By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: Kannada Novel: 20. ಕಾಮಜ್ಜ ಒಡ್ಡು ಕಟ್ಟಿದ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » Kannada Novel: 20. ಕಾಮಜ್ಜ ಒಡ್ಡು ಕಟ್ಟಿದ

ಸಂಡೆ ಸ್ಪಷಲ್

Kannada Novel: 20. ಕಾಮಜ್ಜ ಒಡ್ಡು ಕಟ್ಟಿದ

News Desk Chitradurga News
Last updated: 16 February 2025 07:26
News Desk Chitradurga News
4 months ago
Share
Habbida Malemadhyadolage
ಹಬ್ಬಿದಾ ಮಲೆಮಧ್ಯದೊಳಗೆ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 16 FEBRUARY 2025

ಬಸವನಹಳ್ಳ ತುಂಬಿ ಹರಿಯುತ್ತಿತ್ತು. ಊರ ಮುಂದಲ ಕರುವುಗಲ್ಲನ್ನು ಮುಟ್ಟುವಂತೆ ಊರ ಬಾವಿಯ ಸುತ್ತ ಹಾಕಿದ್ದ ಮಣ್ಣಿನ ತಡೆಯನ್ನು ತುಟಿಕರಿಸಿಕೊಂಡು ಆಗಲೋ ಈಗಲೋ ಬಾವಿಯೊಳಗೆ ಹಳ್ಳದ ಕೆಂಬಗಡೆ ನೀರು ನುಗ್ಗುವಂತೆ ರಭಸವಾಗಿ ಹರಿಯುತ್ತಿತ್ತು.

ಹಿಂದಿನ‌ ಸಂಚಿಕೆ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ

ಹಳ್ಳದ ಇಕ್ಕೆಲಗಳ ಗೊಂಚಿಕಾರರ ಜಮಿನುಗಳೆಲ್ಲಾ ನೀರಲ್ಲಿ ಮುಳುಗಿ ಸಂಪೂರ್ಣ ನೀರು ಕುಡಿದಿದ್ದವು. ಆದರೆ ಅಲ್ಲಿಂದ ಮುಂದೆ ಗೌಡರ ಎರೆಕಟ್ಟೆ ದಾಟಿ ಡೊಂಗರು ಬಿದ್ದಿದ್ದ ಹಳ್ಳ ಸೇರಿ ಹರಿದು ಮಂಗರಾಯನ ಕೆರೆ ಒಡಕಿನಲ್ಲಿ ಮರ್ತ್ತೊ ಎಂದು ಸದ್ದು ಮಾಡುತ್ತಾ ಹಳ್ಳ ಕಲ್ಲುಂಡಿ ದಿಕ್ಕಿಗೆ ಹರಿಯುತ್ತಿತ್ತು. ಗೌಡರ ಗುಂಪಿನ ದೊಡ್ಡಕಟ್ಟೆಗಾಗಲಿ ಅದರ ಕೆಳಗಿನ ಜಮಾನುಗಳಿಗಾಗಲಿ ಹಳ್ಳದ ನೀರು ನುಗ್ಗಿರಲಿಲ್ಲ. ಛೇ ಇದೆಂಥಾ ಕನಸು ಎಂದು ಸರಿರಾತ್ರಿಯಲ್ಲಿ ಹಾಸಿಗೆಯಿಂದ ಎದ್ದು ಕುಳಿತ ಕಾಮಜ್ಜ ಬೆಳಕು ಹರಿಯುವ ತನಕ ಹಾಸಿಗೆಯಲ್ಲೇ ಹೊರಳಾಡಿದ್ದ.

ಕಾಮಜ್ಜ ಗೌಡರ ಗುಂಪಿನ ಹಿರಿಯನಾಗಿದ್ದು ಊರವರೆಲ್ಲಾ ಯಜಮಾನಪ್ಪರೆಂದು ಗೌರವದಿಂದ ಕರೆ-ಯುತ್ತಿದ್ದರು. ಬೆಳಕು ಹರಿಯುತ್ತಲೂ ತನ್ನ ಊರುಗೋಲು ಕುಟ್ಟಿಗೊಂಡು ಗೌಡರ ಮನೆಗೆ ಆಗಮಿಸಿದ. “ಇದೇನಪ್ಪಾ ಈಟತ್ತಿಗೆಲೆ ಬಂದೆ” ಎಂದು ವಿಚಾರಿಸಿದ ತನ್ನ ಸೋದರ ಸಂಬಂಧಿಯನ್ನು “ಮೆಟ್ಟು ಮೆಟ್ಟಿಗಳಪ್ಪಾ ಇಲ್ಲೇ ಹೋಗಿ ಬರನಾ” ಎಂದು ಹೊರಡಿಸಿಕೊಂಡು ಊರ ಬಾವಿ ಬಳಿಗೆ ತಲುಪಿದರು.

ಹಿಂದಿನ‌ ಸಂಚಿಕೆ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು

ಊರ ಜನ ಬಾವಿಯಲ್ಲಿಳಿದು ತಿಳಿನೀರನ್ನು ತುಂಬಿಕೊಳ್ಳುತ್ತಿದ್ದವರು ಇಬ್ಬರನ್ನೂ ಬೆಳಗ್ಗೆಯೇ ಬಾವಿ ಬಳಿ ಕಂಡು ಆಶ್ಚಯ್ಯ ಚಕಿತರಾಗಿದ್ದರು. ಕಾಮಜ್ಞ ಮತ್ತು ಗೌಡರು ಬಾವಿಯ ಬಡಗಲ ದಿನ್ನೆಯ ಮೇಲೆ ನಿಂತು ಸುತ್ತಲ ಮಣ್ಣಿನ ತಡೆಯನ್ನು ಅವಲೋಕಿಸಿ ತೆಂಕಲ ದಿಕ್ಕಿನ ಮಣ್ಣಿನ ತಡೆ ಒಂದೀಟು ತಗ್ಗಾಗಿರುವುದನ್ನು ಗಮನಿಸಿ “ಅದನ್ನು ಒಂದೀಟು ಎತ್ತರಿಸಿ ಇದರ ಮಟ್ಟಕ್ಕೆ ತರಬೇಕು” ಎಂದು ಗೌಡರಿಗೆ ಸಲಹೆ ನೀಡಿ “ಬಾರಪ್ಪ ಒಂದೀಟು ಹೊಲದ ಕಡೀಗೆ ಹೋಗಿ ಬರನಾ” ಅನ್ನುತ್ತಾ ತೆಂಕಲ ದಿಕ್ಕಿಗೆ ನಡೆದರು.

ಅಲ್ಲೇನ್ ನೋಡ್ತೀಯಪ್ಪ ಬಿತ್ತಿಲ್ಲ ಬೆಳೆ ಇಲ್ಲ” ಎಂದು ಗೌಡರು ಪ್ರತಿಕ್ರಿಯಿಸಿದರಾದರೂ ಮುಂದೆ ನಡೆದಿದ್ದ ಅಜ್ಜರನ್ನು ಹಿಂಬಾಲಿಸಿದರು. ಇಬ್ಬರೂ ಗೊಂಚಿಕಾರರ ಹೊಲಗಳನ್ನು ದಾಟಿ ಡೊಂಗರು ಬಿದ್ದಿದ್ದ ಹಳ್ಳದ ಬಳಿಗೆ ನಡೆದು ನಿಂತರು.

