
CHITRADURGA NEWS | 03 SEPTEMBER 2026
ಚಿತ್ರದುರ್ಗ: ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಸರಳತೆ ಹಾಗೂ ಜ್ಞಾನಕ್ಕೆ ಮಾದರಿಯಾಗಿದ್ದ ಶ್ರೇಷ್ಠ ಸಂತರು ಎಂದು ಭರಮಸಾಗರ ಬಾಪೂಜಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಮಮತ ಎನ್. ಸ್ಮರಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 02 | ಮೆಕ್ಕೆಜೋಳ, ರಾಗಿ ರೇಟ್ ಎಷ್ಟಿದೆ?
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿರುವ ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯ 20ನೇ ದಿನದ ಶ್ರೀಮಠದ ಬಸವೇಶ್ವರ ಸಭಾಂಗಣದಲ್ಲಿ ನಡೆದ ವಿಜಯಪುರ ಸಿದ್ಧೇಶ್ವರ ಶ್ರೀಗಳ ಜೀವನ ಹಾಗೂ ಸಾಧನೆ ಕುರಿತು ಚಿಂತಾನಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು.
ಸಾಮಾನ್ಯ ಬಡ ರೈತ ಕುಟುಂಬದಲ್ಲಿ ಜನಿಸಿದ ಸಿದ್ಧೇಶ್ವರ ಶ್ರೀಗಳು ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಕೊಲ್ಲಾಪುರ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಿದರು. ಮಲ್ಲಿಕಾರ್ಜುನ ಶ್ರೀಗಳ ಪ್ರಭಾವಕ್ಕೆ ಒಳಗಾಗಿ ಪ್ರವಚನ ಕ್ಷೇತ್ರಕ್ಕೆ ಬಂದ ಅವರು, ತಮ್ಮ ಪಾಂಡಿತ್ಯ, ಸರಳತೆ ಹಾಗೂ ಮೃದು ಸ್ವಭಾವದಿಂದ ಅಪಾರ ಜನಮನ್ನಣೆ ಗಳಿಸಿದರು ಎಂದರು.
ಬಹುಭಾಷಾ ಪ್ರವೀಣರಾಗಿದ್ದ ಸಿದ್ಧೇಶ್ವರ ಶ್ರೀಗಳು ಸದಾ ಸರಳ ಜೀವನ ನಡೆಸುತ್ತಿದ್ದರು. ಜೇಬೇ ಇಲ್ಲದ ಅಂಗಿ ಧರಿಸುತ್ತಿದ್ದ ಅವರು, ಜನಪರ ಕಾಳಜಿಯೊಂದಿಗೆ ಜ್ಞಾನವನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಿದರು. ಅವರ ಪ್ರವಚನ ಕೇಳಲು ಜನಸಾಗರವೇ ಸೇರುತ್ತಿತ್ತು. ಸಾಹಿತ್ಯ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿ ಹಲವು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಮಾನಸ ನೇಮಕ
ಅವರ ನಡೆ-ನುಡಿ ಹಾಗೂ ವಿದ್ವತ್ತಿಗೆ ಹಲವು ಪ್ರಶಸ್ತಿಗಳು ಅರಸಿ ಬಂದಿದ್ದರೂ, ಸರಳ ಜೀವನವೇ ತಮ್ಮ ಆದರ್ಶ ಎಂದು ಹೇಳಿ ಪ್ರಶಸ್ತಿಗಳನ್ನು ನಯವಾಗಿ ತಿರಸ್ಕರಿಸಿದ್ದರು. 82 ವರ್ಷಗಳ ತುಂಬು ಜೀವನ ನಡೆಸಿದ ಅವರು 2023ರ ಜನವರಿ 3ರಂದು ಲಿಂಗೈಕ್ಯರಾದರು. ತಮ್ಮ ಅಂತ್ಯಕ್ರಿಯೆಯನ್ನು ಸರಳವಾಗಿ ನೆರವೇರಿಸುವಂತೆ ಸೂಚಿಸುವ ಮೂಲಕವೂ ಸರಳತೆಯನ್ನು ಮೆರೆದಿದ್ದರು ಎಂದು ಡಾ. ಮಮತ ಸ್ಮರಿಸಿದರು.
ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, “ಇಂದು ಹಣಕ್ಕೆ ಹೆಚ್ಚು ಬೆಲೆ ಇದೆ. ಆದರೆ ಸಿದ್ಧೇಶ್ವರ ಸ್ವಾಮೀಜಿಯವರು ಜ್ಞಾನಕ್ಕೂ ಬೆಲೆ ಇದೆ ಎಂಬುದನ್ನು ತೋರಿಸಿಕೊಟ್ಟ ವಿರಳ ಸಂತರು. ಭೌತಿಕವಾದದ್ದು ನಶ್ವರ, ಜ್ಞಾನವೊಂದೇ ಶಾಶ್ವತ” ಎಂಬ ನಂಬಿಕೆಯೊಂದಿಗೆ ಬದುಕಿದ ಸಂತಶ್ರೇಷ್ಠರು ಎಂದರು.
ಕಾರ್ಯಕ್ರಮದಲ್ಲಿ ಜೆ.ಎನ್. ಕೋಟೆ ಬಸವಕೇಂದ್ರದ ಬಸವರಾಜಪ್ಪ, ಗಾಯತ್ರಿ ಶಿವರಾಂ, ನಾಗರಾಜ ಸಂಗಮ್, ಎಸ್. ವೀರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಜಮುರಾ ಕಲಾವಿದ ಉಮೇಶ್ ಪತ್ತಾರ್ ಅವರು ಸಿದ್ಧೇಶ್ವರ ಶ್ರೀಗಳ ಕುರಿತು ಗೀತೆಗಳನ್ನು ಹಾಡಿದರು. ಶ್ರೀಮತಿ ದೇವಿಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ನಾಳಿನ ಕಾರ್ಯಕ್ರಮ
ಸೆ. 3ರಂದು ಬೆಳಗ್ಗೆ 11 ಗಂಟೆಗೆ ಭೀಮಸಮುದ್ರದ ಶ್ರೀ ಮಾವಿನಹಳ್ಳಿ ಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ‘ಅನುಭಾವ ಶ್ರಾವಣ’ ಕಾರ್ಯಕ್ರಮ ನಡೆಯಲಿದೆ. ಡಾ. ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಸಮ್ಮುಖ ವಹಿಸುವರು.
ಇದನ್ನೂ ಓದಿ: ಸಾರ್ವಜನಿಕರ ಹಿತಕ್ಕೆ ಮೊದಲ ಆದ್ಯತೆ | ಗಣಿ ಲಾರಿಗಳಿಗೆ ಕಟ್ಟುನಿಟ್ಟಿನ ನಿಯಮ | ಸಚಿವ ಟಿ.ರಘುಮೂರ್ತಿ
ಸಂಜೆ 6.30ಕ್ಕೆ ಶ್ರೀಮಠದ ಬಸವೇಶ್ವರ ಸಭಾಂಗಣದಲ್ಲಿ ಶ್ರೀ ಮಂಟೇಸ್ವಾಮಿಗಳ ಜೀವನ ಮತ್ತು ಸಾಧನೆ ಕುರಿತು ಅವಲೋಕನ ಕಾರ್ಯಕ್ರಮ ನಡೆಯಲಿದೆ. ಡಾ. ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸಹಾಯಕ ಪ್ರಾಧ್ಯಾಪಕಿ ಲಕ್ಷ್ಮೀ ಎ.ಎಂ. ವಿಷಯಾವಲೋಕನ ಮಾಡಲಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

