ಶಿಕ್ಷಕರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಒಂದಿಡೀ ತಿಂಗಳು ಸಾಧಕ ಶಿಕ್ಷಕರ ಸಾಧನೆಗಳನ್ನು ಪರಿಚಯಿಸುವ ಮೂಲಕ ಗುರುನಮನ ಸಲ್ಲಿಸಲು ಚಿತ್ರದುರ್ಗನ್ಯೂಸ್.ಕಾಂ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಚಿತ್ರರ್ದು ಜಿಲ್ಲಾ ಉತ್ತಮ ಹಾಗೂ ವಿಶೇಷ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಪರಿಚಯಿಸುವ ಸರಣಿ ಇಂದಿನಿಂದ ಆರಂಭವಾಗಿದೆ.
ಚಿತ್ರದುರ್ಗನ್ಯೂಸ್.ಕಾಂ: ಕಳೆದ 17 ವರ್ಷದಿಂದ ನಿತ್ಯ 8 ಕಿ.ಮೀ ಕಾಲ್ನಡಿಗೆಯಲ್ಲಿ ಸಂಚರಿಸಿ ಬೆರಳಣಿಕೆಯಷ್ಟು ಜನವಸತಿ, ರಸ್ತೆ ಸಂಪರ್ಕವಿಲ್ಲದ ಶಾಲೆಯೊಂದನ್ನು ಮಕ್ಕಳ ನೆಚ್ಚಿನ ವಿದ್ಯಾಕೇಂದ್ರವಾಗಿ ರೂಪಿಸಿದ ಶಿಕ್ಷಕಿ ಈ ಬಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಯಾರು ಈ ಶಿಕ್ಷಕಿ, ಕುಗ್ರಾಮಕ್ಕೂ ಬಸ್ ಸೌಲಭ್ಯವಿರುವ ಕಾಲದಲ್ಲಿ ರಸ್ತೆ ಇಲ್ಲದ ಊರು ಯಾವುದು, ಇವರ ಸಾಧನೆ ಏನು ಎಂಬ ಪ್ರಶ್ನೆಗಳು ಮಲ್ಲಿಗೆ ಹೂವು ಅರಳುವಂತೆ ಮನದಲ್ಲಿ ಒಂದೊಂದಾಗಿ ಮೂಡುವುದು ಸಹಜ. ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ.

ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ಮಲ್ಲೂರಹಳ್ಳಿ ಗುಡ್ಡದ ಕಪಿಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 18 ವರ್ಷದಿಂದ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಟಿ.ಸೌಭಾಗ್ಯ. ಮೂಲತಃ ದಾವಣಗೆರೆ ಸಮೀಪದ ಪರಶುರಾಂಪುರ ಗ್ರಾಮದ ಕೃಷಿ ಕುಟುಂಬದ ಇವರು ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಪೂರ್ಣಗೊಳಿಸುತ್ತಾರೆ.
ಪಿಯುಸಿ ಬಳಿಕ ಟಿಸಿಎಚ್ (TCH) ತರಬೇತಿ (Teacher certificate Higher) ಪಡೆದು 2002 ರ ಆಗಸ್ಟ್ 13 ರಂದು ಕನ್ನಡ ಶಿಕ್ಷಕಿಯಾಗಿ ನೇಮಕವಾಗಿ ಮೈಸೂರು (Mysore) ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಕೊಳತ್ತೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಬದುಕು ಆರಂಭಿಸಿದ್ದಾರೆ. ಮೂರು ವರ್ಷ 10 ತಿಂಗಳ ಬಳಿಕ ಪರಸ್ಪರ ವರ್ಗಾವಣೆಯಲ್ಲಿ 2006 ರ ಜೂನ್ 19 ರಂದು ಗುಡ್ಡದ ಕಪಿಲೆ ಶಾಲೆಗೆ ಬಂದ ಇವರಿಗೆ ಮೊದಲ ದಿನವೇ ಶಾಲೆ ಹುಡುಕುವ ಸವಾಲು ಎದುರಾಗುತ್ತದೆ. ಹೀಗೆ ಪ್ರಾರಂಭವಾದ ಇವರ ಪಯಣ ಹಾದಿಯಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಬುದ್ಧಿವಂತಿಕೆಯಿಂದ ನಿವಾರಿಸಿಕೊಂಡು ಎಲೆಮರೆ ಕಾಯಿಯಂತೆ ಮಕ್ಕಳಿಗೆ ಅಕ್ಷರ ಕಲಿಸಿದ್ದಾರೆ ಸೌಭಾಗ್ಯ.