ಹಿಂದಿನ‌ ಸಂಚಿಕೆ: 3. ಎಲ್ಲರೂ ಲಿಂಗವಂತರಾದರು

ಅಲ್ಲಿ “ಇಗಾನೋಡು ಊರು ಬಾವಿ ಮಗ್ಗುಲಾಗೆ ನುಗ್ಗಿದ ಹಳ್ಳದ ನೀರು ಗೊಂಚಿಕಾರರ ಹೊಲಗಳನ್ನೆಲ್ಲಾ ಸೆಂದಾಕಿ ನೆನೆಸಿ ಇಲ್ಲಿಂದ ಈ ಡೊಂಗರು ಬಿದ್ದು ಹದ್ದು ಕೆರೆ ಒಡಕು ತಲುಪುತ್ತೆ. ಗೊಂಚಿಕಾರ ಹೊಲ ಹಳ್ಳದ ನೀರಿನಾಗೆ ನೆಂದಂಗೆ ನಮ್ಮ ದೊಡ್ಡ ಕಟ್ಟೆ ಮತ್ತೆ ತಗ್ಗುಗಳು ನೆನಿಬೇಕಾದ್ರೆ ಇಲ್ಲಿ ಹಳ್ಳಕೆ ಒಂದು ತಡೆ ಕಟ್ಟಬೇಕು. ಒಡ್ಡು ಕಟ್ಟಿಸಬೇಕು” ಎಂದು ಕಾಮಜ್ಜ ತನ್ನ ಆಲೋಚನೆಯನ್ನು ಸಂಕ್ಷಿಪ್ತವಾಗಿ ತಿಳಿಸಿ ಗೌಡರ ಮುಖವನ್ನು ದಿಟ್ಟಿಸಿದರು. “ಅಣ್ಣಾ ನಿನ್ನ ಯೋಚನೆ ಸರಿಯಾಗೈತೆ.

ಗೊಂಚಿಕಾರಂಗೆ ನಾವೂ ಹಳ್ಳದ ನೀರಿನಾಗೆ ಒಂದು ಫಸಲು ಬೆಳಕಾಬೌದು. ಅಣ್ಣ ತಮ್ಮಗಳೆಲ್ಲಾ ಕೂಡ್ಲಿ ಮಾತಾಡನಾ” ಗೌಡರು ತಮ್ಮ ಸಹಾನುಭೂತಿಯನ್ನು ತಿಳಿಸಿದರು.

“ನನ್ನ ಅನುಬೋಗದಾಗೆ ಇಂಥಾ ದೊಡ್ ಕೆಲ್ಸಾ ಮಾಡಾಕೆ ಎಲ್ಲಾರು ಹಿಂಜರಿತಾರೆ. ಅದ್ರೆ ನಾನೇ ಮುಂದಾಗಿ ಪಟ್ಟಮಲ್ಲಿ ತಾವಿಂದ ಕಲ್ಲುಂಡು ಬಂಡೆ ಹೇರಿಸಾಕೆ ತೀರಾನ ಮಾಡಿದ್ದೀನಿ” ಕಾಮಜ್ಜ ತನ್ನ ಯೋಜನೆಯನ್ನು ವಿಶದಪಡಿಸಿದರು. “ನಿನಾಗ್ಲೆ ಹೆಜ್ಜೆ ಮುಂದಕ್ಕಿಕ್ಕಿ ಬಿಟ್ಟಿದೀಯ. ಆಗಲಿ ನಾನೂ ಕೈ ಜೋಡಿಸ್ತೀನಿ ಈಗ ಬೋವೇರಿಗೆ ಏನೂ ಕೆಲ್ಸ ಇಲ್ಲ.

ಹಿಂದಿನ‌ ಸಂಚಿಕೆ: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ

ಅವರಿಗೆ ಬರಗಾಲದಾಗೆ ನಾವೇ ಕೆಲ್ಸ ಕೊಟ್ಟಂಗಾಗುತ್ತೆ” ಎಂದು ಗೌಡರು ತಮ್ಮ ಸಮ್ಮತಿ ಸೂಚಿಸಿ “ಇದು ಇದ್ದಕ್ಕಿದ್ದಂಗೆ ನಿನ್ ತಲೀಗೆ ಎಂಗ್ ಹೊಳೀತು”. ಗೌಡರು ಕಾಮಜ್ಜರನ್ನು ಕುತೂಹಲಿಯಾಗಿ ಕೇಳಿದರು. ಆಗ ಕಾಮಜ್ಜ ತನ್ನ ಕನಸಿನ ವಿಷ್ಯ ತಿಳಿಸಿ “ಈಗ ಇದಕ್ಕೆ ಕಾಲ ಕೂಡಿಬಂದೈತೆ” ಅಂದರು.

ಇಬ್ಬರೂ ತಲೆ ಎತ್ತಿ ನೋಡಿದರು. “ನಡೀಯಪ್ಪ ಉಂಬೊತ್ತಾಗೈತೆ ನಮ್ಮುಡುಗರಿಗೆ ಗಾಡಿ ಕಟ್ಟೆಂಡು ಗುಂಡು ಬಂಡೆ ಹೇರಾಕೇಳಬೇಕು” ಅನ್ನುತ್ತಾ ಕಾಮಜ್ಜ ಊರಕಡೆಗೆ ಹೆಜ್ಜೆ ಹಾಕಿದರು. ಗೌಡರು ಅವರನ್ನು ಹಿಂಬಾಲಿಸಿದರು.

ದೊಡ್ಡುಂಬೊತ್ತಿಗೆ ಯಜಮಾನಪ್ಪರ ಮನೆಯಿಂದ ಎರಡುಗಾಡಿಗಳಲ್ಲಿ ಎಂಟು ಜನ ಯುವಕರು ಊರ ಮುಂದಲ ಹಳ್ಳದ ದಿಕ್ಕಿಗೆ ಹೊರಟರು. ಊರ ಜನ “ಸೌದೆ ಪೌದೆ ತರಾಕೆ ಹೋಗ್ತಿರಬೌದು ಅಂದುಕೊಂಡರು. ತಡವಾಗಿ ಗೌಡರ ಮನೆಯಿಂದಲೂ ಒಂದು ಬಂಡಿ ಅದೇ ದಿಕ್ಕಿಗೆ ಹೋಗಿತ್ತು. ಊಟ ಮಾಡಿದ ಬಳಿಕ ಗೌಡರು, ಗೊಂಚಿಕಾರ ಶಿದ್ದಯ್ಯ, ಕಾಮಜ್ವರ ಮನೆಗೆ ಆಗಮಿಸಿ ಬೋವಿಹಟ್ಟಿಯಿಂದ ಹಿರೇಬೋವಿಯನ್ನು ಕರೆಸಿಕೊಂಡರು.

ಹಿಂದಿನ‌ ಸಂಚಿಕೆ: 5. ಕೆನ್ನಳ್ಳಿಯ ದುರಂತ

ಬೋವಿ ತನ್ನ ಜತೆಗಿಬ್ಬರು ಯುವಕರನ್ನು ಕರೆ ತಂದಿದ್ದ “ನೀವೆಲ್ಲಾ ಬಾಳಸೆಂದಾಕಿ ಕೆಲ್ಸ ಮಾಡಿ ಬಾವಿ ತೋಡಿದಿರಿ” ಗೌಡರು ಬೋವೀರನ್ನು ತಾರೀಪ್ ಮಾಡಿ ಮಾತಾಡಿದರು. “ಊರಿಗೇ ಗಂಡಾಂತ್ರ ಬಂದಿರೋವಾಗ ನಾವೇ ಏನ್ ಸ್ವಾಮಿ ಇಡೀ ಊರಿಗೆ ಊರೇ ಕಷ್ಟ ಪಟ್ಟು ಕುಡಿಯೋ ನೀರ್ ಪಡಕ್ಯಂಡ್ಡಿ” ಹಿರಿಯಬೋವಿ ಮಾತಾಡಿದ್ದ. ಆಗ ಯಜಮಾನಪ್ಪರು” ಬೋವಿ ಈಗ ಅಂಥದೇ ಇನ್ನೊಂದ್ ಕೆಲ್ಸ ಆಗಬೇಕಾಗೈತೆ. ಹಳ್ಳಕ್ಕೆ ಒಂದು ಒಡ್ಡು ಕಟ್‌ಬೇಕು.

