ಮುಖ್ಯ ಸುದ್ದಿ
ಒನಕೆ ಓಬವ್ವ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ಭೇಟಿ | 2 ದಿನಗಳಲ್ಲಿ ವಿದ್ಯುತ್ ದೀಪ ಸರಿಪಡಿಸಲು ತಾಕೀತು
ಚಿತ್ರದುರ್ಗ ನ್ಯೂಸ್.ಕಾಂ: ನಗರದ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಭೇಟಿ ನೀಡಿ ಪರಿಶೀಲನೆ ನಡೆಸಿ ಕುಂದುಕೊರತೆಗಳನ್ನು ಶೀಘ್ರ ಪರಿಹರಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ಶುಕ್ರವಾರ ಸಂಜೆ ವೇಳೆಗೆ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು, ವಾಯು ವಿಹಾರಕ್ಕೆ, ಕ್ರೀಡಾ ಅಭ್ಯಾಸಕ್ಕೆ, ಆಟೋಟಕ್ಕೆ ಬಂದವರನ್ನು ಮಾತನಾಡಿಸಿ ಸಮಸ್ಯೆಗಳನ್ನು ಆಲಿಸಿದರು.
ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಭೇಟಿ
ಕ್ರೀಡಾಂಗಣದಲ್ಲಿನ ಎಲ್ಲ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕ್ರೀಡಾಂಗಣದಲ್ಲಿ ವಿದ್ಯುತ್ ದೀಪದ ಕೊರತೆ ಹಾಗೂ ಕುಡಿಯುವ ನೀರಿನ ಕೊರತೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಎರಡು ದಿನಗಳ ಒಳಗೆ ವಿದ್ಯುತ್ ದೀಪದ ವ್ಯವಸ್ಥೆ ಕೈಗೊಳ್ಳಲು ಸೂಚಿಸಿದರು.
ಅಲ್ಲದೆ ಕ್ರೀಡಾಂಗಣದಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮಕ್ಕಾಗಿ ತಾಕೀತು ಮಾಡಿದರು. ಕ್ರೀಡಾಂಗಣದಲ್ಲಿ ಬೆಳಗಿನ ಜಾವ ಹಾಗೂ ಸಂಜೆಯ ಹೊತ್ತಿನಲ್ಲಿ ವಾಯುವಿಹಾರಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ.
ಇದನ್ನೂ ಓದಿ: ತಿಂಗಳ ಅಂತ್ಯಕ್ಕೆ ದುರ್ಗಕ್ಕೆ ಕಾದಿದೆ ನೀರಿನ ಗಂಡಾಂತರ
ಹೀಗಾಗಿ ವಾಕಿಂಗ್ ಮಾಡುವವರಿಗಾಗಿ ಪ್ರತ್ಯೇಕವಾಗಿ ವಾಕಿಂಗ್ ಪಥ ನಿರ್ಮಿಸಲು ಸೂಚನೆ ನೀಡಿದರು.
ವಿವಿಧ ಕ್ರೀಡೆಗಳ ಅಭ್ಯಾಸಕ್ಕಾಗಿ ಕ್ರೀಡಾಂಗಣಕ್ಕೆ ಬಂದಿದ್ದ ಯುವಜನರೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು, ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ಹಾಗೂ ಕ್ರೀಡೆಗಳ ಅಭಿವೃದ್ದಿಗೆ ಅಗತ್ಯವಿರುವ ಕ್ರೀಡಾ ಪರಿಕರಗಳ ಬಗ್ಗೆಯೂ ಅವರಿಂದ ಮಾಹಿತಿ ಪಡೆದುಕೊಂಡು, ಕ್ರೀಡಾಂಗಣಕ್ಕೆ ಅಗತ್ಯವಿರುವ ಪರಿಕರಗಳನ್ನು ಖರೀದಿಸುವಂತೆ ಹಾಗೂ ಅಗತ್ಯವಿರುವ ಅನುದಾನದ ಬಗ್ಗೆ ವರದ ಸಲ್ಲಿಸಲು ಸೂಚನೆ ನೀಡಿದರು.
ಬಳಿಕ ಕ್ರೀಡಾಂಗಣದ ಆವರಣದಲ್ಲಿರುವ ಒಳಾಂಗಣ ಈಜುಕೊಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಈಜುಕೊಳ ಸಾರ್ವಜನಿಕರ ಸೇವೆಗೆ ಶೀಘ್ರ ಲಭ್ಯವಾಗುವಂತೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ವಿನಾಕಾರಣ ನೆಪಗಳನ್ನು ಹೇಳಿಕೊಂಡು ತಡ ಮಾಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಭೇಟಿ
ಜಿ.ಪಂ ಸಿಇಒ ಸೋಮಶೇಖರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತನ ನೆಲವಿಗಿ ಸೇರಿದಂತೆ ಕ್ರೀಡಾಂಗಣದ ವಿವಿಧ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೆಲ ದಿನಗಳ ಹಿಂದೆ ಕ್ರೀಡಾಪಟುಗಳು ಹಾಗೂ ವಾಯು ವಿಹಾರ ಮಾಡುವವರು ಒನಕೆ ಓಬವ್ವ ಕ್ರೀಡಾಂಗಣದ ಅವ್ಯವಸ್ಥೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಮಾಧ್ಯಮಗಳ ಗಮನ ಸೆಳೆದಿದ್ದರು.
ಮಾಧ್ಯಮಗಳ ವರದಿ ಆಧರಿಸಿ ಲೋಕಾಯುಕ್ತರು ಸುಮೋಟೊ ಪ್ರಕರಣ ದಾಖಲಿಸಿ, ಅಧಿಕಾರಿಗಳಿಗೆ ನೋಟೀಸ್ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಖುದ್ದು ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.