CHITRADURGA NEWS | 9 APRIL 2024
ಚಿತ್ರದುರ್ಗ: ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸುವುದು ಚುನಾವಣೆ ಆಯೋಗದ ಮುಖ್ಯ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಚುನಾವಣೆಗೆ ಸಂಬಂಧಿಸಿದ ಅತಿ ಸೂಕ್ಷ್ಮ ವಿಷಯಗಳು ಸೇರಿ ಪ್ರತಿಯೊಂದು ಅಂಶಗಳನ್ನು ಜಾಗರೂಕತೆಯಿಂದ ಗಮನಿಸಲಾಗುತ್ತಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಸಾಮಾನ್ಯ ವೀಕ್ಷಕರಾದ ಮನೋಹರ ಮರಂಡಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣೆ ವೆಚ್ಚದ ಕುರಿತು ಅಭ್ಯರ್ಥಿಗಳು ಹಾಗೂ ಅವರ ಏಜೆಂಟರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಹಾಗೂ ವೇದಿಕೆ ಕಲ್ಪಿಸಿಕೊಡಲಾಗುವುದು. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಿದ್ದಂತೆ. ಚುನಾವಣೆ ಸಂಬಂಧವಾಗಿ ಪ್ರತಿಯೊಂದು ಕಾರ್ಯಗಳನ್ನು ಪಾರದರ್ಶಕವಾಗಿ ನಿರ್ವಹಿಸಲಾಗುತ್ತಿದೆ ಎಂದರು.
ಚುನಾವಣೆಗೆ ಸಂಬಂಧಿಸಿದ ಪ್ರತಿಯೊಂದು ಅಂಶಗಳನ್ನು ಸೂಕ್ಷ್ಮವಾಗಿ ವೀಕ್ಷಣೆ ಮಾಡಲಾಗುವುದು. ಪ್ರತಿ ಅಭ್ಯರ್ಥಿಗಳು ಚುನಾವಣೆ ವೆಚ್ಚಗಳಿಗೆ ಸಂಬಂಧಿಸಿದ ನೀಡುವ ನಿರ್ದೇಶನಗಳನ್ನು ತಪ್ಪದೇ ಪಾಲನೆ ಮಾಡಬೇಕು. ಮತದಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಅಧಿಕಾರಿಗಳ ಪ್ರತಿಯೊಂದು ನಡೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ 24 ಗಂಟೆಯೂ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಲಾಗಿದೆ.
ಕ್ಲಿಕ್ ಮಾಡಿ ಓದಿ: ಯುಗಾದಿಯಲ್ಲಿ 4 ರಾಶಿಗೆ ರಾಜಯೋಗ | ಹಬ್ಬದ ಸಂಭ್ರಮದಲ್ಲಿ ಜೊತೆಯಾಗಲಿದೆ ಅದೃಷ್ಟ
ಮುಖ್ಯವಾದ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಅವುಗಳನ್ನು ಸಹ ಕಂಟ್ರೋಲ್ ರೂಂನಿಂದಲೇ ವೀಕ್ಷಣೆ ಮಾಡಬಹುದಾಗಿದೆ. ಚುನಾವಣೆ ವೆಚ್ಚ ದೃಷ್ಟಿಯಿಂದ ರಾಜಕೀಯ ಮುಖಂಡರು ಹಾಗೂ ಸ್ಟಾರ್ ಪ್ರಚಾರಕರ ಆಗಮನದ ಮೇಲೂ ಗಮನ ಇರಿಸಲಾಗಿದೆ. ಸಿ-ವಿಜಿಲ್ ಮೂಲಕವೂ ಮಾದರಿ ನೀತಿ ಸಂಹಿತೆ ಉಲಂಘನೆ ದೂರು ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಚುನಾವಣೆಗೆ ನಾಮಪತ್ರ ಸಲ್ಲಿಸಿದ ದಿನದಿಂದಲೇ ವೆಚ್ಚದ ವಹಿಗಳನ್ನು ನಿರ್ವಹಿಸಬೇಕು. ಈ ವಹಿಗಳನ್ನು ಮೂರು ಬಾರಿ ನಿಗದಿ ಪಡಿಸಿದ ದಿನಾಂಕಗಳಂದು ಪರಿಶೀಲನೆ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರವಾರು ಸಹಾಯಕ ಚುನಾವಣೆ ಅಧಿಕಾರಿಗಳ ನೇತೃತ್ವದಲ್ಲಿ ಚುನಾವಣೆ ವೆಚ್ಚದ ಶ್ಯಾಡೋ ರಿಜಿಸ್ಟರ್ ವಹಿ ದಾಖಲಿಸಲಾಗುತ್ತದೆ. ಪರಿಶೀಲನೆ ವೇಳೆ ಅಭ್ಯರ್ಥಿಗಳ ಚುನಾವಣೆ ವೆಚ್ಚದ ವಹಿಗಳನ್ನು ಇದರೊಂದಿಗೆ ತಾಳೆ ನೋಡಲಾಗುತ್ತದೆ.
