CHITRADURGA NEWS | 24 JUNE 2025
ಚಿತ್ರದುರ್ಗ: ಜಿಲ್ಲೆಯ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳಲ್ಲಿ ಪಕ್ಕದಲ್ಲಿರುವ ದಾವಣಗೆರೆ ಜಿಲ್ಲೆಯಿಂದ ಅಪಸ್ವರ ತೆಗೆಯುವುದು ಸರಿಯಲ್ಲ. ನೀರಿನ ವಿಚಾರದಲ್ಲಿ ರಾಜಕೀಯ ಸಲ್ಲದು ಎಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ತಿಳಿಸಿದೆ.
Also Read: ಭರಮಸಾಗರದಲ್ಲಿ ನೂತನ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ನಾವು ಕುಡಿಯುವ ನೀರಿನ ಯೋಜನೆಗೆ ಅಡ್ಡಿ ಪಡಿಸುತ್ತಿಲ್ಲ, ಆದರೆ ಭದ್ರಾ ಕಾಲುವೆ ಸೀಳಿ ನೀರು ಎತ್ತುವುದು ಬೇಡ, ಬದಲಿ ಮೂಲ ಹುಡುಕಿಕೊಳ್ಳಿ ಎಂದು ದಾವಣಗೆರೆ ರೈತರು ಹೋರಾಟ ಆರಂಭಿಸಿದ್ದಾರೆ ಎಂದರು.
ಜಿಲ್ಲೆಯ ಹೊಸದುರ್ಗ, ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ, ಅಜ್ಜಂಪುರ ಪ್ರದೇಶದ ಸುಮಾರು 518 ಗ್ರಾಮಗಳಿಗೆ ಕುಡಿವ ನೀರು ಪೂರೈಕೆ ಮಾಡಲು 830 ಕೋಟಿ ರು ವೆಚ್ಚದ ಯೋಜನೆ ರೂಪಿಸಲಾಗಿದೆ. ಯೋಜನೆಯಡಿ ಹೊಸದುರ್ಗ ಪಟ್ಟಣ ಸೇರಿದಂತೆ ತಾಲೂಕಿನ 346 ಹಳ್ಳಿಗಳಿಗೆ ಕುಡಿವ ನೀರು ಪೂರೈಕೆ ಮಾಡುವ ಉದ್ದೇಶ ಹೊಂದಲಾಗಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ನೀರು ಪೂರೈಕೆಗೆ ಟ್ರಯಲ್ ಮಾಡುವಾಗ ದಾವಣಗೆರೆ ಜಿಲ್ಲೆ ರೈತರು ಆಕ್ಷೇಪ ವ್ಯಕ್ತಪಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಬಲದಂಡೆ ಕಾಲುವೆಯಿಂದ ನೀರು ಎತ್ತಿದರೆ ಕಡೇ ಗ್ರಾಮಗಳಿಗೆ ನೀರು ಹೋಗುವುದಿಲ್ಲ. ಅಚ್ಚುಕಟ್ಟುದಾರ ರೈತರು ತೊಂದರೆ ಅನುಭವಿಸುತ್ತಾರೆ ಎಂಬ ಅವೈಜ್ಞಾನಿಕ ಸಂಗತಿಗಳ ಮುಂದಿಟ್ಟುಕೊಂಡು ಬೀದಿಗಿಳಿದಿದ್ದಾರೆ. ಕುಡಿಯುವ ನೀರು ರಾಷ್ಟ್ರೀಯ ಹಕ್ಕು. ಯಾರೂ ಕೂಡಾ ಇದು ನಮ್ಮದೇ ಎಂದು ಪ್ರತಿಪಾದನೆ ಮಾಡುವಂತಿಲ್ಲ.
