ಮುಖ್ಯ ಸುದ್ದಿ
Mallikarjuna Swamiji: ಮಲ್ಲಿಕಾರ್ಜುನ ಸ್ವಾಮೀಜಿ 30ನೇ ಸ್ಮರಣೋತ್ಸವ | ಒಂಟಿಕಂಬದ ಮಠದಲ್ಲಿ ಸಿದ್ಧತೆ

CHITRADURGA NEWS | 05 AUGUST 2024
ಚಿತ್ರದುರ್ಗ: ಹೊಳಲ್ಕೆರೆಯ ಒಂಟಿಕಂಬದ ಮುರುಘಾಮಠದಲ್ಲಿ ಆಗಸ್ಟ್ 8 ರಂದು ಬೆಳಿಗ್ಗೆ 10.30 ಚಿತ್ರದುರ್ಗ ಮುರುಘ ರಾಜೇಂದ್ರ ಬೃಹನ್ಮಠದ 26ನೇ ಅಧ್ಯಕ್ಷರಾದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಯ 30ನೇ ಸ್ಮರಣೋತ್ಸವ ಹಾಗೂ ಚಿನ್ಮೂಲಾದ್ರಿಯ ಚಿತ್ಕಳೆ ಸ್ಮರಣೋತ್ಸವ ಸಂಪುಟ ಲೋಕಾರ್ಪಣೆ ಸಮಾರಂಭ ನಡೆಯಲಿದೆ ಎಂದು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ತಿಳಿಸಿದರು.
ಮುರುಘಾ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ಜಯದೇವ ಜಗದ್ಗುರುಗಳು ಹಸಿವನ್ನು ಹಿಂಗಿಸಿದರೆ ಮಲ್ಲಿಕಾರ್ಜುನ ಜಗದ್ಗುರುಗಳು ಜ್ಞಾನದ ಹಸಿವನ್ನು ತಣಿಸಿದವರು. ಅನುಭಾವದ ನೆಲೆಯಲ್ಲಿ ಮಾತನಾಡುತ್ತಿದ್ದರು. ಮಲ್ಲಿಕಾರ್ಜುನ ಶ್ರೀಗಳವರದು ಸಾರ್ವಜನಿಕ ವಲಯದಲ್ಲಿ ಸರಳ ಮತ್ತು ವಿದ್ವತ್ಪೂರ್ಣವಾದ ಬದುಕಾಗಿತ್ತು’ ಎಂದರು.
ಇದನ್ನು ಓದಿ: ಜನ ನಿಮ್ಮನ್ನು ಕ್ಷಮಿಸುವುದಿಲ್ಲ | ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ
‘1966ರಲ್ಲಿ ಎಸ್ಜೆಎಂ ವಿದ್ಯಾಪೀಠ ಸ್ಥಾಪಿಸಿ, ಎಂಜಿನಿಯರ್ ಕಾಲೇಜಿನಿಂದ ಹಿಡಿದು ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದರು. ತುಮಕೂರು ಸಿದ್ಧಗಂಗಾ ಮಹಾಸ್ವಾಮಿಗಳು ಮಲ್ಲಿಕಾರ್ಜುನ ಶ್ರೀಗಳನ್ನು ಕುರಿತು ಸಾಕ್ಷಾತ್ ಮುರಿಗಿ ಸ್ವಾಮಿಗಳು ಎಂದು ಹೇಳುತ್ತಿದ್ದರು. ಅವರ ಬಗ್ಗೆ ಮಾತನಾಡುವುದಕ್ಕಿಂತ ಅವರ ವ್ಯಕ್ತಿತ್ವ ದೊಡ್ಡದು’ ಎಂದು ತಿಳಿಸಿದರು.
‘ಶ್ರೀಗಳು ಪಟ್ಟಕ್ಕೆ ಬಂದು ಮೂವತ್ತು ವರ್ಷ ಮತ್ತು ಅವರು ಲಿಂಗೈಕ್ಯರಾಗಿ 30ವರ್ಷ ಆಗುತ್ತಿರುವ ಈ ಸಂದರ್ಭವನ್ನು ಸ್ಮರಣೀಯವಾಗಿಸುವ ಹಿನ್ನೆಲೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಸಲಾಗುತ್ತಿದೆ. ಶ್ರೀಗಳ ಅಪರೂಪದ ಛಾಯಾಚಿತ್ರ ಪ್ರದರ್ಶನ ಮತ್ತು ಅವರ ಕುರಿತು ಡಾ. ಲಕ್ಷ್ಮಣ ತೆಲಗಾವಿ ಪ್ರಧಾನ ಸಂಪಾದಕತ್ವದಲ್ಲಿ ಮತ್ತು ಕೆ.ಎಲ್.ರಾಜಶೇಖರ್್ ಸಂಪಾದಕತ್ವದಲ್ಲಿ ಹೊರ ಬಂದಿರುವ ‘ಚಿನ್ಮೂಲಾದ್ರಿ ಚಿತ್ಕಳೆ’ ಎಂಬ ಬೃಹತ್ ಗ್ರಂಥವನ್ನು ಲೋಕಾರ್ಪಣೆಗೊಳಿಸಲಾಗುತ್ತದೆ’ ಎಂದರು.
