CHITRADURGA NEWS | 07 AUGUST 2026
ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ.50 ರಷ್ಟು ಮಳೆ ಕೊರತೆಯಾಗಿದ್ದು, ರಾಗಿ ಹಾಗೂ ಸಾವೆ ಬೆಳೆಯುವ ರೈತರು ಸಂಕಷ್ಟದಲ್ಲಿ ಇದ್ದಾರೆ. ಇದರೊಂದಿಗೆ ರೋಗಬಾದೆ ತುತ್ತಾಗಿ ನಷ್ಟಕ್ಕೆ ಒಳಗಾದ ತೆಂಗು ಬೆಳೆ ರೈತರಿಗೆ ನೆರವು ಒದಗಿಸುವಂತೆ ಜಿಲ್ಲಾ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಹೊಸದುರ್ಗ | ರೈತರ ಜಮೀನುಗಳಿಗೆ ಸಚಿವ ಟಿ.ರಘುಮೂರ್ತಿ ಭೇಟಿ, ಪರಿಶೀಲನೆ
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಕೃತಿ ವಿಕೋಪ ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಗಿ ಬೆಳೆಗೆ ಆಗಸ್ಟ್ 14ರ ವರೆಗೆ ಬೆಳೆ ವಿಮೆ ನೊಂದಣಿಗೆ ಅವಕಾಶವಿದೆ. ಹೆಚ್ಚಿನ ರೈತರು ನೊಂದಣಿಗೆ ಕ್ರಮ ಕೈಗೊಳ್ಳಬೇಕು. ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ತೆಂಗು ವಿಸ್ತರಣೆ ಕಾರ್ಯಕ್ರಮದ ಅನುಷ್ಠಾನಕ್ಕೂ ಮೊದಲು, ತೆಂಗು ಬೆಳೆಯಲ್ಲಿ ನಷ್ಟ ಹೊಂದಿದ ರೈತರಿಗೆ ಪರಿಹಾರ ಕೊಡಿಸುವ ಕೆಲಸವಾಗಬೇಕು. ತೆಂಗುಗೆ ವಿಮೆ ಸೌಲಭ್ಯ ಒದಗಿಸಲು ಮಂಡಳಿಗೆ ಶಿಫಾರಸ್ಸು ಮಾಡಬೇಕು. ತಾಲ್ಲೂಕಿನಾದ್ಯಂತ ತೆಂಗು ಬೆಳೆ ನಷ್ಟದ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮಗ್ರ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಸಚಿವ ಟಿ.ರಘುಮೂರ್ತಿ ನಿರ್ದೇಶಿಸಿದರು.
ಜವರಿಯಿಂದ ಆಗಸ್ಟ್ ವರೆಗೆ ತಾಲ್ಲೂಕಿನಲ್ಲಿ 283.4 ಮಿ.ಮೀ ವಾಡಿಕೆ ಮಳೆಯ ನಿರೀಕ್ಷೆ ಇತ್ತು. ಆದರೆ 174.44 ಮಿ.ಮೀ. ಮಳೆಯಾಗಿದೆ. ಮುಂಗಾರು ಅವಧಿಯಲ್ಲಿ 151.2 ಮಿ.ಮೀ. ಮಳೆಯ ನಿರೀಕ್ಷೆ ಇತ್ತು, 76.4 ಮಿ.ಮೀ. ಮಳೆ ಬಿದ್ದದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಶೇ.49 ಹೆಚ್ಚು ಮಳೆಯ ಕೊರತೆಯಾಗಿದೆ. 52,788 ರೈತರು ಇದ್ದು, ಈ ಪೈಕಿ 22,987 ರೈತರು ಫಸಲ್ ವಿಮಾ ಯೋಜನೆಯಡಿ ನೊಂದಣಿ ಮಾಡಿದ್ದಾರೆ. 52,900 ಹೆಕ್ಟೇರ್ ಕೃಷಿ ಭೂಮಿ ಪೈಕಿ 11,439 ಹೆಕ್ಟೆರ್ನಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇ.21.59 ಗುರಿ ಸಾಧನೆಯಾಗಿದೆ. ರಾಗಿ ಪ್ರಮುಖ ಕೃಷಿ ಬೆಳೆಯಾಗಿದೆ, ಆದರೆ ಈ ಬಾರಿ ಸಾವೆ ಬೆಳೆ ವಿಸ್ತೀರ್ಣ ಹೆಚ್ಚಾಗಿದ್ದು 7325 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಬಿ.ಮಂಜುನಾಥ್ ಮಾಹಿತಿ ನೀಡಿದರು.
