ಮುಖ್ಯ ಸುದ್ದಿ
KSRTC ಬಸ್ ನಿಲ್ದಾಣಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಭೇಟಿ | ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನ
CHITRADURGA NEWS | 23 JANUARY 2024
ಚಿತ್ರದುರ್ಗ: ನಗರದ ಕೇಂದ್ರ ಭಾಗದಲ್ಲಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಗುರುವಾರ ಮುಂಜಾನೆ ಅನಿರೀಕ್ಷಿತ ಭೇಟಿ ನೀಡಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಬಸ್ ನಿಲ್ದಾಣದ ಅವ್ಯವಸ್ಥೆ ಕಂಡು ಸಿಡಿಮಿಡಿಗೊಂಡರು.
Also Read: ವಿವಿ ಸಾಗರಕ್ಕೆ ಬಾಗೀನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ
ಲೋಕಾಯುಕ್ತ ಭೇಟಿ ಕುರಿತು ವಾರದಿಂದಲೇ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿವೆ, ಆದರೂ ಬೇಜವಬ್ದಾರಿ ಹಾಗೂ ನಿರ್ಲಕ್ಯದಿಂದ ಇದ್ದೀರಿ, ಸಾರ್ವಜನಿಕರು ನಿತ್ಯ ಓಡಾಟ ಮಾಡುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಿಲ್ಲ. ಲೋಕಾಯುಕ್ತರು ಬರುತ್ತಾರೆ ಎಂದು ತಿಳಿದ ಮೇಲೆಯೂ ಸ್ವಚ್ಛಗೊಳಿಸಿಲ್ಲ.
ಇಷ್ಟೊಂದು ಬೇಜಾಬ್ದಾರಿ ಇರುವ ಅಧಿಕಾರಿಗಳನ್ನು ನಾನೆಲ್ಲೂ ನೋಡಲಿಲ್ಲ. ಯಾರ್ರೀ ನಿಮ್ಮ ಎಂ.ಡಿ.? ನೀವು ಏನಿದ್ದೀರಿ? ಎಂದು ಸ್ಥಳದಲ್ಲಿ ಹಾಜರಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಮೂರ್ತಿ ಅವರನ್ನು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಕಾರವಾಗಿ ಪ್ರಶ್ನಿಸಿದರು.
ಜಿಲ್ಲಾ ಕೇಂದ್ರದಲ್ಲಿರುವ ಬಸ್ ನಿಲ್ದಾಣವೇ ಈ ಸ್ಥಿತಿಯಲ್ಲಿದೆ, ಇನ್ನೂ ಬೇರೆ ಬಸ್ ನಿಲ್ದಾಣಗಳನ್ನು ಹೇಗೆ ಇಟ್ಟುಕೊಂಡಿದ್ದೀರೊ, ನನಗಂತು ಅರ್ಥವಾಗದು. ಬಸ್ ನಿಲ್ದಾದ ಪರಿಸ್ಥಿತಿ ಅತ್ಯಂತ ಕೆಟ್ಟದ್ದಾಗಿದೆ. ನಿಲ್ದಾಣ ಸ್ವಚ್ಛಗೊಳಿಸಿ ಎಷ್ಟು ದಿನವಾಗಿದೆಯೋ, ಸ್ವಚ್ಛತೆಗೆ ನೇಮಿಸಿರುವ ಏಜನ್ಸಿ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ? ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೀವೇನು ನಿಯಂತ್ರಣ ಮಾಡಿದ್ದೀರಿ ಎಂಬುದನ್ನು ಉತ್ತರಿಸಿ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಯನ್ನು ಪ್ರಶ್ನಿಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡರು.
ಅವ್ಯವಸ್ಥೆ ವಿರುದ್ಧ ಸಾರ್ವಜನಿಕರ ದೂರಿನ ಸುರಿಮಳೆ:
ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಭೇಟಿ ಪರಿಶೀಲನೆ ಮಾಡುವುದನ್ನು ಗಮನಿಸಿದ ಸಾರ್ವಜನಿಕರು ಹಾಗೂ ಪ್ರಯಾಣಿಕರು ಬಸ್ ನಿಲ್ದಾಣದ ಹಾಗೂ ಬಸ್ಗಳ ನಿರ್ವಹಣೆಯ ಅವ್ಯವಸ್ಥೆ ಬಗ್ಗೆ ದೂರಿನ ಸುರಿಮಳೆ ಸುರಿಸಿದರು.
Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಹೊಸದುರ್ಗ ಮಾರ್ಗದಲ್ಲಿ ಸಂಚರಿಸಲು ಮುಂಜಾನೆ ಯಾವುದೇ ಬಸ್ ಇಲ್ಲ. ಹಾಸನಕ್ಕೆ ಹೋಗುವ ಸರಿಯಾದ ಸಮಯಕ್ಕೆ ಆಗಮಿಸುವುದಿಲ್ಲ. ನಮಗೆ ಜಿ.ಪಿ.ಎಸ್ ಹಾಗೂ ಬಯೋಮೆಟ್ರಿಕ್ ಆಧಾರಿತ ಹಾಜರಾತಿ ವ್ಯವಸ್ಥೆ ಇದೆ. ಸರಿಯಾದ ಸಂದರ್ಭಕ್ಕೆ ಕರ್ತವ್ಯ ಹಾಜರಾಗದಿದ್ದರೆ, ಅರ್ಧ ದಿನದ ವೇತನ ಕಡಿತಗೊಳಿಸುತ್ತಾರೆ.
ವ್ಯವಸ್ಥಾಪಕರು ಹಾಗೂ ನಿಯಂತ್ರಣಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ, ಸರಿಯಾದ ಕ್ರಮ ಕೈಗೊಳ್ಳದೇ ಉಡಾಫೆ ಉತ್ತರ ನೀಡುತ್ತಾರೆ ಎಂದು ಬಸ್ಗಾಗಿ ಕಾಯುತ್ತಿದ್ದ ಶಿಕ್ಷಕಿಯರು ನ್ಯಾಯಮೂರ್ತಿಗಳ ಕೆ.ಎನ್.ಫಣೀಂದ್ರ ಅವರ ಮುಂದೆ ಅಳಲು ತೊಡಿಕೊಂಡರು.
ಚಿತ್ರದುರ್ಗ ಕೆ.ಎಸ್.ಆರ್.ಟಿ.ಸಿ ವಿಭಾಗದಲ್ಲಿ ಕಾರ್ಯಚರಣೆ ನಡೆಸುವ ನೂತನ ಬಸ್ಗಳ ವಿವರ ಹಾಗೂ ಗ್ರಾಮೀಣ ಭಾಗದ ಬಸ್ ಸಂಚಾರಗಳ ಕುರಿತು ಎಲೆಕ್ಟ್ರಾನಿಕ್ ಮಾಧ್ಯಮದವರೂ ಮಾಹಿತಿ ಕೇಳಿದರೆ, ವಿಭಾಗೀಯ ನಿಯಂತ್ರಣಾಧಿಕಾರಿ ಹಣ ವಸೂಲಿ ಮಾಡಲು ಬಂದಿದ್ದೀರಿ ಎಂದು ಮಾಧ್ಯಮ ಪ್ರತಿನಿಧಿಗಳ ಮೇಲೆ ಸುಳ್ಳು ಆಪಾದನೆ ಮಾಡಿ, ಪೊಲೀಸರನ್ನು ಕರೆಸಿ ಕಚೇರಿಯಿಂದ ಹೊರ ಕಳಿಸುವುದಾಗಿ ಬೆದರಿಸುತ್ತಾರೆ. ಸಾರ್ವಜನಿಕ ಕಳಕಳಿಯಿಂದ ಮಾಧ್ಯಮಗಳು ಬಿತ್ತಿರಿಸಿದ ವರದಿಗಳಿಗೂ ಸಕಾರಾತ್ಮವಾಗಿ ಸ್ಪಂದಿಸುವಿದಿಲ್ಲ ಎಂದು ನ್ಯೂಸ್ ಫಸ್ಟ್ ವರದಿಗಾರ ರಾಘವೇಂದ್ರ ದೇಸಾಯಿ ಈ ವೇಳೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ಗಮನ ಸೆಳೆದರು.
