ಮುಖ್ಯ ಸುದ್ದಿ
ದುರ್ಗದ ಅಧಿದೇವತೆಗಳ ಅದ್ದೂರಿ ಮೆರವಣಿಗೆ | ಏಕನಾಥೇಶ್ವರಿ, ಬರಗೇರಮ್ಮ ದೇವಿಯರ ಕಣ್ತುಂಬಿಕೊಂಡ ಭಕ್ತರು

CHITRADURGA NEWS | 04 MAY 2024
ಚಿತ್ರದುರ್ಗ: ಸಾವಿರಾರು ಭಕ್ತರ ಸಮ್ಮುಖದಲ್ಲಿ ರಾಜಬೀದಿಯಲ್ಲಿ ಏಕನಾಥೇಶ್ವರಿ, ಬರಗೇರಮ್ಮ ಶಕ್ತಿ ದೇವತೆಗಳ ಎತ್ತಿನಗಾಡಿ ರಥೋತ್ಸವ ಮೆರವಣಿಗೆಯು ವಿಜೃಂಭಣೆಯಿಂದ ಜರುಗಿತು.
ಏಕನಾಥೇಶ್ವರಿ, ಬರಗೇರಮ್ಮ ದೇವಿಯರ ಉತ್ಸವ ಮೂರ್ತಿಗಳನ್ನು ವಿವಿಧ ಬಗೆಯ ಪುಷ್ಪ, ಡ್ರೈ ಫ್ರೂಟ್ಸ್ ಅಲಂಕರಿಸಲಾಗಿತ್ತು. ಭಕ್ತರ ಕಣ್ಮನ ಸೆಳೆಯುವಂತೆ ಜೋಡೆತ್ತು ಗಾಡಿಯಲ್ಲಿ ದೇವಿಯರನ್ನು ಪ್ರತಿಷ್ಠಾಪಿಸಲಾಯಿತು.
ಇದನ್ನೂ ಓದಿ: ರಸ್ತೆ ಹಂಪ್ಸ್ ಹತ್ತುವಾಗ ಬಿದ್ದ ಸ್ಕೂಟಿ | ತಲೆ ಗೆ ಪೆಟ್ಟು ಬಿದ್ದು ಸಾವರ ಸಾವು
ಕಹಳೆ, ಡೊಳ್ಳು, ಉರುಮೆ, ತಮಟೆ, ನಾಗರಿ ಸೇರಿದಂತೆ ವಿವಿಧ ಜನಪದ ಕಲಾತಂಡಗಳೊಂದಿಗೆ ಸಂಚರಿಸಿದ ಮೆರವಣಿಗೆಯಲ್ಲಿ ಆಧಿದೇವತೆ ಏಕನಾಥೇಶ್ವರಿಗೆ ಜೈ, ಬರಗೇರಮ್ಮ ದೇವಿಗೆ ಜೈ, ಉಧೋ ಉಧೋ ಎಂಬ ಹರ್ಷೋದ್ವಾರ ಮೊಳಗಿದವು. ಸುಡು ಬಿಸಿಲು ಲೆಕ್ಕಿಸದೆ ನೂರಾರು ಯುವಕರು, ಬಾಲಕರು ವಾದ್ಯಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು.
ಏಕನಾಥೇಶ್ವರಿ ದೇವಿಯ ಮೆರವಣಿಗೆಯು ಕೋಟೆ ರಸ್ತೆಯಿಂದ ಆರಂಭವಾಗಿ ಆನೆಬಾಗಿಲು, ಬುರುಜನಹಟ್ಟಿ, ಗಾಯತ್ರಿ, ಗಾಂಧಿ, ಎಸ್ಬಿಐ ವೃತ್ತ, ಧರ್ಮಶಾಲೆ ರಸ್ತೆ, ದೊಡ್ಡಪೇಟೆ, ಜೋಗಿಮಟ್ಟಿ ರಸ್ತೆ, ಸುಣ್ಣದ ಗುಮ್ಮಿ, ಜಟ್ಪಟ್ ನಗರ, ಕರುವಿನಕಟ್ಟೆ ವೃತ್ತ, ಫಿಲ್ಟರ್ ಹೌಸ್ ರಸ್ತೆಯಲ್ಲಿ ಸಂಚರಿಸಿ ಪಾದದ ಗುಡಿಗೆ ಕರೆತರಲಾಯಿತು.
