CHITRADURGA NEWS | 20 AUGUST 2026
ಚಿತ್ರದುರ್ಗ: ಮಧ್ಯ ಕರ್ನಾಟಕದಲ್ಲಿ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿಯವರ ಮಹಿಮೆ ಅಪಾರವಾಗಿದ್ದು, ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆ ಹಾಗೂ ದಬ್ಬಾಳಿಕೆ ವಿರುದ್ಧ ಹೋರಾಡಿದ ಅವರು ಜನರ ಕಷ್ಟಗಳಿಗೆ ಸ್ಪಂದಿಸಿ ಐದು ಕೆರೆಗಳನ್ನು ನಿರ್ಮಿಸಿದ್ದರು ಎಂದು ಪತ್ರಕರ್ತ ಜಡೇಕುಂಟೆ ಮಂಜುನಾಥ್ ತಿಳಿಸಿದರು.
ಇದನ್ನೂ ಓದಿ: ಪತ್ರಕರ್ತರಿಗೆ ಮೀಡಿಯಾ ಕಿಟ್ | ಅರ್ಜಿ ಆಹ್ವಾನ
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಿರುವ ‘ಅನುಭಾವ ಶ್ರಾವಣ: ಶರಣರ ಚಿಂತನ ಮಾಲಿಕೆ’ಯ ಅಂಗವಾಗಿ ಮಂಗಳವಾರ ಬಸವೇಶ್ವರ ಸಭಾಂಗಣದಲ್ಲಿ ನಡೆದ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿಗಳು ಹಾಗೂ ನಾಗಗೊಂಡನಹಳ್ಳಿ ಶ್ರೀ ಚೆಲುಮೆರುದ್ರಸ್ವಾಮಿಗಳ ಚಿಂತನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂದಿನ ಕಾಲದಲ್ಲಿ ಕೆಲಸಗಾರರ ನಡುವಿನ ತಾರತಮ್ಯ ನಿವಾರಿಸಲು ತಿಪ್ಪೇಸ್ವಾಮಿಯವರು ‘ಮಾಡಿದಷ್ಟು ನೀಡು ಭಿಕ್ಷೆ’ ಎಂಬ ಆಶೀರ್ವಾದದ ಮೂಲಕ ದುಡಿಮೆಗೆ ತಕ್ಕ ಪ್ರತಿಫಲ ದೊರೆಯುವಂತೆ ಮಾಡಿದ್ದರು. ಹೊಂಗೆ, ಕೆರೆಗಳ ನಿರ್ಮಾಣ ಸೇರಿದಂತೆ ಜನೋಪಯೋಗಿ ಕಾರ್ಯಗಳ ಮೂಲಕ ಜನರ ಬದುಕಿಗೆ ಆಸರೆಯಾಗಿದ್ದರು ಎಂದು ಹೇಳಿದರು.
ಹಾವು ಕಡಿದ ಮಗುವನ್ನು ಬದುಕಿಸಿದ್ದು, ಕುಷ್ಟರೋಗ ನಿರ್ಮೂಲನೆ ಹಾಗೂ ಮೂಕನಿಗೆ ಮಾತು ಬರುವಂತೆ ಮಾಡಿದ್ದು ಸೇರಿದಂತೆ ಹಲವು ಪವಾಡ ಸದೃಶ ಘಟನೆಗಳಿಂದ ತಿಪ್ಪೇಸ್ವಾಮಿಯವರ ಹೆಸರು ಮನೆಮಾತಾಗಿದೆ. ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ಜಾತ್ರೆಯು ಈ ಭಾಗದ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿದೆ. ಹೈದರಾಲಿಯವರು ಗಂಡು ಮಗುವಿಗಾಗಿ ನಾಯಕನಹಟ್ಟಿಗೆ ಬಂದು ಹರಕೆ ಸಲ್ಲಿಸಿದ್ದ ಇತಿಹಾಸವೂ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: ಹರ್ ಘರ್ ಜಲ್ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ 4 ದಿನಗಳ ಕಾಲಾವಕಾಶ | ಜಿ.ಪಂ. ಸಿಇಓ