ಗುಡ್ಡದ ಮೇಲೆ ನಿರ್ಮಿಸಿರುವ ಶಾಲೆಗೆ ತೆರಳುವ ಹಾದಿ ನಿರ್ಮಿಸಿ ಶಾಲಾ ಆವರಣದಲ್ಲಿ ಬರೋಬ್ಬರಿ 300 ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿ ಸುಂದರ ಹಸಿರು ವಾತಾವರಣ ಸೃಷ್ಟಿಸಿದ್ದಾರೆ. ರಸ್ತೆ ಸಂಪರ್ಕ ರಹಿತ ಶಾಲೆಗೆ ಬಿಸಿಯೂಟದ ಪರಿಕರಗಳನ್ನು ಅಡುಗೆ ಸಹಾಯಕಿಯರ ನೆರವಿನಿಂದ ತಾವೇ ತಲೆ ಮೇಲೆ ಹೊತ್ತು ಅಕ್ಕಿ, ಬೆಳೆ ತಲುಪಿಸುವ ಕಾರ್ಯವನ್ನು ಇಂದಿಗೂ ನಿರಂತರವಾಗಿದೆ. ಒಂದರಿಂದ ಐದನೇ ತರಗತಿವರೆಗೂ ಮಾತ್ರ ಇರುವ ಶಾಲೆಗೆ ಪ್ರಸ್ತುತ 21 ಮಕ್ಕಳು ದಾಖಲಾಗಿದ್ದಾರೆ.
ಇದನ್ನೂ ಓದಿ: ಜಿಲ್ಲಾ ಮಟ್ಟದ ಉತ್ತಮ ವಿಶೇಷ ಶಿಕ್ಷಕರ ಪಟ್ಟಿ ಪ್ರಕಟ: ಸೆ.5 ರಂದು ಸನ್ಮಾನ
ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಪ್ರತಿ ತಿಂಗಳು ತಾಯಂದಿರ ಸಭೆ ನಡೆಸಿ ಅವರಿಗೆ ಶಿಕ್ಷಣದ ಮಹತ್ವ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ. ಜತೆಗೆ ಮಕ್ಕಳು ನಾಲ್ಕನೇ ತರಗತಿ ಪ್ರವೇಶಿಸುತ್ತಿದ್ದಂತೆ ಅವರಿಗೆ ಮುರಾರ್ಜಿ, ಕಸ್ತೂರಬಾ ವಸತಿ ಶಾಲಾ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಸಿದ್ಧಗೊಳಿಸುತ್ತಾರೆ. ಬಳಿಕ ತಾವೇ ಅರ್ಜಿ ಸಲ್ಲಿಸಿ ದಾಖಲಾತಿವರೆಗೂ ಎಲ್ಲ ಖರ್ಚನ್ನು ನೋಡಿಕೊಳ್ಳುತ್ತಿದ್ದಾರೆ.
‘ಈವರೆಗೂ 50 ಕ್ಕೂ ಹೆಚ್ಚು ಮಕ್ಕಳು ಮುರಾರ್ಜಿ, ಕಸ್ತೂರಬಾ ವಸತಿ ಶಾಲೆಗೆ ಪ್ರವೇಶ ಪಡೆದಿದ್ದಾರೆ. 7 ವಿದ್ಯಾರ್ಥಿಗಳು ಬಿಎ ಬಿ.ಎಡ್, 4 ಬಿಎಸ್ಸಿ ಬಿ.ಎಡ್ ಹಾಗೂ 4 ವಿದ್ಯಾರ್ಥಿಗಳು ಬಿಎಸ್ಸಿ ಕಲಿಯುತ್ತಿದ್ದಾರೆ. ಕಳೆದ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಶಾಲೆಯಲ್ಲಿ ಕಲಿತಿದ್ದ ವಿದ್ಯಾರ್ಥಿ ವಿಜ್ಞಾನ ವಿಭಾಗದಲ್ಲಿ 525 ಅಂಕಗಳಿಸಿ ಸಾಧನೆ ಮಾಡಿದ್ದಾರೆ’ ಎನ್ನುತ್ತಾರೆ ಶಿಕ್ಷಕಿ ಟಿ.ಸೌಭಾಗ್ಯ.