ನಾವು ಕಲ್ಲುಗುಂಡು, ಬಂಡೆ ತಂದಾಕ್ತಿವಿ. ನೀವು ತರತೆ-ತೋಡಿ ಒಡ್ಡುಕಟ್ಟಬೇಕು” ಎಂದು ತಮ್ಮ ಯೋಜನೆಯನ್ನು ಪ್ರಸ್ತಾಪಿಸಿದರು. ಬೋವಿಗೆ ಬರಗಾಲದಲ್ಲಿ ನಿಧಿ ದೊರಕಿದಷ್ಟು ಸಂತೋಷವಾಗಿತ್ತು. ಅದನ್ನು ತೋರಡಿಸಿಕೊಳ್ಳದೆ. “ಕಾನಿ ಸ್ವಾಮಿ (ಆಗ್ಲಿ ಸ್ವಾಮಿ) ನೀವೇನ್ ಕೆಲ್ಸ ಕೊಟ್ಟೂ ಮಾಡ್ತೀವಿ. ಗುಂಡು ಬಂಡೆ ಹೇರಾಕೂ ನಮ್ಮಹುಡುಗರು ಬತ್ತಾರೆ. ಹಳ್ಳದಾಗೆ ತರತೋಡಿ ಕಟ್ಟಡಕಟ್ಟೋಕೂ ನಮ್ ಜನ ಬತ್ತಾರೆ. ಯಾವಾಗಿಂದ ಬರಬೇಕು ಹೇಳಿ” ವಿನೀತನಾಗಿ ತಿಳಿಸಿದ.

ಹಿಂದಿನ‌ ಸಂಚಿಕೆ: 6. ಎಲ್ಲೆಲ್ಲಿಂದಲೋ ಬಂದರು

“ನಾಳೆಯಿಂಲ್ಲೇ ಬರ್ರಿ ಮದ್ಯಾನೊಟ ಕೊಡ್ತೀವಿ. ಈಗ ಹಳ್ಳತ್ತಕೋಗಿ ಜಾಗ ತೋರಿಸ್‌ತೀವಿ ಬರಿರಾ” ಗೌಡ್ರು ಕರೆದರು. “ನಡೀರಿ ಸ್ವಾಮಿ” ಅನ್ನುತ್ತಾ ಬೋವಿ ಅವನ ಸಂಗಡಿಗರು ಎದ್ದರು. ಎಲ್ಲರೂ ನಿಧಾನವಾಗಿ ನಡೆದು ಡೊಂಗರು ಬಿದ್ದಿದ್ದ ಹಳ್ಳದ ಬಳಿಗೆ ಆಗಮಿಸಿದಾಗ ಕಾಮಜ್ಜರು ತಮ್ಮ ಕೋಲಿನಿಂದ ಒಡ್ಡು ನಿಮ್ಮಿಸುವ ಜಾಗವನ್ನೂ ತೋರಿಸಿದರು. ಹಿರಿಯಬೋವಿ “ಇದಕ್ಕೆ ತರ ತೋಡದೇನ್ ಬ್ಯಾಡ ಸ್ವಾಮಿ.

ಹಳ್ಳದ ತಗ್ಗಿನಿಂಪ್ಲೆ ಎಳ್ ಮೂರ್ ಗಜದಗಲ ದೊಡ್ ದೊಡ್ ಬಂಡೆ ಗ್ವಾಡೆಕಟ್ಟನ”, ಎಂದು ತಿಳಿಸುತ್ತಿರುವ ಸಮಯಕ್ಕೆ ಎರಡು ಬಂಡಿಗಳಲ್ಲಿ ಕಲ್ಲುಂಡು ಬಂಡೆಗಳನ್ನು ಹೇರಿಕೊಂಡು ಯುವಕರು ಬಂದರು. ಅವನ್ನು ನೋಡಿದ ಬೋವಿ “ಸಾಕು ಸ್ವಾಮಿ, ಇಂಥಾ ಗುಂಡು ಬಂಡೆ ತಂದ್ರೆ ಸಾಕು ದೊಡ್ ಬಂಡೇನಾ ಕಟ್ಟಡದ ಮ್ಯಾಲೆ ಕುಂದ್ರಾಸನಾ ಎಂಥಾ ನೀರಿನ ಸೆಳುವುಬಂದ್ರೂ ಇವನ್ನ ಅಳ್ಳಾಡ್ಲಕಾಗಲ್ಲ” ಅಂದ. ಗುಂಡು ಬಂಡೆಗಳನ್ನು ಗಾಡಿಯ ಮೂಕಾರಿಸಿ ಉರುಳಿಸಲಾಯಿತು.

ಹಿಂದಿನ‌ ಸಂಚಿಕೆ: 7. ಊರು ತೊರೆದು ಬಂದವರು

“ಅಯ್ಯಾ ಜ್ಞಾಪನಾಕಂಡ್ರೆ ಇಂಥ ಬಂಡೆ ಗಾಡಿಗೇರೋವಾಗ ಕೆಳಕ್ಕೆ ಉಳ್ಳುಸೋವಾಗ ಬಾಳ ಎಚ್ಚರಿಕೆಯಿಂದ ಮಾಡ್ರಿ. ಆಮೇಲೆ ಕೈಯಿಕಾಲು ಮುರಕಂಡೀರಾ” ಕಾಮಜ್ಜರು ಗಾಡಿ ಯುವಕರನ್ನು ಎಚ್ಚರಿಸಿದ್ದರು. ಹಿಂದೆ-ಯೇ ಗೌಡರ ಗಾಡಿಯೂ ಬಂಡೆ ಹೇರಿಕೊಂಡು ಹಳ್ಳದ ಬಳಿಗೆ ಆಗಮಿಸಿತ್ತು.

ಕಾಮಜ್ಜ ಮತ್ತು ಗೌಡರ ಆಲೋಚನೆಯಂತೆ ನಾಲ್ಕು ಗಾಡಿಗಳಲ್ಲಿ ಕಲ್ಲುಗುಂಡು ಬಂಡೆಗಳ ಸರಬರಾಜು ನಡೆದಿತ್ತು. ಬೋವಿಗಳು ಗುಂಡು ಬಂಡೆ ಹಳ್ಳದೊಳಕ್ಕೆ ಉರುಳಿಸಿ ಬಂಡೆಗಳನ್ನು ಸರಿಯಾಗಿ ಹೊಂದಿಸುತ್ತಾ ಕೆಲಸ ಆರಂಭಿಸಿದ್ದರು. ಹದಿನೈದು ಹದಿನಾರು ಗಜ ಉದ್ದದ ಮೂರು ಗಜ ಅಗಲದ ಬರೀ ಕಲ್ಲಿನ ಗೋಡೆಗೆ ಅಪರಿಮಿತ ಗುಂಡು ಬಂಡೆಗಳ ಅವಶ್ಯಕತೆ ಇತ್ತು.

ಹಿಂದಿನ‌ ಸಂಚಿಕೆ: 8. ಮೋಜಣಿಕೆ ಮಾಡಿದರು 

ಒಂದು ಸಾಲು ಕಲ್ಲಿನ ಗೋಡೆಯನ್ನು ನಿರಿಸಿದ ಕೂಡಲೇ ಅದರ ಬೆನ್ನಿಗೆ ಸಣ್ಣಕಲ್ಲು ಮಣ್ಣಿನ ಧಮ್ಮಸ್ ಮಾಡಬೇಕಿತ್ತು. ಅದರ ಉಸ್ತುವಾರಿಯನ್ನೂ ಹಿರಿಯ ಬೋವಿಯೇ ನೋಡಿಕೊಳ್ಳುತ್ತಿದ್ದ. ಹಳ್ಳದ ಎರಡೂ ಬದಿಯ ಹೊಂಗೇ ಗಿಡಗಳು ಒಡ್ಡಿನ ಗೋಡೆಗೆ ರಕ್ಷಣೆ ನೀಡುವಂತೆ ಅಲ್ಲೀವರೆಗೂ ಗೋಡೆಯನ್ನು ನಿಮ್ಮಿಸಬೇಕಿತ್ತು.