ಇದನ್ನೂ ಓದಿ: ಮಳೆ ಮಾಪಕಗಳ ದುರಸ್ಥಿಗೆ ಸಚಿವ ಟಿ.ರಘುಮೂರ್ತಿ ಸೂಚನೆ
ಹೊಸದುರ್ಗ ತಾಲ್ಲೂಕಿನಲ್ಲಿ 40,991 ಹೆಕ್ಟೆರ್ ತೋಟಗಾರಿಕೆ ಬೆಳೆಯಿದ್ದು, ಈ ಪೈಕಿ 32,000 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಿದೆ. ಸಣ್ಣ ಹಿಡುವಳಿ ಹೊಂದಿದ 81,900 ತೋಟಗಾರಿಕೆ ರೈತರಿದ್ದಾರೆ. ಹವಮಾನ ಆಧಾರಿತ ವಿಮೆಯಲ್ಲಿ ತೆಂಗು ಬೆಳೆಗೆ ವಿಮೆ ಸೌಲಭ್ಯವಿಲ್ಲ. ಇದರ ಹೊರತಾಗಿ ಅಡಿಕೆ, ಮಾವು ದಾಳಿಂಬೆ, ಈರುಳ್ಳಿ ಬೆಳೆದ 6,700 ರೈತರು ಮಾತ್ರ ಬೆಳೆ ಮಿಮೆ ಮಾಡಿಸಿದ್ದಾರೆ.
ಈ ಭಾಗದಲ್ಲಿ ತೆಂಗು ಬೆಳೆಗೆ, ಬಿಳಿ ನೊಣ(ವೈಟ್ ಫ್ಲೈ) ಕಪ್ಪು ತಲೆ ಹುಳುವಿನ ಬಾದೆ ಹೆಚ್ಚಾಗಿದೆ. ಇದರೊಂದಿಗೆ ಕಾಂಡ ಸೋರುವ ರೋಗವು ಅಧಿಕವಾಗಿದೆ. ಕಪ್ಪು ತಳೆ ಹುಳುವಿನ ಬಾದೆಯಿಂದ ತೆಂಗಿನ ಇಳುವರಿ ಶೇ.90 ರಷ್ಟು ಕುಸಿಯುತ್ತದೆ. ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ತೆಂಗು ಪುನಶ್ಚೇತನ ಕಾರ್ಯಕ್ರಮದಲ್ಲಿ ಹೊಸದಾಗಿ ತೆಂಗು ನಾಟಿ ಮಾಡುವ ರೈತರಿಗೆ ಸಹಾಯಧನ ನೀಡಲಾಗುತ್ತಿದೆ. ಕೀಟ ಬಾದೆಗೆ ಬೇವಿನ ಹಿಂಡಿ ಸಿಂಪರಣೆಗೆ ನೀಡಲಾಗಿದೆ. ಈ ಬಾರಿ ತೆಂಗು ಬೆಳೆಗೆ ವಿಮೆ ಸೌಲಭ್ಯ ಕಲ್ಪಿಸುವಂತೆ ಮಂಡಳಿಗೆ ಶಿಫಾರಸ್ಸು ಮಾಡುವುದಾಗಿ ತೋಟಗಾರಿಕೆ ಜಂಟಿ ನಿರ್ದೇಶಕಿ ಸವಿತಾ ತಿಳಿಸಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎ(ಕೃಷಿ), ಬಿ(ತೋಟಗಾರಿಕೆ) ಹಾಗೂ ಎ+ಬಿ(ಕೃಷಿ ಮತ್ತು ತೋಟಗಾರಿಕೆ) ಮಾದರಿಯಲ್ಲಿ ರೈತರ ವರ್ಗೀಕರಣ ಮಾಹಿತಿ ಸಂಗ್ರಹಿಸಬೇಕು. ವಿಸ್ತೀರ್ಣವಾರು ಬೆಳೆ ವಿವರಗಳನ್ನು ನೀಡಬೇಕು. ಮುಂಬರುವ ದಿನಗಳಲ್ಲಿ ಬರ ಘೋಷಣೆಯಾದರೆ ರೈತರಿಗೆ ಪರಿಹಾರ ನೀಡಲು ಈ ಮಾಹಿತಿಗಳು ಉಪಯುಕ್ತವಾಗಲಿವೆ. ತಾಲ್ಲೂಕಿನಲ್ಲಿರುವ ಮಳೆ ಮಾಪನ ಕೇಂದ್ರಗಳ ನಿರ್ವಹಣೆ ಮಾಡುವಂತೆ ಸಚಿವ ಟಿ.ರಘುಮೂರ್ತಿ ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಆಗಸ್ಟ್ 07 | ಮೆಕ್ಕೆಜೋಳ, ರಾಗಿ, ತೊಗರಿ ರೇಟ್ ಎಷ್ಟಿದೆ?