ಅನಿವಾರ್ಯ ಸಂದರ್ಭದಲ್ಲಿ ರಜೆ ತೆಗೆದುಕೊಳ್ಳುವ ಇವರು ಕಳೆದ ವರ್ಷ ಮಾತ್ರ ಒಲ್ಲದ ಮನಸ್ಸಿನಿಂದ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಶಾಲೆಗೂ ಇವರಿಗೂ ಇವರಿಗೂ ಇರುವ ಕರುಳ ಬಳ್ಳಿ ಸಂಬಂಧದ ಕಾರಣಕ್ಕೆ ವರ್ಗಾವಣೆ ಸಿಗಲಿಲ್ಲ.
ಗ್ರಾಮೀಣ ಭಾಗದ ಶಾಲೆಗೆ ಶಿಕ್ಷಕರು ತೆರಳಲು ಯೋಚಿಸುವ ಕಾಲಘಟ್ಟದಲ್ಲಿ ನಿತ್ಯ 8 ಕಿ.ಮೀ. ಕಾಲ್ನಡಿಗೆಯಲ್ಲೇ ಹೋಗಿಬರುವ ಇವರು ಯುವ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಪ್ರಜಾವಾಣಿ ದಿನಪತ್ರಿಕೆಯ (Prajavani Daily News Paper) ‘ನಮ್ಮ ಜಿಲ್ಲೆ ನಮ್ಮ ಜನ’ ವಿಶೇಷದಲ್ಲಿ ‘ಜ್ಞಾನಜ್ಯೋತಿಯ ‘ಕಪಿಲೆ ಶಾಲೆ’ಗೆ ಕಾಲುದಾರಿಯೇ ಆಸರೆ’ ಸಮಸ್ಯೆಗಳ ನಡುವೆ ಮಕ್ಕಳಿಗೆ ಅಕ್ಷರಧಾರೆ; ಉತ್ಸಾಹಿ ಶಿಕ್ಷಕರೇ ಜೀವಾಳ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಧೀಶರಾದ ಎಂ.ವಿಜಯ್ ಬೈಕಿನಲ್ಲಿ ಪಯಣಿಸಿ ಗುಡ್ಡದ ಕಪಿಲೆಶಾಲೆ ವೀಕ್ಷಿಸಿ ಮಕ್ಕಳು ಮತ್ತು ಶಿಕ್ಷಕರು ಅಡುಗೆ ಸಿಬ್ಬಂದಿಗಳು ಪ್ರಯಾಸಪಟ್ಟು ಶಾಲೆಗೆ ಬರುವ ಪರಿಸ್ಥಿತಿಯಲ್ಲೂ ಶಾಲೆಯ ವಾತವರಣ, ಕಲಿಕೆ ಗುಣಮಟ್ಟ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದನ್ನು ಚಿತ್ರದುರ್ಗನ್ಯೂಸ್.ಕಾಂ ಸ್ಮರಿಸುತ್ತದೆ.
[penci_blockquote style=”style-1″ align=”none” author=”| ಟಿ.ಸೌಭಾಗ್ಯ, ಸಹ ಶಿಕ್ಷಕಿ, ಗುಡ್ಡದಕಪಿಲೆ”]ಪತಿ ಕೆ.ಆರ್.ತಿಪ್ಪೇಸ್ವಾಮಿ ಜಗಲೂರು ಹಾಗೂ ಕುಟುಂಬದ ಸಹಕಾರದಿಂದ ಈ ಕಾರ್ಯ ಸಾಧ್ಯವಾಗಿದೆ. ಇದೇ ಶಾಲೆಯಲ್ಲಿ ವೃತ್ತಿ ಪೂರ್ಣಗೊಳಿಸುವ ಮಹಾದಾಸೆ ನನ್ನದು.[/penci_blockquote]
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ https://www.facebook.com/chitradurganews?mibextid=ZbWKwL)
(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ.
https://chat.whatsapp.com/EQUQpKalYFT1fVcJDTDjCk)
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
