ಮುಖ್ಯ ಸುದ್ದಿ
ದೇವಸ್ಥಾನದಂತೆ ಮನುಷ್ಯನ ಜೀವನ ಕೂಡಾ ಜೀರ್ಣೋದ್ಧಾರ ಆಗಬೇಕು | ಮಾದಾರ ಚನ್ನಯ್ಯ ಶ್ರೀ

CHITRADURGA NEWS | 04 MARCH 2024
ಚಿತ್ರದುರ್ಗ: ದೇವಸ್ಥಾನಗಳು ಜೀರ್ಣೋದ್ಧಾರವಾದಂತೆ ಮನುಷ್ಯನ ಜೀವನ ಕೂಡಾ ಜೀಣೋದ್ಧಾರ ಆಗಬೇಕು ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಚಿತ್ರದುರ್ಗ ತಾಲೂಕು ಹುಲ್ಲೂರು ಗ್ರಾಮದಲ್ಲಿ ಶ್ರೀ ದುರ್ಗಾಂಭಿಕಾ ದೇವಿ ದೇವಸ್ಥಾನದ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇದನ್ನೂ ಓದಿ: ಶಿವರಾತ್ರಿಗೆ ಅಬ್ಬರಿಸಲಿದ್ದಾನೆ ವರುಣ ದೇವ | ಭರ್ಜರಿ ಮಳೆಯ ಮುನ್ಸೂಚನೆ
ದೇವಸ್ಥಾನಕ್ಕೆ ಹೋದರೆ ಮನಸ್ಸಿಗೆ ಶಾಂತಿ ಸಮಾಧಾನ ಸಿಗುತ್ತದೆ. ಮಠ ಮಂದಿರ, ಚರ್ಚ್, ಮಸೀದಿ ದೇಶಕ್ಕೆ ಬೇಕು. ದೇವಸ್ಥಾನಗಳನ್ನು ಕಟ್ಟುವುದು ಎಷ್ಟು ಮುಖ್ಯವೋ ಪಾವಿತ್ರ್ಯತೆ ಕಾಪಾಡವುದು ಅಷ್ಟೇ ಮುಖ್ಯ ಎಂದರು.
ಒಂದು ಕುಟುಂಬ ಅಥವಾ ಸಮಾಜ ಬದಲಾಗಬೇಕಾದರೆ ಮಹಿಳೆಯರು ಮುಂದೆ ಬರಬೇಕು. ಪುರುಷರು ದುಡಿಯುವ ಹಣ ಹೆಣ್ಣು ಮಕ್ಕಳ ಕೈಗೆ ಬರುವಂತಾಗಬೇಕು.
ದಾರಿದ್ರ್ಯ ನಿವಾರಣೆಯಾಗಬೇಕಾದರೆ ಮಕ್ಕಳಿಗೆ ಶಿಕ್ಷಣ ಬೇಕು. ಎಲ್ಲಿಯವರೆಗೂ ಜೀವನದಲ್ಲಿ ಬದಲಾವಣೆಯಾಗುವುದಿಲ್ಲವೋ ಅಲ್ಲಿಯವರೆಗೂ ಗೌರವ ಸಿಗುವುದಿಲ್ಲ. ಜೀವನದಲ್ಲಿ ಸುಖವಾಗಿರಬೇಕಾದರೆ ಕಷ್ಟ ಪಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಕರ್ತವ್ಯ ಲೋಪ | ನಾಲ್ವರು ಪಿಡಿಓಗಳು ಅಮಾನತು
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ, ಅಬುದಾಬಿಯಲ್ಲಿ ಹಿಂದೂ ದೇವಾಲಯ ನಿರ್ಮಾಣವಾಗಿವೆ. ಸರ್ಕಾರದ ಹಣದಿಂದ ದೇವಸ್ಥಾನ ನಿರ್ಮಾಣವಾಗುವುದಕ್ಕಿಂತಲೂ ಮಿಗಿಲಾಗಿ ಭಕ್ತರು ನೀಡುವ ಹಣದಿಂದ ದೇವಾಲಯಗಳಾಗುತ್ತಿರುವುದು ಸಂತಸದ ಸಂಗತಿ. ದೇವಸ್ಥಾನ ಕಟ್ಟುವುದರ ಜೊತೆ ಮಕ್ಕಳಿಗೆ ಶಿಕ್ಷಣ ಕೊಡಿಸಿ. ಸಂವಿಧಾನದಡಿ ಎಲ್ಲರಿಗೂ ಸಮಾನವಾದ ಹಕ್ಕಿದೆ. ಪ್ರಯೋಜನ ಪಡೆದುಕೊಳ್ಳಬೇಕಷ್ಟೆ ಎಂದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ರಾಜಕಾರಣದಲ್ಲಿ ಅಧಿಕಾರದಲ್ಲಿದ್ದಾಗ ಜನಾಂಗಕ್ಕೆ ಕಿಂಚಿತ್ತಾದರೂ ಸಹಾಯವಾಗುವಂತ ಕೆಲಸವಾಗಬೇಕು. ಸಮಾಜದ ಹೆಸರಿನಲ್ಲಿ ಸಿಕ್ಕ ಅಧಿಕಾರವನ್ನು ಸಮಾಜಕ್ಕೆ ಅರ್ಪಿಸಬೇಕು. ಜನಾಂಗದ ಗೌರವ ಕಳೆಯುವ ಕೆಲಸ ಮಾಡಬಾರದು ಎಂದು ಹೇಳಿದರು.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆ | ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಎಂಟ್ರಿ
ನಮ್ಮ ಜೊತೆಗಿರುವ ಇತರೆ ಸಮುದಾಯಗಳ ಜೊತೆಗೆ ಸಹಭಾಳ್ವೆಯಿಂದ ಬದುಕಬೇಕು. ಒಳ್ಳೆಯ ರೀತಿಯಿಂದ ಏನು ಬೇಕಾದರೂ ಸಾಧನೆ ಮಾಡಬಹುದು. ಪ್ರೀತಿಯಿಂದ ಇದ್ದರೆ ಯಾರು ಯಾರನ್ನು ದ್ವೇಷಿಸುವುದಿಲ್ಲ. ಎಲ್ಲರೊಳಗೊಂದಾಗಿ ಬದುಕುವುದನ್ನು ಕಲಿಯಬೇಕು. ಅದಕ್ಕಾಗಿ ಸರಿಯಾದ ಮಾರ್ಗದಲ್ಲಿ ಸಾಗಬೇಕು. ಬಡತನವಿದೆಯೆಂದು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬೇಡಿ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲಾ ಜಾತಿ ಧರ್ಮದವರಿಗೂ ಸಮಾನತೆ ಕಲ್ಪಿಸಿದ್ದಾರೆ. ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ಹುಲ್ಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ರಾಜಪ್ಪ, ಸದಸ್ಯರಾದ ರವಿಕುಮಾರ್, ದುಗ್ಗಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಸಮಾದಪ್ಪ, ಕಲ್ಲೇಶಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹುಲ್ಲೂರು ಕೃಷ್ಣಪ್ಪ, ಹುಲ್ಲೂರು ಕುಮಾರ್ ವೇದಿಕೆಯಲ್ಲಿದ್ದರು.
