CHITRADURGA NEWS | 12 JULY 2024
ಚಿತ್ರದುರ್ಗ: ಒಬ್ಬರು ಹಾಲಿ ಹಾಗೂ ಮತ್ತೊಬ್ಬರು ನಿವೃತ್ತ ಮುಖ್ಯ ಎಂಜಿನಿಯರ್. ಆದರೆ ಈ ಇಬ್ಬರ ಮನೆಯಲ್ಲಿ ಪತ್ತೆಯಾಗಿದ್ದು ಮಾತ್ರ ಇವರ ಆದಾಯಕ್ಕಿಂತ ಶೇ 200ರಷ್ಟು ಹೆಚ್ಚು ಆಸ್ತಿ !.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಸಣ್ಣ ನೀರಾವರಿ ಇಲಾಖೆ ನಿವೃತ್ತ ಮುಖ್ಯ ಎಂಜಿನಿಯರ್ ಎಂ.ರವೀಂದ್ರಪ್ಪ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಕೆ.ಜಿ.ಜಗದೀಶ್ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ (Lokayukta raid) ನಡೆಸಿದಾಗ ಮನೆ, ಆಸ್ತಿ ಹಾಗೂ ಚಿನ್ನಾಭರಣ ಪತ್ತೆಯಾಗಿದೆ.
ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ 12 ಅಧಿಕಾರಿಗಳ ತಂಡ ಹಿರಿಯೂರು ತಾಲ್ಲೂಕಿನ ಧರ್ಮಪುರ ಸಮೀಪದ ಮುಂಗುಸುವಳ್ಳಿಯ ಎಂ.ರವೀಂದ್ರಪ್ಪ ಅವರ ತೋಟದ ಮನೆ, ಹಸು ಸಾಕಾಣಿಕೆ ಶೆಡ್, ಐಮಂಗಲ ಬಳಿಯ ಬಾಟಲಿ ತಯಾರಿಕಾ ಕಾರ್ಖಾನೆಯಲ್ಲಿ ಪರಿಶೀಲನೆ ನಡೆಸಿತು. ಬೆಂಗಳೂರಿನ ಅವರ ಪುತ್ರನ ನಿವಾಸ, ನಗರದಲ್ಲಿರುವ ಅವರ ಮಾವ ಪರಮೇಶ್ವರಪ್ಪ ಅವರ ನಿವಾಸದ ಮೇಲೂ ದಾಳಿ ನಡೆಸಿದರು.
ಮೂರು ವರ್ಷಗಳಿಂದ ನಿವೃತ್ತರಾಗಿರುವ ರವೀಂದ್ರಪ್ಪ ಅವರಿಗೆ ಬೆಂಗಳೂರು, ಮೈಸೂರು ತುಮಕೂರಿನಲ್ಲಿ 6 ಮನೆ, 4 ನಿವೇಶನ, 48 ಎಕರೆ ಕೃಷಿ ಜಮೀನು, 1.3 ಕೆ.ಜಿ ಚಿನ್ನಾಭರಣ, ₹ 1 ಕೋಟಿ ಮೌಲ್ಯದ ಕಾರು, ಟ್ರ್ಯಾಕ್ಟರ್ಗಳು ಪತ್ತೆಯಾಗಿವೆ. ಮನೆಗಳಲ್ಲಿರುವ ಪೀಠೋಪಕರಣಗಳ ಮೌಲ್ಯವೇ ₹ 55 ಲಕ್ಷ ಇದೆ. ಒಟ್ಟು ₹ 5.50 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು.
ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಜಗದೀಶ್ ಅವರ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಬಂದಾಗ ಚಿತ್ರದುರ್ಗ ನಗರದ ನವೀನ್ ರೆಸಿಡೆನ್ಸಿ ಹೋಟೆಲ್ ಸಮೀಪದ ಅವರ ನಿವಾಸಕ್ಕೆ ಬೀಗ ಹಾಕಲಾಗಿತ್ತು. ಕುಟುಂಬ ಸದಸ್ಯರು ಬರುವವರೆಗೂ ಕಾದಿದ್ದರು. ಸಂಜೆ ಕುಟುಂಬ ಸದಸ್ಯರು ಬಂದಾಗ ಪೊಲೀಸರು ಪರಿಶೀಲನಾ ಕಾರ್ಯ ಆರಂಭಿಸಿದರು.
ಕ್ಲಿಕ್ ಮಾಡಿ ಓದಿ: Car accident: ಹೆದ್ದಾರಿಯಲ್ಲಿ ಕಾರು ಅಪಘಾತ | ಕೃಷಿ ಪತ್ತಿನ ಸಹಕಾರ ಸಂಘದ ಮೂವರು ಮೃತ
ಬಿಬಿಎಂಪಿಯಲ್ಲಿ ಅಧೀಕ್ಷಕ ಎಂಜಿನಿಯರ್ ಆಗಿದ್ದ ಜಗದೀಶ್ 10 ದಿನಗಳ ಹಿಂದಷ್ಟೇ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಜಗದೀಶ್ ಅವರಿಗೆ ಸೇರಿದ 7 ಮನೆಗಳು, 5 ನಿವೇಶನ, 38 ಎಕರೆ ಕೃಷಿ ಭೂಮಿ ಸೇರಿ ₹ 5 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಈ ಇಬ್ಬರ ಆಸ್ತಿಯ ಮೌಲ್ಯ ತಮ್ಮ ಆದಾಯಕ್ಕಿಂತ ಶೇ 200ರಷ್ಟು ಹೆಚ್ಚಾಗಿದೆ. ಪರಿಶೀಲನಾ ಕಾರ್ಯ ಮುಂದುವರಿದಿದೆ ಎಂದು ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number