Also Read: ಬಿಜೆಪಿಗೆ ನೂತನ ಮಂಡಲ ಅಧ್ಯಕ್ಷರ ಆಯ್ಕೆ
ಬಸ್ಗಳ ಕೊರತೆ, ನಿಲ್ದಾಣಗಳಲ್ಲಿ ಮೊಬೈಲ್ ಕಳ್ಳತನ, ಪಾರ್ಕಿಂಗ್ ಸಮಸ್ಯೆ, ಸ್ವಚ್ಚತೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ನ್ಯಾಯಮೂರ್ತಿಗಳಲ್ಲಿ ಸಾರ್ವಜನಿಕರು ದೂರು ನೀಡಿದರು. ಈ ಕುರಿತು ನ್ಯಾಯಮೂರ್ತಿಗಳು ಪ್ರಶ್ನಿಸಿದರೆ ವಿಭಾಗೀಯ ನಿಯಂತ್ರಣಾಧಿಕಾರಿ ಅಸಮರ್ಪಕ ಉತ್ತರಗಳನ್ನು ನೀಡಿದರು.
ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಪೊಲೀಸ್ ಉಪಠಾಣೆ, ಮಹಿಳಾ ವಿಶ್ರಾಂತಿ ಗೃಹ, ಮಾತೃ ಮನೆ, ಪರುಷರ ಶೌಚಾಲಯ, ಹೋಟೆಲ್ ಸೇರಿದಂತೆ ಬಸ್ ನಿಲ್ದಾಣದ ಆವರಣದಲ್ಲಿ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಸಂಚರಿಸಿ ವೀಕ್ಷಣೆ ನಡೆಸಿದರು.
ಈ ವೇಳೆ ಡ್ರೈನೇಜ್ ತುಂಬಿ ಹರಿಯುತ್ತಿರುವುದನ್ನು ಗಮಸಿದ ಅವರು, ವಿಭಾಗೀಯ ನಿಯಂತ್ರಣಾಧಿಕಾರಿ ಪ್ರತಿನಿತ್ಯವೂ ವೀಕ್ಷಣೆ ನಡೆಸಿ, ಕ್ರಮ ಕೈಗೊಂಡಿದ್ದರೆ, ಇಷ್ಟೊಂದು ಅವ್ಯವಸ್ಥೆ ಇರುತ್ತಿರಲಿಲ್ಲ. ಕಣ್ಣುಮುಚ್ಚಿ ಕುಳಿತ್ತಿದ್ದೀರಿ, ಮೆಲ್ನೋಟಕ್ಕೆ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ನಾಳೆ ಸಂಜೆಯ ಒಳಗೆ ಮೊತ್ತೊಮ್ಮೆ ಬಸ್ ನಿಲ್ದಾಣಕ್ಕೆ ಭೇಟಿ ನೀಡುತ್ತೇನೆ. ನಿಲ್ದಾಣದ ಅಚ್ಚುಕಟ್ಟಾಗಿ ಇರದಿದ್ದರೆ, ನಿಮ್ಮನ್ನೂ ಕೆಲಸದಿಂದ ತೆಗೆಯಲು ಸರ್ಕಾರಕ್ಕೆ ಬರೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಹಾಜರಾತಿ ವಹಿಯಲ್ಲಿ ಸಹಿ ಇಲ್ಲ…
ಬಸ್ ನಿಲ್ದಾಣದಲ್ಲೇ ಇರುವ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಗೆ ಭೇಟಿ ನೀಡಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಹಾಜರಾತಿ ಪುಸ್ತಕ, ಚಲನವಲನ ವಹಿ, ನಗದು ಘೋಷಣಾ ವಹಿಗಳನ್ನು ಪರಿಶೀಲನೆ ನೀಡುವಂತೆ ಸೂಚಿಸಿದರು.
ಆದರೆ ಇನ್ನೂ ಸಿಬ್ಬಂದಿಗಳು ಕಚೇರಿ ಆಗಮಿಸಿರದ ಕಾರಣ, ಹಾಜರಾತಿ ಪುಸ್ತಕ ಮಾತ್ರ ನ್ಯಾಯಮೂರ್ತಿಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಚೇರಿ ಮುಖ್ಯಸ್ಥರಾದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಮೂರ್ತಿ ಜ.07 ರಿಂದ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದೇ ಇರುವುದು ಬೆಳಕಿಗೆ ಬಂದಿತು.
