
CHITRADURGA NEWS | 24 MAY 2025
ಚಿತ್ರದುರ್ಗ: ತ್ರಿವರ್ಣ ಧ್ವಜ ಹಿಡಿದು ಪುಟ್ಟ ಪುಟ್ಟ ಕೈಗಳು, ಮುಗಿಲು ಮುಟ್ಟುವಂತೆ ಕೇಳಿಸುತ್ತಿದ್ದ ಭಾರತ್ ಮಾತಾ ಕೀ ಜೈ ಘೋಷಣೆ, ಭಾರತೀಯ ಸೇನೆಯ ಪರಾಕ್ರಮದ ಬಗ್ಗೆ ಎಲ್ಲಿಲ್ಲದ ಅಭಿಮಾನ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ನಗರದ ದೇವರಾಜ್ ಅರಸು ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಇಂಡಿಯನ್ ಇಂಟರ್ನ್ಯಾಷನಲ್ ಶಾಲೆಯಿಂದ ಆಯೋಜಿಸಿದ್ದ ಬೃಹತ್ ಮ್ಯಾರಾಥಾನ್ ಕಾರ್ಯಕ್ರಮದಲ್ಲಿ.
ಇದನ್ನೂ ಓದಿ: ಹೊಳಲ್ಕೆರೆಯಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ | ಶಾಸಕ ಎಂ.ಚಂದ್ರಪ್ಪ, ಶಂಕರ್ ಮಹಾದೇವ ಬಿದರಿ ಭಾಗೀ


ಭಾರತೀಯ ಸೇನೆಯ ಯೋಧರು ತೋರಿದ ಪರಾಕ್ರಮ, ಆಪರೇಷನ್ ಸಿಂಧೂರದ ಮೂಲಕ ಪಾಕ್ ಪ್ರೇರಿತ ಉಗ್ರರ ಹುಟ್ಟು ಅಡಗಿಸುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ನಗರದ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ಬರೋಬ್ಬರಿ 4500 ಮಕ್ಕಳು ಬೃಹತ್ ಮ್ಯಾರಾಥಾನ್ ನಡೆಸಿದರು.
ನಗರದ ಕನಕ ವೃತ್ತದಿಂದ ಪ್ರಾರಂಭವಾದ ಮ್ಯಾರಾಥಾನ್ ಒನಕೆ ಓಬವ್ವ ವೃತ್ತದಲ್ಲಿ ಸಮಾರೋಪಗೊಂಡಿತು.
ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣುತ್ತಿದ್ದ ಮಕ್ಕಳ ಮೆರವಣಿಗೆಯಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸಿದವು. ಭಾರತ್ ಮಾತಾ ಕೀ ಜೈ ಎನ್ನುವ ಘೋಷಣೆ ಅನುರಣಿಸುತ್ತಿದ್ದವು.
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಹೊಳಲ್ಕೆರೆ ಶಾಸಕರೂ ಆಗಿರುವ ಡಾ.ಎಂ.ಚಂದ್ರಪ್ಪ ಮಕ್ಕಳ ಮ್ಯಾರಾಥಾನ್ಗೆ ಚಾಲನೆ ನೀಡಿದರು. ಈ ವೇಳೆ ಸಂಸ್ಥೆಯ ಸಿಇಓ ಎಂ.ಸಿ. ರಘುಚಂದನ್ ಸೇರಿದಂತೆ ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.
ಇದನ್ನೂ ಓದಿ: CET RESULT | SLV ಕಾಲೇಜಿಗೆ ಉತ್ತಮ ಫಲಿತಾಂಶ
ಒನಕೆ ಓಬವ್ವ ವೃತ್ತದಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದ ವೇಳೆ ಮಕ್ಕಳು ಫಹಲ್ಗಾಮ್ ದಾಳಿಯ ಅಣಕು ಪ್ರದರ್ಶನ ಮಾಡಿದರು. ಸಂತೋಷದಿಂದ ನಲಿಯುತ್ತಿದ್ದ ಪ್ರವಾಸಿಗರ ಮೇಲೆ ಏಕಾಏಕಿ ಉಗ್ರರು ಗುಂಡಿನ ಮಳೆ ಸುರಿಸಿ ರಕ್ತಪಾತ ಮಾಡಿ ಕುಟುಂಬಗಳನ್ನು ಬೀದಿ ಪಾಲು ಮಾಡಿದ ದೃಶ್ಯ ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸಿತು. ಮಕ್ಕಳ ಅಭಿನಯ ಮನಮುಟ್ಟುವಂತಿತ್ತು.
ನಂತರ ನಡೆದ ಆಪರೇಷನ್ ಸಿಂಧೂರದ ಪ್ರದರ್ಶನದ ವೇಳೆ ಯೋಧರು, ಭಾರತದ ಪರ ಹಾಗೂ ಭಾರತ ಮಾತೆಗೆ ಜಯವಾಗಲಿ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದವು.
ಈ ವೇಳೆ ಹತ್ತಾರು ಪುಟಾಣಿ ಮಕ್ಕಳು ದೇಶದ ಸಂತ, ಮಹಾತ್ಮರ ವೇಷ, ಭೂಷಣಗಳನ್ನು ಧರಿಸಿ ಗಮನ ಸೆಳೆದರು.
