
CHITRADURGA NEWS | 02 SEPTEMBER 2026
ಚಿತ್ರದುರ್ಗ: ಪ್ರಾಣಿಗಳ ಮೇಲಿನ ಕಾಳಜಿ ಕೇವಲ ಜನ್ಮದಿನದಂತಹ ವಿಶೇಷ ಸಂದರ್ಭಗಳ ಆಚರಣೆಗೆ ಸೀಮಿತವಾಗದೆ, ಅವುಗಳ ಸಂರಕ್ಷಣೆ ಮತ್ತು ಪಾಲನೆಯ ನಿರಂತರ ಜವಾಬ್ದಾರಿಯಾಗಿ ರೂಪುಗೊಳ್ಳಬೇಕು ಎಂದು ಜನಸೇನಾ ಪಕ್ಷದ ಜಿಲ್ಲಾಧ್ಯಕ್ಷ ಡಿ.ಬಸವರಾಜ್ ಹೇಳಿದರು.
ಇದನ್ನೂ ಓದಿ: ಚಿತ್ರದುರ್ಗದ ನೂತನ ಜಿಲ್ಲಾಧಿಕಾರಿಯಾಗಿ ಎಸ್. ರಮ್ಯ ಅಧಿಕಾರ ಸ್ವೀಕಾರ
ಜನಸೇನಾ ಪಕ್ಷದ ಸಂಸ್ಥಾಪಕ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಜನ್ಮದಿನದ ಅಂಗವಾಗಿ ಆಡುಮಲ್ಲೇಶ್ವರ ಮೃಗಾಲಯದಲ್ಲಿ ಬುಧವಾರ ಆಯೋಜಿಸಿದ್ದ ಪ್ರಾಣಿ ಪಕ್ಷಿಗಳ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪವನ್ ಕಲ್ಯಾಣ್ ಅವರಿಗೆ ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಇದೆ. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರಾಗಿ ಅವರು ವನ್ಯಜೀವಿಗಳ ಸಂರಕ್ಷಣೆಗೆ ಆದ್ಯತೆ ನೀಡುತ್ತಿದ್ದಾರೆ. ಕರ್ನಾಟಕದ ಸಲಹೆ ಮತ್ತು ನೆರವು ಪಡೆದುಕೊಂಡು ಆಂಧ್ರಪ್ರದೇಶದಲ್ಲಿನ ಆನೆಗಳು ಸೇರಿದಂತೆ ವಿವಿಧ ವನ್ಯಜೀವಿಗಳಿಗೆ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಬಸವರಾಜ್ ಹೇಳಿದರು.
ವನ್ಯಜೀವಿಗಳು ಕೇವಲ ಮೃಗಾಲಯಗಳಲ್ಲಿನ ಪ್ರದರ್ಶನದ ವಸ್ತುಗಳಲ್ಲ. ಅವು ಪ್ರಕೃತಿಯ ಜೀವವೈವಿಧ್ಯದ ಪ್ರಮುಖ ಕೊಂಡಿಗಳಾಗಿವೆ. ಪರಿಸರದ ಸಮತೋಲನ ಕಾಪಾಡುವಲ್ಲಿ ಪ್ರಾಣಿ ಪಕ್ಷಿಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಅವುಗಳ ಸಂರಕ್ಷಣೆಗೆ ಸರ್ಕಾರದ ಇಲಾಖೆಗಳ ಜತೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ಪರಿಸರಾಸಕ್ತರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಶೀಘ್ರದಲ್ಲೇ ಚಿತ್ರದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು ಬರಪೀಡಿತ ಪಟ್ಟಿಗೆ
ಪ್ರಾಣಿಗಳನ್ನು ದತ್ತು ಸ್ವೀಕರಿಸುವುದು ಅವುಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗ. ಆದರೆ ದತ್ತು ಸ್ವೀಕಾರದ ಹಿಂದಿರುವ ಮೂಲ ಉದ್ದೇಶ ವನ್ಯಜೀವಿಗಳ ಸಂರಕ್ಷಣೆಯ ಅರಿವು ಮೂಡಿಸುವುದಾಗಬೇಕು. ಇಂತಹ ಚಟುವಟಿಕೆಗಳು ಸಮಾಜದಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ನೆರವಾಗುತ್ತವೆ ಎಂದರು.