ಬರ ನಿರ್ವಹಣೆಗೆ ಅಗತ್ಯ ಪರಿಹಾರಕ್ಕೆ ಶಾಸಕ ಬಿ.ಜಿ.ಗೋವಿಂದಪ್ಪ ಆಗ್ರಹ:
ತಾಲೂಕಿನಲ್ಲಿ ತೀವ್ರ ಮಳೆ ಅಭಾವದಿಂದಾಗಿ ರಾಗಿ, ಸಾವೆ ಸೇರಿದಂತೆ ಪ್ರಮುಖ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಕುಡಿಯುವ ನೀರು ಹಾಗೂ ಮೇವಿನ ಅಭಾವ ಎದುರಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಭೀಕರವಾಗುವ ಲಕ್ಷಣಗಳಿದ್ದು, ಸರ್ಕಾರ ತಕ್ಷಣವೇ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕಿದೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಆಗ್ರಹಿಸಿದರು.
ತಾಲೂಕಿನ ಪ್ರಮುಖ ಬೆಳೆಯಾದ ಸಾವೆಯನ್ನು ಬಿತ್ತನೆ ಮಾಡಲಾಗಿದ್ದರೂ ಮಳೆಯಿಲ್ಲದೆ ಕಟಾವಿಗೆ ಬಾರದೆ ಒಣಗಿಹೋಗಿದೆ. ಇನ್ನು ರಾಗಿ ಬಿತ್ತನೆ ಮಾಡಲು ರೈತರು ಸಿದ್ಧರಿದ್ದರೂ ಮಳೆ ಬಾರದೆ ಬಿತ್ತನೆಯೇ ಸಾಧ್ಯವಾಗಿಲ್ಲ. ತೋಟಗಾರಿಕೆ ಬೆಳೆಗಳಾದ ತೆಂಗು ಮತ್ತು ಅಡಿಕೆ ತೋಟಗಳು ನೀರಿನ ಅಭಾವದಿಂದ ಒಣಗಿ ನಾಶವಾಗುತ್ತಿವೆ. ತಾಲೂಕಿನಲ್ಲಿ ಈಗಾಗಲೇ ಬೋರ್ವೆಲ್ಗಳನ್ನು ಕೊರೆಸಿ ನೀರಿನ ವ್ಯವಸ್ಥೆ ಮಾಡಲಾಗಿದೆ.
ಸರ್ಕಾರ ಪ್ರಸ್ತುತ ಬಿಡುಗಡೆ ಮಾಡಿರುವ ರೂ.1 ಕೋಟಿ ಅನುದಾನದಲ್ಲಿ ಅಗತ್ಯವಿರುವ ಕಡೆ ಪೈಪ್ಲೈನ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಿ ತಕ್ಷಣವೇ ಜನರಿಗೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸದುರ್ಗ ಸೇರಿದಂತೆ ತಾಲ್ಲೂಕಿನ 13 ಹೋಬಳಿಗೆ ಕುಡಿಯುವ ನೀರಿಗೆ ಆಸರೆಯಾಗಿರುವ ಕಲ್ಲೋಡ್ ಬ್ಯಾರೇಜ್ ಬರಿದಾಗುತ್ತಿದೆ.
ಇದನ್ನೂ ಓದಿ: ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗೆ ಅರ್ಜಿ ಆಹ್ವಾನ
ಜಿಲ್ಲೆಯ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ 5 ಟಿ.ಎಂ.ಸಿ ನೀರು ಹರಿಸಲು ವಿಕೋಪ ಪರಿಹಾರಗಳ ಸಚಿವರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಬೇಕು. ಹೊಸದುರ್ಗ ಪಟ್ಟಣ 23 ವಾರ್ಡ್ಗಳಿಗೆ 24*7 ಕುಡಿಯುವ ನೀರು ಸಬರಾಜು ಮಾಡಲು ನಗರೋತ್ಥಾನ ಯೋಜನೆಯಡಿ ರೂ.25 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿ, ಅನುಮೋದನೆ ಕಳುಹಿಸಲಾಗಿದೆ. ಕೂಡಲೇ ಅನುಮೋದನೆ ದೊರೆಯುವಂತೆ ಮಾಡಬೇಕು ಎಂದರು.
ಭದ್ರಾ ಹರಿವಿಗೆ ಆಗಸ್ಟ್ 17 ರ ಗಡುವು:
ಭದ್ರಾ ಮೇಲ್ದಂಡೆ ಯೋಜನೆಯಡಿ ಗೋನೂರು ಅಕ್ವಾಡೆಕ್ಟ್ ವರೆಗೆ ಪ್ರಾಯೋಗಿಕ ಹರಿಸುವ ಕಾಮಗಾರಿಯನ್ನು ಆಗಸ್ಟ್ 17ರ ಒಳಗೆ ಪೂರ್ಣಗೊಳಿಸಲು ಸಚಿವ ಟಿ.ರಘುಮೂರ್ತಿ ಗಡುವು ವಿಧಿಸಿದರು.
