ಮುಖ್ಯ ಸುದ್ದಿ
ರಾಜವೀರ ಮದಕರಿ ನಾಯಕರ ಪುಣ್ಯಸ್ಮರಣೆ | ಅದ್ದೂರಿ ಪಟ್ಟಾಭಿಷೇಕಕ್ಕೆ ನಿರ್ಧಾರ

CHITRADURGA NEWS | 15 MAY 2024
ಚಿತ್ರದುರ್ಗ: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಬಾರಿ ರಾಜವೀರ ಮದಕರಿ ನಾಯಕರ ಪುಣ್ಯಸ್ಮರಣೆಯನ್ನು ನಾಯಕ ಸಮಾಜದಿಂದ ಸರಳವಾಗಿ ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಪಟ್ಟಾಭಿಷೇಕ, ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಇದಕ್ಕೆ ಎಲ್ಲಾ ಜಾತಿಯವರ ಸಹಕಾರ ಅತ್ಯವಶ್ಯಕ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಇದನ್ನೂ ಓದಿ: ಹಿಮಾಲಯದ ತಪ್ಪಲಲ್ಲಿ ಭಗೀರಥ ಜಯಂತಿ ಆಚರಿಸಿದ ಕನ್ನಡದ ಮಠಾಧೀಶರು
ರಾಜವೀರ ಮದಕರಿ ನಾಯಕರ 242ನೇ ಪುಣ್ಯತಿಥಿ ಅಂಗವಾಗಿ ನಗರದಲ್ಲಿರುವ ಮದಕರಿ ನಾಯಕರ ಪ್ರತಿಮೆಯ ಬಳಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ, ಎಲ್ಲಾ ಸಮಾಜದವರು ಸೇರಿ ರಾಜಾವೀರ ಮದಕರಿನಾಯಕರ ಪುಣ್ಯಸ್ಮರಣೆ ಆಚರಿಸುತ್ತಿರುವುದು ನಿಜವಾಗಿಯೂ ನಾಡ ದೊರೆಗೆ ನೀಡುವ ಬಹುದೊಡ್ಡ ಗೌರವ ಎಂದರು.
77 ಪಾಳೆಯಗಾರರಲ್ಲಿ ಚಿತ್ರದುರ್ಗದ ಕೋಟೆ ಆಳಿದ ಮದಕರಿನಾಯಕ ಕೂಡ ಒಬ್ಬರು. 12ನೇ ವಯಸ್ಸಿನಲ್ಲಿಯೇ ಪಟ್ಟಾಭಿಷೇಕವಾಗಿ 25 ವರ್ಷಗಳ ಕಾಲ ಆಳ್ವಿಕೆ ನಡೆಸಿ 40ನೇ ವಯಸ್ಸಿನಲ್ಲಿ ಮದಕರಿ ನಾಯಕರ ಅಂತ್ಯವಾಗಿದೆ. ಹಾಗಾಗಿ ಕೇವಲ ನಾಯಕ ಜನಾಂಗದವರಷ್ಟೆ ಅಲ್ಲ ಎಲ್ಲಾ ಜಾತಿಯವರು ಮದಕರಿನಾಯಕನ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದರು.
ಇದನ್ನೂ ಓದಿ: ಡಾ.ಬಿ.ಎಲ್.ವೇಣುಗೆ ಅನಾರೋಗ್ಯ | ಫೋರ್ಟೀಸ್ ಆಸ್ಪತ್ರೆಗೆ ದಾಖಲು, ಚೇತರಿಕೆ
ಆಳ್ವಿಕೆಯಲ್ಲಿ ಶೌರ್ಯ ಪರಾಕ್ರಮ ಮೆರೆದಿರುವ ರಾಜಾವೀರ ಮದಕರಿನಾಯಕ ಶತ್ರುಗಳಿಂದ ಕೋಟೆಯನ್ನು ರಕ್ಷಿಸಿ ಅಜರಾಮರವಾಗಿದ್ದಾರೆ ಎಂದರು.
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಮದಕರಿ ನಾಯಕ ಪ್ರತಿಮೆಗೆ ಪುಪ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಾ, ಯಾವುದೇ ಜಾತಿ ಬೇಧವಿಲ್ಲದೆ ಎಲ್ಲರೂ ಮದಕರಿನಾಯಕ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿರುವುದು ಅತ್ಯಂತ ಸಂತೋಷದ ಸಂಗತಿ. ಚಿತ್ರದುರ್ಗದ ಏಳು ಸುತ್ತಿನ ಕೋಟೆ ಅಭಿವೃದ್ದಿಯಾಗಬೇಕಿದೆ. ಆಗ ಮಾತ್ರ ರಾಜಾವೀರ ಮದಕರಿನಾಯಕನಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಬಿಜೆಪಿ ಎಸ್ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಮಾತನಾಡಿ, ಚಿತ್ರದುರ್ಗದಲ್ಲಿ ಮದಕರಿನಾಯಕ ಥೀಂ ಪಾರ್ಕ್ ನಿರ್ಮಾಣ ಮಾಡುವುದಾಗಿ ನಮ್ಮ ನಾಯಕರು ಕಳೆದ ವರ್ಷವೇ ಭರವಸೆ ನೀಡಿದ್ದಾರೆ. ಅದರಂತೆ ಎಲ್ಲವೂ ನಡೆಯುತ್ತದೆ ಎಂದು ಹೇಳಿದರು.
ಪುಣ್ಯಸ್ಮರಣೆ ಅಂಗವಾಗಿ ಮದಕರಿ ನಾಯಕರ ಪ್ರತಿಮೆಯನ್ನು ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ಜೆಸಿಬಿ ಬಳಸಿ ಬೃಹತ್ ಹೂವಿನ ಮಾಲೆ ಅರ್ಪಿಸಲಾಯಿತು.
ಇದನ್ನೂ ಓದಿ: ಶಿವಮೊಗ್ಗ ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಅಲ್ಪ ಹೇಳಿಕೆ
ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ತಾಲ್ಲೂಕು ಅಧ್ಯಕ್ಷ ಬಿ.ಕಾಂತರಾಜ್, ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಡಿ.ಗೋಪಾಲಸ್ವಾಮಿ ನಾಯಕ, ಕಾಟಿಹಳ್ಳಿ ಕರಿಯಪ್ಪ, ಜೆ.ಎನ್.ಕೋಟೆ ಗುರುಸಿದ್ದಪ್ಪ, ರಾಜಾ ಮದಕರಿನಾಯಕ, ಹೆಚ್.ಅಂಜಿನಪ್ಪ, ಸೋಮೇಂದ್ರ, ನಗರಸಭೆ ಸದಸ್ಯ ದೀಪು, ಮಾಜಿ ಸದಸ್ಯರಾದ ತಿಪ್ಪೇಸ್ವಾಮಿ, ಪ್ರಕಾಶ್ ಸೇರಿದಂತೆ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.
