Connect with us

ಬೋರ್‌ವೆಲ್‌ ಕೊರೆಯಲು ಏಕರೂಪ ದರ ನಿಗದಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

ಮುಖ್ಯ ಸುದ್ದಿ

ಬೋರ್‌ವೆಲ್‌ ಕೊರೆಯಲು ಏಕರೂಪ ದರ ನಿಗದಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

CHITRADURGA NEWS | 15 MARCH 2024
ಚಿತ್ರದುರ್ಗ: ರೈತರಿಗೆ ಹೊರೆಯಾಗದಂತೆ ಹಾಗೂ ಬೋರ್‌ವೆಲ್‌ ಕೊರೆಯುವ ಮಾಲೀಕರಿಗೆ ಹಾಗೂ ಏಜೆನ್ಸಿಗಳಿಗೂ ನಷ್ಟವಾಗದಂತೆ ಬೋರ್‌ವೆಲ್‌ ಕೊರೆಯಲು ಏಕರೂಪ ದರ ನಿಗದಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಅಂತರ್ಜಲ ಕುಸಿತದಿಂದಾಗಿ ಬೋರ್‌ವೆಲ್‌ ಗಳು ಬರಿದಾಗುತ್ತಿದ್ದು, ಬೋರ್‌ವೆಲ್‌ ಕೊರೆಯಲು ಅತ್ಯಂತ ದುಬಾರಿ ಶುಲ್ಕವನ್ನು ವಸೂಲಿ ಮಾಡಿ ರೈತರ ಶೋಷಣೆ ಮಾಡುತ್ತಿದ್ದು, ಈ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬೋರ್‌ವೆಲ್‌ ಕೊರೆಯುವ ಏಜೆನ್ಸಿಗಳು ಹಾಗೂ ರೈತರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಬೋರ್‌ವೆಲ್‌ ಕೊರೆಯಲು ಏಕರೂಪ ದರನಿಗದಿಗೆ ತಾಲ್ಲೂಕುವಾರು ಆಯಾ ತಹಶೀಲ್ದಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ರೈತ ಸಂಘನೆಗಳ ಮುಖಂಡರು, ಬೋರ್‌ವೆಲ್‌ ಏಜೆನ್ಸಿಗಳನ್ನು ಒಳಗೊಂಡಂತೆ ಒಂದು ಸಮಿತಿಯನ್ನು ರಚನೆ ಮಾಡಿ, ಏಕರೂಪ ದರ ನಿಗದಿಪಡಿಸಬೇಕು ಎಂದು ಸೂಚನೆ ನೀಡಿದ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ಬರಗಾಲದ ತೀವ್ರತೆ ಹೆಚ್ಚಾಗಿದೆ. ರೈತರಿಗೆ ಹೆಚ್ಚಿನ ದರ ವಿಧಿಸದೆ ಬೋರ್‍ವೆಲ್ ಮಾಲೀಕರು ಕಾಳಜಿ ವಹಿಸಿ ಏಕರೂಪದ ದರದಲ್ಲಿ ರೈತರಿಗೆ ಬೋರ್‌ವೆಲ್‌ ಕೊರೆಯುವಂತೆ ತಾಕೀತು ಮಾಡಿದರು.

ವಿಫಲವಾದ ಬೋರ್‌ವೆಲ್‌ ಗಳನ್ನು ಸಂಬಂಧಪಟ್ಟ ಬೋರ್‍ವೆಲ್ ಏಜೆನ್ಸಿಗಳು ತಕ್ಷಣವೇ ಮುಚ್ಚಲು ಕ್ರಮ ವಹಿಸಬೇಕು. ವಿಫಲವಾದ ಬೋರ್‍ವೆಲ್ ಕೇಸಿಂಗ್ ಪೈಪ್‍ಗೆ ಯಾವುದೇ ಕಾರಣಕ್ಕೂ ಚಾರ್ಜ್ ತೆಗೆದುಕೊಳ್ಳಬಾರದು. ಕಡ್ಡಾಯವಾಗಿ ಬಿಲ್ ನೀಡಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಸೂಚನೆ ನೀಡಿದರು.