Also Read: ಜಿಲ್ಲೆಯಲ್ಲಿ ಖಾಲಿ ಇರುವ ಪಶು ವೈದ್ಯರ ನೇಮಕಕ್ಕೆ ಕ್ರಮ ವಹಿಸಿ | ಮಹೇಶ್ವರಪ್ಪ
ಜನ ಸಮುದಾಯಗಳಿಗೆ ನೀರು ಪೂರೈಕೆ ಮಾಡು ಜವಾಬ್ದಾರಿ ಸರ್ಕಾರದ್ದಾಗಿದ್ದು ಜಲ ಮೂಲಗಳ ಆಧರಿಸಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರುತ್ತಿದೆ. ಹೊಸದುರ್ಗ ಪಟ್ಟ ಣ ಹಾಗೂ ತಾಲೂಕಿಗೆ ಕುಡಿವ ನೀರು ಆ ಭಾಗದ ಜನರ ಜೀವನ್ಮರಣದ ಪ್ರಶ್ನೆಯಾಗಿದ್ದು ಸರ್ಕಾರ ಇಚ್ಚಾಶಕ್ತಿಯ ಫಲವಾಗಿ ಜಾರಿಯಾಗುತ್ತಿದೆ ಎಂದು ವಿವರಿಸಿದರು.
ಬಹುಗ್ರಾಮ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ ನಿತ್ಯ 30 ಕ್ಯೂಸೆಕ್ಸ್ ನೀರು ಮೇಲೆತ್ತಲಾಗುತ್ತಿದ್ದು, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗೆಳ ತಾತ್ಕಾಲಿಕ ಬೇಡಿಕೆ ಇದಾಗಿದೆ. ಭದ್ರಾ ಕಾಲುವೆ ಸೀಳಿ ಮೇಲೆತ್ತಬೆೇಡಿ ಎಂಬು ಕೂಗು ಎಬ್ಬಿಸಿರುವ ದಾವಣಗೆರೆ ಜಿಲ್ಲೆಯ ರೈತರು ಅನಗತ್ಯ ಗೊಂದಲ ಸೃಷ್ಡಿಸುತ್ತಿದ್ದಾರೆ.
ಭದ್ರಾ ಕಾಲುವೆಯಿಂದ ಇದೇ ಮೊದಲ ಬಾರಿಗೆ ಕುಡಿವ ನೀರಿನ ಯೋಜನೆಗಳನ್ನು ರೂಪಿಸಿಲ್ಲ. ಭದ್ರಾವತಿ ತಾಲೂಕಿನ ಕೂಡ್ಲಿಗಿರಿ ಹಾಗು ಇತರೆ ಹದಿನೆಂಟು ಗ್ರಾಮ, ಚೆನ್ನಗಿರಿ ತಾಲೂಕಿನ 4 ಬಹುಗ್ರಾಮ ಕುಡಿವ ನೀರಿನ ಯೋಜನೆ ಹಾಗೂ ದಾವಣಗೆರೆ ತಾಲೂಕಿನ 9 ಬಹುಗ್ರಾಮ ಕುಡಿವ ನೀರು ಯೋಜನೆಗೆ ಭದ್ರಾ ಕಾಲುವೆಯಿಂದ ನೀರು ಪಡೆಯಲಾಗುತ್ತಿದೆ ಎಂದು ತಿಳಿಸಿದರು.