ಹಗಲೂಟದೊತ್ತಿಗೆ ಕೆಲವು ಬಂಡೆಗಳನ್ನು ಮಾತ್ರ ಜೋಡಿಸಲು ಸಾಧ್ಯವಾಗಿತ್ತು. ಹಿರಿಯ ಬೋವಿ ಪ್ರತಿಗಾಡಿ ಕಲ್ಲುಗುಂಡು ಹೇರಿಕೊಂಡು ಬಂದಾಗ ಗಡ್ಡೆ ಮೇಲಕ್ಕೆ ಹತ್ತಿ ‘ಇಂತಿಂಥವನ್ನು ಹಳ್ಳಕ್ಕೆ ಉರುಳಿಸಿರಿ ಉಳಿದವನ್ನು ಮಗ್ಗಲಿಗೆ ಬಿಡಿರಿ’ ಎಂದು ಸೂಚನೆ ಕೊಡುತ್ತಾ ಕೆಳಗೆ ಮೇಲೆ ಓಡಾಡುತ್ತಿದ್ದ.

ಹಿಂದಿನ‌ ಸಂಚಿಕೆ: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ

ಕಲ್ಲು ಬಂಡೆಗಳನ್ನು ಎಷ್ಟು ಚಂದವಾಗಿ ಜೋಡಿಸುತ್ತಿದ್ದರೆಂದರೆ ಒಂದಿಷ್ಟು ಸಂದಿಲ್ಲದೆ ಇರುತ್ತಿತ್ತು. “ಎಷ್ಟಾದರೂ ನುರಿತ ಕೈಗಳಲ್ಲವೆ” ಎಂದು ಕಾಮಜ್ಜ ಮನಸ್ಸಿನಲ್ಲೇ ಮೆಚ್ಚುಗೆ ಸೂಚಿಸಿದ್ದರು.

ಎರಡನೇ ದಿನದಿಂದ ನಾಲ್ಕುಗಾಡಿಗಳಲ್ಲಿ ಗುಂಡು ಬಂಡೆ ಹೇರುತ್ತಿದ್ದರು. ಬೋವಿಗಳಲ್ಲಿ ನಾಲ್ವರು ನುರಿತವರು ಗಾಡಿಗಳವರಿಗೆ ಸಹಾಯಮಾಡಲು ಅವರ ಜತೆ ಕೆಲಸ ಮಾಡುತ್ತಿದ್ದರು. ಒಂದು ವರಸೆ ಬಂಡೆಯ ಗೋಡೆ ಜೋಡಿಸಿದಾಗ ಅದರ ಆಕಾರ ಕಂಡು ಬಂದಿತ್ತು. ನಾಲ್ಕು ಗಾಡಿಗಳಲ್ಲಿ ದಿನ ಪೂರ್ತಿ ಹೇರಿದ ಬಂಡೆಗಳು ಒಂದು ವರಸೆಗೂ ಸಾಲುತ್ತಿರಲಿಲ್ಲ. ಆದರೂ ಗುಂಡು ಬಂಡೆ ಹೇರುವವರ ಉತ್ಸಾಹ ಕಡಿಮೆಯಾಗಿರಲಿಲ್ಲ. ಒಂದು ವರಸೆ ಕಟ್ಟಡ ಮುಕ್ಕಾಲು ಗಜದೆತ್ತರ ಕಾಣುತ್ತಿತ್ತು.

ಹಿಂದಿನ‌ ಸಂಚಿಕೆ: 10. ಹೊಸ ಬಂಡಿಗಳ ಆಗಮನ

ಕಟ್ಟಡದ ಬೆನ್ನಿಗೆ ಪುಡಿಕಲ್ಲು ಮಣ್ಣು ತುಂಬುವವರಿಗೆ ದಣಿವಾರಿಸಿಕೊಳ್ಳಲು ಪುರುಸೊತ್ತು ಇರಲಿಲ್ಲ. ಕಟ್ಟಡ ಮೇಲೇರಿದಂತೆಲ್ಲಾ ಗುಂಡು ಬಂಡೆಗಳನ್ನು ಅದರ ಮೇಲೆ ಕೆಡವಿ ಅಲ್ಲಿಂದ ಕಟ್ಟಡಕ್ಕೆ ಜರುಗಿಸಬೇಕಾಗಿತ್ತು. ಬೋವಿಗಳು ಚಿಕ್ಕುಂಬೊತ್ತಿಗೆಲ್ಲಾ ಕೆಲಸಕ್ಕೆ ತೊಡಗಿಕೊಳ್ಳುತ್ತಿದ್ದರೆ ಹಿಂದೆಯೇ ಗಾಡಿಗಳು ಬಂಡೆ ಹೇರಿಕೊಂಡು ಬರುತ್ತಿದ್ದವು.

ಯಾರಾದರೊಬ್ಬರು ಊರು ಬಾವಿಯಿಂದ ಕೊಡಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದರು. ತಲೆ ಮೇಲೆ ಎಂಥಾ ಬಿಸಿಲಿದ್ದರೂ ನೀರು ಮಾತ್ರ ತಣ್ಣಗಿದ್ದು ದಣಿವಾರಿಸಿಕೊಳ್ಳಲು ಸಹಕಾರಿಯಾಗಿತ್ತು. ಕಾಮಜ್ಜ ಹೊಂಗೇ ಗಿಡಗಳ ಹರಕು ನೆರಳಲ್ಲಿ ಕುಳಿತು ಅಲ್ಲಿ ನಡೆಯುತ್ತಿದ್ದ ಕಾಮಗಾರಿಯನ್ನು ವೀಕ್ಷಿಸುತ್ತಿದ್ದರು.

ಹಿಂದಿನ‌ ಸಂಚಿಕೆ: 11. ಬಂಡಿ ತಂದ ಬದಲಾವಣೆ

ಗೌಡರು ತಮ್ಮ ಸೋದರ ಸಂಬಂಧಿಗಳನ್ನು ಕರೆಸಿ ಮಾತಾಡಿ ಅವರಿಂದ ಒಡ್ಡು ನಿರಾಣಕ್ಕೆ ಸಹಕಾರ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಜೋಗಪ್ಪ ಹೊಟ್ಟೆ ಸಿದ್ದಪ್ಪ ಮುಂತಾದವರು ಬಂಡೆ ಹೇರಲು ಮತ್ತು ಕಟ್ಟಡ ನಿರಿಸುವ ಬೋವಿಗಳಿಗೆ ನೆರವಾಗಲು ಬಂದರು. ಬಂದವರನ್ನು ಕಾಮಜ್ಜ ಸ್ವಾಗತಿಸಿದ್ದರು. ಹೀಗಾಗಿ ಒಡ್ಡು ಕಟ್ಟುವ ಕೆಲಸ ನಿರಾತಂಕವಾಗಿ ನಡೆಯುತ್ತಿತ್ತು.

ಹಗಲೂಟದೊತ್ತಿಗೆ ಕಾಮಜ್ಜರ ಮನೆಯಿಂದ ನಾಲ್ವರು ಹೆಣ್ಣು ಮಕ್ಕಳು ಬುತ್ತಿ ಹೆಡಿಗೆ ಕೊಡದ ತುಂಬಾ ನೀರು, ಮಜ್ಜಿಗೆ ಹೊತ್ತು ತರುತ್ತಿದ್ದರು. ಕೆಲಸಗಾರರರೆಲ್ಲಾ ಕೆಲಸ ನಿಲ್ಲಿಸಿ ಕೈ ತೊಳೆದುಕೊಂಡು ಮುತ್ತುಗದೆಲೆಯ ಇಸ್ತ್ರಗಳನ್ನು ಮಾಡಿಕೊಂಡು ಬಿಸಿಬಿಸಿ ರಾಗಿ ಮುದ್ದೆ ಆಮ್ರದ ಸವಿಯನ್ನು ಸವಿದು ಮಜ್ಜಿಗೆ ಕುಡಿದು ಗಾಡಿ ಏರಿ ಪಟ್ಟ ಮಳಿ ಕಡೆಗೆ ತೆರಳುತ್ತಿದ್ದರು. ಪಟ್ಟ ಮರಡಿಯಲ್ಲಿ ಕೆಳಭಾಗದ ಕಲ್ಲು ಬಂಡೆಗಳು ಮುಗಿದ ಬಳಿಕ ಮಲ್ಲಿ ಏರಿ ಮೇಲಿದ್ದ ಗುಂಡು ಬಂಡೆಗಳನ್ನು ಕೆಳಗೆ ಉರುಳಿಸುತ್ತಿದ್ದರು.

