ಅಕ್ಕ-ತಂಗಿಯರ ನಡುವೆ ಮುನಿಸು ತಂದ ಕಥೆ ಗೊತ್ತಾ | ದೇವತೆಗಳ ನಡುವೆ ಮಕ್ಕಳ ವಿಚಾರದಲ್ಲಿ ಬಂದಿತ್ತು ವೈಮನಸ್ಸು | ಇದನ್ನು ಓದಿ ಭೇಟಿ ಉತ್ಸವಕ್ಕೆ ಬನ್ನಿ

ಶ್ರೀ ಬರಗೇರಮ್ಮ ದೇವಿ ಹಾಗೂ ಶ್ರೀ ತಿಪ್ಪಿನಘಟ್ಟಮ್ಮ ದೇವಿ

CHITRADURGA NEWS | 07 MAY 2024

ಸಣ್ಣ, ಪುಟ್ಟ ವಿಚಾರಗಳಿಗೆ ಸಿಟ್ಟು, ಸಿಡುಕು, ಮುನಿಸು ಬರುವುದು ಮನುಷ್ಯ ಸಹಜ ಗುಣ. ಆದರೆ, ಈ ಮನಸ್ತಾಪಗಳು ದೇವಾನುದೇವತೆಗಳನ್ನೇ ಬಿಟ್ಟಿಲ್ಲ.

ಹೌದು, ಚಿತ್ರದುರ್ಗದಲ್ಲಿ ದೇವತೆಗಳ ನಡುವೆ ಇಂಥದ್ದೊಂದು ಮುನಿಸು, ವೈಮನಸ್ಸು ಬಂದಿದ್ದ ಕಾರಣಕ್ಕೆ ಇಡೀ ದುರ್ಗದ ಜನತೆ ಇಂದು ಭೇಟಿ ಉತ್ಸವ ಎಂಬ ಹಬ್ಬವನ್ನೇ ಆಚರಣೆ ಮಾಡುವ ಮೂಲಕ ಸ್ಮರಣೆ ಮಾಡುತ್ತಾರೆ.

ಇದನ್ನೂ ಓದಿ: ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ

ಚಿತ್ರದುರ್ಗದ ನವದುರ್ಗೆಯರ ಪೈಕಿ ಶ್ರೀ ಬರಗೇರಮ್ಮ ದೇವಿ ಹಾಗೂ ಶ್ರೀ ತಿಪ್ಪಿನಘಟ್ಟಮ್ಮ ದೇವಿಯರ ನಡುವೆ ಮಕ್ಕಳ ವಿಚಾರದಲ್ಲಿ ಮೂಡಿದ ವೈಮನಸ್ಸು, ಮಕ್ಕಳು ಕಲ್ಲಾಗುವಂತೆ ಮಾಡುತ್ತದೆ. ಆನಂತರ ಪರಸ್ಪರ ಮುಖವನ್ನೇ ನೋಡಿಕೊಳ್ಳದ ಸ್ಥಿತಿ ತಲುಪಿ, ಹಿರಿಯಕ್ಕ, ದುರ್ಗದ ಅಧಿದೇವತೆ ತಾಯಿ ಶ್ರೀ ಏಕನಾಥೇಶ್ವರಿ ಇಬ್ಬರನ್ನೂ ವರ್ಷಕ್ಕೊಮ್ಮೆ ಭೇಟಿ ಮಾಡಿಸುವ ಆಚರಣೆಯೇ ಭೇಟಿ ಉತ್ಸವ. ಯುಗಾದಿ ಹಬ್ಬವಾದ 15 ದಿನಗಳ ನಂತರ ಬರುವ ಮಂಗಳವಾರ ಈ ಅಕ್ಕ ತಂಗಿಯರ ಭೇಟಿ ಉತ್ಸವ ನೆರವೇರುತ್ತದೆ.

ಹಾಗಿದ್ದರೆ ಈ ಅಕ್ಕ ತಂಗಿ ಭೇಟಿ ಉತ್ಸವದ ಹಿನ್ನೆಲೆ ಏನೆಂದು ನೋಡುವುದಾದರೆ, ಜಾನಪದ ಕಥೆಗಳ ಆಧಾರದಲ್ಲಿ ದುರ್ಗದ ಹಿರಿಯರು ಈ ಘಟನೆ ವಿವರಿಸುತ್ತಾರೆ.

