ಕ್ರೈಂ ಸುದ್ದಿ
ಕುರುಬ ಸಮುದಾಯದ ಅಪ್ರಾಪ್ತ ಬಾಲಕನ ಮತಾಂತರ ಆರೋಪ | ಪರಶುರಾಂಪುರ ಠಾಣೆಯಲ್ಲಿ ದೂರು ದಾಖಲು
ಚಿತ್ರದುರ್ಗ ನ್ಯೂಸ್.ಕಾಂ: ಚಳ್ಳಕೆರೆ ತಾಲೂಕಿನ ಪರಶುರಾಮಪುರದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿರುವ ಕುರಿತು ದೂರು ದಾಖಲಾಗಿದೆ.
ಈ ಕುರಿತು ಪೊಲೀಸರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಚಳ್ಳಕೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ದೂರಿದ್ದಾರೆ.
ಚಳ್ಳಕೆರೆ ತಾಲೂಕಿನ ಚೌಳೂರು ಮೂಲದ ಕುರುಬ ಸಮುದಾಯದ ವೀರಭದ್ರಪ್ಪ ಎಂಬುವವರು ಅಕ್ಟೋಬರ್ 29 ರಂದು ದೂರು ನೀಡಿದ್ದು, ದೂರಿನಲ್ಲಿ ತಮ್ಮ 17 ವರ್ಷದ ಪುತ್ರನನ್ನು ಪರಶುರಾಂಪುರದ ಕಾಲೇಜಿಗೆ ಸೇರಿಸಿದ್ದು, ಪ್ರತಿ ದಿನ ಮನೆಯಿಂದ ಓಡಾಡಿಕೊಂಡಿದ್ದ.
ಇದನ್ನೂ ಓದಿ: ಹೊಳಲ್ಕೆರೆಯಲ್ಲಿ ಅತೀ ಹೆಚ್ಚು ಮಳೆ | ಹನುಮನಕಟ್ಟೆ ಗ್ರಾಮದಲ್ಲಿ ಚೆಕ್ ಡ್ಯಾಂ ಭರ್ತಿ
ಕಳೆದ 6 ತಿಂಗಳಿನಿಂದ ಈತನ ನಡವಳಿಕೆಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಅನುಮಾನಗೊಂಡು ಮೊಬೈಲ್ ಮತ್ತಿತರೆ ವಸ್ತುಗಳನ್ನು ಪರಿಶೀಲಿಸಿದಾಗ, ಪರಶುರಾಂಪುರದಲ್ಲಿ ಸೈಕಲ್ ಶಾಪ್ ಹೊಂದಿರುವ ತಂದೆ-ಮಗ ಸೇರಿ ಚಿತ್ರದುರ್ಗ, ಚಳ್ಳಕೆರೆ, ಧಾರವಾಡ, ನಿಪ್ಪಾಣಿ, ರೋಣ ಮತ್ತಿತರೆಡೆ ಮಸೀದಿಗಳಿಗೆ ನನ್ನ ಅನುಮತಿಯಿಲ್ಲದೆ ಮಗನನ್ನು ಕರೆದುಕೊಂಡು ಹೋಗಿ ಇಸ್ಲಾಂಗೆ ಮತಾಂತರಿಸಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿದ್ದಾರೆ.
ಈ ಬಗ್ಗೆ ಮಗನಲ್ಲಿ ವಿಚಾರಿಸಿದಾಗ ಟೋಪಿ, ಇಸ್ಲಾಂಗೆ ಸಂಬಂಧಿಸಿದ ಪುಸ್ತಕಗಳು ದೊರೆತಿವೆ. ಮಗನ ಮೊಬೈಲ್ನಲ್ಲಿ ಡ್ರಗ್ಸ್ ಮತ್ತು ಗಾಂಜಾ ವಿಷಯವಾಗಿ ಸಂಭಾಷಣೆ ನಡೆಸಿರುವುದು ಕಂಡು ಬಂದಿದೆ. ಇದರಿಂದ ಅಮಾಯಕರನ್ನು ಅನೈತಿಕ ಚಟುವಟಿಕೆಗಳಿಗೆ ಬಳಸುವ ಹುನ್ನಾರ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಸದರಿ ಪ್ರಕರಣ The Karnataka protection of right to freedom of religion Act 2022 ಅಡಿಯಲ್ಲಿ ದಾಖಲಾಗಿದೆ.