ಚಳ್ಳಕೆರೆ ಪ್ರಾಂತ್ಯದವರಾದ ಶ್ರೀ ಚೆಲುಮೆರುದ್ರಸ್ವಾಮಿಯವರು ಭೀಕರ ಬರಗಾಲದ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಚಿಲುಮೆ ತೋಡಿಸಿದಾಗ ನೀರು ದೊರೆತಿತ್ತು. ಇಂತಹ ಪುಣ್ಯಪುರುಷರ ಸಾಧನೆಗಳು ಅದ್ವಿತೀಯವಾಗಿವೆ ಎಂದು ಮಂಜುನಾಥ್ ಹೇಳಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ತಿಪ್ಪೇಸ್ವಾಮಿಯವರ ‘ಮಾಡಿದಷ್ಟು ನೀಡು ಭಿಕ್ಷೆ’ ಎಂಬ ಕಾಯಕ ತತ್ವ ಪವಾಡದ ರೂಪದಲ್ಲಿ ಕಂಡುಬಂದಿದೆ. ಶರಣರ ವಾಣಿ ಜನರಿಗೆ ದಾರಿದೀಪವಾಗಬೇಕು. ತಿಪ್ಪೇಸ್ವಾಮಿಯವರು ಶರಣ ಪರಂಪರೆಯ ಅನರ್ಘ್ಯ ರತ್ನವಾಗಿದ್ದಾರೆ ಎಂದರು.
ಶ್ರೀ ಬಸವ ಬೃಂಗೇಶ್ವರ ಸ್ವಾಮೀಜಿ ಮಾತನಾಡಿ, ತಿಪ್ಪೇಸ್ವಾಮಿಯವರ ಆಧ್ಯಾತ್ಮಿಕ ಸಾಧನೆ ಹಾಗೂ ಜನರ ಕಷ್ಟ ನಿವಾರಣೆಗೆ ಸಲ್ಲಿಸಿದ ಸೇವೆ ಸ್ಮರಣೀಯ. ಮಹಾತ್ಮರ ಸಮಾಧಿಯಲ್ಲಿ ತಪಸ್ಸಿನ ಪ್ರಭಾವ ಜೀವಂತವಾಗಿರುತ್ತದೆ. ಮನುಷ್ಯ ಬಾಗುವುದನ್ನು ಕಲಿತರೆ ಭವಬಾಧೆಗಳು ದೂರವಾಗುತ್ತವೆ ಎಂದು ಹೇಳಿದರು.
ಇದನ್ನೂ ಓದಿ: ಭದ್ರಾ ಕಾಡಾ ವ್ಯಾಪ್ತಿಗೆ ಚಿತ್ರದುರ್ಗ ಸೇರ್ಪಡೆಗೆ ನೀರಾವರಿ ಹೋರಾಟ ಸಮಿತಿ ಆಗ್ರಹ
ಗುರುಮಠಕಲ್ನ ಶ್ರೀ ಶಾಂತವೀರ, ಗುರುಮುರುಘರಾಜೇಂದ್ರ ಸ್ವಾಮೀಜಿ, ವಿಶ್ವನಾಥ ದೇವರು ಮಾತನಾಡಿದರು. ಗೌರಮ್ಮ ತಿಪ್ಪೇಸ್ವಾಮಿಯವರ ಕುರಿತ ಗೀತೆ ಹಾಡಿದರು. ಕೊಲ್ಲಾಪುರದ ಶ್ರೀ ಶಿವಾನಂದ ಸ್ವಾಮೀಜಿ ವಚನ ಗೀತೆ ಹಾಡಿದರು. ಉಮೇಶ್ ಪತ್ತಾರ್ ವಚನ ಪ್ರಾರ್ಥನೆ ನೆರವೇರಿಸಿದರು. ಶಿಕ್ಷಕ ಬಿ.ಸಿ. ಪ್ರಕಾಶ್ ಸ್ವಾಗತಿಸಿದರು. ಶಿಕ್ಷಕ ನಾಗಾನಾಯ್ಕ ನಿರೂಪಿಸಿದರು. ಎಸ್.ಎಂ. ಪುಟ್ಟಸ್ವಾಮಿ ವಂದಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