Also Read: ಕವಾಡಿಗರಹಟ್ಟಿಗೆ ಉಪಲೋಕಾಯುಕ್ತರ ಭೇಟಿ | ನಿವೇಶರಹಿತರ ಪಟ್ಟಿ ಮಾಡಿ
ಈ ಬಗ್ಗೆ ವಿವರಣೆ ನೀಡುವಂತೆ ನ್ಯಾಯಮೂರ್ತಿಗಳು ಪ್ರಶ್ನಿಸಿದಾಗ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಮೂರ್ತಿ ಕೇಂದ್ರ ಕಚೇರಿಯ ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ಪ್ರತಿದಿನ ಲಾಗಿನ್ ಆಗಿ ಹಾಜರಾತಿ ಹಾಕಿರುವುದಾಗಿ ಸಬೂಬು ಹೇಳಿದರು.
ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ಹಾಜರಾತಿ ಪಡೆಯುವ ವ್ಯವಸ್ಥೆ ಇದ್ದ ಮೇಲೆ ಈ ಹಾಜರಾತಿ ಪುಸ್ತಕ ಕಚೇರಿಯಲ್ಲೇಕೆ ಇಟ್ಟಿದ್ದೀರಿ? ಕೆ.ಸಿ.ಎಸ್.ಆರ್ ನಿಯಮಗಳನ್ನು ಓದಿದ್ದೀರಾ? ಇಲ್ಲ ಸಲ್ಲದ ಸಬೂಬು ಹೇಳದಂತೆ ಎಚ್ಚರಿಕೆ ನೀಡಿದರು.
ಉಪಲೋಕಾಯುಕ್ತರ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಮೂರ್ತಿ “ಮೊದಲೇ ಚಿತ್ರದುರ್ಗ ವಿಭಾಗಕ್ಕೆ ವರ್ಗಾವಣೆ ಮೇಲೆ ಬರದಂತೆ ಹಲವರು ತಿಳಿಸಿದ್ದರು. ಯಾರು ಬರದಿದ್ದ ಕಾರಣಕ್ಕೆ ನನಗೆ ಹಾಕಿದ್ದಾರೆ.
ನಾನು ಬಂದ ಮೇಲೆ ಚಿತ್ರದುರ್ಗ ವಿಭಾಗದಲ್ಲಿ ಹಲವಾರು ಸುಧಾರಣೆ ತಂದಿದ್ದೇನೆ. ಆದರೂ ನನ್ನದು ತಪ್ಪಿದ್ದರೆ, ನ್ಯಾಯಮೂರ್ತಿಗಳು ಕ್ರಮ ತೆಗೆದುಕೊಳ್ಳುವಂತೆ ದೈನ್ಯದಿಂದ ಕೈಮುಗಿದು ಬೇಡಿ ಕ್ಷೆಮೆ ಕೋರಿದರು.
Also Read: ಮಲ್ಲಾಪುರ ಕೆರೆ ನಿರ್ಲಕ್ಷ್ಯ | ಸುಮೋಟೊ ಕೇಸ್ | ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ
ಲೋಕಾಯುಕ್ತ ಡಿ.ವೈ.ಎಸ್.ಪಿ ಮೃತ್ಯುಂಜಯ ಅವರಿಗೆ ಚಲನವಲನ ವಹಿ, ನಗದು ಘೋಷಣಾ ವಹಿಗಳನ್ನು ಪರಿಶೀಲನೆ ನೀಡಿ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಸೂಚಿಸಿದರು.
ಉಪ ಲೋಕಾಯುಕ್ತ ಭೇಟಿ ವೇಳೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ.ಸಿಇಓ ಎಸ್.ಜೆ.ಸೋಮಶೇಕರ್, ಲೋಕಾಯುಕ್ತದ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್ ಹಾಗೂ ಜಿ.ವಿ. ವಿಜಯಾನಂದ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಿ. ಎಂ. ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾ.ಎಂ.ವಿಜಯ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ್ ಉಪಸ್ಥಿತರಿದ್ದರು.