ಚಿತ್ರದುರ್ಗ ನ್ಯೂಸ್.ಕಾಂ: ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ನಿಂದ ಜೈಲು ಕಡೆಗೆ ಹೋಗುವ ಜೈಲು ರಸ್ತೆಯಲ್ಲಿರುವ ಹಳೆಯ ಮನೆಯೊಂದರಲ್ಲಿ ವರ್ಷಗಳ ಹಿಂದೆಯೇ ಮೃತಪಟ್ಟಿರುವ ಮೃತದೇಹಗಳು ಅಸ್ಥಿಪಂಜರದ ರೀತಿಯಲ್ಲಿ ಪತ್ತೆಯಾಗಿವೆ. ಒಟ್ಟು ಐದು ಜನರ ಮೃತ ದೇಹಗಳಿರುವ ಶಂಕೆ ವ್ಯಕ್ತವಾಗಿದೆ.
ಗುರುವಾರ ರಾತ್ರಿ 9 ಗಂಟೆ ವೇಳೆಗೆ ಈ ಸುದ್ದಿ ಪೊಲೀಸರಿಗೆ ತಿಳಿದಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿ ಮನೆಯ ಬಾಗಿಲು ತೆರೆದು ಪರಿಶೀಲಿಸಿದಾಗ ಆರಂಭದಲ್ಲಿ ಮೂರು ದೇಹಗಳಿರುವ ಶಂಕೆ ವ್ಯಕ್ತವಾಗಿತ್ತು.
ಆನಂತರ ದಾವಣಗೆರೆಯಿಂದ ವಿಧಿ ವಿಜ್ಞಾನ ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸುವಾಗ 4 ತಲೆಯ ಬುರುಡೆಗಳು ಪತ್ತೆಯಾಗಿವೆ. ಮನೆಯಲ್ಲಿ ಮೃತಪಟ್ಟಿರುವವರ ಸಂಖ್ಯೆ ಮೂರೋ, ನಾಲ್ಕೋ ಎನ್ನುವುದನ್ನು ಅಧಿಕೃತವಾಗಿ ಪೊಲೀಸರು ಖಚಿತಪಡಿಸಬೇಕಿದೆ.

ಕಳೆದ ನಾಲ್ಕೈದು ವರ್ಷಗಳಿಂದ ಈ ಮನೆಯ ಬಾಗಿಲು ತೆರೆದಿದ್ದೇ ನೋಡಿಲ್ಲ ಎಂದು ಅಕ್ಕಪಕ್ಕದ ನಿವಾಸಿಗಳು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಪಾಳುಬಿದ್ದ ಮನೆಯಲ್ಲಿ ಅಸ್ಥಿಪಂಜರ ಮಾದರಿಯಲಿ ಶವಗಳು ಪತ್ತೆ
ಈ ಮನೆ ದೊಡ್ಡಸಿದ್ದವ್ವನಹಳ್ಳಿ ಮೂಲದ ನಿವೃತ್ತ ಸಿವಿಲ್ ಇಂಜಿನಿಯರ್ ಜಗನ್ನಾಥ ರೆಡ್ಡಿ ಎನ್ನುವವರಿಗೆ ಸೇರಿದೆ. ಆದರೆ, ಮನೆಯಲ್ಲಿ ಮೃತಪಟ್ಟಿರುವ ದೇಹಗಳು ಅವರದ್ದೇ ಕುಟುಂಬದ್ದೇ ಎನ್ನುವ ಖಚಿತ ಮಾಹಿತಿ ಇಲ್ಲ. ಆದರೆ, ಕಳೆದ ನಾಲ್ಕೈದು ವರ್ಷದಿಂದ ಈ ಕುಟುಂಬ ಯಾರ ಕಣ್ಣಿಗೂ ಬಿದ್ದಿಲ್ಲ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಈ ಹಿಂದೆ ಈ ಮನೆಯಲ್ಲಿ ನಿವೃತ್ತ ಇಂಜಿನಿಯರ್ ಸುಮಾರು 70 ವರ್ಷದ ಜಗನ್ನಾಥ ರೆಡ್ಡಿ, ಅವರ ಪತ್ನಿ ಸುಮಾರು 60 ವರ್ಷದ ಪ್ರೇಮಾವತಿ, ಅವರ ಮಗಳು 42 ವರ್ಷದ ತ್ರಿವೇಣಿ, ಮಗ ಅಂದಾಜು 40 ವರ್ಷದ ಕೃಷ್ಣರೆಡ್ಡಿ ಹಾಗೂ ಸುಮಾರು 38 ವರ್ಷದ ನರೇಂದ್ರ ರೆಡ್ಡಿ ಎಂಬುವವರು ವಾಸವಾಗಿದ್ದರು.
