Life Style
ನಿಮಗೆ ಈ ಸಮಸ್ಯೆ ಇದ್ದರೆ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದನ್ನು ತಪ್ಪಿಸಿ
CHITRADURGA NEWS | 09 APRIL 2025
ಬೇಸಿಗೆಕಾಲದಲ್ಲಿ ಹೆಚ್ಚಾಗಿ ಸಿಗುವಂತಹ ಹಣ್ಣು ಎಂದರೆ ಅದು ಕಲ್ಲಂಗಡಿ ಹಣ್ಣು. ಇದರಲ್ಲಿ ನೀರಿನಾಂಶ ಹೆಚ್ಚಾಗಿರುವ ಕಾರಣ ಬೇಸಿಗೆಯಲ್ಲಿ ಕಾಡುವಂತಹ ನಿರ್ಜಲೀಕರಣ ಸಮಸ್ಯೆಯನ್ನು ಪರಿಹರಿಸುತ್ತದೆ. ಹಾಗೂ ಕಲ್ಲಂಗಡಿಯಲ್ಲಿ ಅಗತ್ಯ ಪೋಷಕಾಂಶಗಳು, ಜೀವಸತ್ವಗಳು, ಖನಿಜಗಳು ಮತ್ತು ಆ್ಯಂಟಿ ಆಕ್ಸಿಡೆಂಟ್ಗಳು ಸಮೃದ್ಧವಾಗಿದೆ.
ಇದು ಸಾಕಷ್ಟು ಪೌಷ್ಠಿಕಾಂಶವನ್ನು ಒದಗಿಸುವುದಲ್ಲದೆ ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ ಕೆಲವು ಸಮಸ್ಯೆ ಇರುವವರು ಈ ಹಣ್ಣನ್ನು ತಿನ್ನುವುದನ್ನು ತಪ್ಪಿಸುವುದು ಒಳ್ಳೆಯದು.
ಶೀತ ಮತ್ತು ಕೆಮ್ಮು:
ಶೀತ ಅಥವಾ ಕೆಮ್ಮಿನಿಂದ ಬಳಲುತ್ತಿರುವ ವ್ಯಕ್ತಿಗಳು ಕಲ್ಲಂಗಡಿಯನ್ನು ತಪ್ಪಿಸಬೇಕು. ಏಕೆಂದರೆ ಇದು ಶೀತ ಸ್ವಭಾವದ ಹಣ್ಣಾಗಿದ್ದು, ಇದರಲ್ಲಿ ನೀರಿನಾಂಶ ಅಧಿಕವಾಗಿರುತ್ತದೆ. ಹಾಗಾಗಿ ಇದನ್ನು ಸೇವಿಸಿದರೆ ಶೀತದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ.
ಜ್ವರ:
ನಿಮಗೆ ಜ್ವರವಿದ್ದರೆ ಕಲ್ಲಂಗಡಿ ತಿನ್ನಬಾರದು. ಜ್ವರದ ಸಮಯದಲ್ಲಿ ಶೀತ ಹಣ್ಣನ್ನು ಸೇವಿಸುವುದು ಪ್ರಯೋಜನಕಾರಿಯಾಗದಿರಬಹುದು. ಆದ್ದರಿಂದ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ಕಲ್ಲಂಗಡಿ ಅಲರ್ಜಿ:
ಕೆಲವು ಜನರಿಗೆ ಹಣ್ಣುಗಳನ್ನು ಸೇವಿಸಿದಾಗ ದೇಹದಲ್ಲಿ ಅಲರ್ಜಿ ಉಂಟಾಗುತ್ತದೆ. ಹಾಗಾಗಿ ಅಲರ್ಜಿ ಇರುವ ವ್ಯಕ್ತಿಗಳು ಕಲ್ಲಂಗಡಿ ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಅದು ಅವರ ರೋಗಲಕ್ಷಣಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕಲ್ಲಂಗಡಿ ಸೇವಿಸಿದ ನಂತರ ನೀವು ಉಸಿರಾಟದ ಸಮಸ್ಯೆ, ಚರ್ಮದಲ್ಲಿ ದದ್ದುಗಳು ಮೂಡುವಂತಹ ಯಾವುದೇ ಅಲರ್ಜಿಯ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಅದನ್ನು ಸಂಪೂರ್ಣವಾಗಿ ತಪ್ಪಿಸುವುದು ಉತ್ತಮ.
ಮಧುಮೇಹಿಗಳು ಕಲ್ಲಂಗಡಿ ಹಣ್ಣುದ ತಿನ್ನಬಹುದೇ?
ಕಲ್ಲಂಗಡಿ ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ. ಹಾಗೂ ಇದು ನೈಸರ್ಗಿಕವಾದ ಸಿಹಿಕಾರಕಗಳನ್ನು ಹೊಂದಿರುತ್ತದೆ. ಆದರೆ ಇದು ಹೆಚ್ಚಿನ ನೀರಿನ ಅಂಶ ಮತ್ತು ಫೈಬರ್ಗಳಿಂದ ಸಮೃದ್ಧವಾಗಿದೆ. ಈ ಕಾರಣದಿಂದಾಗಿ, ಮಧುಮೇಹಿಗಳು ಮಿತವಾಗಿ ಇದನ್ನು ಸೇವಿಸಬಹುದು.
ಆದರೆ ಮಧುಮೇಹಿಗಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಮಲಗುವ ಮೊದಲು ಕಲ್ಲಂಗಡಿ ತಿನ್ನುವುದನ್ನು ತಪ್ಪಿಸುವುದು ಒಳ್ಳೆಯದು. ಬದಲಾಗಿ, ಸಣ್ಣ ಪ್ರಮಾಣದಲ್ಲಿ ಮಧ್ಯಾಹ್ನದ ಊಟ ಅಥವಾ ಸಂಜೆ ಸೇವಿಸಬಹುದು. ಹಾಗೂ ಕಲ್ಲಂಗಡಿಯನ್ನು ಆರೋಗ್ಯಕರ ಕೊಬ್ಬುಗಳು ಮತ್ತು ಪ್ರೋಟೀನ್ಗಳೊಂದಿಗೆ (ಬೀಜಗಳು ಅಥವಾ ಮೊಸರು) ಬೆರೆಸಿ ತಿನ್ನುವುದರಿಂದ ರಕ್ತಪ್ರವಾಹಕ್ಕೆ ಸಕ್ಕರೆಯನ್ನು ಹೀರಿಕೊಳ್ಳುವುದನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ.