CHITRADURGA NEWS | 14 SEPTEMBER 2026
ಚಿತ್ರದುರ್ಗ: 12ನೇ ಶತಮಾನವು ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕವಾಗಿ ಸರ್ವತೋಮುಖ ಅಭಿವೃದ್ಧಿಯ ಚಿಂತನೆಗಳನ್ನು ಸಮಾಜಕ್ಕೆ ನೀಡಿದ ಅಮೋಘ ಕಾಲವಾಗಿದ್ದು, ಆ ಕಾಲದ ಶರಣರ ಮಾನವೋದ್ಧಾರದ ಕಾರ್ಯವನ್ನು ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠ ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ದಾವಣಗೆರೆಯ ಬಸವ ಪ್ರಜ್ಞಾ ಸಂಚಾಲಕ ಡಾ. ಮಲ್ಲಿಕಾರ್ಜುನ ಜವಳಿ ಹೇಳಿದರು.
ಇದನ್ನೂ ಓದಿ: ಅರ್ಜಿಗಳನ್ನು ರಿಜಿಸ್ಟ್ರೇಷನ್ಗೆ ಸೀಮಿತಗೊಳಿಸದೆ, ಸಮಸ್ಯೆಗಳಿಗೆ ಪರಿಹಾರ ನೀಡಿ | ಸಚಿವ ಟಿ.ರಘುಮೂರ್ತಿ
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ‘ಅನುಭಾವ ಶ್ರಾವಣ–ಶರಣ ಚಿಂತನ’ ಮಾಲಿಕೆಯ ಸಮಾರೋಪ ಸಮಾರಂಭದಲ್ಲಿ ದಾವಣಗೆರೆಯ ಶ್ರೀ ಬಕ್ಕೇಶ್ವರರ ಜೀವನ ಹಾಗೂ ಸಾಧನೆ ಕುರಿತು ಅವರು ಉಪನ್ಯಾಸ ನೀಡಿದರು.
ಕಳೆದ 28 ದಿನಗಳಿಂದ ನಡೆದ ಅನುಭಾವ ಶ್ರಾವಣ ಚಿಂತನ ಮಾಲಿಕೆಯು ಸತ್ಪುರುಷರ ಭಕ್ತಿ, ಜ್ಞಾನ ಹಾಗೂ ದಾಸೋಹದ ಧಾರೆಯನ್ನು ಜನರಿಗೆ ಪರಿಚಯಿಸಿದೆ. ಅನುಭಾವವಿಲ್ಲದ ಭಕ್ತಿ ಹಾಗೂ ಕ್ರಿಯೆ ಅರ್ಥಪೂರ್ಣವಾಗುವುದಿಲ್ಲ. ಶರಣರು ತಾವು ಆಲೋಚಿಸಿದ ವಿಚಾರಗಳನ್ನು ತಮ್ಮ ಪ್ರಾಯೋಗಿಕ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಉದ್ಧಾರಕ್ಕೆ ಶ್ರಮಿಸಿದರು. ಇದೇ ರೀತಿಯಲ್ಲಿ ಅನುಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಹಿತಕ್ಕಾಗಿ ದುಡಿದವರು ಶ್ರೀ ಬಕ್ಕೇಶ್ವರರು ಎಂದು ತಿಳಿಸಿದರು.