ಇದನ್ನೂ ಓದಿ: ಅಡಿಕೆ ಧಾರಣೆ | 3 ಮೇ | ರಾಜ್ಯದ ಯಾವ ಮಾರುಕಟ್ಟೆಗಳಲ್ಲಿ ಯಾವ ಅಡಿಕೆ ರೇಟ್ ಎಷ್ಟಿದೆ
ಅದೇ ರೀತಿ ಬರಗೇರಮ್ಮ ದೇವಿಯ ಮೆರವಣಿಗೆ ಮೂಲ ದೇಗುಲದಿಂದ ಆರಂಭವಾಗಿ ಹೊಳಲ್ಕೆರೆ ರಸ್ತೆ, ಗೌರಸಂದ್ರ ಮಾರಮ್ಮ ದೇಗುಲ, ಸಂಗೊಳ್ಳಿ ರಾಯಣ್ಣ ವೃತ್ತ, ಬಿ.ಡಿ.ರಸ್ತೆ, ರಂಗಯ್ಯನ ಬಾಗಿಲು, ಉಜ್ಜಯನಿ ಮಠದ ರಸ್ತೆ, ಕೂಡಲೀ ಶೃಂಗೇರಿ ಮಹಾಸಂಸ್ಥಾನ ಶಾಖಾ ಮಠ, ಉಚ್ಚಂಗಿಯಲ್ಲಮ್ಮ ದೇವಿ ದೇಗುಲ, ಚಿಕ್ಕಪೇಟೆ ಸೇರಿ ನಗರದ ರಾಜಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ಎರಡೂ ದೇವತೆಗಳಿಗೆ ಪಾನಕ ಪರಿಹಾರ ಹೆಡೆ ಬಿಡಾರ ಹಿಟ್ಟಿನ ಆರತಿ ಸೇವೆ ನೆರವೇರಿತು.
ಮೆರವಣಿಗೆಯಲ್ಲಿ ತಹಸಿಲ್ದಾರ್ ಡಾ. ನಾಗವೇಣಿ ಭಾಗೀ:
ಚಿತ್ರದುರ್ಗ ತಹಸಿಲ್ದಾರ್ ಡಾ. ನಾಗವೇಣಿ ಕೊಡ ಮಗುವಿನೊಂದಿಗೆ ಮೆರವಣಿಗೆಯಲ್ಲಿ ಕೆಲಕಾಲ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಇದನ್ನೂ ಓದಿ: ತೋಟಕ್ಕೆ ಆಕಸ್ಮಿಕ ಬೆಂಕಿ | ಹಲವು ಮರ, ಗಿಡ ಬೆಂಕಿಗಾಹುತಿ
ಬಾಕ್ಸ್ ಡ್ರೈ-ಫ್ರೂಟ್ಸ್ ಅಲಂಕಾರದಲ್ಲಿ ಬರಗೇರಮ್ಮ:
ಬರಗೇರಮ್ಮ ದೇವಿಯ ಅಲಂಕಾರ ಈ ಬಾರಿ ಅತ್ಯಂತ ವಿಶೇಷವಾಗಿತ್ತು. ಮೂರು ದಿನಗಳಿಂದಲೂ ದೇಗುಲದಲ್ಲಿ ಇದಕ್ಕಾಗಿ ಭರದ ಸಿದ್ಧತೆಗಳು ನಡೆದವು. ಸಾವಿರಾರು ಗೋಡಂಬಿ, ಬಾದಾಮಿ, ಉತ್ತುತ್ತಿ, ಅಂಜುರಾ, ಚೆರ್ರಿ ಹಣ್ಣು, ಕಮಲದ ಹೂ ಸೇರಿ ವಿವಿಧ ವರ್ಣದ ಪುಷ್ಪಗಳಿಂದ ದುರ್ಗಾ ಮಾತೆ ಮಾದರಿಯಲ್ಲಿ ದೇವಿ ಆಶೀರ್ವದಿಸುವಂತೆ ವೈಭವೋಪೇತವಾಗಿ ಅಲಂಕರಿಸಲಾಗಿತ್ತು.
