CHITRADURGA NEWS | 16 JANUARY 2024
ಚಿತ್ರದುರ್ಗ: ಚಿತ್ರದುರ್ಗ ನಗರದ ಕೂಗಳತೆ ದೂರದಲ್ಲಿರುವ ಆಡುಮಲ್ಲೇಶ್ವರ ಮೃಗಾಲಯದಲ್ಲಿ ಕರಡಿಗಳ ಪುಟ್ಟ ಸಂಸಾರವಿದೆ.
ಆಡುಮಲ್ಲೇಶ್ವರ ಮೃಗಾಲಯದ ಇತಿಹಾಸದಲ್ಲೇ ಮೊದಲು ಎನ್ನುವಂತೆ ಇಲ್ಲಿ ಕರಡಿಯೊಂದು ಎರಡು ಮರಿಗಳಿಗೆ ಜನ್ಮ ನೀಡಿತ್ತು.


1987ರಿಂದ ಆಡುಮಲ್ಲೇಶ್ವರದಲ್ಲಿ ಮೃಗಾಲಯ ಇದ್ದರೂ, ಕರಡಿಯೊಂದು ಮರಿಗಳಿಗೆ ಜನ್ಮ ನೀಡಿದ ದಾಖಲೆ ಇಲ್ಲಿಲ್ಲ. ಆದರೆ, 2022 ಡಿಸೆಂಬರ್ 24ರಲ್ಲಿ ಸೀನಮ್ಮ ಎನ್ನುವ ಕರಡಿ ಎರಡು ಮರಿಗಳಿಗೆ ಜನ್ಮ ನೀಡಿದ್ದು ವಿಶೇಷವಾಗಿದೆ.
ಇದನ್ನೂ ಓದಿ: ಆಡುಮಲ್ಲೇಶ್ವರ ಮೃಗಾಲಯದಲ್ಲಿ ಜನಿಸಿದ ಮುದ್ದಾದ ಕರಡಿಮರಿಗಳಿಗೆ ಚಂದದ ನಾಮಕರಣ
ಆ ಮರಿಗಳನ್ನು ಮೃಗಾಲಯದ ಸಿಬ್ಬಂದಿಗಳು ತಾಯಿ ಕರಡಿಯೊಂದಿಗೆ ಲಾಲನೆ, ಪಾಲನೆ ಮಾಡಿದ್ದಾರೆ. ಎರಡು ಮರಿಗಳಿಗೆ ಭೂಮಿ ಹಾಗೂ ಭಾನು ಎಂದು ನಾಮಕರಣವನ್ನೂ ಮಾಡಿದ್ದರು. ಈಗ ಬೆಳೆದು ದೊಡ್ಡದಾಗಿಬಿಟ್ಟಿವೆ.
ಕರಡಿಗಳ ಆವರಣದಲ್ಲಿ ಈಗ ಎರಡು ಮರಿ ಕರಡಿಗಳೊಂದಿಗೆ ಹೆತ್ತಮ್ಮ ಕರಡಿ ಸೀನಮ್ಮ ಹಾಗೂ ಜನ್ಮ ಕೊಟ್ಟ ತಂದೆಯ ಸ್ಥಾನದಲ್ಲಿರುವ ಕರಡಿ ನಿಖಿಲ್ ಮಾತ್ರ ಇವೆ.
ಮೃಗಾಲಯವೇ ಕರಡಿಯ ಪರಿವಾರಕ್ಕೆ ಆಸರೆ ಒದಗಿಸದಂತೆ ಈ ಆವರಣ ನಿರ್ಮಾಣವಾಗಿದೆ.
ಕರಡಿಗಳ ಮುದ್ದಾದ ಗುದ್ದಾಟದ ವೀಡಿಯೋ ಇಲ್ಲಿದೆ ನೋಡಿ:
ಕೆಲ ದಿನಗಳ ಕಾಲ ಎಲ್ಲ ಕರಡಿಗಳನ್ನು ಒಟ್ಟಿಗೆ ಸಾರ್ವಜನಿಕರ ವೀಕ್ಷಣೆಗೆ ಬಿಡುತ್ತಿರಲಿಲ್ಲ. ಆದರೆ, ಆಗಾಗ ಒಟ್ಟಿಗೆ ಬಿಟ್ಟಾಗ ಇಡೀ ಸಂಸಾರವೇ ಕಣ್ಣಿಗೆ ಕಾಣಿಸುತ್ತದೆ. ಇದು ವೀಕ್ಷಕರಿಗೆ ಹಬ್ಬ.