ಚಿತ್ರದುರ್ಗ–ದಾವಣಗೆರೆ ಪರಿಸರದ ಗುಮ್ಮನೂರು ಗ್ರಾಮದ ಬಸವಲಿಂಗಪ್ಪ–ಪಾರ್ವತಮ್ಮ ದಂಪತಿಯ ಪುತ್ರರಾಗಿ ಜನಿಸಿದ ಬಕ್ಕೇಶ್ವರರು ಶಿವಜ್ಞಾನದ ಶಿವಯೋಗಿಗಳಲ್ಲಿ ಒಬ್ಬರಾಗಿದ್ದರು. ದನ ಕಾಯುವ ಕೆಲಸದಿಂದ ಜೀವನ ಆರಂಭಿಸಿದ ಅವರು, ಧರ್ಮ ಜಾಗೃತಿ ಹಾಗೂ ದೀನದಲಿತರ ಉದ್ಧಾರಕ್ಕಾಗಿ ದೇಶಾಂತರ ಸಂಚರಿಸಿ ಧರ್ಮಪ್ರಚಾರ ಕೈಗೊಂಡರು. ಜನರಿಂದ ದೊರೆತ ದಾನವನ್ನು ಬಡವರು ಹಾಗೂ ದೀನದಲಿತರಿಗೆ ಹಂಚುವ ಮೂಲಕ ದಾಸೋಹದ ಕಾರ್ಯ ನಡೆಸಿದರು ಎಂದು ಹೇಳಿದರು.
ಇದನ್ನೂ ಓದಿ: ಶಾಂತಿಯುತ ಗೌರಿ ಗಣೇಶ ಹಬ್ಬ ಆಚರಿಸಲು ಪೊಲೀಸ್ ಇಲಾಖೆ ಮನವಿ
ಚಂದ್ರವಳ್ಳಿಯ ಅಂಕಲಿಮಠದಲ್ಲಿ ಶಿವಯೋಗ ನಿರತರಾಗಿದ್ದ ಬಕ್ಕೇಶ್ವರರು ಸಮಾಜ ಸುಧಾರಣೆಯ ಹಲವು ಕಾರ್ಯಗಳನ್ನು ಕೈಗೊಂಡಿದ್ದರು. ಕಳ್ಳರ ಮನಸ್ಸನ್ನು ಪರಿವರ್ತಿಸಿ ಸನ್ಮಾರ್ಗಕ್ಕೆ ಕೊಂಡೊಯ್ದ ಅವರು ಗೋಕರ್ಣ, ಹಂಪಿ, ಕಾಶಿ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಿ ಧರ್ಮ ಜಾಗೃತಿ ಮೂಡಿಸಿದ್ದರು ಎಂದು ವಿವರಿಸಿದರು.
ಶರಣರ ತತ್ವಗಳನ್ನು ಅನುಷ್ಠಾನಗೊಳಿಸಬೇಕು
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, 28 ದಿನಗಳಿಂದ ನಡೆದ ಕಾರ್ಯಕ್ರಮದ ಸಮಾರೋಪ ಸಾಂಕೇತಿಕವಾಗಿ ನಡೆಯುತ್ತಿದೆ. ಶರಣರ ಸ್ಮರಣೆ ಮಾತ್ರವಲ್ಲದೆ, ಅವರ ತತ್ವಗಳನ್ನು ಆತ್ಮಶೋಧನೆಯೊಂದಿಗೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದರು.
ಶ್ರೀಮಠದ ವತಿಯಿಂದ ಕಾರ್ತಿಕ ಮಾಸದಲ್ಲಿ ಮುಂಚೂಣಿಯಲ್ಲಿಲ್ಲದ 30 ಜನರ ಸ್ಮರಣೆ ಹಾಗೂ ಶ್ರಾವಣ ಮಾಸದಲ್ಲಿ 28 ಶರಣರ ಸ್ಮರಣೆ ಮಾಡಲಾಗಿದೆ. ಬಸವಾದಿ ಶರಣರ ತತ್ವಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಮಾಜದಲ್ಲಿ ಉತ್ತಮ ಪರಿವರ್ತನೆ ತರಬೇಕು ಎಂದು ಹೇಳಿದರು.
