CHITRADURGA NEWS | 8 JANUARY 2024
ಚಿತ್ರದುರ್ಗ (CHITRADURGA): ವರ್ಷಾಂತ್ಯದ ವೇಳೆಗೆ ರಾಜ್ಯದಲ್ಲೇ ತಲ್ಲಣ ಸೃಷ್ಟಿಸಿದ್ದ ಪಾಳುಮನೆಯ ಅಸ್ಥಿಪಂಜರ (skeleton) ಪತ್ತೆ ಪ್ರಕರಣದ ಮರಣೋತ್ತರ ಪರೀಕ್ಷೆ ವರದಿ (Postmortem report) 10 ದಿನ ಬಳಿಕ ತನಿಖಾ ತಂಡದ (Investigation team) ಕೈ ಸೇರಿದೆ.
2023ರ ಡಿ.28 (ಗುರುವಾರ) ರಾತ್ರಿ ನಗರದ ಕಾರಾಗೃಹ ರಸ್ತೆಯ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ (Executive Engineer) ಆಗಿ ನಿವೃತ್ತಿ ಹೊಂದಿದ್ದ ಜಗನ್ನಾಥ ರೆಡ್ಡಿ (85) ಅವರ ನಿವಾಸದಲಲ್ಲಿ ಐವರು ವ್ಯಕ್ತಿಗಳ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಈ ವೇಳೆ ಸ್ಥಳಕ್ಕಾಗಮಿಸಿದ್ದ ದಾವಣಗೆರೆಯ ವಿಧಿ ವಿಜ್ಞಾನ ತಂಡ (Davangere Forensic Science Team) ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಡಿ.29 (ಶುಕ್ರವಾರ) ಅವುಗಳನ್ನು ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ (Basaveshwara Medical College. Hospital & Research Centre ) ರವಾನಿಸಲಾಗಿತ್ತು.
ಡಿ.30 (ಶನಿವಾರ) ಬಸವೇಶ್ವರ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಜಿಲ್ಲಾ ಆಸ್ಪತ್ರೆ (District Hospital) ವೈದ್ಯರಾದ ಡಾ.ಆರ್.ಪಿ.ವೇಣು ಹಾಗೂ ಡಾ.ಶ್ರೀಕೃಷ್ಣ ಅವರ ನೇತೃತ್ವದಲ್ಲಿ ಐವರು ವ್ಯಕ್ತಿಗಳ ಅಸ್ಥಿಪಂಜರದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇದರ ವರದಿ 2024 ರ ಜ.8 (ಭಾನುವಾರ) ಸಂಜೆ ಪೊಲೀಸರಿಗೆ ತಲುಪಿದೆ.

ಇದನ್ನೂ ಓದಿ: 20 ರೂಪಾಯಿ ವೈದ್ಯ ಪರ್ವಪ್ಪ ನೆನಪು ಮಾತ್ರ | ಬಡವರ ಪಾಲಿನ ಆಶಾಕಿರಣ
ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ವೈದ್ಯರ ತಂಡ ಕಳುಹಿಸಿದೆ. ಪ್ರಾಥಮಿಕ ಹಂತದ ವರದಿಯಲ್ಲಿ ಸಾವಿಗೆ ಕಾರಣವೇನು ಎಂಬುದು ತಿಳಿದಿಲ್ಲ. ಈ ಕಾರಣಕ್ಕೆ ವಿಧಿ ವಿಜ್ಞಾನ ಪ್ರಯೋಗಲಾಯದ ವರದಿಗೆ ಪೊಲೀಸರು ಕಾಯುತ್ತಿದ್ದಾರೆ.

ವಿಧಿ ವಿಜ್ಞಾನ ವರದಿ (Forensic Science Report) ಬಂದ ಬಳಿಕ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಜತೆಗೆ ಅಸ್ಥಿಪಂಜರಗಳು ಯಾರದ್ದು ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಆತ್ಮಹತ್ಯೆ ಎಂದಾದರೆ ಅದಕ್ಕೆ ಕಾರಣ, ಕೊಲೆಯಾದರೆ ಪುನಃ ತನಿಖೆ ಮತ್ತೊಂದು ತಿರುವು ಪಡೆಯಲಿದೆ.