ಅರಣ್ಯ ಪಾಲಕರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕಾಡು ಮತ್ತು ವನ್ಯಜೀವಿಗಳ ರಕ್ಷಣೆಯಲ್ಲಿ ಅವರು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಾರೆ. ಬಿಸಿಲು, ಮಳೆ ಎನ್ನದೆ ಕಾಡಿನೊಳಗೆ ಸಂಚರಿಸಿ ಪ್ರಾಣಿಪಕ್ಷಿಗಳ ಸುರಕ್ಷತೆ ನೋಡಿಕೊಳ್ಳುತ್ತಾರೆ. ಅವರ ಸೇವೆಯನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಪವನ್ ಕಲ್ಯಾಣ್ ಅವರ ಜನ್ಮದಿನವನ್ನು ಸಾಂಪ್ರದಾಯಿಕವಾಗಿ ಆಚರಿಸುವ ಬದಲು ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಸಂದೇಶ ಸಾರುವ ರೀತಿಯಲ್ಲಿ ಆಚರಿಸಲು ಪಕ್ಷದ ರಾಜ್ಯ ಸಮಿತಿ ನಿರ್ಧರಿಸಿತ್ತು. ಅದರಂತೆ ಆಡುಮಲ್ಲೇಶ್ವರ ಮೃಗಾಲಯದಲ್ಲಿ ಪ್ರಾಣಿ ಪಕ್ಷಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪಕ್ಷದ ವತಿಯಿಂದ ಚುಕ್ಕೆ ಜಿಂಕೆ, ಭಾರತೀಯ ಶಿಲಾ ಹೆಬ್ಬಾವು, ನಕ್ಷತ್ರ ಆಮೆ, ಹಳದಿ ಚಿನ್ನದ ಫೀಸೆಂಟ್, ಲೇಡಿ ಅಮ್ಹರ್ಸ್ಟ ಫೀಸೆಂಟ್, ಚಿನ್ನದ ಫೀಸೆಂಟ್, ಬೆಳ್ಳಿ ಫೀಸೆಂಟ್ ಹಾಗೂ ಗುಲಾಬಿ ಕುತ್ತಿಗೆಯ ಗಿಳಿ ಸೇರಿದಂತೆ ಎಂಟು ಬಗೆಯ ಪ್ರಾಣಿ–ಪಕ್ಷಿಗಳನ್ನು ದತ್ತು ಸ್ವೀಕರಿಸಲಾಯಿತು.
ಇದನ್ನೂ ಓದಿ: ಸಾರ್ವಜನಿಕರ ಹಿತಕ್ಕೆ ಮೊದಲ ಆದ್ಯತೆ | ಗಣಿ ಲಾರಿಗಳಿಗೆ ಕಟ್ಟುನಿಟ್ಟಿನ ನಿಯಮ | ಸಚಿವ ಟಿ.ರಘುಮೂರ್ತಿ
ಇದೇ ಸಂದರ್ಭದಲ್ಲಿ ಅರಣ್ಯ ಪಾಲಕರಿಗೆ ಜರ್ಕಿನ್ಗಳನ್ನು ವಿತರಿಸಲಾಯಿತು. ವನ್ಯಜೀವಿಗಳ ರಕ್ಷಣೆಯಲ್ಲಿ ತೊಡಗಿರುವ ಸಿಬ್ಬಂದಿಯ ಸೇವೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್.ವಸಂತ ಕುಮಾರ್, ವಲಯ ಅರಣ್ಯಾಧಿಕಾರಿ ಐ.ಬಿ.ಅಕ್ಷತಾ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