ಹಿಂದಿನ‌ ಸಂಚಿಕೆ: 12. ಜಂಗಮಯ್ಯರ ಆಗಮನ

ದೊಡ್ಡ ಬಂಡೆಗಳ ಮೇಲೆ ಉರಿವ ಕೊಳ್ಳಿಯಿಂದ ಕಾಯಿಸಿ ಸೆಮಟಿಗೆಯಿಂದ ಹೊಡೆದು ಬಂಡೆಗಳನ್ನು ಸೀಳುತ್ತಿದ್ದರು. ಸೀಳಿದ ಬಂಡೆಗಳು ಕಲ್ಲು ಕಟ್ಟಡಕ್ಕೆ ಹೊಂದಿಕೊಳ್ಳುತ್ತಿದ್ದವು. ಸುಮಾರು ಐವತ್ತು ಜನ ಒಂದು ವಾರ ಬಿಡುವಿಲ್ಲದೇ ಕೆಲಸಮಾಡಿ ಎರಡುಗಜದೆತ್ತರ ಕಲ್ಲು ಕಟ್ಟಡ ನಿರಿಸಿದ್ದರು. ಅದರ ಬೆನ್ನಿಗೇ ಪುಡಿ ಕಲ್ಲು ಮಣ್ಣಿನ ಒದೆಏರಿಯೂ ನಿರ್ಯಾಣವಾಗಿತ್ತು.

ಹಳ್ಳದ ಮೇಲಿನ ದಡವನ್ನು ಅಳೆದು ಇನ್ನು ವಾರಕ್ಕಿಂತ ಹೆಚ್ಚುದಿನ ಕೆಲಸ ಮಾಡಬೇಕಾಗುತ್ತದೆ ಎಂದು ಅವರವರೇ ಮಾತಾಡಿಕೊಳ್ಳುತ್ತಿದ್ದರು. ಆದರೆ ಹಿರಿಯ ಬೋವಿ ಒಡ್ಡುಕಟ್ಟುವ ಕೆಲಸ ಮುಗಿದ್ದಳಿಕ ಒಡ್ಡಿನ ಹಿಂಬದಿಯಿಂದ ಸುಮಾರು ಹದಿನೈದು ಗಜ ಉದ್ದ ಕಲ್ಲು ಬಂಡೆ ಹದಿಯಬೇಕು. ಒಡ್ಡು ದಾಟಿ ಹರಿದ ನೀರು ಭೂಮಿಯನ್ನು ಕೊರೆದು ಒಡ್ಡನ್ನೇ ಕೆಡವಿಬಿಡುತ್ತದೆ ಎಂದು ಆತನ ಮುಂದಾಲೋಚನೆಯಾಗಿತ್ತು.

ಹಿಂದಿನ‌ ಸಂಚಿಕೆ: 13. ಮತ್ತೆರಡು ಬಂಡಿ ತಂದರು

ಈಗ ಒಡ್ಡಿನ ಹಿಂದಿನ ಒದೆಏರಿಯ ಮೇಲೆ ಅಲ್ಲಲ್ಲಿ ಕೋತಿಕಲ್ಲುಗಳನ್ನು ನಿಲ್ಲಿಸಬೇಕಾಗಿತ್ತು. ಅದಕ್ಕೆ ಗಾಡಿಗಳವರಿಗೆ “ಮೊಳಗದಲ ಎರಡು ಗಜ ಉದ್ದದ ಬಂಡೆಗಳನ್ನು ಹುಡುಕಿ ತನ್ನಿರಿ” ಎಂದು ಸೂಚಿಸಿದ. ಗಾಡಿಗಳವರು ಪಟ್ಲಮರಡಿ ಅಕ್ಕಪಕ್ಕ ಹುಡಿಕಾಡಿ ಸೋತರು.

ಅಂಥಾ ಕಲ್ಲು ಬಂಡೆಗಳು ಅಲ್ಲೆಲ್ಲೂ ಕಂಡು ಬರಲಿಲ್ಲ. ಕೊನೆಗೆ ಆಳುದ್ದ ಇದ್ದ ಬಂಡೆಯ ಮೇಲೆ ಉರಿಯುವಕೊಳ್ಳಿಯಲ್ಲಿ ಬಂಡೆಯನ್ನು ಕಾಯಿಸಿ ಸೆಮಟಿಗೆಯಿಂದ ಹೊಡೆದಾಗ ಬಂಡೆ ಸೀಳಿತ್ತು. ಮತ್ತೆ ಅವರ ಅಳತೆಯನುಸಾರ ಮತ್ತೆ ಬಂಡೆಯನ್ನು ಕಾಯಿಸಿ ಸೆಮಟಿಗೆಯಿಂದ ಹೊಡೆದು ಸೀಳಿ ಏಳೆಂಟು ಉದ್ದನೆಯ ಬಂಡೆಗಳನ್ನು ಗಾಡಿಯಲ್ಲಿ ಏರಿಸಿ ಒಡ್ಡಿನ ಬಳಿ ತಂದು ಹಾಕಿದರು. ಅವನ್ನು ನೋಡಿದ ಹಿರಿಯ ಬೋವಿ “ಇವು ಸರಿ ಆದ್ರೆ ಹುಟ್ಟುಕಲ್ಲು ಇಂಗಿರಬೇಕಿತ್ತು. ಇಲ್ಲಿ ಬಿಡ್ರಿ ಇವನ್ನೇ ಕೋತಿಕಲ್ಲಂಗೆ ನೆಡತೀನಿ” ಅಂದ.

ಹಿಂದಿನ‌ ಸಂಚಿಕೆ: 14. ಗೌನಳ್ಳಿ ಬದುಕಿನಲ್ಲಿ ಬಂಡಿಗಳ ಪಾತ್ರ

ಕಾಮಜ್ಜರು ತಾವು ಕುಳಿತ ಜಾಗದಿಂದಲೇ ಎಲ್ಲಾ ವಿದ್ಯಮಾನಗಳನ್ನು ಅವಲೋಕಿಸುತ್ತಿದ್ದರು. ಬೋವಿಗಳು ಮಣ್ಣರಾಸಿಯ ಮೇಲೆ ಉರುಳಿಸಿದ ಬಂಡೆಗಳನ್ನು ಹಾರೆಗಳಿಂದ ಅತ್ತಿತ್ತ ತಿರುಗಿಸಿ ಅವುಗಳನ್ನು ಜೋಡಿಸುತ್ತಿದ್ದ ಅವರ ಕೈಚಳಕಕ್ಕೆ ಮಾರು ಹೋಗಿದ್ದರು. “ಗೌಡ್ರೆ ಸರಿಯಾಗಿ ಕುಂತೈತಾ ನೋಡ್ರಿ” ಎಂಬ ಬೋವಿಯ ಮಾತಿಗೆ “ಬಂಡೆ ಗತುಕು ಹಾಕದಂಗೆ ಚಕ್ಕೆ ಕಲ್ಲು ಕೊಡ್ರಿ” ಎಂದು ಸಲಹೆ ನೀಡುತ್ತಿದ್ದರು.

ಗೌಡ್ರು ಗೊಂಚಿಕಾರು ಇಳಿಹೊತ್ತು ಮಾಡಿಕೊಂಡು ಕೆಲಸದ ಜಾಗಕ್ಕೆ ಬಂದು “ಅಣ್ಣಾ ಉರಿಯ ಬಿಸ್ಲಾಗೆ ಇಲ್ಲೇ ಹೊಂಗೆ ಗಿಡದ ಹರಕು ನೆಳ್ಳಾಗೆ ಕುಂತಿಯ ಸಂಜೀಗೆ ಬಂದಿದ್ರೆ ಆಗಿಲಿಲ್ವ” ಎಂದು ಗೌಡರು ಆಕ್ಷೇಪಿಸಿದಾಗ “ಇವರೆಲ್ಲಾ ಉರಿಯ ಬಿಸ್ಲಾಗೇ ಕೆಲ್ಸ ಮಾಡ್ತಿದಾರಲ್ಲಪ್ಪಾ ಇವರು ಇಲ್ಲಿ ಕೆಲಸ ಮಾಡ್ತಿರೋವಾಗ ನಾನೆಂಗೆ ಊರಾಗಿಲ್ಲ” ಎಂದು ತಮ್ಮ ಸಮಜಾಯಿಷಿ ನೀಡಿದ್ದರು. “ಪಟ್ಟಮರಡಿ ಕಲ್ಲು ಗುಂಡು ಬಂಡೆ ಸಿಕ್ಕಿದ್ದು ಬಾಳ ಅನುಕೂಲ ಆಯ್ತು” ಗೊಂಚಿಕಾರು ಮಾತಾಡಿದರು. “ಇವಕ್ಕೆ ಇನ್ನೆಲ್ಲಿ ಹುಡಿಕ್ಕೆಂಡು ಹೋಗಾನಪ್ಪಾ” ಕಾಮಜ್ಜ ಪ್ರತಿಕ್ರಿಯಿಸಿದರು.

