಾತು ಸಾರ್ವಕಾಲಿಕ ಸತ್ಯ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದರು.
ನಗರದ ಲಿಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ
ದೇಶದ ಪ್ರಗತಿಯ ಬಗ್ಗೆ ಯೋಚಿಸುವ ಮೊದಲು ಪ್ರತಿಯೊಬ್ಬರೂ ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು. ನಾಡಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡುವುದರಿಂದಲೇ ದೇಶಭಕ್ತಿ ಆರಂಭವಾಗುತ್ತದೆ ಎಂದು ಕಿವಿಮಾತು ಹೇಳಿದರು.
1971ರ ಯುದ್ಧದ ಸಮಯದಲ್ಲಿ ಬಾಬೂಜಿಯವರ ಸಮರ್ಥ ನಾಯಕತ್ವದಿಂದಾಗಿ ಕೇವಲ 13 ದಿನಗಳಲ್ಲಿ ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರ ಉದಯವಾಯಿತು. ಅವರು ತಮ್ಮ ಇಡೀ ಜೀವನವನ್ನು ದೇಶದ ಹಿತಕ್ಕಾಗಿ ಮುಡಿಪಾಗಿಟ್ಟಿದ್ದರು ಎಂದು ಗುಣಗಾನ ಮಾಡಿದರು.
ಇದೇ ವೇಳೆ ಬಾಬು ಜಗಜೀವನ್ ರಾಂ ಭವನದ ಬಾಕಿ ಉಳಿದಿರುವ ಕಾಮಗಾರಿ ಬಗ್ಗೆ ಪ್ರಸ್ತಾಪಿಸಿದ ಶಾಸಕರು, ಭವನದ ಪೂರ್ಣಗೊಳಿಸುವಿಕೆಗೆ ಸುಮಾರು ರೂ. 3 ಕೋಟಿ ಅನುದಾನದ ಅಗತ್ಯವಿದ್ದು, ಮುಂಬರುವ ದಿನಗಳಲ್ಲಿ ಅನುದಾನ ಒದಗಿಸಿ ಭವನ ಲೋಕಾರ್ಪಣೆಗೊಳಿಸುವುದಾಗಿ ಭರವಸೆ ನೀಡಿದರು.
ಅಲ್ಲದೆ ಸರ್ಕಾರದಿಂದ ನಿಗಮಗಳ ಮೂಲಕ ಸಿಗುವ ನೇರ ಸಾಲ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ಲಿಖಿತಾ ಆತ್ಮಹತ್ಯೆ ತನಿಖೆ ನಡೆಸಿ ನ್ಯಾಯ ಕೊಡಿಸಲು ಎಬಿವಿಪಿ ಒತ್ತಾಯ
ಶಿವಶರಣ ಹರಳಯ್ಯ ಸ್ವಾಮೀಜಿ ಮಾತನಾಡಿ, ಮಾತು ಮತ್ತು ನಡವಳಿಕೆ ಒಂದೇ ಆಗಿರಬೇಕು. ಬಾಬು ಜಗಜೀವನ್ ರಾಂ ಅವರು ಕೇವಲ ಮಾತಿನ ವ್ಯಕ್ತಿಯಾಗಿರದೆ, ತಾವು ನಂಬಿದ ಸಿದ್ಧಾಂತಗಳನ್ನು ಬದುಕಿನಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದರು.

1935ರಲ್ಲಿಯೇ ರಾಂಚಿಯಲ್ಲಿ ನಡೆದ ಅಮೆಂಡ್ ಕಮಿಷನ್ ಮುಂದೆ ಶೋಷಿತ ವರ್ಗಗಳ ಮತದಾನದ ಹಕ್ಕಿಗಾಗಿ ಬಾಬೂಜಿ ಅವರು ಹೋರಾಟ ಮಾಡಿದ್ದರು. ಅಂದು ಕೇವಲ ರಾಜ-ಮಹಾರಾಜರಿಗೆ ಮತ್ತು ಶ್ರೀಮಂತರಿಗೆ ಮಾತ್ರ ಇದ್ದ ಮತದಾನದ ಹಕ್ಕನ್ನು ಸಾಮಾನ್ಯರಿಗೂ ದೊರಕಿಸಿಕೊಡುವಲ್ಲಿ ಅವರ ಪಾತ್ರ ದೊಡ್ಡದಿದೆ.
ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ದೇಶವು ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾಗ, ಹಸಿರು ಕ್ರಾಂತಿಯ ಮೂಲಕ ದೇಶಕ್ಕೆ ಅನ್ನ ನೀಡಿದ ಕೀರ್ತಿ ಬಾಬೂಜಿಯವರಿಗೆ ಸಲ್ಲುತ್ತದೆ. ರಕ್ಷಣಾ ಸಚಿವರಾಗಿದ್ದ ಬಾಬೂಜಿಯವರು ಕೇವಲ 13 ದಿನಗಳಲ್ಲಿ ಪಾಕಿಸ್ತಾನವನ್ನು ಯುದ್ದದಲ್ಲಿ ಸೊಲಿಸುವ ಮೂಲಕ ಪಾಠ ಕಲಿಸಿದರು.
ಇದನ್ನೂ ಓದಿ: ಚಳ್ಳಕೆರೆ | ಏ.8ರಂದು ರಾಣಿಕೆರೆ ಒತ್ತುವರಿ ತೆರವು ಕಾರ್ಯಾಚರಣೆ
ಸಮಾಜದಲ್ಲಿರುವ ಭೂ ಹಂಚಿಕೆಯ ಅಸಮಾನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀಗಳು, ಶ್ರೀಮಂತರ ಬಳಿ ನೂರಾರು ಎಕರೆ ಭೂಮಿ ಇದೆ, ಆದರೆ ಕಷ್ಟಪಡುವ ಬಡವರ ಬಳಿ ಅಲ್ಪ ಭೂಮಿಯೂ ಇಲ್ಲ. ಈ ದಬ್ಬಾಳಿಕೆಯನ್ನು ಹೋಗಲಾಡಿಸಿ ಸಮಾನತೆಯನ್ನು ತರುವ ಕನಸನ್ನು ಬಾಬೂಜಿ ಅವರು ಕಂಡಿದ್ದರು ಎಂದು ಹೇಳಿದರು.
ದೇಶದಲ್ಲಿ ಆರ್ಥಿಕ ಸಮಾನತೆ ಬರುವವರೆಗೂ ಸಾಮಾಜಿಕ ಸಮಾನತೆ ಸಾಧ್ಯವಿಲ್ಲ ಎಂಬುದನ್ನು ಬಾಬು ಜಗಜೀವನ್ ರಾಂ ಅವರು ಅಂದೇ ಮನಗಂಡಿದ್ದರು ಎಂದು ಶಿವಶರಣ ಹರಳಯ್ಯ ಸ್ವಾಮೀಜಿ ಹೇಳಿದರು.
ದೇಶದ ಬಡತನ ಮತ್ತು ಆಹಾರದ ಕೊರತೆಯನ್ನು ನೀಗಿಸಿದರೆ ಮಾತ್ರ ಸುಭೀಕ್ಷೆ ಸಾಧ್ಯ ಎಂದು ನಂಬಿದ್ದ ಬಾಬೂಜೀ, ರೈಲ್ವೆ ಮತ್ತು ಕೃಷಿ ಇಲಾಖೆಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಮೂಲಕ ಕಾರ್ಮಿಕರ ಹಿತ ಕಾಯುವ ಕೆಲಸ ಮಾಡಿದರು ಎಂದು ಸ್ಮರಿಸಿದರು.
ಇದನ್ನೂ ಓದಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ | ಸ್ನಾತಕ, ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಭಾರತ ದೇಶದ ಅಭಿವೃದ್ಧಿ ಮತ್ತು ಸಮಾನತೆಯ ಹಾದಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಂ ಅವರು ದೇಶದ ಎರಡು ಕಣ್ಣುಗಳಿದ್ದಂತೆ. ಬಾಬೂಜೀಯವರು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ದೇಶದ ಉಪಪ್ರಧಾನಿ ಹುದ್ದೆಯವರೆಗೂ ಏರಲು ಪಟ್ಟ ಕಷ್ಟ ಮತ್ತು ಅವರು ನೀಡಿದ ಕೊಡುಗೆ ನಮಗೆಲ್ಲರಿಗೂ ಆದರ್ಶವಾಗಬೇಕು ಎಂದರು.
ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಿದ್ದು ಜ್ಞಾಪಕ ಶಕ್ತಿ ಹಾಗೂ ಸೃಜನಶೀಲತೆ ಕಳೆದುಕೊಳ್ಳುವ ಬದಲು, ಗ್ರಂಥಾಲಯಗಳಲ್ಲಿ ಲಭ್ಯವಿರುವ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಮೀಸಲಾತಿಯನ್ನು ನಂಬಿ ಕೂರಬಾರದು ಎಂದು ಕಿವಿಮಾತು ಹೇಳಿದ ಅವರು, ಸಾವಿರಾರು ಹುದ್ದೆಗಳಿಗೆ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸುವ ಈ ಕಾಲದಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಅಧ್ಯಯನಶೀಲತೆ ಬಹಳ ಮುಖ್ಯ ಎಂದು ತಿಳಿಸಿದರು.
