CHITRADURGA NEWS | 17 JULY 2026
ಚಿತ್ರದುರ್ಗ: ಜಿಲ್ಲೆಯ ರೈಲ್ವೇ ಅಭಿವೃದ್ಧಿಗೆ ಭೂಮಿ ನೀಡುವ ರೈತರಿಗೆ ನಿಯಮಾನುಸಾರ ಪರಿಹಾರ ನೀಡಿ, ರೈತರ ಹಿತ ಕಾಪಾಡುವಂತೆ ಸಂಸದ ಗೋವಿಂದ ಎಂ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ತಿಪ್ಪೇಸ್ವಾಮಿ | ನಡು ರಸ್ತೆಯಲ್ಲಿ ಟ್ರ್ಯಾಪ್
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ನೇರ ರೈಲ್ವೇ ಮಾರ್ಗ ಮತ್ತು ಚಿಕ್ಕಜಾಜೂರು-ಬಳ್ಳಾರಿ ರೈಲ್ವೇ ಡಬ್ಲಿಂಗ್ ಯೋಜನೆಗೆ ಭೂಸ್ವಾಧೀನ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಭೂ ಸ್ವಾಧೀನ ಪ್ರಕ್ರಿಯೆ ತಡವಾದಷ್ಟು ರೈಲ್ವೇ ಯೋಜನೆಗಳ ವೆಚ್ಚವೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಸರ್ಕಾರ ನಷ್ಟ ಉಂಟಾಗುತ್ತದೆ. ಜಿಲ್ಲೆಯ ರೈತರು ರೈಲ್ವೇ ಅಭಿವೃದ್ಧಿ ಭೂಮಿ ನೀಡಲು ಸಿದ್ದರಿದ್ದಾರೆ, ಆದರೆ ನೀಡುವ ಭೂಮಿಗೆ ಸೂಕ್ತ ಬೆಲೆ ಅಪೇಕ್ಷಿಸುತ್ತಿದ್ದಾರೆ.
ಹೊಳಲ್ಕೆರೆ ಭಾಗ ಅರೆ ಮಲೆನಾಡು ಪ್ರದೇಶವಾಗಿದ್ದು, ರೈತರು ಜಮೀನುಗಳಲ್ಲಿ ಅಡಿಕೆ, ಮಾವಿನ ತೋಟಗಳನ್ನು ಮಾಡಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಬೆಳೆಗಳಿಗೆ ಸೂಕ್ತ ಪರಿಹಾರ ದೊರಕುವಂತೆ ತಮ್ಮ ವರದಿ ನೀಡಬೇಕು. ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.
ಸರ್ವೇ ಕಾರ್ಯಕ್ಕೆ ಸಹಕರಿಸಲು ರೈತರಲ್ಲಿ ಮನವಿ:
ಸಭೆಯಲ್ಲಿ ರೈತರ ಮುಖಂಡರಿಗೆ ಭೂಸ್ವಾಧೀನ ಪಡಿಸಿಕೊಳ್ಳೂವ ಭೂಮಿಗೆ ಸೂಕ್ತ ಬೆಲೆ ನೀಡುವ ಭರವಸೆ ನೀಡಿದ ಸಂಸದ ಗೋವಿಂದ ಎಂ ಕಾರಜೋಳ, ಭೂಸ್ವಾಧೀನ ಹಾಗೂ ರೈಲೈ ಅಧಿಕಾರಿಗಳ ಸರ್ವೇ ಕಾರ್ಯಕ್ಕೆ ಸಹಕರಿಸುವಂತೆ ಕೋರಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 17 | ಮೆಕ್ಕೆಜೋಳ, ರಾಗಿ ರೇಟ್ ಎಷ್ಟಿದೆ?
ಭೂಸ್ವಾಧೀನ, ರೈಲ್ವೇ, ಕಂದಾಯ, ತೋಟಗಾರಿಕೆ, ಕೃಷಿ, ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವುದರ ಜೊತೆಗೆ ಭೂಸ್ವಾಧೀನ ಸಂಬAಧಿಸಿದ ವ್ಯಾಜ್ಯಗಳನ್ನು ಶೀಘ್ರವಾಗಿ ಪರಿಹರಿಸಬೇಕು. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು.
ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ಯಾವುದೇ ಆತಂಕ ಬೇಡ, ಸಬ್ ರಿಜಿಸ್ಟ್ರಾರ್ ಕಚೇರಿಯ ಮಾರುಕಟ್ಟೆ ಮೌಲ್ಯದ ದರ ಆಧರಿಸಿ ಮೂಲ ಬೆಲೆ ನಿಗದಿಪಡಿಸಲಾಗುತ್ತದೆ. ಇದರ ಆಧಾರ ಮೇಲೆ ಭೂಮಿಗೆ ಹೆಚ್ಚಿನ ಬೆಲೆ ದೊರಕುತ್ತದೆ. ಇದರೊಂದಿಗೆ ಜಮೀನಿನಲ್ಲಿ ಇರುವ ಬೆಳೆ, ತೋಟಗಾರಿಕೆ ಬೆಳೆಗಳು, ಪಶು ಸಂಗೋಪನೆಗಾಗಿ ನಿರ್ಮಿಸಿರುವ ಕಟ್ಟಡ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ನಿರ್ಮಿಸಿದ ಇತರೆ ನಿರ್ಮಾಣಗಳಿಗೂ ಪರಿಹಾರ ದೊರಕಲಿದೆ. ನಿಯಮಗಳ ಅಡಿ ರೈತರಿಗೆ ದೊರಕಬೇಕಾಗದ ಗರಿಷ್ಠ ಮಟ್ಟದ ಪರಿಹಾರಗಳನ್ನು ದೊರಕಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೇ ಯೋಜನೆಗೆ ಒಟ್ಟು 1405 ಎಕರೆ ಭೂಮಿ ಅವಶ್ಯಕತೆ ಇದ್ದು, ಈ ಪೈಕಿ 1211 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ರೈಲ್ವೇ ಇಲಾಖೆ ಜಮೀನು ಹಸ್ತಾಂತರಿಸಲಾಗಿದೆ. ನೇರ ರೈಲ್ವೇ ಕಾಮಗಾರಿಯೂ ಪ್ರಗತಿಯಲ್ಲಿದೆ.
ಇದನ್ನೂ ಓದಿ: SJM ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯಕ್ಕೆ BA, B.Com ನಲ್ಲಿ ಉತ್ತಮ ಫಲಿತಾಂಶ
ರೈಲ್ವೇ ಮೇಲ್ಸೇತುವೆ, ಕೆಳಸೇತುವೆ, ವಿದ್ಯುತ್ ಉಪ ಕೇಂದ್ರ ಹಾಗೂ ಜಾಲಗಳ ನಿರ್ಮಾಣಕ್ಕೆ ಒಟ್ಟು 194 ಎಕರೆ ಭೂ ಅವಶ್ಯಕತೆ ಇದ್ದು, ಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಪೈಕಿ ಚಿತ್ರದುರ್ಗ ಹಾಗೂ ಭರಮಸಾಗರ ಮಧ್ಯ 56 ಎಕರೆ ಭೂ ಸ್ವಾಧೀನಕ್ಕೆ ಜಂಟಿ ಅಳತೆ ಸಮೀಕ್ಷೆ (ಜೆ.ಎಂ.ಸಿ)ಯನ್ನು ಸಹ ಪೂರ್ಣಗೊಳಿಸಲಾಗಿದೆ.
