CHITRADURGA NEWS | 13 SEPTEMBER 2026
ಚಿತ್ರದುರ್ಗ: ಜಿಲ್ಲೆಯಲ್ಲಿ ಸಾರ್ವಜನಿಕರು ಶಾಂತಿಯುತವಾಗಿ ಗೌರಿ-ಗಣೇಶ ಹಬ್ಬವನ್ನು ಆಚರಿಸಲು ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಒಟ್ಟು 2134 ಸಾರ್ವಜನಿಕ ಗಣಪತಿಗಳನ್ನು ಪ್ರತಿಷ್ಟಾಪಿಸಲಾಗುತ್ತಿದ್ದು, ಇವುಗಳಲ್ಲಿ 07 ಅತಿ ಸೂಕ್ಷ್ಮ, 114 ಸೂಕ್ಷ್ಮ, 2013 ಸಾಮಾನ್ಯ ಗಣಪತಿಗಳೆಂದು ವಿಂಗಡಿಸಲಾಗಿರುತ್ತದೆ.
ಇದನ್ನೂ ಓದಿ: ಸೆ.24ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಿತ್ರದುರ್ಗಕ್ಕೆ | ಗೋನೂರು ಕೆರೆಗೆ ಬಾಗೀನ
ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸಂಘಟನೆ ವತಿಯಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳ 07 ಸ್ಥಳಗಳಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಟಾಪಿಸುತ್ತಿರುತ್ತಾರೆ.
ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನಲೆಯಲ್ಲಿ ಹೆಚ್ಚಿನ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕಾಗಿ ನೇಮಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ. ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಗಣಪತಿ ಪ್ರತಿಷ್ಟಾಪನಾ ಸಮಿತಿಯವರು ಹಾಗೂ ಸಾರ್ವಜನಿಕರು ಈ ಕೆಳಕಂಡ ಸೂಚನೆಗಳನ್ನು ಪಾಲನೆ ಮಾಡಿ ಶಾಂತಿ ಸುವ್ಯವಸ್ಥೆಯನ್ನು ಕಾಯ್ದುಕೊಂಡು ಹೋಗಲು ಸಹಕರಿಸಲು ಸೂಚಿಸಿದೆ.
ಜಿಲ್ಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಸಂಬಂಧಿಸಿದಂತೆ ಸೇವಾ ಸಮಿತಿ ಮತ್ತು ಮಂಡಳಿಗಳಿಗೆ ತ್ವರಿತ ಗತಿಯಲ್ಲಿ ಅನುಮತಿಯನ್ನು ಪಡೆದುಕೊಳ್ಳುವ ಸಲುವಾಗಿ “ಏಕ ಗವಾಕ್ಷಿ ಯೋಜನೆ” ಯನ್ನು ಜಾರಿಗೆ ತಂದು ಜಿಲ್ಲೆಯ ಎಲ್ಲಾ ಆರು ತಾಲ್ಲೂಕು ಕೇಂದ್ರಗಳಲ್ಲಿ ಏಕ ಗವಾಕ್ಷಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿರುತ್ತದೆ.
ಇದನ್ನೂ ಓದಿ: ಜೆಜೆಎಂ ಕಾಮಗಾರಿ ವಿಳಂಬ | 383 ಕಾಮಗಾರಿಗಳಿಗೆ ಕಾಲಾವಧಿ ವಿಸ್ತರಣೆ, ದಂಡ ವಿಧಿಸಲು ಪ್ರಸ್ತಾವನೆ
ಸಾರ್ವಜನಿಕರು / ಗಣಪತಿ ಪ್ರತಿಷ್ಟಾಪನಾ ಸೇವಾ ಸಮಿತಿ ಮತ್ತು ಮಂಡಳಿಯವರು ವಿವಿಧ ಇಲಾಖೆಗಳಾದ ಸ್ಥಳೀಯ ಸಂಸ್ಥೆಗಳು, ಬೆಸ್ಕಾಂ, ಅಗ್ನಿಶಾಮಕ ದಳ, ಹಾಗೂ ಇತರೆ ಪ್ರಾಧಿಕಾರಗಳಿಂದ ಎನ್.ಓ.ಸಿ ಪಡೆದ ನಂತರ ಗಣಪತಿ ಪ್ರತಿಷ್ಟಾಪನೆಗೆ ಅನುಮತಿಯನ್ನು ಕೋರಿ ಅರ್ಜಿ ಸಲ್ಲಿಸಿ ಪರವಾನಿಗೆಯನ್ನು ಪಡೆದುಕೊಂಡು ಗಣಪತಿ ಮೂರ್ತಿ ಪ್ರತಿಷ್ಟಾಪನೆಗೆ ಕ್ರಮ ಕೈಗೊಳ್ಳುವುದು.