ಹಿಂದಿನ ಸಂಚಿಕೆ ಓದಿ: 15.ಹಿರೇ ಬಡಗಿ ಗೌನಹಳ್ಳಿಗೆ ಬಂದರು

“ಕಟ್ಟಡ ಮಾತ್ರ ಬಾಳ ಬಂದೋಬಸ್ತಾಗೈತೆ. ಎಂಥಾ ಹಳ್ಳದ ನೀರು ಇದನ್ನ ಅಲಗಾಡ್ತಾಕಾಗಲ್ಲ” ಗೌಡ್ರು ಬೋವಿಗಳ ಕಾಠ್ಯಕ್ಷಮತೆಯನ್ನು ಮೆಚ್ಚಿ ಮಾತಾಡಿದರು. “ಗೌಡ್ರೆ ಅಂಗನ್ನಬ್ಯಾಡ್ರಿ ನೀರಿನ ಸೆಳೆತಕ್ಕೆ ಹಿರಿವೂರ ತ್ಯಾರಮಲ್ಲೇಶ್ವರ ದೇವರ ತೇರಿನ ಗಾಲಿ ಮುವ್ವತ್ತು ಮೈಲಿ ನೀರಿನಾಗೆ ಕೊಚ್ಚಂಡು ಬಂದಾವಂತೆ” ನೀರಿನ ಅಗಾಧ ಶಕ್ತಿಯನ್ನು ಹೇಳಿದ.

“ನಾನೂ ಒಪ್ಪಂತೀನಿ ನಾವು ಹರಿಯೋ ನೀರ ಪ್ರವಾಹನ ತಡಿಯಲ್ಲ. ಬದಲು ಪೂರಾ ನೀರೆಲ್ಲಾ ಹಳ್ಳಗುಂಟೆ ಹರೋಗ ಬದ್ದು ಇಲ್ಲಿಂದ ಹೊಲ್ದಾಗೆಲ್ಲಾ ಹಳ್ವಿಕೆಂಡು ಹರಿಲೀ ಅಮ್ಮ ಒಂದು ಸಣ್ಣ ತಡೆ ಕಡ್ತಾ ಇದೀವಿ”, ಗೌಡ್ರು ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದರು.

ಅದೇ ಸಮಯಕ್ಕೆ ಮಳಿಯಪ್ಪಯ್ಯ, ಮರುಳಯ್ಯ ಮತ್ತು ಗುಂಡಾಚಾರಿ ಅಲ್ಲಿಗೆ ಆಗಮಿಸಿದರು. ಅವರು ಆಗಮಿಸುತ್ತಲೇ ಗುಂಡಾಚಾರಿ ಆಳೆತ್ತರದ ಬಂಡೆ ಗೋಡೆಯನ್ನು ಕಂಡು “ಕ್ವಾಟೆ ಗ್ವಾಣಿ ಇದ್ದಂಗಿದೆ. ನೀವು ಸಾಮಾನ್ಯ ಮನುಷ್ಯರಲ್ಲ ಬಿಡಿ” ಎಂದು ಅಶ್ಚತ್ಯವನ್ನು ವ್ಯಕ್ತಪಡಿಸಿದರು. “ಅದಿನ್ಯಾವ ಮಾಯದಾಗೆ ಇಂಥಾ ಅಣೆಕಟ್ಟು ಕಟ್ಟಿದ್ರಿ? ಆಚಾರಿ ಹೇಳಿದಂಗೆ ನೀವು ಅಸಾಮಾನ್ಯ ಜನ” ಮಳಿಯಪ್ಪಯ್ಯ ಕೂಡಾ ದಿಗ್ಧಮೆ ವ್ಯಕ್ತಪಡಿಸಿದರು.

ಹಿಂದಿನ ಸಂಚಿಕೆ ಓದಿ: 16. ಬಡಗಿ ಕಂಡ ಗೌನಳ್ಳಿ

“ಗುರುವೇ ಹೊತ್ತು ವಾಲಿದಂಗೆ ಕೊಡೆ ಹಿಡೀಬೇಕು ನಾವು ಊರ ಬಾವಿ ತೋಡೋ ಸಂದರ್ಭ ವೊದಗಿತ್ತು. ಅದನ್ನ ತೋಡಿದಿವಿ, ಈಗ ಇದರ ಅಗತ್ಯ ಕಂಡು ಬಂತು, ಮೊದ್ಲು ಇಲ್ಲಿ ಇಂಗೆ ಡೊಂಗರು ಬಿದ್ದಿಲ್ಲ. ಕರಿಕೆ ದಬರು ಬೆಳಕಂಡು ನೆಲ ಕೊರಿಯಾಕೆ ಅಡ್ಡಿಯಾಗಿತ್ತು. ಅಲ್ವೆ ನೀರು ಮುಂದಕ್ಕೆ ಹರಿಕಂಡು ಹೋಗ್ತಾ ಇತ್ತು.

ನಮ್ಮ ಕಟ್ಟಿ ತಗ್ಗುಗಳೆಲ್ಲಾ ಸಮೃದ್ಧಿ ಹಳ್ಳದ ನೀರು ಕುಡೀತಿದ್ದು ಮತ್ತೆ ನೆಂಬಿದಂಗೆ ಒಂದು ಫಸಲು ಬೆಳಕಮ್ಮಿದ್ವಿ, ಇಲ್ಲಿ ಯಾವಾಗ ಡೊಂಗರು ಬಿತ್ತೋ ಹಳ್ಳದ ನೀರು ಅದರಗಾಸಿ ಹರು ನಮಿಗೆ ತೊಂದ್ರೆ ಆಗಿತ್ತು. ನೋಡಾನ ಇದನ್ನ ಕಟ್ಟಿಸಿದ ಮ್ಯಾಲೇನನಾ ಅನುಕೂಲ ಆಗುತ್ತೋ ಹೆಂಗೊ” ಕಾಮಜ್ಜ ನಿಧಾನವಾಗಿ ತಮ್ಮ ಅನುಭವವನ್ನು ಹೇಳಿಕೊಂಡು, “ಅನುಕೂಲ ಆಗೇ ಆಗುತ್ತೆ. ಒಳ್ಳೆ ಸಮಯದಾಗೇನೇ ನೀವು ಇದನ್ನ ಕಟ್ಟಿಸ್ತಾ ಇದೀರಿ” ಗುಂಡಾಚಾರಿ ಭರವಸೆ ಮಾತಾಡಿದರು.

