ಮುಖ್ಯ ಸುದ್ದಿ
ಅಭಾಸಪ ಉದ್ಘಾಟನೆ | ಓದುಗರ ಮನಸ್ಸು ಅರಳಿಸದ ಸಾಹಿತ್ಯದ ಪ್ರಯೋಜನವೇನು | ಡಾ.ಸಿಬಂತಿ ಪದ್ಮನಾಭ

CHITRADURGA NEWS | 23 FEBRUARY 2025
ಚಿತ್ರದುರ್ಗ: ಓದುವವರ ಮನಸ್ಸು ಅರಳಿಸದಿದ್ದರೆ, ಒಳ್ಳೆಯ ಭಾವನೆ ಬೆಳೆಸದಿದ್ದರೆ, ಜನ ಪರಸ್ಪರ ಪ್ರೀತಿಸುವಂತೆ ಮಾಡದಿದ್ದರೆ ಅಂತಹ ಸಾಹಿತ್ಯದಿಂದ ಏನು ಪ್ರಯೋಜನ ಎಂದು ತುಮಕೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ ಕೆ.ವಿ ಪ್ರಶ್ನಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸಂಜೆ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಉದ್ಘಾಟನೆ ಹಾಗೂ ವರಕವಿ ದ.ರಾ.ಬೇಂದ್ರ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ: ಸರಿಗಮ ಸಂಗೀತ ನಾಟಕೋತ್ಸವ | ಡಾ.ಬಸವಕುಮಾರ ಸ್ವಾಮೀಜಿ ಉದ್ಘಾಟನೆ
ಸಾಹಿತ್ಯದಿಂದ ಗಲಭೆಯಾದರೆ ಏನರ್ಥ. ಇತ್ತೀಚಿನ ದಿನಗಳಲ್ಲಿ ಜನರ ಮನಸ್ಸು ಛಿದ್ರಗೊಳಿಸುವ ವಿದ್ವಂಸಕ ಸಾಹಿತ್ಯ ಬರೆಯುವವರ ಸಂಖ್ಯೆಯೇ ಹೆಚ್ಚಾಗಿದೆ ಎಂದರು.
ಎಲ್ಲವೂ ಸರಿಯಾಗಿದ್ದರೂ, ಹುಳಿ ಹಿಂಡುವ, ಎಲ್ಲರೂ ಸಕಾರಾತ್ಮಕವಾಗಿದ್ದಾಗ ನಕಾರಾತ್ಮಕವಾಗಿ ಮಾತನಾಡಿ ವಿಜೃಂಭಿಸುವ ಪ್ರವೃತ್ತಿ ಹೆಚ್ಚಾಗಿದೆ. ನಾವು ಹುಟ್ಟಿ ಬೆಳೆದ ದೇಶದ ಪರವಾಗಿ ಆಲೋಚನೆ ಮಾಡುವ ಸಾಹಿತ್ಯ ನಮಗೆ ಬೇಕು ಎಂದು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ನಮಗೆ ಇನ್ನೊಂದು ಸಹೃದಯೀ ಸಾಹಿತ್ಯ ಸಂಸ್ಥೆ ಜೊತೆಯಾಗಿದೆ. ವಿಭಿನ್ನ ರೀತಿಯ ಸಂಸ್ಥೆ ಇದು ಎನ್ನುವುದಕ್ಕೆ ಈ ಕಾರ್ಯಕ್ರಮ ನಿದರ್ಶನ. ಒಟ್ಟಾಗಿ ಸೇರಿ ಮುಂದುವರೆಯೋಣ.
| ಕೆ.ಎಂ.ಶಿವಸ್ವಾಮಿ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರು.
ಸಾಕಷ್ಟು ಜನರಿಗೆ ಸಾಹಿತ್ಯದಲ್ಲಿ ಏನನ್ನು ಓದಬೇಕು. ಏನನ್ನು ಅರ್ಥೈಸಿಕೊಳ್ಳಬೇಕು ಎನ್ನುವುದೇ ಸಮಸ್ಯೆ. ಈ ನಿಟ್ಟಿನಲ್ಲಿ ಅಭಾಸಪ ಸಮಾಜಕ್ಕೆ ಉತ್ತಮ ಸಾಹಿತ್ಯ ಕೊಡುವ ದೃಷ್ಟಿಕೋನದಲ್ಲಿ ಸಾಗುತ್ತಿದೆ ಎಂದು ವಿವರಿಸಿದರು.
