ಹೊಸದುರ್ಗ
ಸಚಿವ ಡಿ.ಸುಧಾಕರ್ ವರ್ತನೆಗೆ ಶಾಸಕ ಬಿ.ಜಿ.ಗೋವಿಂದಪ್ಪ ಅಸಮಧಾನ | ಹಿನ್ನೀರಿನ ರೈತರ ಸಂಕಷ್ಟ ಸೌಜನ್ಯಕ್ಕೂ ಆಲಿಸಿಲ್ಲ

CHITRADURGA NEWS | 13 JANUARY 2025
ಹೊಸದುರ್ಗ: ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೊಸದುರ್ಗ ತಾಲೂಕಿನ ರೈತರ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ವಿವಿ ಸಾಗರ ಜಲಾಶಯದ ಹಿನ್ನೀರಿನಿಂದ ರೈತರ ಜಮೀನು ಮುಳುಗಡೆ ಆಗಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಸೌಜನ್ಯಕ್ಕಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಒಮ್ಮೆಯೂ ತಾಲೂಕಿನ ರೈತರ ಕಷ್ಟ ಆಲಿಸಿಲ್ಲ. ಹಿರಿಯೂರು ತಾಲೂಕಿಗೆ ಸೀಮಿತರಾಗಿದ್ದಾರೆ ಎಂದು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಸುದ್ದಿಗೋಷ್ಠಿಯಲ್ಲಿ ಗುಡುಗಿದ್ದಾರೆ.
ಇದನ್ನೂ ಓದಿ: ರೀಲ್ಸ್ ಮಾಡಿ ಬಹುಮಾನ ಗೆಲ್ಲಿ | ಪೊಲೀಸ್ ಇಲಾಖೆಯ ಪ್ರಕಟಣೆ

ವಾಣಿವಿಲಾಸ ಸಾಗರ ಜಲಾಶಯ ನಿರ್ಮಾಣಕ್ಕಾಗಿ ಹೊಸದುರ್ಗ ತಾಲೂಕಿನ ರೈತರು 25 ಸಾವಿರ ಎಕರೆ ಜಮೀನು ನೀಡಿದ್ದಾರೆ. ಕೋಡಿ ಬೀಳುವ ಜಾಗವೂ ಸಹ ಹೊಸದುರ್ಗ ವ್ಯಾಪ್ತಿಯಲ್ಲಿದೆ. ಈಗ ಬಾಗೀನ ಅರ್ಪಿಸಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಕರೆಸುತ್ತಿದ್ದಾರೆ. ಇದಕ್ಕೆ ನಮ್ಮ ವಿರೋದವಿಲ್ಲ. ಆದರೆ, ಸೌಜನ್ಯಕ್ಕಾದರೂ ಜಿಲ್ಲೆಯ ಶಾಸಕರನ್ನು, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿಲ್ಲ ಎಂದರು.
ಹಿನ್ನೀರು ಭಾಗದ ರೈತರು ಸಂಕಷ್ಟದಲ್ಲಿದ್ದಾರೆ ಎಂಬ ವಿಚಾರ ತಿಳಿದಿದ್ದರೂ ಉದಾಸೀನತೆ ತೋರಿದ್ದಾರೆ ಈ ವರ್ತನೆಯನ್ನು ಸಚಿವ ಡಿ.ಸುಧಾಕರ್ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: ಡೆಸ್ಟಿನಿ-2025 | 42ನೇ ವರ್ಷದ ಅದ್ದೂರಿ ಉತ್ಸವಕ್ಕೆ ಭರದ ಸಿದ್ಧತೆ | ಮ್ಯೂಸಿಕ್, ರ್ಯಾಪ್, ಡಿಜೆ ಅಬ್ಬರ
ಹೊಸದುರ್ಗ ತಾಲೂಕಿನ ಮಾಡದಕೆರೆ ಹಾಗೂ ಮತ್ತೋಡು ಹೋಬಳಿಯ ರೈತರ ತೋಟ, ಜಮೀನು ಮುಳುಗಡೆ ಆಗಿವೆ. ಹೀಗಿದ್ದರೂ ಡಿ.ಸುಧಾಕರ್ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎರಚುತ್ತಿರುವ ಅವರಿಗೆ ಸಚಿವ ಸ್ಥಾನದ ಜವಬ್ದಾರಿ, ಕರ್ತವ್ಯಗಳನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ಜಿಲ್ಲಾ ಮಂತ್ರಿಯಾಗಿ ಡಿ.ಸುಧಾಕರ್ ತಮ್ಮ ಕೆಲಸಗಳನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅವರ ಕರ್ತವ್ಯ, ಜವಬ್ದಾರಿಗಳನ್ನು ನೆನೆಪಿಸಿಕೊಡಬೇಕಾದ ಸಂದರ್ಭ ಸೃಷ್ಠಿಯಾಗಿದೆ ಎಂದು ಹೇಳಿದ್ದಾರೆ.