ಅದೇ ಸಮಯಕ್ಕೆ ಹೆಬ್ಬಂಡೆಯಂತಹ ಒಂದೇ ಬಂಡೆಯನ್ನು ಗಾಡಿಯಲ್ಲಿ ಹೇರಿಕೊಂಡು ಗೌಡರ ಮನೆಯ ಯುವಕರು ಬಂದರು. “ಎಲ್ಲಿ ಕೆಡವನಪ್ಪೋ ಇದನ್ನ” ಯುವಕರು ಕೂಗಿ ಬೋವಿಯನ್ನು ಕೇಳಿದರು. “ರಾಮರಾಮಾ, ಗಾಡಿ ಅಚ್ಚಿನಗತಿ ಹೆಂಗೋ? ಇಂಥಾ ದೊಡ್ ಬಂಡೇನ ಎಂಗ್ ಗಾಡೀಗೇರಿದಿರಿ?” ಕಾಮಜ್ಜ ಆತಂಕದಿಂದ ಕೂಗಿಕೊಂಡರು. ಅಲ್ಲಿದ್ದ ಎಲ್ಲರೂ ಗಾಡಿ ಮೂಕಾರಿಸಿ ಒದೆಮಣ್ಣಿನ ಮೇಲೆ ಬಂಡೆಯನ್ನು ಕೆಡವಿದರು. ಅಲ್ಲಿ ಗೇಣುದ್ದದ ತಗ್ಗು ಬಿದ್ದಿತ್ತು. “ಇಂಥಾ ಬಂಡೆ ಗಾಡೀಗೇರಬೇಕಾದ್ರೆ ಬಾಳ ಹುಷಾರಿನಪ್ಪಾ” ಗೌಡ್ರು, ಗೊಂಚಿಕಾರು ಒತ್ತಿ ಹೇಳಿದರು.

ಹಿಂದಿನ ಸಂಚಿಕೆ ಓದಿ: 17. ಕೊಳ್ಳಿ ಇಕ್ಕಿದರು

ಹಿರಿಯ ಬೋವಿ “ನೋಡ್ರಿ ಸ್ವಾಮಿ, ಇಂಥ ಬಂಡೆ ಒಡ್ಡಿನ ಮುಂದುಗಡೆ ಜೋಡಿಸ್‌ತೀವಿ, ಇದರೆ ಹಿಂದೆ ಇಂಥದೇ ಬಂಡೆ ಹದಿತೀವಿ ನೀರು ಇದನ್ನ ನೂಕಾಕೋದ್ರೆ ಹಿಂದಗಡೆ ಬಂಡೆ ತಡಿಯುತ್ತೆ ಅದರಿಂದ ಇನ್ನೊಂದ್ ಅದರಿಂದ ಇನ್ನೊಂದ್ ಹಿಂಗೆ ಹದಿನೈದಿಪ್ಪತ್ತು ಗಜ ಒದೆ ಇರುತ್ತೆ ಹಂಗಾಗಿ ಒಡ್ಡಿಗೇನೂ ಆಗಲ್ಲ”, ಎಂದು ಒಡ್ಡಿನ ಸಾಮರ್ಥ್ಯದ ಬಗ್ಗೆ ಹೇಳಿದ.

“ಈ ಡೊಂಗರಿನಾಗೆ ಮಣ್ಣು ತುಂಬಕೆಮುತ್ತಲ್ಲಾ ಆವಾಗೆಂಗೆ” ಮಳಿಯಪ್ಪಯ್ಯ ಶಂಕೆ ವ್ಯಕ್ತಪಡಿಸಿದರು. “ಅದೇನ್ ಸ್ವಾಮಿ ಒಂದೇ ಹಳ್ಳಕೆ ತುಂಬಿಕೆಮುತ್ತೆ” ಮಣ್ಣು ತುಂಬಿಕೆಂಡೋಟೂ ಒಡ್ಡಿಗೆ ಸಗತಿ. ಇದು ಮಣ್ಣಾಗೆ ಮುಣುಗೋಗುತ್ತೆ. ಆವಾಗ ಗೌಡ್ರ ಕಟ್ಟೆ ಕಡೀಗೆ ನೀರು ಹರಿಯೋ ಹಂಗೆ ಮೂರ್ ಗಜದಗಲ ಒಂದು ಕೆಡಗು ಹೊಡೀಬೇಕು. ಆವಾಗ ನೀರು ತಾನೇ ತಾನಾಗಿ ಇತ್ತಾಗಿ ನುಗ್ಗುತ್ತೆ” ಬೋವಿ ಸಮಜಾಯಿಷಿ ಸಮಾಧಾನ ಎರಡನ್ನೂ ಹೇಳಿದ. ಕಾಮಜ್ಜ, ಗೌಡ್ರು ಮತ್ತು ಗೊಂಚಿಕಾರೂ ಇದನ್ನು ಊಹಿಸಿದ್ದರು. ಹಾಗಾಗಿ ಅವರು ಮುಂದೆ ಪ್ರತಿಕ್ರಿಯಿಸಲಿಲ್ಲ.

“ನಾವು ಕಂಡಿರೋ ಅಂಗೆ ಇಂಥಾ ಹಳ್ಳಾನೂ ನೋಡಿಲ್ಲ ಒಡ್ಡನೂ ನೋಡಿಲ್ಲ” ಮಳಿಯಪ್ಪಯ್ಯ ತಮ್ಮ ಅನುಭವವನ್ನು ಹೇಳಿಕೊಂಡರು. “ಸ್ವಾಮಿ ನಡೀರಿ. ನಾವಿದ್ದಷ್ಟೂತ್ತೂ ಕೆಲಸ ಮಾಡೋರಿಗೆ ಅಡ್ಡಿಯಾಗುತ್ತೆ” ಅನ್ನುತ್ತಾ ಗೌಡರು ಮುಂದೆ ಹೊರಟರು. ಉಳಿದವರು ಅವರನ್ನು ಹಿಂಬಾಲಿಸಿದರು. ಸಂಜೇಲಿ ಕೊನೇ ಗಾಡಿಯಲ್ಲಿ ಬಂಡೆ ತಂದವರು ಗಜಕಡ್ಡಿಯಿಂದ ಒಡ್ಡಿನ ಕಟ್ಟಡವನ್ನು ಅಳೆದು “ಹತ್ತತ್ರ ಮೂರು ಗಜಕ್ಕೆ ತಲುಪಿದೀವಿ” ಎಂದು ಸಮಾಧಾನ ಪಟ್ಟುಕೊಂಡರು.

ಹಿಂದಿನ ಸಂಚಿಕೆ ಓದಿ: 18. ಜಂಗಮಯ್ಯರಿಗೆ ಪುತ್ರೋತ್ಸವ

ಸಂಜೆ ಕಮ್ಮಾರ ಕುಲುಮೆ ಬಳಿ ಸೇರಿದ್ದ ಕೆಲವೇ ಜನ “ಈವಜ್ಜ ಬರಗಾಲದಾಗೆ ಒಡ್ಡು ಕಟ್ಟುಸ್ತಾ ಐತಲ್ಲಾ ಹೆಂಗೆ ಯೋಶ್ನೆ ಮಾಡಿರಬೌದು. ಒಡ್ಡು ಕಟ್ಟಿಸಿದರೆ ಮಳೆ ಬರುತ್ತಾ” ಒಬ್ಬಾತ ತನ್ನ ಅನುಮಾನವನ್ನು ಪ್ರಶ್ನೆರೂಪದಲ್ಲಿ ಅಲ್ಲಿದ್ದವರಿಗೆ ಕೇಳಿದ. “ಮಳೆ ಬರುತ್ತೋ ಬಿಡುತ್ತೋ ಯಾರು ಕಂಡಿದಾರೆ ಅಂತೂ ಬೋವೇರಿಗೆ ಕೈ ತುಂಬಾ ಕೆಲ್ಸ ಸಿಕ್ಕಂಗಾತು” ಎಂದು ಇನ್ನೊಬ್ಬಾತ ಪ್ರತಿಕ್ರಿಯಿಸಿದ.