ಇದನ್ನೂ ಓದಿ: ಮತ ಚಲಾಯಿಸಿದ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ

ಚಿತ್ರದುರ್ಗದ ನವದುರ್ಗೆಯರು ಎಂದು ಜನ ಆರಾಧಿಸುವ ಶ್ರೀ ಏಕನಾಥೇಶ್ವರಿದೇವಿ, ಉಚ್ಚಂಗಿ ಯಲ್ಲಮ್ಮ ದೇವಿ, ಬರಗೇರಮ್ಮ ದೇವಿ, ತಿಪ್ಪಿನಘಟ್ಟಮ್ಮ ದೇವಿ, ಕಣಿವೆಮಾರಮ್ಮ ದೇವಿ, ಚೌಡಮ್ಮ ದೇವಿ, ಗೌರಸಂದ್ರಮಾರಮ್ಮ ದೇವಿ, ಕುಕ್ಕವಾಡೇಶ್ವರಿ ದೇವಿ, ಕಾಳಿ ದೇವತೆಗಳು ಚಿತ್ರದುರ್ಗವನ್ನು ರಕ್ಷಣೆ ಮಾಡುತ್ತಿದ್ದಾರೆ ಎನ್ನುವ ನಂಬಿಕೆ ಇದೆ.

ಈ ನವ ದುರ್ಗೆಯರಲ್ಲಿ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವತೆಗೆ ಏಳು ಜನ ಮಕ್ಕಳು. ಈಕೆಯ ಪ್ರೀತಿಯ ಅಕ್ಕ ಬರಗೇರಮ್ಮನಿಗೆ ಮಕ್ಕಳಿರಲಿಲ್ಲ. ಹೀಗಾಗಿ ತಂಗಿಯ ಮಕ್ಕಳನ್ನು ಕಂಡರೆ ಪ್ರೀತಿ. ತನಗೆ ಮಕ್ಕಳಿಲ್ಲದ ಬೇಸರವನ್ನು ತಂಗಿಯ ಮಕ್ಕಳ ಜೊತೆ ಆಡಿ, ನಲಿದು ಕಳೆದುಕೊಳ್ಳುತ್ತಿದ್ದಳು.

ಇದನ್ನೂ ಓದಿ: ಮೇ.8 ರಿಂದ 10ರವರೆಗೆ ಮುರುಘಾ ಮಠದಲ್ಲಿ ಬಸವ ಜಯಂತಿ

ಹೀಗೆ ವಾರಕ್ಕೊಮ್ಮೆ ತಂಗಿ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವಿಯ ಮನೆಗೆ ಬಂದು, ಮಕ್ಕಳನ್ನು ಕಂಡು ಅವರ ಜತೆ ಆಟವಾಡಿ ಕಾಲ ಕಳೆದು ಹಿಂತಿರುಗುತ್ತಿದ್ದಳು ಬರಗೇರಮ್ಮ.

ಅಕ್ಕ-ತಂಗಿಯರ ಮಮತೆ ಪ್ರೀತಿಯನ್ನು ಕಂಡು ಅಸೂಯೆ ಪಟ್ಟ ಮೂರನೇ ವ್ಯಕ್ತಿಯೊಬ್ಬರು ತಿಪ್ಪಿನಘಟ್ಟಮ್ಮಬ ಬಳಿ ಚಾಡಿ ಹೇಳುತ್ತಾರೆ.

ಇದನ್ನೂ ಓದಿ: ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ | ಲಂಚದ ಹಣದ ಸಮೇತ ಎಸ್.ವೈ.ಬಸವರಾಜಪ್ಪ ಬಂಧನ

ನಿಮ್ಮ ಅಕ್ಕ ಬರಗೇರಮ್ಮ ಬಂಜೆ ಆಕೆ ಬಂದು ನಿನ್ನ ಮಕ್ಕಳನ್ನು ಮುಟ್ಟಿದರೆ ಒಳ್ಳೆಯದಾಗುವುದಿಲ್ಲ ಎಂದು ಅನುಮಾನ ಬಿತ್ತಲಾಗುತ್ತದೆ.

ಈ ವಿಷಯ ಕೇಳಿ ಆತಂಕಗೊಂಡ ತಿಪ್ಪಿನಘಟ್ಟಮ್ಮ ತನ್ನ ಅಕ್ಕ ಮನೆಗೆ ಬಂದಾಗ ಮಕ್ಕಳು ಆಕೆಯ ಕಣ್ಣಿಗೆ ಬೀಳದಂತೆ ಬಚ್ಚಿಡುತ್ತಾಳೆ.