ಪ್ಲಾಸ್ಟರ್ ಆಫ್ ಪ್ಯಾರೀಸ್/ಲೋಹ ಮಿಶ್ರಿತ ಬಣ್ಣದ ಹೊಂದಿರುವ ಗಣಪತಿಗಳನ್ನು ಪ್ರತಿಷ್ಟಾಪಿಸದೇ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸುವುದು.
ಸರ್ವೋಚ್ಛ ನ್ಯಾಯಾಲಯ ಹಾಗೂ ರಾಜ್ಯ ಉಚ್ಛ ನ್ಯಾಯಾಲಯದ ಸೂಚನೆಯಂತೆ ಜಿಲ್ಲೆಯಲ್ಲಿ ಡಿ.ಜೆ. ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲು ಕ್ರಮ ವಹಿಸಲಾಗಿದ್ದು, ಡಿ.ಜೆ. ಬಳಕೆಗೆ ಅವಕಾಶ ಇರುವುದಿಲ್ಲ.
ಕಾರ್ಯಕ್ರಮ ಸ್ಥಳ ಹಾಗೂ ಮೆರವಣಿಗೆಯಲ್ಲಿ ಕಾರ್ಯಕ್ರಮಕ್ಕೆ ಅಳವಡಿಸುವ ಧ್ವನಿವರ್ಧಕಗಳಿಗೆ ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಪರವಾನಿಗೆ ಪಡೆದುಕೊಳ್ಳಬೇಕು ಹಾಗೂ ಧ್ವನಿವರ್ಧಕ ಬಳಸುವಾಗ 75 ಡೆಸಿಬಲ್ ಮೀರದಂತೆ ನೋಡಿಕೊಳ್ಳಬೇಕು.
ಇದನ್ನೂ ಓದಿ: ಭದ್ರ ಹರಿವ ಸಂತಸ | ಲಕ್ಷ ಸಿಹಿ ಹಂಚಿ ಸಂಭ್ರಮ | ಭೋವಿ ಗುರುಪೀಠದಿಂದ ವಿಶೇಷ ಪೂಜೆ
ಸಾರ್ವಜನಿಕರ ಹಿತದೃಷ್ಟಿ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಪಟಾಕಿ / ಸಿಡಿಮದ್ದು ಹಾಗೂ ಪೇಪರ್ ಬ್ಲಾಸ್ಟಿಂಗ್ ಬಳಕೆಯನ್ನು ನಿಷೇಧಿಸಲಾಗಿರುತ್ತದೆ.
ರಾಜ್ಯ ಸರ್ಕಾರವು ಹೊರಡಿಸಿರುವ ಜನಸಂದಣಿ ನಿರ್ವಹಣೆ ಮತ್ತು ನಿಯಂತ್ರಣದ ಸಲುವಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಯಲ್ಲಿನ ಅಂಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲು ಕ್ರಮ ವಹಿಸಬೇಕು.
ಹೆಚ್ಚಿನ ಜನರು ಸೇರುವ ಗಣಪತಿ ಪೆಂಡಾಲ್ಗಳ ಬಳಿ ಕಡ್ಡಾಯವಾಗಿ ಸಿ.ಸಿ.ಕ್ಯಾಮೆರಾಗಳನ್ನು ಮತ್ತು ಆಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಗಣಪತಿ ಪೆಂಡಾಲ್ಗಳ ಬಳಿ ಸೇವಾ ಸಮಿತಿಯವರು ರಾತ್ರಿ ವೇಳೆ ಕಡ್ಡಾಯವಾಗಿ ಇರಲು ಕ್ರಮ ಕೈಗೊಳ್ಳಬೇಕು.
