ಮುಖ್ಯ ಸುದ್ದಿ
ಗರ್ಭಿಣಿ ಮಹಿಳೆಯರಿಗೆ ಆರೋಗ್ಯ ಇಲಾಖೆಯ ಹೊಸ ಯೋಜನೆ | ವಿವರ ಇಲ್ಲಿದೆ

CHITRADURGA NEWS | 02 APRIL 2025
ಚಿತ್ರದುರ್ಗ: ಗರ್ಭಿಣಿಯರಿಗೆ ಕಿಲ್ಕಾರಿ ಯೋಜನೆಯ ಮಹತ್ವ ತಿಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಕಿಲ್ಕಾರಿ ಯೋಜನೆಯ ಆಡಿಯೋ ಸಂದೇಶಗಳನ್ನು ಆಲಿಸಲು ವ್ಯವಸ್ಥೆ ಮಾಡುವಂತೆ ಜಿ.ಪಂ.ಸಿಇಓ ಎನ್.ಜೆ.ಸೋಮಶೇಖರ್ ಹೇಳಿದರು.
Also Read: ಯುಗಾದಿ ಜೂಜು | ಜಿಲ್ಲೆಯಲ್ಲಿ 850 ಜನರ ಬಂಧನ | ಪೊಲೀಸ್ ಇಲಾಖೆಯ ಭರ್ಜರಿ ಕಾರ್ಯಚರಣೆ
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಕಿಲ್ಕಾರಿ ಯೋಜನೆಯ ಅನುಷ್ಠಾನ ಕುರಿತಂತೆ ಜಿಲ್ಲಾ ಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಬರುವ ಎಲ್ಲಾ ಗರ್ಭಿಣಿಯರಿಗೆ ಪೋಷ್ಠಿಕ ಆಹಾರ ಸೇವನೆಯ ಜೊತೆಗೆ ಮುಂಜಾಗೃತ ಕ್ರಮಗಳನ್ನು ತಿಳಿಸಬೇಕು. ಆಶಾ ಕಾರ್ಯಕರ್ತೆಯರು ನಿಯಮಿತವಾಗಿ ಗರ್ಭಿಣಿಯರ ಮನೆಗಳಿಗೆ ತೆರಳಿ, ಅವರ ಆರೋಗ್ಯದ ಕುರಿತು ಮಾಹಿತಿ ಸಂಗ್ರಹಿಸಬೇಕು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಹ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳೊಂದಿಗೆ ಸಹಕರಿಸಿ ಕಿಲ್ಕಾರಿ ಯೋಜನೆ ಅನುಷ್ಠಾನಕ್ಕೆ ಬೆಂಬಲಿಸಿಬೇಕು. ತಾಯಿ ಹಾಗೂ ಶಿಶು ಮರಣ ನಿಯಂತ್ರಿಸಲು, ಅಪೌಷ್ಟಿಕತೆ ಹೋಗಲಾಡಿಸಲು, ಮಕ್ಕಳ ಲಸಿಕಾ ಪ್ರಮಾಣ 100ಕ್ಕೆ 100 ರಷ್ಟು ಗುರಿ ಸಾಧಿಸಲು ಕಿಲ್ಕಾರಿ ಯೋಜನೆ ಸಹಕಾರಿಯಾಗಿಲಿದೆ ಎಂದರು.
Also Read: ಕರ್ತವ್ಯ ಲೋಪ | ಶುಶ್ರೂಷಾಧಿಕಾರಿ ಎಸ್.ಸಿದ್ದೇಶ್ವರ ಅಮಾನತು
ತಾಯಿ ಮಕ್ಕಳ ಆರೋಗ್ಯ ಬಲಪಡಿಸಲು ಕಿಲ್ಕಾರಿ ಯೋಜನೆಯನ್ನು ಜಿಲ್ಲೆಯ ಎಲ್ಲಾ ನೊಂದಾಯಿತ ಮತ್ತು ಒಂದು ವರ್ಷದೊಳಗಿನ ಮಕ್ಕಳ ತಾಯಂದಿರಿಗೆ ಮೊಬೈಲ್ ಮೂಲಕ ಮಾಹಿತಿ ಶಿಕ್ಷಣ ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಸೂಚಿಸಿದರು.
ಡಿ.ಹೆಚ್.ಓ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ ಆರ್.ಸಿ.ಹೆಚ್.ಪೋರ್ಟಲ್ ನಲ್ಲಿ ಪ್ರಸಕ್ತ ವರ್ಷದಲ್ಲಿ 12,015 ನೋಂದಾಯಿತ ಗರ್ಭಿಣಿಯರು, 26,100 ಒಂದು ವರ್ಷದೊಳಗಿನ ಮಕ್ಕಳ ತಾಯಂದಿರು ಜಿಲ್ಲೆಯಾದ್ಯಂತ ನೋಂದಾಣಿಯಾಗಿದ್ದಾರೆ. ಇವರೆಲ್ಲರೂ ಕಿಲ್ಕಾರಿ ಯೋಜನೆಯ ಫಲಾನುಭವಿಗಳು.
ಇವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಿಲ್ಕಾರಿ ಯೋಜನೆ ಸಂದೇಶದ ರೆಕಾರ್ಡ್ ಕರೆ ಮಾಡಲಾಗುತ್ತಿದೆ. ಇದರಲ್ಲಿ ಡಾ.ಅನಿತ, ಡಾ.ಆನಂದ್ ಎಂಬ ಕಾಲ್ಪನಿಕ ವೈದ್ಯರು ಗರ್ಭಿಣಿ ಆರೈಕೆ, ಬಾಣಂತಿ ಆರೈಕೆ, ಮಕ್ಕಳ ಆರೈಕೆ,ಪೌಷ್ಟಿಕಾಹಾರ ಲಸಿಕಾ ವೇಳಾಪಟ್ಟಿಯ ಕುರಿತು ತಾಯಂದಿರಿಗೆ ತಿಳಿಸಿಕೊಡುತ್ತಿದ್ದಾರೆ. ತಪ್ಪದೇ ಕಿಲ್ಕಾರಿ ಕರೆ ಬಂದಾಗ ಕರೆ ಸ್ವೀಕರಿಸುವಂತೆ ಗರ್ಭಿಣಿಯರಿಗೆ ಹಾಗೂ ತಾಯಂದಿರಿಗೆ ಆಶಾ ಕಾರ್ಯಕರ್ತೆಯರು ಮನವರಿಕೆ ಮಾಡಿಕೊಡಬೇಕು ಎಂದರು.
Also Read: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ | ಇಬ್ಬರು ಸಾವು | ಮೂವರಿಗೆ ಗಾಯ
ಆರ್.ಸಿ.ಹೆಚ್. ಅಧಿಕಾರಿ ಡಾ.ಡಿ.ಎಮ್.ಅಭಿನವ ಮಾತನಾಡಿ, ಕಿಲ್ಕಾರಿ ಕಾರ್ಯಕ್ರಮವು ಮೊಬೈಲ್ ಆಧಾರಿತ ಸೇವೆಯಾಗಿದೆ. 15 ಜನವರಿ 2016 ರಂದು ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಹೊಸ ಮತ್ತು ಹಾಲಿ ಗರ್ಭಿಣಿಯರಿಗೆ ನೇರವಾಗಿ ಕರೆ ಮಾಡಿ ಮಾಹಿತಿ ಒದಗಿಸಲಾಗುತ್ತಿದೆ.
ಹೊಸ ಮತ್ತು ನಿರೀಕ್ಷಿತ ತಾಯಂದಿರಿಗೆ ಪ್ರಮುಖ ಆರೋಗ್ಯ ಮಾಹಿತಿಯನ್ನು ನೇರವಾಗಿ ತಲುಪಿಸಲು ಮೊಬೈಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಗರ್ಭಧಾರಣೆ, ಹೆರಿಗೆ ಮತ್ತು ಶಿಶುಪಾಲನೆಯ ಬಗ್ಗೆ ಸಂದೇಶಗಳನ್ನು ತಲುಪಿಸುವ ಮೂಲಕ ನವಜಾತ ಶಿಶುಗಳ ಆರೈಕೆಗಾಗಿ ಆರೋಗ್ಯಕರ ಆಯ್ಕೆಗಳನ್ನು ಮಾಡಲು ಅವರನ್ನು ಪ್ರೋತ್ಸಾಹಿಸುವುದು ಎಂದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಕುಟುಂಬ ಯೋಜನಾಧಿಕಾರಿ ಡಾ.ರೇಖಾ, ಹೊಸದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಘವೇಂದ್ರ ಪ್ರಸಾದ್, ಮೊಳಕಾಲ್ಮೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಕುಮಾರ್, ಜಿಲ್ಲಾ ವ್ಯವಸ್ಥಾಪಕ ಪ್ರಫುಲ್ಲಾ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ವೀರೇಂದ್ರ ಪಾಟೀಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಪೂರ್ಣಿಮಾ, ಅರ್ಜುನ್, ದಸ್ತಗೀರ್ ಸಾಬ್ ಇತರರು ಉಪಸ್ಥಿತರಿದ್ದರು.
Also Read: ನೀವು ಯಾವಾಗಲೂ ಯಂಗ್ ಆಗಿ ಕಾಣಬೇಕೇ…? ಈ ಆಹಾರಗಳನ್ನು ತಪ್ಪದೇ ಸೇವಿಸಿ ನೋಡಿ!
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮ ಚಟುವಟಿಕೆಗಳನ್ನು ಸಭೆಯಲ್ಲಿ ಪ್ರದರ್ಶಿಸಿದರು.