ಸಾಹಿತಿ ತಾನು ಬದುಕಿದ ಹಾಗೆ ಬರೆಯಬೇಕೊ ಅಥವಾ ತನಗಿಷ್ಟವಾದ ವಿಷಯ ಬರೆಯಬಹುದೊ ಎನ್ನುವ ಜಿಜ್ಞಾಸೆ ನಿರಂತರವಾಗಿದೆ. ತಾನು ಬರೆದ ಸಾಹಿತ್ಯ ನನ್ನ ಜೀವನಕ್ಕೆ ಸಂಬಂಧವಿಲ್ಲ ಎನ್ನುವ ಭಾವನೆ ಇದೆ.
ಇದನ್ನೂ ಓದಿ: ಮೇ.10ರ ಒಳಗಾಗಿ ಇ-ಖಾತೆ ಪಡೆಯಿರಿ | ಜಿಲ್ಲಾಧಿಕಾರಿ ವೆಂಕಟೇಶ್
ಸಾಹಿತ್ಯದಲ್ಲಿ ಕುಡಿತ ಹಾನಿಕರ ಎಂದು ಬರೆದು ರಾತ್ರಿ ಕಂಠಪೂರ್ತಿ ಕುಡಿಯುವುದು, ಭ್ರಷ್ಟ ಅಧಿಕಾರಿ ಭ್ರμÁ್ಟಚಾರದ ಬಗ್ಗೆ ಉಪನ್ಯಾಸ ನೀಡಿದಂತೆ ಆಗುವುದಿಲ್ಲವೇ ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಉದ್ಘಾಟನೆ
ವರಕವಿ ದ.ರಾ.ಬೇಂದ್ರೆಯವರು ತಾವು ಹೇಗೆ ಬದುಕಿದರೊ ಹಾಗೆಯೇ ಬರೆದವರು. ಮನಸ್ಸು ಮಾಡಿದ್ದರೆ ರಾಜಧಾನಿಯಲ್ಲೇ ಬದುಕಬಹುದಿತ್ತು. ಆದರೆ, ಸಾಧನಕೇರಿಯಲ್ಲೇ ಬದುಕು ಸವೆಸಿದರು ಎಂದು ಸ್ಮರಿಸಿದರು.
ಬೇಂದ್ರೆ ಅವರ ಜೀವನದಲ್ಲಿ ಸಾಕಷ್ಟು ದುಃಖ ಅನುಭವಿಸಿದ್ದಾರೆ. ಅವರ ಭಾವಗೀತೆಗಳಲ್ಲಿ ಸಾಕಷ್ಟು ನೋವು ತುಂಬಿರುತ್ತೆ. ಅದೇ ಸಾಹಿತ್ಯವಾಗಿದೆ. ಬರೆದಂತೆ ಬದುಕಿದವರು ದ.ರಾ.ಬೇಂದ್ರ. ಆದರೆ, ಸಾಹಿತ್ಯದ ಮೂಲಕ ಸಮಾಜದ ಬಗ್ಗೆ ಮಾತನಾಡಿದವರು ಸಮಾಜಕ್ಕೆ ಪೂರಕವಾಗಿ ಬದುಕಿಲ್ಲದ ಅನೇಕ ವೈರುಧ್ಯಗಳೂ ಇವೆ ಎಂದರು.
ಇದನ್ನೂ ಓದಿ: ನಾಳೆ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಕರೆಂಟ್ ಇರಲ್ಲ?
ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ಡಾ.ಎಸ್.ಎನ್.ಹೇಮಂತರಾಜು ಮಾತನಾಡಿ, ಸಾಹಿತ್ಯ ಬೇರೆ ಬೇರೆ ರೀತಿಯಲ್ಲಿ ಅರ್ಥವಾಗುತ್ತೆ ಎನ್ನುವುದಕ್ಕೆ ಬೇಂದ್ರೆಯವರ ನೀ ಹಿಂಗ ನೋಡಬೇಡ ನನ್ನ ಎನ್ನುವ ಪದ್ಯ ಎಂದು ವಿಶ್ಲೇಷಿಸಿದರು.