ಈ ಎಲ್ಲದರ ನಡುವೆ ಈವರೆಗೂ ಪಾಳು ಮನೆಯಲ್ಲಿ ಪತ್ತೆಯಾದ ಅಸ್ಥಿಪಂಜರಗಳನ್ನು ಎನ್.ಕೆ.ಜಗನ್ನಾಥ ರೆಡ್ಡಿ (85), ಪತ್ನಿ ಪ್ರೇಮಲೀಲಾ (74), ಪುತ್ರಿ ಎನ್.ಜೆ.ತ್ರಿವೇಣಿ (56), ಎನ್.ಜೆ. ಕೃಷ್ಣ (53), ಎನ್.ಜೆ.ನರೇಂದ್ರ (51) ಅವರದ್ದು ಎನ್ನಲಾಗಿದೆ. ಒಂದು ವೇಳೆ ವರದಿಯಲ್ಲಿ ಈ ಅಂಶ ಪತ್ತೆಯಾಗದಿದ್ದರೆ ಇಡೀ ಪ್ರಕರಣ ರೋಚಕ ತಿರುವು ಪಡೆಯುವ ಸಾಧ್ಯತೆಗಳಿದೆ. ಈ ಎಲ್ಲದಕ್ಕೂ ಉತ್ತರ ಸಿಗಲಿ ಎಂಬ ಕಾರಣಕ್ಕೆ ಜ.8 ರಂದು ಬೆಂಗಳೂರಿನ ಎಫ್ಎಸ್ಎಲ್ಗೆ ಮೂಳೆ, ಬಟ್ಟೆ, ಒಂದು ಅಸ್ಥಿಪಂಜರದ ಮೇಲಿದ್ದ ಚರ್ಮದ ತುಣುಕನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ: ಐದು ವರ್ಷದ ಬಳಿಕ ನಾಯಕನಹಟ್ಟಿಗೆ ದಡ್ಲು ಮಾರಮ್ಮ ದೇವಿ ಆಗಮನ | ಬಾಗಿಲು ಮುಚ್ಚಲಿದೆ ತಿಪ್ಪೇಶನ ದೇಗುಲ

ಮರಣೋತ್ತರ ಪರೀಕ್ಷೆ ನಡೆದ ಬಳಿಕ ದೊಡ್ಡ ಸಿದ್ದವ್ವನಹಳ್ಳಿಯಲ್ಲಿರುವ ಎನ್.ಕೆ.ಜಗನ್ನಾಥ ರೆಡ್ಡಿ ಸಹೋದರ ಸಂಬಂಧಿಕರಿಗೆ ಅಸ್ಥಿಪಂಜರಗಳನ್ನು ಹಸ್ತಾಂತರಿಸಲಾಗಿತ್ತು. ಈ ವೇಳೆ ಪ್ರಕರಣ ತನಿಖೆ ಹಂತದಲ್ಲಿರುವ ಕಾರಣ ಅಗ್ನಿ ಸ್ಪರ್ಶಕ್ಕೆ ಅವಕಾಶ ನೀಡದೆ ಹೂಳಲು ಪೊಲೀಸರು ಅನುಮತಿ ನೀಡಿದ್ದರು. ಇದರಂತೆ ಸಂಬಂಧಿಕರು ಜೋಗಿಮಟ್ಟಿ ರಸ್ತೆಯ ವಿವೇಕಾನಂದ ನಗರ ಬಳಿಯ ಹಿಂದೂ ರುದ್ರಭೂಮಿಯಲ್ಲಿ ನಮ್ಮವರೇ ಎಂಬ ಬಲವಾದ ನಂಬಿಕೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.

ಮರಣೋತ್ತರ ಪರೀಕ್ಷೆ ವೇಳೆ ಅಸ್ಥಿಪಂಜರದ ಮೇಲಿದ್ದ ಉಡುಪು ಹಾಗೂ ಮೂಳೆಗಳ ರಚನೆಯ ಆಧಾರದಲ್ಲಿ ಶವಗಳು ಇಬ್ಬರು ಮಹಿಳೆಯರು ಹಾಗೂ ಮೂವರು ಪುರುಷರದ್ದು ಎಂದು ವೈದ್ಯರು ಗುರುತಿಸಿದ್ದರು. ಕೊಠಡಿಯೊಂದರಲ್ಲಿ ಮೂರು ಅಸ್ಥಿಪಂಜರಗಳು ಮಂಚದ ಮೇಲೆ, ಒಂದು ಮಂಚದ ಕೆಳಗೆ ಇದ್ದು, ಮತ್ತೊಂದು ನಡುಮನೆಯಲ್ಲಿ ಇತ್ತು. ಈ ಪೈಕಿ ಒಬ್ಬ ಪುರುಷ ಹಾಗೂ ಮಹಿಳೆಯ ಅಸ್ಥಿಪಂಜರದ ಕಾಲುಗಳು ಹಗ್ಗ ಬಿಗಿದ ಸ್ಥಿತಿಯಲ್ಲಿದ್ದವು ಎಂಬ ಅಂಶ ಮರಣೋತ್ತರ ಪರೀಕ್ಷೆ ವೇಳೆ ತಿಳಿದು ಬಂದಿದೆ ಎನ್ನಲಾಗಿತ್ತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