ಗಣಪತಿ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಅಳವಡಿಸಲಾಗುವ ಫ್ಲೆಕ್ಸ್, ಬ್ಯಾನರ್ ಮತ್ತು ಬಂಟಿಂಗ್ಸ್ಗಳನ್ನು ಅಳವಡಿಸಲು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳಿಂದ ಪರವಾನಿಗೆ ಪಡೆದು ಅಳವಡಿಸಲು ಕ್ರಮ ವಹಿಸಬೇಕು.
ಫ್ಲೆಕ್ಸ್, ಬ್ಯಾನರ್ಗಳಲ್ಲಿ ಯಾವುದೇ ರೀತಿಯ ಕೋಮು ಸೂಕ್ಷ್ಮ ಪ್ರಚೋದನಾತ್ಮಕ ಬರಹ / ಚಿತ್ರಗಳನ್ನು ಅಳವಡಿಸಿರುವುದು ಕಂಡು ಬಂದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲಾಗಿದ್ದು, ಕೋಮು ಸೂಕ್ಷ್ಮ, ಪ್ರಚೋದನಾತ್ಮಕ ಬರಹ, ಚಿತ್ರಗಳನ್ನು ಪೋಸ್ಟ್ ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
ರಸ್ತೆಗೆ ಅಡ್ಡಲಾಗಿ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗದಂತೆ ಸ್ಥಳಗಳಲ್ಲಿ ಯಾವುದೇ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸುವಂತಿಲ್ಲ.
ಇದನ್ನೂ ಓದಿ: ಐಮಂಗಲ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸಚಿವ ಮುನಿಯಪ್ಪ ಭೇಟಿ | ವಸತಿ ಶಾಲೆಗಳಲ್ಲಿ ಓದಿ ಉನ್ನತ ಸಾಧನೆ ಮಾಡಿ
ಸಂಘಟಕರು ಈಗಾಗಲೇ ಅನುಮತಿ ಪಡೆದ ಮೆರವಣಿಗೆ ಮಾರ್ಗವನ್ನು ಹೊರತು ಪಡಿಸಿ ಬೇರಾವುದೇ ಮಾರ್ಗದಲ್ಲಿ ಮೆರವಣಿಗೆಗೆ ಅವಕಾಶ ಇರುವುದಿಲ್ಲ.
ಈಗಾಗಲೇ ಎಲ್ಲಾ ಕೋಮಿನ ಮುಖಂಡರು, ಗಣಪತಿ ಸಂಘಟನಾ ಸಮಿತಿಯವರೊಂದಿಗೆ ಶಾಂತಿ ಸಭೆಯನ್ನು ನಡೆಸಿ ಹಬ್ಬದ ಆಚರಣೆ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಹಾಗೂ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಂಡು ಹೋಗಲು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಲು ಸೂಚನೆಗಳನ್ನು ನೀಡಲಾಗಿರುತ್ತದೆ.
ಅಲಾದಾಗ್ಯೂ ಜಿಲ್ಲೆಯ ಯಾವುದೇ ಕಡೆಗಳಲ್ಲಿ ಶಾಂತಿ ಕದಡುವ, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ / ಬರಹಗಳನ್ನು ಪೋಸ್ಟ್ ಮಾಡುವಂತಹ ಘಟನೆಗಳ ಬಗ್ಗೆ ಮಾಹಿತಿ ಇದ್ದರೇ ಕೂಡಲೇ ದೂರವಾಣಿ ಸಂಖ್ಯೆ:112, ಜಿಲ್ಲಾ ನಿಸ್ತಂತು ಕೇಂದ್ರ ಮೊ.ನಂ: 9480803100 ಮತ್ತು ದೂರವಾಣಿ ಸಂಖ್ಯೆ: 08194-222782 ಗಳಿಗೆ ಕರೆ ಮಾಡಿ ಮಾಹಿತಿ ನೀಡಲು ಕೋರಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