‘ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲದೇಶೀಕೇಂದ್ರ ಸ್ವಾಮೀಜಿ, ಇಳಕಲ್ನ ಗುರುಮಹಾಂತ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹೆಬ್ಬಾಳು ವಿರಕ್ತಮಠದ ಮಹಾಂತರುದ್ರೇಶ್ವರ ಸ್ವಾಮೀಜಿ, ರಾವಂದೂರು ವಿರಕ್ತಮಠದ ಮೋಕ್ಷಪತಿ ಸ್ವಾಮೀಜಿ, ಬೆಂಗಳೂರು ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಸ್ವಾಮೀಜಿ’ ಸಾನ್ನಿಧ್ಯವಹಿಸವರು ಎಂದು ತಿಳಿಸಿದರು.

ಮಲ್ಲಿಕಾರ್ಜುನ ಸ್ವಾಮೀಜಿಯ 30ನೇ ಸ್ಮರಣೋತ್ಸವ ಹಾಗೂ ಚಿನ್ಮೂಲಾದ್ರಿಯ ಚಿತ್ಕಳೆ ಸ್ಮರಣೋತ್ಸವ ಸಂಪುಟ ಲೋಕಾರ್ಪಣೆ ಸಮಾರಂಭದ ಪೋಸ್ಟರ್ಅನ್ನು ಡಾ.ಬಸವಕುಮಾರ ಸ್ವಾಮೀಜಿ ಬಿಡುಗಡೆಗೊಳಿಸಿದರು.
‘ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ಮಾದಾರಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಭೋವಿಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನ ವಾಲ್ಮೀಕಿ ಸ್ವಾಮೀಜಿ, ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ, ಬೇಲೂರು ವಿರಕ್ತಮಠದ ಶಿವಬಸವ ಸ್ವಾಮೀಜಿ, ಮಡಿವಾಳ ಮಾಚಿದೇವ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ’ ಸಮ್ಮುಖ ವಹಿಸುವರು ಎಂದು ವಿವರಿಸಿದರು.
‘ಶ್ರೀಮಠ ಮತ್ತು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಅಧ್ಯಕ್ಷತೆ ವಹಿಸುವರು. ಆಡಳಿತ ಮಂಡಳಿ ಸದಸ್ಯ ಎಸ್.ಎನ್. ಚಂದ್ರಶೇಖರ್ ಬಸವಮಂಟಪದ ನೂತನ ವಸತಿಗೃಹ ಉದ್ಘಾಟಿಸುವರು. ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಎಂ.ಕಾರಜೋಳ, ಶಾಸಕರಾದ ಎಂ. ಚಂದ್ರಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ, ವಿಧಾನಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಡಿ.ಟಿ.ಶ್ರೀನಿವಾಸ್, ಚಿದಾನಂದಗೌಡ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಶಾಸಕರಾದ ಪಿ.ರಮೇಶ್, ಎಂ.ಬಿ.ತಿಪ್ಪೇರುದ್ರಪ್ಪ, ಎ.ವಿ.ಉಮಾಪತಿ, ಟಿ.ಎಚ್.ಬಸವರಾಜು’ ಭಾಗವಹಿಸುವರು ಎಂದರು.
ಆಡಳಿತ ಮಂಡಳಿ ಸದಸ್ಯ ಡಾ.ಪಿ.ಎಸ್.ಚಂದ್ರಶೇಖರ್, ನಾಡಿನ ಶಾಖಾ-ಖಾಸಾಮಠಗಳ ಹಾಗೂ ವಿವಿಧ ಸಮಾಜಗಳ ಪೂಜ್ಯರುಗಳು ಹರಗುರು ಚರಮೂರ್ತಿಗಳು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