ಮುಖಂಡನೊಬ್ಬ ಹೊಗಳು ಭಟ್ಟನ ಮಾತು ಕೇಳಿ ಹಳ್ಳ ಹಿಡಿಯುವುದು ಹೇಗೆ ಸಾಧ್ಯವೋ ಅದೇ ಮಾತು ಸಾಹಿತಿಗೂ ಅನ್ವಯಿಸುತ್ತದೆ ಎಂದರು.
ಬೇಂದ್ರೆಯವರನ್ನು ಬಿಟ್ಟು ಕನ್ನಡ ಸಾಹಿತ್ಯವಿಲ್ಲ. ಬೇಂದ್ರೆಯವರ ಹೆಸರಿನಲ್ಲಿ ಟ್ರಸ್ಟ್ ಆಗಿದೆ. ಈ ಮೂಲಕ ಅವರು ಇನ್ನಷ್ಟು ಜನರನ್ನು ತಲುಪಬೇಕು ಎಂದು ಆಶಿಸಿದರು.
ಸೊಷಿಯಲ್ ಮೀಡಿಯಾದಂತಹ ಅನೇಕ ಮಾಲಿನ್ಯದ ನಡುವೆ ಕಳೆದು ಹೋಗುತ್ತಿರುವ ನಮಗೆ ಸಾಹಿತ್ಯ ಕಾರ್ಯಕ್ರಮಗಳು ಬೇಕು. ಈ ನಿಟ್ಟಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವತ್ತ ಗಮನಹರಿಸಲಿದೆ.
| Prof.ಜಿ.ಪರಮೇಶ್ವರಪ್ಪ. ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಜಿಲ್ಲಾಧ್ಯಕ್ಷರು.
ಜ್ಞಾನಪೀಠ ಪ್ರಶಸ್ತಿ ಬಂದಾಗ ಬೇಂದ್ರೆಯವರು ಕನ್ನಡಕ್ಕೆ ಈಗ ಲಕ್ಷ್ಯ ಬಂತು ಎನ್ನುತ್ತಾರೆ. ಆದರೆ, ತಂದಿಕ್ಕುವ ಶಕ್ತಿಗಳು ನನಗೆ ಲಕ್ಷ ಬಂತು ಎಂದಿದ್ದಾರೆ ಎಂದು ಪುಕಾರು ಹಬ್ಬಿಸಿ ಕುವೆಂಪು ಹಾಗೂ ಬೇಂದ್ರೆಯವರ ನಡುವೆ ವೈಮನಸ್ಸು ಮೂಡಿಸುವ ಕೆಲಸ ನಿರಂತರವಾಗಿತ್ತು. ಇಂತಹ ಒಳಸುಳಿಗಳ ನಡುವೆ ಅವರು ಬದುಕಿದರು ಎಂದು ಮೆಲುಕು ಹಾಕಿದರು.
ತಮ್ಮ ಮಾತು ಹಾಗೂ ಪದಬಳಕೆಯಲ್ಲಿ ವಿಶಿಷ್ಟವಾಗಿ ಬಳಸುವ ಶಕ್ತಿ ಬೇಂದ್ರೆಯವರಲ್ಲಿತ್ತು. ನನ್ನ ಬದುಕೇ ನನ್ನ ಸಂದೇಶ ಎಂದು ಹೇಳಿದ ಜಗತ್ತಿನ ಏಕೈಕ ವ್ಯಕ್ತಿ ಗಾಂಧೀಜಿ. ಅದೇ ರೀತಿ ಬದಕಿದಂತೆ ಬರೆದವರು ಬೇಂದ್ರೆ ಮತ್ತು ಕುವೆಂಪು ಎಂದು ಡಾ.ಹೇಮಂತರಾಜು ಹೇಳಿದರು.
ಉಪನ್ಯಾಸಕ ಯಳನಾಡು ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ದೊಡ್ಡಯ್ಯ ಸ್ವಾಗತಿಸಿದರು. ಶಿಕ್ಷಕಿ ವಿಜಯಲಕ್ಷ್ಮೀ ಪ್ರಾರ್ಥಿಸಿದರು. ಶಿಕ್ಷಕ ಕೆಂಚವೀರಪ್ಪ ಕಾರ್ಯಕ್ರಮ ನಿರ್ವಹಿಸಿದರು.
