CHITRADURGA NEWS | 18 JANUARY 2026
ಚಿತ್ರದುರ್ಗ: ಸರ್ಕಾರಿ ಪ್ರಾಥಮಿಕ ಶಾಲೆಗಳ 4 ಮತ್ತು 5ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಶಾಸ್ತ್ರದ ಕೌಶಲ ಅಭಿವೃದ್ಧಿ ಪಡಿಸಲು ಓದು ಕರ್ನಾಟಕ ಎಂಬ ಕಾರ್ಯಕ್ರಮ ಜಾರಿಗೊಳಿಸಿದ್ದು, ಓದು ಕರ್ನಾಟಕ ಅನುಷ್ಠಾನದಲ್ಲಿ ಚಿತ್ರದುರ್ಗ ಜಿಲ್ಲೆಯು ಮುಂಚೂಣೆಯಲ್ಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದ್ದಾರೆ.
ಇದನ್ನೂ ಓದಿ: ದಶಕದ ಕನಸು ಭದ್ರೆಗೆ ಅನುದಾನ ಕೊರತೆ ಬೇಸರದ ವಿಚಾರ | ಪಿ.ಕೋದಂಡರಾಮಯ್ಯ
ಓದು ಕರ್ನಾಟಕ ಕಾರ್ಯಕ್ರಮವನ್ನು 4 ಮತ್ತು 5 ನೇ ತರಗತಿಯ ಮಕ್ಕಳ ಮೂಲಭೂತ ಭಾಷೆ ಮತ್ತು ಗಣಿತ ಕೌಶಲ್ಯಗಳನ್ನು ಸುಧಾರಿಸಲು ಪ್ರಥಮ್ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರವು ಪ್ರಾರಂಭಿಸಿದೆ.
2025-26 ನೇ ಸಾಲಿನಲ್ಲಿ ಓದು ಕರ್ನಾಟಕ ಕಾರ್ಯಕ್ರಮವು ರಾಜ್ಯಾದ್ಯಂತ ಮತ್ತೆ ಅನುಷ್ಠಾನಗೊಂಡು ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳ 4 ಮತ್ತು 5 ನೇ ತರಗತಿಗಳ ಮಕ್ಕಳಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಶಾಸ್ತ್ರ / Foundational Literacy and Numeracy (FLN) ಕೌಶಲ್ಯಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ.
ಈ ಕಾರ್ಯಕ್ರಮದ ಸಕಾಲಿಕ ಅನುಷ್ಠಾನದಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಓದು ಕರ್ನಾಟಕ ಕಾರ್ಯಕ್ರಮವು ಜಿಲ್ಲಾ ಹಂತದಲ್ಲಿ ಅಕ್ಟೋಬರ್ 28 ರಂದು ಪ್ರಥಮ್ ಸಂಸ್ಥೆಯಿಂದ 130 ಸಿಆರ್ಪಿಗಳಿಗೆ ಮೊದಲನೇ ಹಂತದಲ್ಲಿ ತರಬೇತಿಯನ್ನು ನೀಡಿ ನಂತರ ಸಿಆರ್ಪಿ ಗಳಿಂದ ಕ್ಲಸ್ಟರ್ ಹಂತದಲ್ಲಿ ಒಟ್ಟು 1695 ಶಿಕ್ಷಕರಿಗೆ ಅಕ್ಟೋಬರ್ 31 ರಂದು ನಡೆಸಲಾಯಿತು.
ಇದನ್ನೂ ಓದಿ: ಕಳೆದ ಲೋಕ್ ಅದಾಲತ್ನಲ್ಲಿ 79,477 ಪ್ರಕರಣಗಳು ಇತ್ಯರ್ಥ | ನ್ಯಾ.ರೋಣ್ ವಾಸುದೇವ್
ಮೊದಲನೇ ಹಂತದ ಪರಿಶೀಲನೆಯು (ಬೇಸ್ಲೈನ್) ನವೆಂಬರ್ 3 ಮತ್ತು 4 ರಂದು ಶಾಲಾ ಹಂತದಲ್ಲಿ ನಡೆದು ಕಾರ್ಯಕ್ರಮವು ತರಗತಿಯಲ್ಲಿ ಅನುಷ್ಠಾನಗೊಂಡಿತು. ಸುಮಾರು 25,000 ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಅಧಿಕಾರಿಗಳಿಗೆ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ಕಾರ್ಯಾಗಾರ :
ಕಳೆದ ನವೆಂಬರ್ 7 ರಂದು ಪ್ರತ್ಯೇಕವಾದ ‘ಮೇಲ್ವಿಚಾರಣೆ, ಮಾರ್ಗದರ್ಶನ ಮತ್ತು ಪರಿಶೀಲನಾ ಸಭೆ’ಗಳನ್ನು ನಡೆಸುವ ಉದ್ದೇಶ, ಪ್ರಕ್ರಿಯೆ, ಮತ್ತು ಮಾದರಿಗಳನ್ನು ಎಲ್ಲಾ ಕ್ಲಸ್ಟರ್, ತಾಲ್ಲೂಕು ಮತ್ತು ಜಿಲ್ಲಾ ಹಂತದ ಅಧಿಕಾರಿಗಳಿಗೆ ಹಂಚಿಕೊಳ್ಳಲಾಯಿತು. ನವೆಂಬರ್ ಮೊದಲನೇ ವಾರದಲ್ಲಿ ಎಲ್ಲಾ ಕ್ಲಸ್ಟರ್ ಹಂತದ ಅಧಿಕಾರಿಗಳು ತಮ್ಮ ತಮ್ಮ ಶಾಲೆಗಳ ಪ್ರಥಮ ಹಂತದ ಪರಿಶೀಲನೆಯನ್ನು ನಡೆಸಿ ಅದರ ಮಾಹಿತಿಯನ್ನು ಜಿಲ್ಲಾ ಹಂತದ ಅಧಿಕಾರಿಗಳಿಗೆ ಹಂಚಿಕೊಂಡಿದ್ದರು.
