Connect with us

ಜನೌಷಧ ಕೇಂದ್ರ ಮುಚ್ಚುವುದು ರಾಜ್ಯ ಸರ್ಕಾರದ ಮೂರ್ಖತನ | ಗೋವಿಂದ ಕಾರಜೋಳ

ಗೋವಿಂದ ಕಾರಜೋಳ

ಮುಖ್ಯ ಸುದ್ದಿ

ಜನೌಷಧ ಕೇಂದ್ರ ಮುಚ್ಚುವುದು ರಾಜ್ಯ ಸರ್ಕಾರದ ಮೂರ್ಖತನ | ಗೋವಿಂದ ಕಾರಜೋಳ

CHITRADURGA NEWS | 21 MAY 2025

ಚಿತ್ರದುರ್ಗ: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ಆದೇಶ ಮೂರ್ಖತನದಿಂದ ಕೂಡಿದೆ. ಬಡವರ ಬಗ್ಗೆ ಕನಿಷ್ಠ ಕಾಳಜಿ ಹಾಗೂ ಸಂವೇದನೆ ಇಲ್ಲದ ಸರ್ಕಾರ ತೆಗೆದುಕೊಳ್ಳಬಹುದಾದ ತೀರ್ಮಾನವಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಅಸಮಧಾನ ವ್ಯಕ್ತಪಡಿಸಿದ್ದಾರೆ.

Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?

ಕಡುಬಡವರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಪೂರೈಸುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ 2008 ರಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಯೋಜನೆಯಡಿ ದೇಶಾದ್ಯಂತ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ತೆರೆಯಲು ಅನುಮೋದನೆ ನೀಡಿದೆ. ಇದರನ್ವಯ ಈಗಾಗಲೇ ದೇಶಾದ್ಯಂತ 16290 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ.

ಕರ್ನಾಟಕದಲ್ಲಿ 1459 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಸುಮಾರು 400 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿವೆ.

ಜನೌಷಧಿ ಕೇಂದ್ರಗಳ ಮೂಲಕ ಸುಮಾರು 2047 ಬಗೆಯ ಔಷಧಿಗಳು ಹಾಗೂ 300 ಕ್ಕೂ ಹೆಚ್ಚು ಸರ್ಜಿಕಲ್ ಐಟಂಗಳು ರೋಗಿಗಳಿಗೆ ಅತ್ಯಂತ ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಜಿಲ್ಲಾಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆವರಣದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಜನೌಷಧಿ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಲು ಆದೇಶವನ್ನು ಹೊರಡಿಸಿದೆ. ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಈ ರಾಜ್ಯದ ಬಡವರ, ದೀನದಲಿತರ ಬಗ್ಗೆ ಕಾಳಜಿಯಿದ್ದಿದ್ದೇ ಆದರೆ ಕೂಡಲೇ ಈ ಆದೇಶವನ್ನು ಹಿಂಪಡೆಯಲಿ.

Also Read: ಕ್ಯಾನ್ಸರ್ ತಡೆಗಟ್ಟಲು ಈ 5 ಕ್ಯಾನ್ಸರ್ ವಿರೋಧಿ ಆಹಾರವನ್ನು ತಿನ್ನಿ

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ಪೂರೈಸುತ್ತೇವೆ, ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳಲ್ಲಿ ರೋಗಿಗಳು ದುಡ್ಡುಕೊಟ್ಟು ಔಷಧಿಗಳನ್ನು ಕೊಂಡುಕೊಳ್ಳುವುದು ಬೇಡ ಎಂಬ ಸಮಜಾಯಿಷಿಯನ್ನು ಆರೋಗ್ಯ ಸಚಿವರು ನೀಡಿದ್ದಾರೆ, ಎಷ್ಟು ಆಸ್ಪತ್ರೆಗಳಲ್ಲಿ ಔಷಧಿಗಳು ಪೂರ್ಣಪ್ರಮಾಣದಲ್ಲಿ ಲಭ್ಯವಾಗುತ್ತಿವೆ ಎಂಬುದನ್ನು ಮೊದಲು ಆರೋಗ್ಯ ಸಚಿವರು ಖಚಿತಪಡಿಸಿಕೊಳ್ಳಲಿ ಎಂದು ಹೇಳಿದ್ದಾರೆ.

ನೀವು ಪೂರೈಕೆ ಮಾಡಿದ ರಿಂಗರ್ ಲ್ಯಾಕ್ಟೇಟ್ ದ್ರಾವಣದಿಂದ ಈ ರಾಜ್ಯದಲ್ಲಿ ಎಷ್ಟು ಜನ ಬಾಣಂತಿಯರು ಸಾವಿಗೀಡಾದರು ಎಂಬುದರ ಬಗ್ಗೆ ಆರೋಗ್ಯ ಸಚಿವರಾದ ನಿಮಗೆ ಅರಿವಿದೆಯಾ?

ಮೊದಲು ಸರ್ಕಾರ ಇಂತಹವುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಈ ರಾಜ್ಯದ ಲಕ್ಷಾಂತರ ಜನರಿಗೆ ವರದಾನವಾಗಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಕೈಬಿಡಲಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರುಗಳು ಅಸಾಯಕರಾಗಿದ್ದಾರೆ, ಔಷಧಿಗಳ ಪೂರೈಕೆಯಿಲ್ಲದೇ ರೋಗಿಗಳ ಆಕ್ರೋಶಕ್ಕೆ ಸರ್ಕಾರಿ ವೈದ್ಯರು ಬಲಿಯಾಗುತ್ತಿದ್ದಾರೆ.

Also Read: ಈ 5 ಹೊಟ್ಟೆ ಸಮಸ್ಯೆಗಳಿದ್ದರೆ, ಹೊಕ್ಕುಳಲ್ಲಿ ಕ್ಯಾಸ್ಟರ್ ಆಯಿಲ್ ಹಚ್ಚಿ

ಆಸ್ಪತ್ರೆಗಳ ಆವರಣಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸುಮಾರು 400 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ಮುಚ್ಚುವುದರ ಜೊತೆಗೆ ಹೊಸದಾಗಿ ಪ್ರಾರಂಭ ಮಾಡಲು ಸಲ್ಲಿಸಿರುವ ಸುಮಾರು 31 ಕ್ಕೂ ಹೆಚ್ಚು ಪ್ರಸ್ಥಾವನೆಗಳನ್ನು ರಾಜ್ಯ ಸರ್ಕಾರ ತಿರಸ್ಕರಿಸುವ ನಿರ್ಧಾರ ಮಾಡಿದೆ.

ಇದು ಈ ರಾಜ್ಯದ ಜನರಿಗೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ. ಕಳೆದ 10 ವರ್ಷಗಳಲ್ಲಿ ಈ ದೇಶದ ಬಡಜನರಿಗೆ ಅಂದಾಜು 30 ಸಾವಿರ ಕೋಟಿಯಷ್ಟು ಹಣ ಔಷಧಿ ಖರೀದಿಯಿಂದ ಉಳಿತಾಯವಾದಂತಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಆದೇಶವನ್ನು ಕೂಡಲೇ ಹಿಂಪಡೆಯಲಿ ಎಂದು ಪತ್ರಿಕಾ ಹೇಳಿಕೆ ಮೂಲಕ ಗೋವಿಂದ ಕಾರಜೋಳ ಒತ್ತಾಯಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version