ಜಲಾಶಯದಲ್ಲಿ ನೀರಿದ್ದರೂ ಬೋರ್ನಲ್ಲಿ ನೀರಿಲ್ಲ:
ವಿವಿ ಸಾಗರ ಜಲಾಶಯದಲ್ಲಿ ನೀರಿದ್ದರೂ, ಡ್ಯಾಂ ಸುತ್ತಮುತ್ತಲಿನ ಲಕ್ಕಿಹಳ್ಳಿ, ಅತ್ತಿಮಗ್ಗೆ, ಕಾರೇಹಳ್ಳಿ, ಜಿ.ಎನ್.ಕೆರೆ, ಮತ್ತೋಡು ಪಂಚಾಯತಿ ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಸಿದಾಗ ಹನಿ ನೀರು ಸಿಗುತ್ತಿಲ್ಲ.
ಇದನ್ನೂ ಓದಿ: ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು | ಚಳ್ಳಕೆರೆ ತಾಲೂಕಿನಲ್ಲಿ ಘಟನೆ
ಜಲಾಶಯದಲ್ಲಿ 130 ಅಡಿಗೆ ನೀರನ್ನು ನಿಲ್ಲಿಸಿಕೊಳ್ಳಲಿ. ನಮ್ಮದೇನು ತಕರಾರು ಇಲ್ಲ. ಆದರೆ ಹೆಚ್ಚುವರಿ ನೀರು ಜಲಾಶಯದಲ್ಲಿ ಸಂಗ್ರಹವಾಗದಂತೆ ಸರಾಗವಾಗಿ ಹರಿಯಲು ಅವಕಾಶ ಮಾಡಿಕೊಡಬೇಕು. ಈ ವಿಚಾರವಾಗಿ ನೀರಾವರಿ ತಜ್ಞರನ್ನು ನೇಮಿಸಿ ಅವರು ಕೊಡುವ ಶಿಪಾರಸ್ಸನ್ನು ಪಾಲಿಸಬೇಕು ಎಂದರು.
ಜಲಾಶಯದ ಹಿನ್ನೀರಿನಲ್ಲಿ ಗುರುತಿಸಲಾದ ಗಡಿರೇಖೆಯನ್ನು ದಾಟಿ ನೀರಿನಿಂದ ಮುಳಗುಡೆ ಆಗಿರುವ ಜಮೀನುಗಳನ್ನು ಸರ್ವೇ ಕಾರ್ಯ ನಡೆಸಿ ರೈತರಿಗೆ ನ್ಯಾಯಾಯುತ ಪರಿಹಾರ ಒದಗಿಸಬೇಕು. ಹೊಸದುರ್ಗ ತಾಲೂಕಿನ ರೈತರ ಸಂಕಷ್ಟ ಆಲಿಸುವಂತೆ ಅನೇಕ ಬಾರಿ ಹಿರಿಯೂರು ತಾಲೂಕಿನ ರೈತರನ್ನು ಆಹ್ವಾನಿಸಿದರೂ ಅವರು ಬಂದಿಲ್ಲ. ಮುಂದಿನ ದಿನಗಳಲ್ಲಾದರೂ ಬಂದು ತಾಲೂಕಿನ ರೈತರ ಸಂಕಷ್ಟವನ್ನು ಒಮ್ಮೆಯಾದರೂ ನೋಡಲಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಟಿಎಪಿಎಂಸಿ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ಕೆ.ಸಿ.ನಿಂಗಪ್ಪ, ಜವಳಿ ನಿಗಮದ ಮಾಜಿ ಅಧ್ಯಕ್ಷ, ಗೋ.ತಿಪ್ಪೇಶ್, ದೀಪಿಕಾ, ಗ್ಯಾರಂಟಿ ಸಮಿತಿಯ ತಾಲ್ಲೂಕು ಅಧ್ಯಕ್ಷ ಇಸ್ಮಾಯಿಲ್, ಕೆಂಚಪ್ಪ, ಸುಮಂಗಳಮ್ಮ ಇತರರಿದ್ದರು.
