ಹೊಸದುರ್ಗ
ಶೇಷಾವಧೂತ ಆಶ್ರಮದಲ್ಲಿ 131ನೇ ಆರಾಧನಾ ಮಹೋತ್ಸವ | ಶ್ರೀ ಶಾಂತವೀರ ಸ್ವಾಮೀಜಿ ಭಾಗೀ
ಚಿತ್ರದುರ್ಗ ನ್ಯೂಸ್.ಕಾಂ: ಮಾನವನ ಬದುಕಿಗೆ ಗುರುವಿನ ಮಾರ್ಗದರ್ಶನ, ದೇವರ ಅನುಗ್ರಹ ಎರಡೂ ಅತ್ಯಂತ ಪ್ರಮುಖ ಎಂದು ಶೇಷಾವಧೂತ ಆಶ್ರಮ ಹಾಗೂ ಹೊಸದುರ್ಗ ಕುಂಚಿಟಿಗ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಗ್ರಾಮದ ಬ್ರಹ್ಮಚೈತನ್ಯ ಸದ್ಗುರು ಶ್ರೀ ಶೇಷಾವಧೂತ ಆಶ್ರಮದಲ್ಲಿ ನಡೆದ 131ನೇ ಆರಾಧನಾ ಜಾತ್ರಾ ಮಹೋತ್ಸವ ಹಾಗೂ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಧಾರ್ಮಿಕ ಸಾಮಾಜಿಕ ನೈತಿಕ ತಳಹದಿಯ ಮೇಲೆ ಸಮಾಜ ಮುನ್ನಡೆದಾಗ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಿಗಲು ಸಾಧ್ಯ. ಸರ್ವರಲ್ಲೂ ಒಳ್ಳೆಯದನ್ನು ಕಾಣುವ ಮತ್ತು ಬಯಸುವ ಭಾವ ಬರುವುದು ಆಧ್ಯಾತ್ಮದ ದಾರಿಯಲ್ಲಿ ನಡೆದವರಿಗೆ ಮಾತ್ರ ಎಂದರು.
ಇದನ್ನೂ ಓದಿ: ಅಯೋಧ್ಯೆ ಮಂತ್ರಾಕ್ಷತೆ ವಿತರಣೆಗೆ ಚಾಲನೆ
ಅಧ್ಯಾತ್ಮ ಎಂದರೆ ಎಲ್ಲರೂ ನನ್ನವರು, ಎಲ್ಲರಿಗೂ ನಾನು ಬದುಕಬೇಕು ಸಮಾಜವೇ ಸರ್ವಸ್ವ ಎಂದು ಬದುಕುವುದೇ ಆಗಿದೆ, ಅಂತರಂಗದ ಹಸಿವನ್ನು ನೀಗಿಸಿ ಬಹಿರಂಗದ ಸಮಸ್ಯೆಗಳನ್ನು ಪರಿಹರಿಸಿ ಸರ್ವರಲ್ಲೂ ದೇವರನ್ನು ಕಾಣುವ ಮತ್ತು ದೇವರನ್ನು ಅನುಗ್ರಹಿಸುವ ಕೆಲಸವನ್ನು ಶ್ರೀ ಶೇಷಾವಧೂತ ಮಾಡಿಕೊಂಡು ಬಂದಿದ್ದಾರೆ.
ಕಳೆದ 131 ವರ್ಷಗಳಿಂದ ನಿರಂತರವಾಗಿ ಶ್ರೀಮಠದಲ್ಲಿ ಆರಾಧನೆ ಅಭಿμÉೀಕ ಕೀರ್ತನೆ ಭಜನೆ ಸತ್ಸಂಗ ಸಾಮೂಹಿಕ ದಾಸೋಹವನ್ನು ಸಾವಿರಾರು ಜನಕ್ಕೆ ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಸಂತೋಷದಾಯಕ ಎಂದು ಶಾಂತವೀರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ವನಕಲ್ಲು ಮಠದ ಶ್ರೀ ರಮಾನಂದ ಸ್ವಾಮೀಜಿ ಧ್ವಜಪೂಜೆ ನೇರವೇರಿಸಿ ದಾಸೋಹಕ್ಕೆ ಚಾಲನೆ ನೀಡಿದರು. ಶ್ರೀಮಠದ ಸಮಿತಿಯ ಅಧ್ಯಕ್ಷರಾದ ಗುರುಪ್ರಕಾಶ್, ಕಾರ್ಯದರ್ಶಿಗಳಾದ ಹುಚ್ಚಪ್ಪ ಹಾಗೂ ಆಶ್ರಮದ ಟ್ರಸ್ಟಿನ ಪದಾಧಿಕಾರಿಗಳು ಭಕ್ತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.