ಪ್ರತಿಯೊಬ್ಬರು ಚುನಾವಣೆ ಆಯೋಗ ನೀಡಿದ ನಿರ್ದೇಶನಗಳಿಗೆ ಬದ್ದರಾಗಿರಬೇಕು. ಚುನಾವಣೆ ಪ್ರಚಾರಕ್ಕಾಗಿಯೇ ಪ್ರತ್ಯೇಕ ಬ್ಯಾಂಕ್ ಖಾತೆ ತೆರದು ಅದರಿಂದಲೇ ಪ್ರಚಾರದ ವೆಚ್ಚಗಳನ್ನು ಭರಿಸಬೇಕು.
ಕ್ಲಿಕ್ ಮಾಡಿ ಓದಿ: ಮೇ 14 ರಿಂದ ಉಚ್ಚಂಗಿ ಯಲ್ಲಮ್ಮ ಜಾತ್ರಾ ಮಹೋತ್ಸವ | ದೇವಿಗೆ ಹೊಸ ಬೆಳ್ಳಿ ಮುಖಪದ್ಮ
ಅಭ್ಯರ್ಥಿಗಳ ಪ್ರತಿದಿನ ಚುನಾವಣೆ ವೆಚ್ಚದ ಮಾಹಿತಿಗಳನ್ನು ಬಿಳಿ ವಹಿಯಲ್ಲಿ ದಾಖಲಿಸಬೇಕು. ನಗದು ರೀತಿಯ ವೆಚ್ಚಗಳನ್ನು ತಿಳಿ ಗುಲಾಬಿ ಬಣ್ಣದ ವಹಿಯಲ್ಲಿ ನಿರ್ವಹಿಸಬೇಕು. ಹಳದಿ ಬಣ್ಣದ ವಹಿಯಲ್ಲಿ ಬ್ಯಾಂಕ್ ವಹಿವಾಟಿನ ಮಾಹಿತಿ ದಾಖಲಿಸಬೇಕು. ಚುನಾವಣೆ ವೆಚ್ಚದ ಪರಿಶೀಲನೆ ವೇಳೆ ಆ ದಿನದವರೆಗಿನ ಚುನಾವಣೆ ವೆಚ್ಚವನ್ನು ದಾಖಲಿಸಿ ಪರಿಶೀಲನೆಗೆ ನೀಡಬೇಕು.ಅಭ್ಯರ್ಥಿಗಳು ಚುನಾವಣೆಯಲ್ಲಿ ಉಚಿತ ಕೊಡುಗೆ, ಹಣ ಹೆಂಡಗಳನ್ನು ಹಂಚುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದಕ್ಕೆ ಎಲ್ಲಾ ಅಭ್ಯರ್ಥಿಗಳು ಬದ್ದವಾಗಿರಬೇಕು ಎಂದರು.