ಪಾಲವ್ವನಹಳ್ಳಿ-ಚಿತ್ರದುರ್ಗದ ಮದ್ಯ 28-25 ಎಕರೆ ಭೂಮಿ ಅವಶ್ಯಕತೆ ಇದೆ. ನಕ್ಷೆ ಹಾಗೂ ಭೂ ದಾಖಲೆಗಳ ತಯಾರಿಕೆ 15 ದಿನಗಳ ಅವಶ್ಯಕತೆಯಿದೆ. ಹಿರಿಯೂರು ತವರಕೆರೆ ಮಧ್ಯೆ 31 ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. 60 ದಿನ ನೋಟಿಸ್ ಅವಧಿ ಪೂರ್ಣಗೊಂಡ ನಂತರ ಭೂಮಿ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುವುದು. ಇದೇ ಮಾದರಿಯಲ್ಲಿ ಚಿತ್ರದುರ್ಗ ಹಿರಿಯೂರು ಮಧ್ಯೆ 79 ಎಕೆರೆ ಭೂಸ್ವಾಧೀನಕ್ಕೆ ಕ್ರಮ ವಹಿಸಲಾಗಿದೆ.
ಚಿಕ್ಕಚಾಜೂರು-ಬಳ್ಳಾರಿ ನಡುವಿನ ರೈಲ್ವೇ ಮಾರ್ಗ ಡಬ್ಲಿಂಗ್ ಯೋಜನೆಗೆ ಹೊಳಲ್ಕೆರೆ ತಾಲ್ಲೂಕಿನಲ್ಲಿ 86 ಎಕರೆ 01 ಗುಂಟೆ ಚಿತ್ರದುರ್ಗ ತಾಲ್ಲೂಕಿನಲ್ಲಿ 72 ಎಕರೆ 12 ಗುಂಟೆ, ಚಳ್ಳಕೆರೆ ತಾಲ್ಲೂಕಿನಲ್ಲಿ 120 ಎಕರೆ 38 ಗುಂಟೆ ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 34 ಎಕರೆ 11 ಗುಂಟೆ ಭೂಮಿ ಅಗತ್ಯತೆಯನ್ನು ರೈಲ್ವೇ ಇಲಾಖೆಯಿಂದ ನೀಡಲಾಗಿದೆ. ಈಗಾಗಲೇ ಹೊಳಲ್ಕೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ 86 ಎಕರೆ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಶೀಘ್ರದಲ್ಲೇ ಉಳಿದ ತಾಲ್ಲೂಕುಗಳಿಗೂ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸುವುದಾಗಿ ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್ ಸಭೆಯಲ್ಲಿ ಮಾಹಿತಿ ನೀಡಿದರು.
ಆಶ್ರಯ ನಿವೇಶನ : ಲೇ ಔಟ್ ನಿರ್ಮಿಸಲು ಸೂಚನೆ
ಇದೇ ಸಂದರ್ಭದಲ್ಲಿ ಆಶ್ರಯ ಸಮಿತಿ ಸಭೆಯ ನಡೆಸಿದ ಸಂಸದ ಗೋವಿಂದ ಎಂ ಕಾರಜೋಳ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಆಶ್ರಯ ನಿವೇಶನ ಹಂಚಿಕೆಗಾಗಿ 1087 ಎಕರೆ ಜಾಗ ಗುರುತಿಸಿ ಮೀಸಲು ಇರಿಸಲಾಗಿದೆ. ಶೀಘ್ರವೇ ಈ ಜಾಗದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಲೇ ಔಟ್ ನಿರ್ಮಿಸಬೇಕು. ನಗರ ಪ್ರದೇಶದಲ್ಲಿ ಸ್ಲಂಬೋರ್ಡ್ ವತಿಯಿಂದ ನಿರ್ಮಿಸಿದ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಮಳೆ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ | ಹೆಚ್ಚು ನೀರು ಕೇಳುವ ಬೆಳೆ ಹಾಕಬೇಡಿ | ಡಿಸಿ
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಧಿಕಾರಿ ಎಸ್.ಜೆ.ಕಾಂತರಾಜು, ಜಿ.ಪಂ.ಸಿಪಿಓ ಗಾಯತ್ರಿ, ತೋಟಗಾರಿಕೆ ಜಂಟಿ ನಿರ್ದೇಶಕಿ ಸವಿತಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ರೈಲ್ವೇ ಇಂಜಿನಿಯರ್ಗಳಾದ ಮುನಿಕೃಷ್ಣ, ಹರೀಶ್, ರಜತ್ ಸೇರಿದಂತೆ ಮುತ್ತಿರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