“ಅವರು ಅದೃಷ್ಟವಂತರು ಕಣಪ್ಪಾ. ಬ್ಯಾಸ್ಥೆ ಕಾಲ ಬಂತು ಅಂದ್ರೆ ಯಾರನಾ ಹೊಲ್ದಾಗೆ ಏರಿನೋ ಬದಾನೋ ಹಾಕ್ತ ದುಡೀತಾರೆ. ಅವರಪ್ಪನಾಣೆ ಮನೇಗೆ ಕುಂತುಂಬದಿಲ್ಲ” ಇನ್ನೊಬ್ಬಾತ ಜೀವಿಗಳ ಬುದ್ಧಿವಂತಿಕೆಯನ್ನು ಹೊಗಳಿದ. “ಬೋವೇರೆಷ್ಟು ಬುದ್ದಿವಂತ್ರೋ ನಮ್ಮ ಯಜಮಾನಪ್ಪನೂ ಅಷ್ಟೇ ಬುದ್ದಿವಂತ. ನೋಡ್ರಿ ಇಂಥಾ ಬರದಾಗೆ ಹಳ್ಳಕೆ ಒಡ್ಡು ಕಟ್ಟಿಸ್ತಾ ಐದಾನೇ ಅಂದ್ರೆ ಅದೇನ್ ಸಾಮಾನ್ಯ ವಿಷ್ಯಾನೇ” ಮೊದಲನೆಯಾತ ಕಾಮಜ್ಜನ ಮುಂದಾಲೋಚನೆಯನ್ನು ಹೊಗಳಿದ.

ಊರ ಜನ ಬಿರುಬಿಸಿಲನ್ನು ಲೆಕ್ಕಿಸದೆ ಕಾಮಜ್ಜನ ಒಡ್ಡು ನಿರಾಣದ ಸ್ಥಳಕ್ಕೆ ತಂಡೋಪತಂಡವಾಗಿ ಹೋಗಿ ಅಲ್ಲಿ ಸದ್ದಿಲ್ಲದೆ ನಡೆದಿರುವ ಕಾಮಗಾರಿಯನ್ನು ನೋಡಿದರು. ಹೊಂಗೆ ಗಿಡದ ಹರಕು ನೆರಳಿನಲ್ಲಿ ಕುಳಿತಿರುತ್ತಿದ್ದ ಕಾಮಜ್ಜನನ್ನು ಕುರಿತು “ಇಂಥಾ ವಯಸ್ನಾಗೂ ಈ ಅಜ್ಜ ಬೋ ಗಟ್ಟಿಗ ಕಣಯ್ಯಾ ಹಿಂದೆ ಎಂಥೆಂಥಾ ಕಷ್ಟ ಅನುಭವಿಸಿದ್ಯೋ ಅವಜ್ಜಗೇ ಗೊತ್ತು”.

ಹಿಂದಿನ ಸಂಚಿಕೆ ಓದಿ: 19. ಊರ ಬಾವಿ ತೋಡಿದರು

ಎಂದು ಕಾಮಜ್ಜನ ಗಡಸುತನವನ್ನು ಮೆಚ್ಚಿ ಮಾತಾಡಿದ್ದರು. “ಉರಿಯ ಬಿಸ್ಲಾಗೆ ಇಲ್ಲಿಗೆ ಯಾಕೆ ಬಂದ್ರಿ, ಸಂಜಿ ಮುಂದೆ ಬಂದು ನೋಡಬೌದಿತ್ತಲ್ಲಾ” ಎಂಬ ಅಜ್ಜನ ಮಾತಿಗೆ “ನೀನು ಮಾತ್ರ ಬಿಸ್ಲಾಗೆ ಕೂಡಬೌದು. ನಾವು ಬರಾದ್ ಬ್ಯಾಡ್ಡೆ?” ಎಂದು ಸಮಾಧಾನ ಹೇಳಿದ್ದರು.

ಅಂತೂ ಕಾಮಜ್ಜನ ಒಡ್ಡು ನಿರಾಣ ಊರಲೆಲ್ಲಾ ಸುದ್ದಿಯಾಗಿ ಪ್ರಖ್ಯಾತಿ ಪಡೆದಿತ್ತು, “ಕಾಮಜ್ಜನ ಒಡ್ಡು ನಿರಾಣದಿಂದಲಾದರೂ ಮಳೆ ಬಿದ್ದು ಹಳ್ಳ ಹರೀಲಪ್ಪಾ ಏಳುಕೋಟಿ” ಎಂದು ಪ್ರಾರ್ಥಿಸಿದರು ಅನೇಕ ಜನ.

ಇದ್ದಕ್ಕಿದ್ದಂತೆ ಒಂದು ಸಂಜೆ “ಒಡ್ಡು ಕಟ್ಟಾದು ಮುಗೀತು. ಇದಕ್ಕೆ ಒದೆಕಲ್ಲು ಬಂಡೆ ಜೋಡಿಸಾದು ಉಳಕಂಡೈತೆ ಎಂಬ ಸುದ್ದಿ ಹಬ್ಬಿತ್ತು ಮಾರನೇ ದಿನ ಊರ ಜನ ಊಟ ಮಾಡಿದವರೇ ಹೆಣ್ಣು ಗಂಡು ಭೇದವಿಲ್ಲದೆ ಕಾಮಜ್ಜನ ಒಡ್ಡನ್ನು ನೋಡಿ ಬಂದರು. ಒಬ್ಬೊಬ್ಬರ ಬಾಯಲ್ಲಿ ಒಂದೊಂದು ರೀತಿಯ ಪ್ರಶಂಸೆಗಳು ಕೇಳಿ ಬಂದವು. ಒದೆಕಲ್ಲು ಹಬ್ಬಿಸುವ ಕೆಲಸ ಮುಗಿಸುವ ತನಕ ಕಾಮಜ್ಜ ಊರು ಸೇರಲಿಲ್ಲ. ಬೆಳಿಗ್ಗೆಯಿಂದ ಸಂಜೆಯ ತನಕ ಒಡ್ಡಿನ ಮೇಲೆ ಒದೆಕಲ್ಲುಗಳ ಮೇಲೆ ಓಡಾಡಿದ್ದೇ ಆತನ ಕೆಲಸವಾಗಿತ್ತು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Bayalu Seeme NovelChitradurgaChitradurga newsChitradurga UpdatesfeaturedGounahalliGS UjjanappaHubbida MalemadhyadolageKannada Latest NewsKannada NewsKannada NovelSunday Specialಕನ್ನಡ ಕಾದಂಬರಿಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಜಿ.ಎಸ್.ಉಜ್ಜನಪ್ಪಬಯಲು ಸೀಮೆ ಕಾದಂಬರಿಸಂಡೇ ಸ್ಪೆಷಲ್ಹಬ್ಬಿದಾ ಮಲೆಮಧ್ಯದೊಳಗೆ
Share This Article
Facebook Email Print
Previous Article ಗ್ರಂಥಾಲಯ, ಹಾಸ್ಟೆಲ್ ಗಳಿಗೆ ಜಿ.ಪಂ ಸಿಇಒ ಧಿಡೀರ್ ಭೇಟಿ | ಪರಿಶೀಲನೆ
Next Article Govinda karajola ಚಳ್ಳಕೆರೆ – ಚಿತ್ರದುರ್ಗ, ಹಿರಿಯೂರು – ಹೊಸದುರ್ಗ ರಸ್ತೆ ಅಭಿವೃದ್ಧಿಗೆ ಅನುದಾನ | ಸಂಸದ ಗೋವಿಂದ ಕಾರಜೋಳ
Leave a Comment

Leave a Reply Cancel reply

Your email address will not be published. Required fields are marked *

ಲಿಫ್ಟ್ ಹತ್ತಿದ ತಕ್ಷಣ ತಲೆ ಸುತ್ತುವವರು ಒಮ್ಮೆ ಈ ವಿಚಾರ ತಿಳಿದಿರಿ
Life Style
ಮಳೆಗಾಲದಲ್ಲಿ ಶೀತ ಮತ್ತು ಕೆಮ್ಮು ಬಂದಾಗ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು? ಎಂಬುದನ್ನು ತಿಳಿಯಿರಿ
Life Style
ಹೆರಿಗೆಯ ನಂತರ ಬೇಗ ಚೇತರಿಸಿಕೊಳ್ಳಲು ಈ ಲಡ್ಡುಗಳನ್ನು ತಿನ್ನಿರಿ
Life Style
today bhavishya
Astrology: ದಿನ ಭವಿಷ್ಯ | ಜೂನ್ 30 | ಉದ್ಯೋಗಗಳಲ್ಲಿ ಬಡ್ತಿ, ದೂರದ ಪ್ರಯಾಣ, ಆರೋಗ್ಯದಲ್ಲಿ ಎಚ್ಚರ
Dina Bhavishya
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up