ಇನ್ನು ಮುಂದೆ ದೇಶದ ಭದ್ರತೆಗೆ ಧಕ್ಕೆ ಬಂದಾಗ ನುಗ್ಗಿ ಹೊಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಹೇಳಿದಂತೆಯೇ ನಡೆದುಕೊಂಡಿರುವುದನ್ನು ದೇಶದ ಜನರೂ ನೋಡಿದ್ದಾರೆ. ಮುಂದೆ ಏನೇ ನಡೆದರೂ ಭಾರತ ಗೆದ್ದು ಬರಲಿದೆ.
| ಎಂ.ಸಿ.ರಘುಚಂದನ್, ದೇವರಾಜ ಅರಸು ಶಿಕ್ಷಣ ಸಂಸ್ಥೆ ಸಿಇಓ
ಡಿಆರ್ಡಿಓ ವಿಜ್ಞಾನಿ ಮಹೇಶ್ ಬಾಬು ಮಾತನಾಡುತ್ತಾ, ದೇಶದ ಮೇಲೆ ಅಭಿಮಾನ ಮೂಡಿಸುವ ಕೆಲಸ ಎಲ್ಲ ಕಡೆಯಿಂದಲೂ ಆಗಬೇಕು. ಆದರೆ, ನಮ್ಮ ಪಠ್ಯ ಪುಸ್ತಕಗಳಲ್ಲಿ ಭಾರತ ನಡೆಸಿರುವ ಯುದ್ಧಗಳು, ಅದರಲ್ಲಿ ಆಗಿರುವ ಗೆಲುವಿನ ಬಗ್ಗೆ ತಿಳಿಸುವ ಕೆಲಸ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿಇಟಿ ಫಲಿತಾಂಶ | ಡಾನ್ಬಾಸ್ಕೊ ಕಾಲೇಜಿನ ಮಾರುತಿ ರಾಜ್ಯಕ್ಕೆ 6ನೇ ರ್ಯಾಂಕ್
ದೇಶ ಅನೇಕ ಯುದ್ಧಗಳನ್ನು ಎದುರಿಸಿದ್ದರೂ, ಈ ಬಾರಿ ಪಾಕಿಸ್ಥಾನದಲ್ಲಿದ್ದ ಉಗ್ರರ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ ಸಾಕಷ್ಟು ಹೆಮ್ಮೆ ಮೂಡಿಸಿದ. ನಮ್ಮ ಸೇನೆ ಅತ್ಯಂತ ಕರಾರುವಕ್ಕಾಗಿ ಪಾಕಿಸ್ಥಾನದ ಉಗ್ರ ನೆಲೆಗಳನ್ನು ವೈಮಾನಿಕ ದಾಳಿ ಮೂಲಕ ಉಡಾಯಿಸಿದೆ ಎಂದರು.
ಆಪರೇಷನ್ ಸಿಂಧೂರದಲ್ಲಿ ಡ್ರೋನ್ಗಳು ಅತ್ಯಂತ ಮಹತ್ವದ ಪಾತ್ರ ವಹಿಸಿವೆ. ಈ ಡ್ರೋನ್ಗಳ ಪರೀಕ್ಷಾ ಕೇಂದ್ರ ನಮ್ಮ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರದಲ್ಲಿದೆ. ಇಲ್ಲಿ ಅತ್ಯಾಧುನಿಕ ಡ್ರೋನ್ಗಳನ್ನು ಪರೀಕ್ಷೆ ನಡೆಸುವ ಏರೋನಾಟಿಕಲ್ ಟೆಸ್ಟ್ ರೇಂಜ್ ಇದೆ. 2 ಕೆಜಿಯಿಂದ 3 ಸಾವಿರ ಕೆಜಿವರೆಗಿನ ತೂಕದ ಡ್ರೋನ್ಗಳನ್ನು ಪರೀಕ್ಷೆ ಮಾಡುವ ಸಾಮರ್ಥ್ಯ ನಮ್ಮಲ್ಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಶಿವಕುಮಾರ್, ಉಪ ಪ್ರಾಚಾರ್ಯ ಕೆ.ಪಿ.ನಾಗಭೂಷಣಶೆಟ್ಟಿ ಇದ್ದರು. ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಫಹಲ್ಗಾಮ್ ರೂಪಕ ನಿರ್ದೇಶಿಸಿದರು.
ಭಾರತದಲ್ಲಿ ಅನೇಕ ಭಾಷೆ, ಧರ್ಮ, ವಿವಿಧತೆ ಇದ್ದರೂ ಸಾಮರಸ್ಯವಿದೆ. ಐಕ್ಯತೆ ಇದೆ. ಭಯೋತ್ಪಾಧನೆ ವಿರುದ್ಧ ಇಡೀ ದೇಶ ಒಟ್ಟಾಗಿ ಹೋರಾಟ ನಡೆಸಬೇಕಿದೆ.
| ಬಿ.ಟಿ.ಕುಮಾರಸ್ವಾಮಿ, ಅಪರ ಜಿಲ್ಲಾಧಿಕಾರಿ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