ಸಹಾಯಕ ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಸುವ ಚುನಾವಣೆ ಪ್ರಚಾರದ ವೆಚ್ಚಗಳನ್ನು ಶ್ಯಾಡೋ ರಿಜಿಸ್ಟರ್ನಲ್ಲಿ ತಪ್ಪದೇ ನಮೂದಿಸಬೇಕು. ಕಾಲ ಕಾಲಕ್ಕೆ ವಹಿಗಳನ್ನು ಪರಿಶೀಲನೆ ಮಾಡಲಾಗುವುದು ಎಂದು ವೆಚ್ಚ ವೀಕ್ಷಕರಾದ ಪ್ರಜಕ್ತ ಪಿ ಠಾಕೂರ್ ಹೇಳಿದರು.
ಕ್ಲಿಕ್ ಮಾಡಿ ಓದಿ: ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ | ದೇಶದ ಅಭಿವೃದ್ಧಿ ದೃಷ್ಟಿಯಿಂದ ಎರಡು ಪಕ್ಷಗಳ ಸಮಾಗಮ
ಅಭ್ಯರ್ಥಿಗಳು ಚುನಾವಣೆ ಪ್ರಚಾರದ ಅನುಮತಿಗಾಗಿ ಸುವಿಧಾ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬೇಕು. ವಿಧಾನ ಸಭಾ ಕ್ಷೇತ್ರವಾರು ದೈನಂದಿನ ಚುನಾವಣೆ ವೆಚ್ಚದ ನಿರ್ವಹಣೆ ಆಯಾ ತಾಲ್ಲೂಕು ಕಚೇರಿಗಳಲ್ಲಿ ಸ್ಥಾಪಿಸಿರುವ ಸಹಾಯಕ ಚುನಾವಣಾ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಬಹುದು. ಪ್ರತಿ ಅಭ್ಯರ್ಥಿ ಇಡೀ ಚುನಾವಣೆ ಪ್ರಚಾರದಲ್ಲಿ ರೂ. 10 ಸಾವಿರ ಹಣವನ್ನು ಮಾತ್ರ ನಗದು ರೂಪದಲ್ಲಿ ಬಳಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಸಭೆಯಲ್ಲಿ ತಿಳಿಸಿದರು.
ಯೂಟ್ಯೂಬ್, ಫೇಸ್ಬುಕ್, ವ್ಯಾಟ್ಸಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷ, ಧರ್ಮ, ಜಾತಿ, ವ್ಯಕ್ತಿಗಳಿಗೆ ಅವಹೇಳನ ಮಾಡಿ ಮಾಡುವ ಪೋಸ್ಟ್ಗಳು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ. ಹಾಗಾಗಿ ಇದರ ಬಗ್ಗೆ ಎಚ್ಚರ ವಹಿಸಬೇಕು. ದೇವಾಲಯ, ಚರ್ಚ್, ಮಸೀದಿ, ಮಠ ಸೇರಿದಂತೆ ಯಾವುದೇ ಧಾರ್ಮಿಕ ಕೇಂದ್ರಗಳನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸುವಂತಿಲ್ಲ. ಇದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನಿರ್ಮಿಸಲ್ಪಟ್ಟ ಸರ್ಕಾರಿ ಭವನಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಬಾರದು ಅಭ್ಯರ್ಥಿಗಳಿಗೆ ಹಾಗೂ ಏಜೆಂಟರಿಗೆ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಸಲಹೆ ನೀಡಿದರು.
ಕ್ಲಿಕ್ ಮಾಡಿ ಓದಿ: ಲೋಕಸಭಾ ಚುನಾವಣೆಗೆ ಚಿಹ್ನೆ ಹಂಚಿಕೆ | ಯಾರಿಗೆ ಯಾವುದು ಸಿಕ್ತು | ಇಲ್ಲಿದೆ ನೋಡಿ ಪೂರ್ಣ ವಿವರ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಚುನಾವಣಾ ವೆಚ್ಚ ಉಸ್ತುವಾರಿ ಕೋಶದ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಡಿ.ಆರ್.ಮಧು ಸೇರಿದಂತೆ ಚಿತ್ರದುರ್ಗ ಲೋಕಸಭಾ ಚುನಾವಣೆಗ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಏಜೆಂಟರು ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number