ಆದ್ಯತೆ ಆಧಾರಿತ ತರಗತಿ ಭೇಟಿಗಳು:
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ರಚಿಸಲಾದ ಸರ್ಕಾರಿ ಅಧಿಕಾರಿಗಳ ವರ್ಗವು ತರಬೇತಿಗಳನ್ನು ನಡೆಸುವುದು ಮಾತ್ರವಲ್ಲದೆ ತರಗತಿಯ ಅನುಷ್ಠಾನದ ಸಮಯದಲ್ಲಿ ಶಿಕ್ಷಕರನ್ನು ಬೆಂಬಲಿಸುವ ಉದ್ದೇಶದಿಂದ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದಾರೆ. ತಾಲ್ಲೂಕು ಮತ್ತು ಕ್ಲಸ್ಟರ್ ಹಂತದ ಅಧಿಕಾರಿಗಳು, ಶಿಕ್ಷಕರು ನಡೆಸುತ್ತಿರುವ ‘ಓದು ಕರ್ನಾಟಕ’ ತರಗತಿಗಳನ್ನು ವೀಕ್ಷಿಸಿ ಅಗತ್ಯ ಸಹಕಾರ ನೀಡುವ ಸಲುವಾಗಿ ಶಾಲೆಗಳಿಗೆ ಭೇಟಿಯನ್ನು ನೀಡಿ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ, ಸಲಹೆ, ಸೂಚನೆಗಳನ್ನು ನೀಡಿ ಅದರ ವಿವರವನ್ನು ಮೇಲ್ವಿಚಾರಣೆಯ ಲಿಂಕ್ನಲ್ಲಿ ನಮೂದಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.
ಮಧ್ಯಂತರ ಮೌಲ್ಯಮಾಪನದವರೆಗೆ ಕಲಿಕಾ ಮಟ್ಟದ ಸುಧಾರಣೆಗಳು:
ಕಾರ್ಯಕ್ರಮದ 30 ದಿನಗಳ ಅವಧಿಯ ನಂತರ ಮಧ್ಯಂತರ ಪರಿಶೀಲನೆಯು ಶಾಲಾ ಹಂತದಲ್ಲಿ ಡಿಸೆಂಬರ್ 15 ರಿಂದ 20 ರವರೆಗೆ ನಡೆದಿದೆ. ಮಧ್ಯಂತರ ಅವಧಿಯ ವೇಳೆಗೆ ಶೇ.34 ರಷ್ಟು ಮಕ್ಕಳು ಒಂದು ಸರಳ ಪಠ್ಯವನ್ನು ಓದಬಲ್ಲರು ಹಾಗೂ ಶೇ.66 ರಷ್ಟು ಮಕ್ಕಳು 3-ಅಂಕಿ ಸಂಖ್ಯೆಯನ್ನು ಗುರುತಿಸಬಲ್ಲರು. ನಾಲ್ಕೂ ಮೂಲಕ್ರಿಯೆಯನ್ನು ಮಾಡಬಲ್ಲ ಮಕ್ಕಳಲ್ಲಿ ಸರಾಸರಿ ಶೇ.16 ರಷ್ಟು ಸುಧಾರಣೆ ಕಂಡುಬಂದಿದೆ. ಇದು ಇಡೀ ರಾಜ್ಯದಲ್ಲಿಯೇ ಚಿತ್ರದುರ್ಗ ಜಿಲ್ಲೆಯು ಅತ್ಯಂತ ಮುಂಚೂಣಿಯ ಅನುಷ್ಠಾನದ ಪ್ರತಿಫಲವಾಗಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | 17 ಜನವರಿ | ಇಂದಿನ ಅಡಿಕೆ ರೇಟ್
ಒಟ್ಟಾರೆಯಾಗಿ ಈ ಕಾರ್ಯಕ್ರಮವು ಕಡಿಮೆ ಅವಧಿಯಲ್ಲಿ ಮಕ್ಕಳ ಮೂಲಭೂತ ಭಾಷೆ ಮತ್ತು ಗಣಿತ ಮಟ್ಟ ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿದೆ ಎಂದು ಕಂಡುಬಂದಿದೆ. ಈ ಎಲ್ಲಾ ಬೆಳವಣಿಗೆಗಳು ಜಿಲ್ಲೆಯಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ “ಎಡ್ ಲ್ಯಾಬ್”ನ ಫಲಶೃತಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್.ಆಕಾಶ್ ತಿಳಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

