ಮುಖ್ಯ ಸುದ್ದಿ
ಸಂವಿಧಾನ ಮೈಸೂರಿನ ಆಸ್ತಿ | ಯದುವೀರ ಕೃಷ್ಣದತ್ತ ಒಡೆಯರ್ | ಸಂವಿಧಾನ ಬದಲಾಯಿಸಿದ್ದು ಯಾರು ಕೃತಿ ಲೋಕಾರ್ಪಣೆ
CHITRADURGA NEWS | 21 JANUARY 2025
ಚಿತ್ರದುರ್ಗ: 1918 ರಲ್ಲಿ ಮೈಸೂರು ಮಹಾರಾಜರು ಮೊದಲು ಮೀಸಲಾತಿ ಕುರಿತು ಚರ್ಚಿಸಿ ಮಿಲ್ಲರ್ ಆಯೋಗ ರಚಿಸಿದ್ದ ಅಂಶವನ್ನು ಸಂವಿಧಾನ ರಚಿಸುವಾಗ ಡಾ.ಬಿ.ಆರ್.ಅಂಬೇಡ್ಕರ್ ಚರ್ಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂವಿಧಾನ ಮೈಸೂರಿನ ಆಸ್ತಿ. ಇದನ್ನು ಕನ್ನಡಿಗರು ರಕ್ಷಣೆ ಮಾಡಬೇಕು ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ನಗರದ ತರಾಸು ರಂಗಮಂದಿರದಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ವತಿಯಿಂದ ಆಯೋಜಿಸಿದ್ದ ಸಂವಿಧಾನ ಸನ್ಮಾನ ಹಾಗೂ ಸಂವಿಧಾನ ಬದಲಾಯಿಸಿದ್ದು ಯಾರು ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ ಚುನಾವಣೆ ಸಂದರ್ಭದಲ್ಲಿ ಎಲ್ಲೆಲ್ಲೂ ಸಂವಿಧಾನ ಬದಲಾಯಿಸುತ್ತಾರೆ ಎಂಬ ಅಪಪ್ರಚಾರ, ಅರ್ಧ ಸತ್ಯಗಳನ್ನು ಕಾಂಗ್ರೆಸ್ ಪಕ್ಷ ಹಬ್ಬಿಸಿತ್ತು. ಆದರೆ, ಬಿಜೆಪಿ ಸಂವಿಧಾನ ರಕ್ಷಣೆ ಮಾಡುವ ಪಕ್ಷ. ಸುಳ್ಳು ಸುದ್ದಿಗಳನ್ನು ಹರಡುವುದು ಕಾಂಗ್ರೆಸ್ ತಂತ್ರ. ಲೋಕಸಭೆಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ಓಡಾಡಿದ ಕಾಂಗ್ರೆಸ್ ಮುಖಂಡರು, ಗ್ರಂಥದ ಮೇಲಿನ ಕವರ್ ಸಹಿತ ತೆಗೆದಿರಲಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ: ಮೈಸೂರು ಮಹಾರಾಜರಿಂದ ವಾಣಿವಿಲಾಸ ಸಾಗರಕ್ಕೆ ಬಾಗೀನ ಅರ್ಪಣೆ
ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ದೇಶಕ್ಕೆ ನೀಡಿರುವ ಸಂವಿಧಾನ ಒಂದು ಅದ್ಭುತ ಗ್ರಂಥ. ನಾವೆಲ್ಲಾ ಅದನ್ನು ಅನುಸರಿಸುವ ಮೂಲಕ ಅವರ ಸ್ಮøತಿಯಲ್ಲಿದ್ದೇವೆ ಎಂದರು.
ಭಾರತದಂತಹ ವೈವಿಧ್ಯ ದೇಶದಲ್ಲಿ, ಪ್ರತಿ ಗ್ರಾಮದಲ್ಲೂ ಒಂದೊಂದು ಆಚರಣೆ, ಒಂದೊಂದು ನಂಬಿಕೆ ಇವೆ. ಇಷ್ಟೆಲ್ಲಾ ಆಕಾಂಕ್ಷೆಗಳನ್ನು ಸಂವಿಧಾನದ ಮೂಲಕ ರಕ್ಷಣೆ ಮಾಡುವ ಕೆಲಸವನ್ನು ಅಂಬೇಡ್ಕರ್ ಮಾಡಿದ್ದಾರೆ ಎಂದರು.
1951 ರಲ್ಲೇ ಅಂದರೆ ಸಂವಿಧಾನ ಜಾರಿಯಾದ ಒಂದು ವರ್ಷದಲ್ಲೇ ಅಂದಿನ ಪ್ರಧಾನಿ ನೆಹರು ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದರು. ಬಾಬಾ ಸಾಹೇಬರು ನೀಡಿದ್ದ ಮೂಲಭೂತ ಹಕ್ಕುಗಳ ಮೇಲೆಯೇ ದಾಳಿ ಮಾಡಿದ್ದರು. 1975 ರ ತುರ್ತು ಪರಿಸ್ಥಿತಿಯ ಇತಿಹಾಸ ಇಡೀ ದೇಶಕ್ಕೆ ಗೊತ್ತಿದೆ. ತಮ್ಮ ಸ್ವಾರ್ಥಕ್ಕೆ ಎಮರ್ಜೆನ್ಸಿ ತರಲಾಯಿತು. ಸ್ವಂತ ಲಾಭಕ್ಕಾಗಿ ವ್ಯವಸ್ಥೆ ದುರುಪಯೋಗ ಮಾಡಿಕೊಂಡಿದ್ದು ಇತಿಹಾಸ. ಇದು ನ್ಯಾಯಾಲಯದ ತೀರ್ಪಿನಲ್ಲೂ ಇದೆ ಎಂದು ಪ್ರಸ್ತಾಪಿಸಿದರು.