ಇದನ್ನೂ ಓದಿ: ಉದ್ಯೋಗ ಮಾಡುವ ಆಸೆಯೇ, ಏನು ಮಾಡಬೇಕೆಂಬ ಐಡಿಯಾ ಇಲ್ಲವೇ.. ಹಾಗಿದ್ದರೆ ಈ ಸುದ್ದಿ ಓದಿ, ನಿಮಗೊಂದು ಒಳ್ಳೆಯ ದಾರಿ ಸಿಗುತ್ತೆ..

ಬರಗೇರಮ್ಮ ಮಕ್ಕಳೆಲ್ಲಿ ಎಂದಾಗ ಹೊರಗೆ ಹೋಗಿದ್ದಾರೆಂದು ಸುಳ್ಳು ಹೇಳುತ್ತಾಳೆ. ಆದರೆ, ಅದ್ಹೇಗೋ ಮಕ್ಕಳನ್ನು ಬಚ್ಚಿಟ್ಟಿರುವ ವಿಷಯ ಬರಗೇರಮ್ಮನಿಗೆ ತಿಳಿದು ಬೇಸರದಿಂದ, ಕುಪಿತಗೊಂಡು ಸಿಟ್ಟಿನಲ್ಲಿ ನಿನ್ನ ಮಕ್ಕಳು ಇದ್ದ ಜಾಗದಲ್ಲೇ ಕಲ್ಲಾಗಲಿ ಎಂದು ಶಪಿಸುತ್ತಾಳೆ.

ಮುಂದುವರೆದು ಇನ್ನೆಂದು ನಿನ್ನ ಮುಖ ನೋಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಹಿಂತಿರುಗುತ್ತಾಳೆ. ಘಟನೆ ನಂತರ ಮಕ್ಕಳು ಕಲ್ಲಾಗುತ್ತಾರೆ.

ಇದನ್ನೂ ಓದಿ: ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಚೇತರಿಕೆ | ಚನ್ನಗಿರಿ, ಶಿವಮೊಗ್ಗ ಮಾರುಕಟ್ಟೆಗಳಲ್ಲಿ ಏರಿಕೆ

ಈ ವಿಷಯ ತಿಳಿದು ಭಕ್ತರು, ನವದುರ್ಗೆಯರಲ್ಲಿ ಹಿರಿಯಳಾದ ಏಕನಾಥೇಶ್ವರಿ ದೇವಿಯ ಮೊರೆ ಹೋಗುತ್ತಾರೆ. ಏಕನಾಥೇಶ್ವರಿ ಊರಿನ ಒಳಿತಿಗಾಗಿ ಭಕ್ತರ ಸಂತೋಷಕ್ಕಾಗಿ ವರ್ಷಕ್ಕೊಮ್ಮೆ ನಿಶ್ಚಿತ ಸ್ಥಳದಲ್ಲಿ ತನ್ನ ಸಮ್ಮುಖದಲ್ಲಿ ಅಕ್ಕ-ತಂಗಿಯರ ಭೇಟಿಯಾಗಬೇಕು ಎಂದು ಆದೇಶಿಸುತ್ತಾಳೆ.

ಅಕ್ಕ ತಂಗಿಯರ ಭೇಟಿ ಉತ್ಸವ

ಹಿರಿಯಕ್ಕನ ಅಣತಿಯಂತೆ ಪ್ರತಿ ವರ್ಷ ಅಕ್ಕ-ತಂಗಿಯರು ನಗರದ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಭಕ್ತರ ಮನೆಗಳಲ್ಲಿ ಎಂಟು ದಿನಗಳ ಕಾಲ ಪೂಜೆ ಸ್ವೀಕರಿಸಿ ಅತೀವ ಸಂತಸದಿಂದ ಭಕ್ತರ ಮೊರೆಗೆ ಮನಸೋತು ಅಪಾರ ಭಕ್ತರ ನಡುವೆ ನಗರದ ದೊಡ್ಡಪೇಟೆಯಲ್ಲಿ ಭೇಟಿಯಾಗುತ್ತಾರೆ. ಈ ಭೇಟಿಯನ್ನು ಬೆಟ್ಟದ ತುದಿಯಲ್ಲಿ ಕುಳಿತು ಹಿರಿಯ ಅಕ್ಕ ಶ್ರೀ ಏಕನಾಥೇಶ್ವರಿ ವೀಕ್ಷಿಸುತ್ತಾಳೆ ಎನ್ನುವ ಪ್ರತೀತಿಯಿದೆ.

