ಮುಖ್ಯ ಸುದ್ದಿ
ವರ್ಷಾಂತ್ಯಕ್ಕೆ ಮನೆ ಮನೆಗೆ ಮಾರಿಕಣಿವೆ ನೀರು | ಕಾಮಗಾರಿಗೆ ಚಾಲನೆ ನೀಡಿದ ಸಚಿವ ಡಿ.ಸುಧಾಕರ್

CHITRADURGA NEWS | 03 MARCH 2024
ಚಿತ್ರದುರ್ಗ: ವಾಣಿ ವಿಲಾಸ ಸಾಗರ ಜಲಾಶಯದ ತೊಟ್ಟಿಲಿನಲ್ಲಿರುವ ಗ್ರಾಮಗಳ ಜನರ ಬಹು ವರ್ಷದ ಕನಸು ವರ್ಷಾಂತ್ಯಕ್ಕೆ ನನಸಾಗಲಿದೆ. ಜಲಾಶಯದ ಮಡಿಲಿನಲ್ಲಿದ್ದರು ಗ್ರಾಮಗಳ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಈ ಎಲ್ಲದಕ್ಕೂ ಇತಿಶ್ರೀ ಹಾಡಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್.
ಹಿರಿಯೂರು ತಾಲ್ಲೂಕು ಹರ್ತಿಕೋಟೆ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ಹರ್ತಿಕೋಟೆ ಮತ್ತು ಇತರೆ 37 ಗ್ರಾಮಗಳಿಗೆ 49 ಕೋಟಿ ರೂ. ವೆಚ್ಚದಲ್ಲಿ ವಾಣಿ ವಿಲಾಸ ಸಾಗರ ಜಲಾಶಯದಿಂದ ಶುದ್ಧೀಕರಿಸಿದ ಕುಡಿಯುವ ನೀರು ಒದಗಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
‘ಹರ್ತಿಕೋಟೆ ಹಾಗೂ ಇತರೆ 37 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ವಾಣಿ ವಿಲಾಸ ಸಾಗರ ಜಲಾಶಯದಿಂದ ಏಳೆಂಟು ತಿಂಗಳ ಒಳಗಾಗಿ ಶುದ್ಧ ಕುಡಿಯುವ ನೀರು ಪೂರೈಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು’ ಭರವಸೆ ನೀಡಿದರು.

‘ಕಳೆದ 2008 ರಲ್ಲಿ ತಾವು ಶಾಸಕರಾಗಿ, ಸಚಿವರಾದ ಸಂದರ್ಭದಲ್ಲಿ ಗ್ರಾಮಗಳಿಗೆ ಭೇಟಿ ನೀಡುವಾಗ, ಹರ್ತಿಕೋಟೆ, ಐಮಂಗಲ ಭಾಗದ ಜನರು ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಇರುವ ಬಗ್ಗೆ ತಮ್ಮ ಅಳಲು ತೋಡಿಕೊಳ್ಳುತ್ತಿದ್ದರು. ಹೀಗಾಗಿ ಆ ಸಂದರ್ಭದಲ್ಲಿಯೇ ಐಮಂಗಲ ಮತ್ತಿತರ 40 ಗ್ರಾಮಗಳಿಗೆ ವಿ.ವಿ. ಸಾಗರದಿಂದ ಶುದ್ಧ ನೀರು ಪೂರೈಸಲು ಸರ್ಕಾರದಿಂದ ಅನುಮೋದನೆ ಪಡೆಯಲಾಗಿತ್ತು. ಆದರೆ ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಮತ್ತಿತರ ಅಡೆ ತಡೆಗಳಿಂದ 10 ವರ್ಷ ವಿಳಂಬವಾಗಿತ್ತು’ ಎಂದರು.

ಕ್ಲಿಕ್ ಮಾಡಿ ಓದಿ: https://chitradurganews.com/bjp-leader-pritam-gowda-warned/
‘ಕಳೆದ ಚುನಾವಣೆ ಸಂದರ್ಭದಲ್ಲಿ ತಾವು ಸೋತ ಬಳಿಕ, ಈ ಯೋಜನೆ ಬಹುತೇಕ ನೆನೆಗುದಿಗೆ ಬಿದ್ದಿತ್ತು. ತಾವು ಮತ್ತೆ ಶಾಸಕರಾಗಿ, ಸಚಿವರಾದ ಬಳಿಕವೇ, ಈ ಯೋಜನೆಗೆ ಮತ್ತೆ ಚಾಲನೆ ನೀಡಿ, ಐಮಂಗಲ ಮತ್ತಿತರ ಗ್ರಾಮಗಳಿಗೆ ಈಗಾಗಲೆ ವಿವಿ ಸಾಗರದಿಂದ ಶುದ್ಧ ನೀರು ಪೂರೈಸುವ ಕೆಲಸ ಪೂರ್ಣಗೊಳಿಸಿ, ನೀರು ನೀಡುತ್ತಿದ್ದೇವೆ’ ಎಂದು ತಿಳಿಸಿದರು.
‘ಈಗಾಗಲೇ ಹರ್ತಿಕೋಟೆ ಗ್ರಾಮದವರೆಗೆ ವಿವಿ ಸಾಗರದಿಂದ ನೀರು ಹರಿದುಬಂದಿದ್ದು, ಇದೀಗ ಈ ಭಾಗದ ಯರಬಳ್ಳಿ, ಬಬ್ಬೂರು, ಹೊಸ ಯಳನಾಡು, ಗನ್ನಾಯಕನಹಳ್ಳಿ, ಮಸ್ಕಲ್, ಬ್ಯಾಡರಹಳ್ಳಿ ಸೇರಿದಂತೆ 7 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಒಟ್ಟು 38 ಗ್ರಾಮಗಳಿಗೆ ವಿ.ವಿ. ಸಾಗರದಿಂದ ಶುದ್ಧ ನೀರು ಪೂರೈಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ’ ಎಂದರು.
ಕ್ಲಿಕ್ ಮಾಡಿ ಓದಿ: https://chitradurganews.com/chitradurga-will-be-hit-by-water-shortage/
‘ಶೀಘ್ರದಲ್ಲಿಯೇ ಇದೇ ಭಾಗದಲ್ಲಿ ಫಿಲ್ಟರ್ ಹೌಸ್ ನಿರ್ಮಿಸಿ, ಶುದ್ಧೀಕರಿಸಿದ ನೀರನ್ನು ಈ ಎಲ್ಲ ಗ್ರಾಮಗಳಿಗೆ ಇನ್ನು ಏಳೆಂಟು ತಿಂಗಳುಗಳಲ್ಲಿ ಪೂರೈಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಅದೇ ರೀತಿ ಹಿರಿಯೂರು ತಾಲ್ಲೂಕಿನ ಎಲ್ಲ ಗ್ರಾಮಗಳಿಗೂ ವಿ.ವಿ. ಸಾಗರದಿಂದ ಶುದ್ಧ ಕುಡಿಯುವ ನೀರು ಪೂರೈಸುವ ಗುರಿ ತಮ್ಮದಾಗಿದೆ’ ಎಂದು ಸಚಿವರು ಹೇಳಿದರು.
ಹರ್ತಿಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರತಾಪ್ ಸಿಂಹ, ತಹಶೀಲ್ದಾರ್ ರಾಜೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಕುಮಾರ್, ಮುಖಂಡರಾದ ರಮೇಶ್, ಕೃಷ್ಣಮೂರ್ತಿ, ಬಿ.ಮಹಾಂತೇಶ್ ಇದ್ದರು.