ಯಾಕೆ ಅಂತಿರಾ, ಎರಡು ಮುದ್ದಾದ ಕರಡಿ ಮರಿಗಳ ಆಟ, ತುಂಟಾಟ, ಚಿನ್ನಾಟ ನೋಡುತ್ತಾ ತಾಯಿ ಹಾಗೂ ತಂದೆ ಕರಡಿಗಳು ಕಾಲ ಕಳೆಯುತ್ತಿವೆ.
ಭಾನು, ಭೂಮಿ (ಮರಿ ಕರಡಿಗಳು), ಸೀನಮ್ಮ ಹಾಗೂ ನಿಖಿಲ್(ತಂದೆ ತಾಯಿ ಕರಡಿಗಳು) ಒಟ್ಟಿಗೆ ಕಾಣಿಸಿಕೊಂಡಿರುವ, ಮುದ್ದಾದ ಗುದ್ದಾಟದಲ್ಲಿ ತೊಡಗಿರುವ ವೀಡಿಯೋ ಈಗ ವೈರಲ್ ಆಗಿದೆ.
ಇದನ್ನೂ ಓದಿ: ಆಡುಮಲ್ಲೇಶ್ವರ ಮೃಗಾಲಯದಲ್ಲಿ ಕರಡಿಗಳ ಕಲರವ
ಇಲ್ಲಿನ ಪ್ರವಾಸಿಗರು ಹಾಗೂ ಮೃಗಾಲಯದ ಸಿಬ್ಬಂದಿಗಳು ನಾಲ್ಕು ಕರಡಿಗಳನ್ನು ಒಂದೇ ಫ್ರೇಮ್ನಲ್ಲಿ ಸಿಕ್ಕಿವೆ.
ಮೊದಲು ಮರಿ ಕರಡಿಗಳಾದ ಭಾನು ಹಾಗೂ ಭೂಮಿ ಬಂಡೆಯ ಮೇಲೆ ಜಗಳ ಮಾಡುತ್ತಾ ಕುಳಿತಿವೆ. ಈ ಜಗಳ ತುಸು ಜೋರಾಗುವ ಲಕ್ಷಣ ಕಂಡಾಗ ತಾಯಿ ಕರಡಿ ಸೀನಮ್ಮ ಬಂದು ಇಬ್ಬರಿಗೂ ಹೆದರಿಸುವ ವೀಡಿಯೋ ಸೊಗಸಾಗಿದೆ.

ಆನಂತರ ನೀರಿನ ಪಾಂಡ್ಬಳಿ ಮರಿ ಕರಡಿಗಳು ನೇತಾಡುವುದು, ಜೋತಾಡುವುದು ಹೀಗೆ ಅಪ್ಪ, ಅಮ್ಮನೊಟ್ಟಿಗೆ ಆನಂದವಾಗಿ ಕಾಲ ಕಳೆಯುವ ದೃಶ್ಯ ಅದ್ಬುತವಾಗಿದೆ.
ದಿನೇ ದಿನೇ ಆಡುಮಲ್ಲೇಶ್ವರ ಮೃಗಾಲಯ ಉತ್ತಮವಾಗಿ ರೂಪುಗೊಳ್ಳುತ್ತಿದೆ. ಹೊಸದಾಗಿ ಎರಡು ಹುಲಿಗಳು ಬಂದಿವೆ. ಜಿರಾಫೆ ತರಲು ಆವರಣ ಸಿದ್ಧವಾಗಿದೆ. ಇಡೀ ಮೃಗಾಲಯದ ವಿನ್ಯಾಸ ಬದಲಾಗಿದೆ. ಸಾಕಷ್ಟು ಹೊಸತನದಿಂದ ಕೂಡಿದೆ. ಬಯಲು ಸೀಮೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಈ ಮೃಗಾಲಯಕ್ಕೆ ನಾಡಿನ ಮೂಲೆ ಮೂಲೆಗಳಿಂದ ಹೆಚ್ಚು ಹೆಚ್ಚು ಪ್ರವಾಸಿಗರು ಬರುವಂತೆ ಮಾಡುವ ಜವಾಬ್ದಾರಿ ದುರ್ಗದವರಾದ ನಮ್ಮೆಲ್ಲರ ಮೇಲಿದೆ. ಈ ಮೂಲಕ ಚಿತ್ರದುರ್ಗದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ಆಡುಮಲ್ಲೇಶ್ವರ ಕುರಿತಾದ ಇಂತಹ ಆಸಕ್ತಿದಾಯಕ ಸಂಗತಿಗಳನ್ನು ಹೆಚ್ಚು ಜನಕ್ಕೆ ತಲುಪಿಸೋಣ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