ಇದನ್ನೂ ಓದಿ: ಹಾಡಹಗಲೇ ಮನೆಯ ಬೀಗ ಮುರಿದು ಕಳ್ಳರು | ಮನೆ ಮಾಲಿಕನ ಕಂಡು ಕಾಲ್ಕಿತ್ತರು

ಈ ಅಕ್ಕ ತಂಗಿ ಭೇಟಿ ಉತ್ಸವಕ್ಕಾಗಿ ದೊಡ್ಡಪೇಟೆಯ ರಾಜಬೀದಿ ನವವಧುವಿನಂತೆ ಸಿಂಗಾರವಾಗುತ್ತದೆ. ದೇವಾನು ದೇವತೆಗಳು ವೈಮನಸ್ಸು ಬಿಟ್ಟು ಒಂದರೆಕ್ಷಣ ಒಂದಾಗುವ ದೃಶ್ಯ ಇಂದಿಗೂ ಮನಮೋಹಕವಾಗಿರುತ್ತದೆ. ಅಕ್ಕನ ಮೇಲಿನ ಸಿಟ್ಟಿನಲ್ಲಿ ಬರಬರನೆ ಬರುವ ತಂಗಿ ತಿಪ್ಪಿನಘಟ್ಟಮ್ಮ ಮತ್ತೇನೋ ನೆನಪಾದವಳಂತೆ ಸರ್ರನೇ ಹಿಂದಕ್ಕೆ ತಿರುಗುತ್ತಾಳೆ.

ಇತ್ತ ಅಕ್ಕ ಬರಗೇರಮ್ಮನೂ ಅಷ್ಟೇ ತಂಗಿಯನ್ನು ಕಾಣುವ ಆತುರದಲ್ಲಿ ಓಡೋಡಿ ಬಂದರೂ, ಮತ್ತೆ ಮುಖ ಹಿಂದಕ್ಕೆ ತಿರುಗಿಸಿ ವಾಪಾಸು ಹೊರಟು ಬಿಡುತ್ತಾಳೆ. ಮತ್ತೆ ಏನನ್ನೋ ನೆನಪು ಮಾಡಿಕೊಂಡವರಂತೆ ಇಬ್ಬರೂ ಹತ್ತಿರವಾಗಲು ಹೆಜ್ಜೆ ಹಾಕುತ್ತಾರೆ. ಇನ್ನೇನು ಅಪ್ಪಿಕೊಳ್ಳುತ್ತಾರೆ ಎನ್ನುವಾಗ ಮತ್ತೆ ಎರಡು ಹೆಜ್ಜೆ ಹಿಂದಿಡುತ್ತಾರೆ.

ಇದನ್ನೂ ಓದಿ: ಚಿತ್ರದುರ್ಗದ ಅಕ್ಕ-ತಂಗಿಯರ ಭೇಟಿ ಉತ್ಸವಕ್ಕೆ ಭರದ ಸಿದ್ಧತೆ | ದೇವತೆಗಳ ಭೇಟಿಗೆ ಭಕ್ತರ ಕಾತರ

ಹೀಗೆ ಕ್ಷಣಕಾಲ ಅಕ್ಕ ತಂಗಿಯರ ಸಿಟ್ಟು, ಸೆಡವುಗಳನ್ನು ಜನ ಬಿಟ್ಟ ಕಣ್ಣು ಬಿಟ್ಟಂತೆಯೇ ಬೋಡುತ್ತಿರುತ್ತಾರೆ. ಈ ನಡುವೆ ದೇವಿಯರಿಗೆ ಉಘೇ ಉಘೇ ಎಂದು ಘೋಷಣೆಗಳು ಮೊಳಗುತ್ತವೆ. ಅಷ್ಟರಲ್ಲಿ ಇಬ್ಬರು ದೇವಿಯರು ಒಂದಾಗಿ ಸುತ್ತಲೇ ತಿರುಗಿ ಆಲಿಂಘನ ಮಾಡಿಕೊಂಡು ಮರುಕ್ಷಣ ತಮ್ಮ ದೇಗುಲಗಳ ಕಡೆಗೆ ಓಡೋಡಿ ಹೋಗುವ ದೃಶ್ಯ ದುರ್ಗದ ಜನರನ್ನು ಸದಾ ಕಾಡುವಂತೆ ಮಾಡುತ್ತದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version