ಇದನ್ನೂ ಓದಿ: SSLC ವಿದ್ಯಾರ್ಥಿಗಳಿಗೆ ಆಕಾಶವಾಣಿ ಪೋನ್-ಇನ್ | ನಿಮ್ಮ ಪ್ರಶ್ನೆಗಳಿಗೆ ತಜ್ಞರ ಉತ್ತರ
ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರು ಕೂಡಾ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದಾರೆ. ಆದರೆ, ಇದರಲ್ಲಿ ದೇಶದ ಹಿತವಿತ್ತು. ವಾಜಪೇಯಿ ಅವರು ಕಡ್ಡಾಯ ಶಿಕ್ಷಣದ ಹಕ್ಕು ತಂದಿದ್ದರು. ನರೇಂದ್ರ ಮೋದಿ ಅವರು ಇಡೀ ದೇಶಕ್ಕೆ ಒಂದೇ ತೆರಿಗೆ ವ್ಯವಸ್ಥೆ ಜಾರಿಗೆ ತಿದ್ದುಪಡಿ ಮಾಡಿದ್ದರು. ಬದಲಾಗಿ ತಮ್ಮ ಸ್ವಾರ್ಥಕ್ಕೆ ತಿದ್ದುಪಡಿ ಮಾಡಲಿಲ್ಲ ಎಂದು ಹೇಳಿದರು.
60 ವರ್ಷಗಳ ಕಾಲ ಗರೀಭಿ ಹಠಾವೋ ಘೋಷಣೆ ಕೇಳಿದ್ದೇವೆ. ಆದರೆ, ಕಳೆದ ಹತ್ತು ವರ್ಷದಲ್ಲಿ ಭಾರತ ಆರ್ಥಿಕವಾಗಿ ಮುನ್ನಡೆಯುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಜೀವನ ಕೊಡುವ ನಿಟ್ಟಿನಲ್ಲಿ ಎಲ್ಲರೂ ಸಕಾರಾತ್ಮಕ ಆಲೋಚನೆ ಮಾಡಬೇಕು ಎಂದರು.
ಸಂವಿಧಾನ ಬದಲಾಯಿಸಿದ್ದು ಯಾರು ಕೃತಿಯ ಲೇಖಕ ಪಿ.ವಿಕಾಸ್ಕುಮಾರ್ ಮಾತನಾಡಿ, ಸಂವಿಧಾನ ಬದಲಾಯಿಸಿದ್ದು ಕಾಂಗ್ರೆಸ್, ಬಲಪಡಿಸಿದ್ದು ಬಿಜೆಪಿ ಎಂದು ಹೇಳಿದರು.
ಅಂಬೇಡ್ಕರ್ ಅವರಿಗೆ ಜೀವಿತ ಅವಧಿ ಹಾಗೂ ದೇಹಾಂತ್ಯದ ಸಂದರ್ಭದಲ್ಲೂ ಅಪಮಾನ ಮಾಡಿದ್ದು ಕಾಂಗ್ರೆಸ್. ಸಂವಿಧಾನವನ್ನು ಪುರಸ್ಕರಿಸಿದ್ದೇವೆ ಎಂದು ಕಾಂಗ್ರೆಸ್ ಹೇಳುವುದೇ ವಿಪರ್ಯಾಸ. ಧೀಮಂತ ವ್ಯಕ್ತಿ ಅಂಬೇಡ್ಕರರನ್ನು ಸೋಲಿಸಲು ನೆಹರು ಎರಡು ಸಲ ಪ್ರಚಾರಕ್ಕೆ ಹೋಗಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಅಂಬೇಡ್ಕರರನ್ನು ಸಂವಿಧಾನ ರಚನೆ ಸಮಿತಿಯೊಳಗೆ ಸೇರಿಸಲು ಕಾಂಗ್ರೆಸ್ಸಿಗೆ ಇಷ್ಟವಿರಲಿಲ್ಲ. ನಿರಂತರವಾಗಿ ಕಿರುಕುಳ ಕೊಡುತ್ತಾ ಬಂದಿದ್ದಾರೆ ಎಂದು ವಿವರಿಸಿದರು.
ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರರೇ ಕಾಂಗ್ರೆಸ್ ಉಡಿಯುವ ಮನೆ, ಆ ಪಕ್ಷ ಸೇರುವುದು ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಹೇಳಿದ್ದಾರೆ. ಹೀಗಿದ್ದು ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವಂತೆ ಕಾಂಗ್ರೆಸ್ ಸಂವಿಧಾನ ಹಿಡಿದು ಓಡಾಡುತ್ತಿದೆ ಎಂದರು.