ಜಗನ್ನಾಥ ರೆಡ್ಡಿ ಅವರಿಗೆ ಮೂವರು ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳಿದ್ದು, ಯಾರಿಗೂ ಮದುವೆ ಆಗಿರಲಿಲ್ಲ ಎನ್ನಲಾಗಿದೆ. ಹಿರಿಯ ಮಗ ಮಂಜುನಾಥ ರೆಡ್ಡಿ ಎಂಬುವವರು ಈ ಹಿಂದೆಯೇ ಮೃತಪಟ್ಟಿದ್ದರು.
ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಎಲ್ಲ ಅಸ್ಥಿಗಳ ಮಾದರಿ ಸಂಗ್ರಹಿಸಿದ್ದು, ಮುಂದಿನ ತನಿಖೆಯಿಂದ ಇಲ್ಲಿ ಮೃತಪಟ್ಟವರು ಯಾರು ಎನ್ನುವುದನ್ನು ಅಧಿಕೃತವಾಗಿ ಖಚಿತಪಡಿಸಬೇಕಾಗಿದೆ.
ಗುರುವಾರ ರಾತ್ರಿ ಈ ಸುದ್ದಿ ಸ್ಪೋಟವಾಗುತ್ತಿದ್ದಂತೆ ಅಕ್ಕಪಕ್ಕದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಯಾವಾಗ ಮೃತಪಟ್ಟಿರಬಹುದು ಎನ್ನುವ ಮಾತುಕತೆಗಳು ಸ್ಥಳೀಯರ ನಡುವೆ ನಡೆಯುತ್ತಿದ್ದವು.
ಈ ವೇಳೆ ಕೆಲವರು 2019 ರಲ್ಲಿ ಮನೆಯಿಂದ ವಾಸನೆ ಬರುತ್ತಿತ್ತು. ಆಗ ಇಲಿ ಸತ್ತಿರಬಹುದು ಎಂದು ಭಾವಿಸಲಾಗಿತ್ತು. ಕೆಲ ದಿನ ವಾಸನೆ ಬಂದು ನಿಂತಿತ್ತು. ಆನಂತರ ಯಾರೂ ಆ ಮನೆಯ ಕಡೆಗೆ ಗಮನ ಹರಿಸಿರಲಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.
ತಡರಾತ್ರಿಯೇ ಸ್ಥಳಕ್ಕೆ ಆಗಮಿಸಿದ ಎಸ್ಪಿ:
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳನ್ನು ಕಳಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ವಿಧಿ ವಿಜ್ಞಾನ ತಜ್ಞರು ಪರಿಶೀಲನೆಗೆ ಆಗಮಿಸಿದ ವೇಳೆ ಖುದ್ದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಘಟನಾ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ, ಸಿಪಿಐ ಸೇರಿದಂತೆ ಬಡಾವಣೆ ಠಾಣೆ ಪೊಲೀಸರು ರಾತ್ರಿ 1 ಗಂಟೆಯವರೆಗೆ ಇದ್ದು ಮಾಹಿತಿ ಸಂಗ್ರಹ ಮಾಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