ಪ್ರಾಯೋಗಿಕ ಹರಿಸಲು ಕಳೆದ 6 ತಿಂಗಳಿಂದ ಪ್ರಯತ್ನಿಸಲಾಗುತ್ತಿದೆ. ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಎಲ್ಲಾ ಅಡೆ ತಡೆಗಳನ್ನು ನಿವಾರಿಸಿ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಜಿಲ್ಲೆಯ ಎಲ್ಲಾ ಶಾಸಕರು ಮತ್ತೊಮ್ಮೆ ಕಾಮಗಾರಿ ಪರಿಶೀಲಿಸಿ, ಮುಖ್ಯಮಂತ್ರಿಗಳನ್ನು ಕಾರ್ಯಕ್ರಮದ ಚಾಲನಗೆ ಆಹ್ವಾನಿಸುವುದಾಗಿ ತಿಳಿಸಿದರು.
ಇದನ್ನೂ ಓದಿ: ಬುದ್ಧನ ಕಂಚಿನ ವಿಗ್ರಹಗಳ ವಿತರಣೆ | ವಿದ್ಯಾರ್ಥಿಗಳಿಗೆ ಸಾಧನೆಯ ಸಂದೇಶ
ಜಲಾಶಯಗಳಿಂದ ಕುಡಿಯವ ನೀರಿನ ಹೊರತಾಗಿ, ಬೆಳೆಗಳಿಗೆ ನೀರು ಹರಿಸದಿರಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಬರಗಾಲ ಇರುವುದರಿಂದ ಹೊಸದುರ್ಗ ತಾಲ್ಲೂಕು ಸೇರಿದಂತೆ ಜಿಲ್ಲೆಯ ಕುಡಿಯುವ ನೀರಿನ ಅಗತ್ಯತೆಗೆ ಭದ್ರಾ ಜಲಾಶಯದಿಂದ 5 ಟಿ.ಎಂ.ಸಿ ನೀರು ಬಿಡಲು ಪತ್ರ ಬರೆಯಬೇಕು ನಿರ್ದೇಶಿಸಿದರು.
ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯಿತಿ ಪಿಡಿಒಗಳು ಪ್ರತಿಯೊಂದು ಗ್ರಾಮಕ್ಕೂ ವೈಯಕ್ತಿಕವಾಗಿ ಭೇಟಿ ನೀಡಿ, ಸಾರ್ವಜನಿಕರ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕು. ವಿಬಿ ಜಿ ರಾಮ್ ಅಡಿ ಪ್ರತಿಗಾಮ ಪಂಚಾಯಿತಿ ಮುಂದೆ ಲಭ್ಯವಿರುವ ಉದ್ಯೋಗದ ಮಾಹಿತಿಯನ್ನು ಪ್ರಚುರ ಪಡಿಸಬೇಕು ಎಂದು ಸಚಿವ ಟಿ.ರಘುಮೂರ್ತಿ ಸೂಚಿಸಿದರು.
ಸಭೆಯಲ್ಲಿ ಕುಡಿಯುವ ನೀರು ಸರಬರಾಜು, ರಸ್ತೆ ಗುಂಡಿಗಳನ್ನು ಮುಚ್ಚುವುದು ಹಾಗೂ ಮೇವು ಲಭ್ಯತೆ ಕುರಿತು ಅಗತ್ಯ ಮಾಹಿತಿಗಳನ್ನು ಪಡೆದ ಸಚಿವರು ಆಗಸ್ಟ್ 30 ಒಳಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವಂತೆ ನಿರ್ದೇಶಿಸಿದರು.
ಇದನ್ನೂ ಓದಿ: ಮೌಲ್ಯ ಶಿಕ್ಷಣದಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಸಾಧ್ಯ | ಡಯಟ್ ಉಪನ್ಯಾಸಕಿ ಶಿವಲೀಲ
ಸಭೆಗೂ ಜಿಲ್ಲಾ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ತಾಲ್ಲೂಕಿನ ಆಗಲಕೆರೆ ಹಾಗೂ ಕಲ್ಕರೆ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದರು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣಗಂಜಿಗಟ್ಟೆ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಉಪವಿಭಾಗಾಧಿಕಾರಿ ಕಾಂತರಾಜ್, ಜಿ.ಪಂ.ಉಪಕಾರ್ಯದರ್ಶಿ ಬಾಬು, ಪಶು ಪಾಲನೆ ಹಾಗೂ ವೈದ್ಯಕೀಯ ಇಲಾಖೆ ಉಪನಿರ್ದೇಶಕ ತಿಪ್ಪೇಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯ ಪಾಲಕ ಅಭಿಯಂತರ ಅಮರನಾಥ್ ಜೈನ್,ಹೊಸದುರ್ಗ ತಹಶೀಲ್ದಾರ್ ತಿರುಪತಿ ಪಾಟೀಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