ಇದನ್ನೂ ಓದಿ: ಐಮಂಗಲ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸಚಿವ ಮುನಿಯಪ್ಪ ಭೇಟಿ | ವಸತಿ ಶಾಲೆಗಳಲ್ಲಿ ಓದಿ ಉನ್ನತ ಸಾಧನೆ ಮಾಡಿ
ಶ್ರೀಮಠವು ಶಿಕ್ಷಣ, ಅನ್ನದಾಸೋಹ, ಜ್ಞಾನ ದಾಸೋಹ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಅಕ್ಟೋಬರ್ 13ರಿಂದ 21ರವರೆಗೆ ಯೋಗ, ವಿಚಾರ ಸಂಕಿರಣ, ಗ್ರಂಥ ಬಿಡುಗಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ ಮಾತನಾಡಿ, ಸಮಾಜ ಪರಿವರ್ತನೆ, ದಾರಿದ್ರ್ಯ ಹಾಗೂ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಶರಣರು ನೀಡಿದ ಚಿಂತನೆಗಳನ್ನು ಶ್ರೀಮಠ ಮುಂದುವರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು. ಜಿಲ್ಲೆಯ ರೈತರ ಬಹುದಿನಗಳ ಆಶಯವಾಗಿದ್ದ ಭದ್ರಾ ನೀರು ಗೋನೂರು ಕೆರೆಗೆ ಹರಿದುಬಂದಿರುವುದು ಸಂತಸದ ವಿಚಾರ ಎಂದು ಹೇಳಿದರು.
ಬಾಪೂಜಿ ವಿದ್ಯಾಸಂಸ್ಥೆಯ ಕೆ.ಎಂ. ವೀರೇಶ್ ಮಾತನಾಡಿ, ಶ್ರೀಮಠ ಜ್ಞಾನ ಮತ್ತು ಅನ್ನದಾಸೋಹದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ. ಜಿಲ್ಲೆಗೆ ಭದ್ರಾ ನೀರು ತರುವಲ್ಲಿ ಶ್ರೀಮಠ, ಜನಪ್ರತಿನಿಧಿಗಳು, ರೈತರು ಹಾಗೂ ಹೋರಾಟಗಾರರ ಪಾತ್ರ ಮಹತ್ವದ್ದಾಗಿದೆ ಎಂದರು.
ಎಸ್ಜೆಎಂ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾತನಾಡಿ, ಶ್ರೀಮಠವು ಅನ್ನ, ಜ್ಞಾನ ಹಾಗೂ ಆರೋಗ್ಯದ ದಾಸೋಹದೊಂದಿಗೆ ಪರಿಸರ ಸಂರಕ್ಷಣೆಯಲ್ಲಿಯೂ ಮಹತ್ವದ ಕಾರ್ಯ ಮಾಡುತ್ತಿದೆ. ಅನುಭಾವ ಶ್ರಾವಣದ ಮೂಲಕ ಮಹನೀಯರ ಚಿಂತನೆಗಳನ್ನು ಜನರಿಗೆ ಪರಿಚಯಿಸುವ ಕಾರ್ಯ ಶ್ಲಾಘನೀಯ ಎಂದರು.
ಇದನ್ನೂ ಓದಿ: ಹಿರಿಯೂರಿನಲ್ಲಿ ಸಮುದಾಯ ಭವನ, ವಸತಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ | ಸಚಿವ ಕೆ.ಹೆಚ್.ಮುನಿಯಪ್ಪ
ಸಮಾರಂಭದಲ್ಲಿ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ, ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ, ಶ್ರೀ ಬಸವಮೂರ್ತಿ ಗುಂಡಯ್ಯ ಸ್ವಾಮೀಜಿ, ಲಾಳನಹಳ್ಳಿ ಶರಣೆ ಜಯದೇವಿ, ಶರಣೆ ಚಿನ್ಮಯಿದೇವಿ ಸೇರಿದಂತೆ ವಿವಿಧ ಸಮಾಜಗಳ ಹಾಗೂ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಜಮುರಾ ಕಲಾವಿದ ಉಮೇಶ್ ಪತ್ತಾರ್ ವಚನ ಪ್ರಾರ್ಥನೆ ಸಲ್ಲಿಸಿದರು. ಪಿ. ವೀರೇಂದ್ರಕುಮಾರ್ ಸ್ವಾಗತಿಸಿದರು. ರವಿಕಲಾ ಕಾರ್ಯಕ್ರಮ ನಿರೂಪಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