ಸಂವಿಧಾನಕ್ಕಾಗಿ ಬಲಿದಾನ ಆದವರು ಜನಸಂಘದ ಡಾ.ಶ್ಯಾಮಪ್ರಸಾದ್ ಮುಖರ್ಜಿ. ಕಾಂಗ್ರೆಸ್ ಅವಧಿಯಲ್ಲಿ ಇಡೀ ದೇಶದಲ್ಲಿ ಸಂವಿಧಾನ ಜಾರಿ ಆಗಿರಲಿಲ್ಲ. ಇದಕ್ಕಾಗಿ ಹೋರಾಟ ನಡೆಸಿದ್ದು ಬಿಜೆಪಿ. ಕಾಶ್ಮೀರದಲ್ಲಿ ಸಂವಿಧಾನ ಜಾರಿ ಮಾಡಿದ್ದು ಬಿಜೆಪಿ ಎಂದು ಹೇಳಿದರು.
ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಹೊಸ ಭಾರತಕ್ಕಾಗಿ ಸಂವಿಧಾನ ಬದಲಾಯಿಸಬೇಕು ಎಂದು ಹೇಳಿದ್ದೇ ಇಂದಿರಾಗಾಂಧಿ. ಈ ಸತ್ಯ ಯಾರಿಗೂ ಗೊತ್ತಿಲ್ಲ. ಇದನ್ನು ಅನೇಕ ಕಾಂಗ್ರೆಸ್ ನಾಯಕರು ಬೆಂಬಲಿಸಿ ಆಕೆಯನ್ನು ನಿಜವಾದ ದೇಶಭಕ್ತೆ ಎಂದು ಬಣ್ಣಿಸಿದ್ದರು ಎಂದು ತಿಳಿಸಿದರು.
ಇದನ್ನೂ ಓದಿ: ಸಹಾಯಧನಕ್ಕೆ ಅರ್ಜಿ ಆಹ್ವಾನ
ಆದರೆ, ಸ್ವತಃ ಬಾಬಾ ಸಾಹೇಬರೇ ಬಂದರೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ. ಅದು ಸಾರ್ವಕಾಲಿಕ ಎಂದು ಹೇಳಿದವರು ಪ್ರಧಾನಿ ನರೇಂದ್ರ ಮೋದಿ. ಆದರೆ, ಕಾಂಗ್ರೆಸ್ನವರು ಬಿಜೆಪಿಯವರು ಸಂವಿಧಾನ ಬದಲಾಯಿಸುತ್ತಾರೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಈ ವಿಚಾರಕ್ಕೆ ಕೈ ಹಾಕಿದ್ದು ಅವರಿಗೆ ತಿರುಗುಬಾಣವಾಗಿದೆ ಎಂದರು.
ದೇಶದ ಮೊದಲ ಪ್ರಧಾನಿ ನೆಹರೂ ಅವರು ಸಂವಿಧಾನ ರಚನೆಗೆ ಬ್ರಿಟೀಷ್ ನಾಯಕ ಎಡ್ವರ್ಡ್ ಜನ್ನಿ ಸೂಕ್ತ ಎಂದು ಹೇಳಿದ್ದರು. ಆದರೆ, ಮಹಾತ್ಮ ಗಾಂಧೀಜಿ ಭಾರತದ ಸಂವಿಧಾನ ರಚನೆಗೆ ಅಂಬೇಡ್ಕರ್ಗಿಂತ ಸೂಕ್ತ ವ್ಯಕ್ತಿ ಇಲ್ಲ ಎಂದು ಹೇಳಿದ್ದರು ಎಂದು ವಿವರಿಸಿದರು.
ಬಾಬಾ ಸಾಹೇಬರು ಸಂವಿಧಾನದಲ್ಲಿ ಸೋಷಿಯಲಿಷ್ಟ್, ಸೆಕ್ಯುಲರ್ ಎಂಬ ಶಬ್ದ ಸೇರಿಸುವುದು ಬೇಡ ಎಂದಿದ್ದರು. ಆದರೆ, ಇಂದಿರಾಗಾಂಧಿ ಸೇರಿಸಿದ್ದರು. ಇದು ಅಂಬೇಡ್ಕರರ ಆಶಯಕ್ಕೆ ವಿರೋಧ ಎಂದರು.
ಸಂವಿಧಾನ ಸನ್ಮಾನ ಕಾರ್ಯಕ್ರಮ ಸಂಚಾಲಕ ಜಿ.ಎಚ್.ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಟಾಣಿ ಪ್ರತೀಕ್ಷಾ ಸಂವಿಧಾನದ ಪೀಠಿಕೆ ಬೋಧಿಸಿದರು. ಬಿಜೆಪಿ ಮುಖಂಡ ಚಳ್ಳಕೆರೆ ಮಂಜು ಸ್ವಾಗತಿಸಿದರು. ರೂಪಾ ನಿರೂಪಿಸಿದರು.