ಕ್ಲಿಕ್ ಮಾಡಿ ಓದಿ: https://chitradurganews.com/davangere-daughter-in-law-of-durga-is-a-bjp-candidate/

ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ಕಳೆದ ಒಂದು ತಿಂಗಳ ಹಿಂದೆ ಬೋರ್‍ವೆಲ್ ಕೊರೆಯಲು ಒಂದು ಅಡಿಗೆ ರೂ.90 ಇತ್ತು. ಆದರೆ ಇದೀಗ ರೂ.120 ರಿಂದ 130ಕ್ಕೆ ದರ ಏರಿಕೆಯಾಗಿದೆ. ಯಾವ ಆಧಾರದ ಮೇಲೆ ದರ ಏರಿಕೆ ಮಾಡಲಾಗಿದೆ ಎಂದು ಪ್ರಶ್ನಿಸಿದ ಅವರು, ರೈತರು ಅಸಂಘಟಿತರಾಗಿರುವುದರಿಂದ ಪ್ರಶ್ನೆ ಮಾಡಲು ಸಾಧ್ಯವಾಗುತ್ತಿಲ್ಲ. ಬೋರ್‍ವೆಲ್ ಏಜೆನ್ಸಿಗಳಿಂದ ರೈತರಿಗೆ ಶೋಷಣೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬರಗಾಲದ ಪರಿಸ್ಥಿತಿಯಲ್ಲಿ ರೈತರಿಗೆ ಮಾನವೀಯತೆಯಿಂದ ಕಾಳಜಿ ವಹಿಸಿ, ರಿಯಾಯಿತಿ ದರದಲ್ಲಿ ರೈತರಿಗೆ ಶೋಷಣೆಯಾಗದಂತೆ, ಬೋರ್‍ವೆಲ್ ಕೊರೆಯಬೇಕು ಎಂದು ಮನವಿ ಮಾಡಿದರು.

ರೈತಮುಖಂಡ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ದೇಶದ 140 ಕೋಟಿ ಜನಸಂಖ್ಯೆಗೆ ರೈತರು ಕೃಷಿ ಮಾಡಿ ಆಹಾರ ಭದ್ರತೆ ಕಾಪಾಡಿಕೊಂಡು ಬಂದಿದ್ದಾರೆ. ಬೋರ್‍ವೆಲ್ ವಿಚಾರದಲ್ಲಿ ರೈತರಿಗೆ ಸಾಕಷ್ಟು ಶೋಷಣೆಯಾಗುತ್ತಿದ್ದು, ಇದಕ್ಕೆ ಸರಿಯಾದ ಮಾನದಂಡ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.

ಬೋರ್‍ವೆಲ್ ಕೊರೆಯುವ ವಾಹನಗಳ ಮಾಲೀಕರು, ಏಜೆನ್ಸಿಗಳ ಪ್ರತಿನಿಧಿಗಳು ಮಾತನಾಡಿ, ಬೋರ್‍ವೆಲ್ ಕೊರೆಯಲು ಕಾರ್ಮಿಕರ ಸಮಸ್ಯೆ ತೀವ್ರವಾಗಿದೆ. ಛತ್ತಿಸ್‍ಘಡದಿಂದ ಕಾರ್ಮಿಕರನ್ನು ಕರೆದುಕೊಂಡು ಬರಲಾಗುತ್ತಿದೆ. ಉಪಕರಣಗಳ ವೆಚ್ಚವೂ ಹೆಚ್ಚಾಗಿದೆ. ನಾವು ಕೂಡ ರೈತರ ಪರವಾಗಿದ್ದೇವೆ. ಕಾರ್ಮಿಕರ ಕೊರತೆಯಿಂದ ಶೇ.25ರಷ್ಟು ಬೋರ್‍ವೆಲ್ ಕೊರೆಯುವ ವಾಹನಗಳು ಸ್ಥಗಿತಗೊಂಡಿವೆ ಎಂದು ಹೇಳಿದರು.

ಕ್ಲಿಕ್ ಮಾಡಿ ಓದಿ:https://chitradurganews.com/former-mp-bn-chandrappa-is-upset/

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ ಸೇರಿದಂತೆ ಜಿಲ್ಲೆಯ ರೈತ ಮುಖಂಡರು, ಬೋರ್‍ವೆಲ್ ಕೊರೆಯುವ ವಾಹನಗಳ ಮಾಲೀಕರು ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version