ಹಸಿರು ಕ್ರಾಂತಿಯ ಹರಿಕಾರ ಬಾಬೂಜೀಯವರ ಆಶಯದಂತೆ ಇಂದು ಸರ್ಕಾರವು ‘ಅನ್ನಭಾಗ್ಯ’ದಂತಹ ಯೋಜನೆಗಳ ಮೂಲಕ ಹಸಿವು ಮುಕ್ತ ಸಮಾಜಕ್ಕೆ ಒತ್ತು ನೀಡಿದೆ. ಹಾಸ್ಟೆಲ್ ವ್ಯವಸ್ಥೆಗಳನ್ನು ಉತ್ತಮಪಡಿಸಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳದೆ, ಶ್ರಮವಹಿಸಿ ಓದಿ ತಮ್ಮ ಕುಟುಂಬ ಮತ್ತು ಸಮಾಜದ ಗೌರವವನ್ನು ಎತ್ತಿ ಹಿಡಿಯಬೇಕು ಎಂದು ಅವರು ಕರೆ ನೀಡಿದರು.
ಇದನ್ನೂ ಓದಿ: ಯೂರಿಯಾ, ರಸಗೊಬ್ಬರ ಖರೀಧಿಗೆ FID ಕಡ್ಡಾಯ
ಕಾರ್ಯಕ್ರಮದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ ಡಿ.ಹೆಚ್.ನಟರಾಜ್, ಡಾ.ಬಾಬು ಜಗಜೀವನ್ ರಾಮ್ ಅವರ ಕುರಿತು ಸುಧೀರ್ಘ ಉಪನ್ಯಾಸ ನೀಡಿದರು. ಇದೇ ವೇಳೆ ನಾಲ್ಕು ಮಂದಿ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಸಂವಿಧಾನ ಪೀಠಿಕೆ ವಾಚಿಸಲಾಯಿತು. ಜಯಂತಿ ಅಂಗವಾಗಿ ನಗರದ ವಿವಿಧ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಜರುಗಿದ ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಜಯಂತಿ ಕಾರ್ಯಕ್ರಮದಲ್ಲಿ ಕಂಠೀರವ ಸ್ಟೋಡಿಯೋ ಅಧ್ಯಕ್ಷ ಮೆಹಬೂಬ್ ಪಾಷಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಪೌರಾಯಕ್ತೆ ಲಕ್ಷ್ಮೀ, ದಲಿತ ಮುಖಂಡರಾದ ಅವಿನಾಶ್, ಜೆ.ಜೆ.ಹಟ್ಟಿ ರಾಜಣ್ಣ, ಪ್ರಶಾಂತ್, ತಿಪ್ಪೇಸ್ವಾಮಿ, ನೇಹಾ, ಹುಲ್ಲೂರು ಕುಮಾರಸ್ವಾಮಿ, ಪ್ರಕಾಶ್, ಕಾವ್ಯ, ರವಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಮುದಾಯದ ಮುಖಂಡರು ಗಣ್ಯರು ಉಪಸ್ಥಿತರಿದ್ದರು.
ಅದ್ಧೂರಿ ಭಾವಚಿತ್ರ ಮೆರವಣಿಗೆ:
ಡಾ.ಬಾಬು ಜಗಜೀವನ್ರಾಮ್ರವರ 119ನೇ ಜನ್ಮ ದಿನಾಚರಣೆ ಅಂಗವಾಗಿ ಭಾನುವಾರ ನಗರದಲ್ಲಿ ಡಾ.ಬಾಬು ಜಗಜೀವನ್ರಾಮ್ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ಇದನ್ನೂ ಓದಿ: ಎತ್ತಿನ ಗಾಡಿಗೆ ಬುಲೆರೋ ಡಿಕ್ಕಿ | ಸ್ಥಳದಲ್ಲೇ ಎತ್ತುಗಳು ಸಾವು
ನಗರದ ಹೊಳಲ್ಕೆರೆ ರಸ್ತೆಯ ಸಂಪಿಗೆ ಸಿದ್ದೇಶ್ವರ ಶಾಲೆಯ ಮುಂಭಾಗದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪುಷ್ಪ ನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಮಹಾತ್ಮ ಗಾಂಧಿ ಸರ್ಕಲ್, ಮಾರ್ಗವಾಗಿ ಪ್ರವಾಸಿ ಮಂದಿರದಿಂದ ಲಿಡ್ಕರ್ ಭವನದವರಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