ಬಾಕ್ಸ್ ಮೀಸಲು ಸಮರ್ಪಣೆ:
ಸೀರೆ, ರವಿಕೆ, ಬಳೆ, ಅಕ್ಕಿ, ಬೇಳೆ, ಬೆಲ್ಲ, ಅರಿಷಿನ, ಕುಂಕುಮ, ಕೊಬ್ಬರಿ, ಎಲೆ, ಅಡಿಕೆ, ಹಣ್ಣು, ಕಾಯಿ ಮಡಿಲಕ್ಕಿಯನ್ನು ದೇವಿಗೆ ಮೀಸಲು ರೂಪದಲ್ಲಿ ನೀಡುವ ಪ್ರತೀತಿ ಇದೆ. ಅದರಂತೆ ಭಕ್ತರು ದೇವತೆಗಳಿಗೆ ಭಕ್ತಿಪೂರ್ವಕವಾಗಿ ಸಮರ್ಪಿಸಿದರು. ಮನೆಯಲ್ಲಿರುವ ಮಕ್ಕಳಿಗೆ ಅಮ್ಮ, ದಡಾರ, ಸಿಡುಬು ಸೇರಿ ಯಾವುದೇ ರೀತಿಯ ಕಾಯಿಲೆಗಳು ಬರಬಾರದು ಎಂಬ ನಂಬಿಕೆಯೊಂದಿಗೆ ಈ ದೇವತೆಗಳು ಸೇರಿ ಶಕ್ತಿದೇವತೆಗಳಿಗೆ ಮೀಸಲು ಅರ್ಪಿಸುವ ಪದ್ಧತಿಯನ್ನು ಭಕ್ತರು ಪರಂಪರಾನುಗತವಾಗಿ ನಡೆಸಿಕೊಂಡು ಬಂದಿರುವುದು ಇಲ್ಲಿನ ವಿಶೇಷ ಆಚರಣೆಯಾಗಿದೆ.
ಇದನ್ನೂ ಓದಿ: ಸಾಹಿತಿ ಬಿ. ಎಲ್. ವೇಣು ನಿವಾಸಕ್ಕೆ ಶಾಸಕ ಕೆ. ಸಿ. ವೀರೇಂದ್ರ ಪಪ್ಪಿ ಭೇಟಿ
ಕಳೆದೆ ಬಾರಿಗಿಂತಲೂ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಮೆರವಣಿಗೆಯು ಜರುಗಿತ್ತು.
ಸಿಹಿ ಉಂಡೆ ಮಹೋತ್ಸವ ಇಂದು: ಕೋಟೆ ರಸ್ತೆಯ ಪಾದದ ಗುಡಿ ಮುಂಭಾಗದಲ್ಲಿ ಏಕನಾಥೇಶ್ವರಿ ಹಾಗೂ ಬರಗೇರಮ್ಮ ದೇವಿಯ ಮೂಲ ಸಂವಿಧಾನದ ಮುಂಭಾಗದಲ್ಲಿ ದೇವಿಯ ಸಿಹಿ ಉಂಡೆ ಮಹೋತ್ಸವ ಇಂದು ಸಂಜೆ 6 ಗಂಟೆ ನೆರವೇರಲಿದೆ.