Also Read: ಹೊಸದುರ್ಗ ತಾಲೂಕಿನಲ್ಲಿ ಭೀಕರ ಕೊಲೆ | ಹಾಡಹಗಲೆ ಮನೆಗೆ ನುಗ್ಗಿ ಹತ್ಯೆ
ತಮ್ಮ ಜಿಲ್ಲೆಯ ಕುಡಿವ ನೀರು ಯೋಜನೆಗಳಿಗೆ ಭದ್ರಾ ಕಾಲುವೆಯಿಂದ ನೀರು ಪೂರೈಕೆಗೆ ಸಮ್ಮತಿಸುವ ದಾವಣಗೆರೆ ರೈತರು, ಚಿತ್ರದುರ್ಗದ ಪ್ರಶ್ನೆ ಬಂದಾಗ ಮಾತ್ರ ವಿರೋಧಿಸುತ್ತಾರೆ. ಒಂದು ಅರೆ ನೀರಾವರಿ ಬೆಳೆಗೆ ಮಾತ್ರ ಭದ್ರಾ ಜಲಾಶಯದಿಂದ ನೀರು ಪೂರೈಕೆ ಎಂಬ ನಿಬಂಧನೆ ಇದ್ದರೂ ಭತ್ತ ಬೆಳೆಯಲು ಎರಡು ಬೆಳೆಗಳಿಗೆ ನೀರು ಪಡೆಯುತ್ತಿದ್ದಾರೆ. ಟೇಲ್ ಎಂಡ್ ಗೆ ನೀರು ಪೂರೈಕೆಯಾಗದಿದ್ದರೆ ಅದಕ್ಕೆ ಚಿತ್ರದುರ್ಗ ಜಿಲ್ಲೆ ಅಥವ ಇಲ್ಲಿ ಅನುಷ್ಟಾನಗೊಳಿಸಲಾಗುತ್ತಿರುವ ಕುಡಿವ ನೀರು ಯೋಜನೆಗಳು ಕಾರಣವಲ್ಲ ಎಂದರು.
ದಾವಣಗೆರೆ ಜಿಲ್ಲೆಯ ರೈತರು ಹಾಗೂ ಅಲ್ಲಿನ ರಾಜಕಾರಣಿಗಳು ವಾಸ್ತವಾಂಶ ಅರಿತು ನಡೆದುಕೊಳ್ಳಲಿ. ಪದೇ ಪದೆ ಬಯಲು ಸೀಮೆ ರೈತಾಪಿ ಸಮುದಾಯ, ಜನರ ಕೆಣಕುವುದು ಬೇಡ. ಭದ್ರಾ ಜಲಾಶಯದಲ್ಲಿನ ನೀರಿನ ಮೇಲೆ ನೆರೆ ಜಿಲ್ಲೆಯ ಜನರ ಎಲ್ಲರ ಹಕ್ಕು ಇದೆ ಎಂಬುದ ಮನವರಿಕೆ ಮಾಡಿಕೊಳ್ಳಲಿ ಎಂದು ಲಿಂಗಾರೆಡ್ಡಿ ಎಚ್ಚರಿಸಿದರು.
ದಾವಣಗೆರೆ ರೈತರು 28 ರಂದು ಬಂದ್ ಕರೆ ಕೊಟ್ಟಿದ್ದಾರೆ. ಪ್ರತಿಯಾಗಿ ಚಿತ್ರದುರ್ಗದ ರೈತರು ಹೋರಾಟ ರೂಪಿಸುವ ಸಂಬಂಧ ಬುಧವಾರ ಹೊಸದುರ್ಗದಲ್ಲಿ ರೈತರು, ಹೋರಾಟಗಾರರ ಸಭೆ ಕರೆಲಾಗಿದೆ. ಸಭೆಯಲ್ಲಿ ಮುಂದಿನ ಹೋರಾಟ ಕುರಿತು ನಿರ್ಣಯ ಕೈಗೊಳ್ಳಲಾಗುವುದೆಂದು ಹೇಳಿದರು.
Also Read: ಈ 5 ಸ್ಕಿನ್ ಕೇರ್ ಪ್ರೊಡಕ್ಟ್ಗಳನ್ನು ಸುಕ್ಕುಗಟ್ಟಿದ ಚರ್ಮಕ್ಕೆ ಹಚ್ಚಬೇಡಿ
ಸರ್ವೋದಯ ಕರ್ನಾಟಕದ ಮುಖಂಡ ಜೆ.ಯಾದವರೆಡ್ಡಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷರುಗಳಾದ ಕೆ.ಪಿ.ಭೂತಯ್ಯ, ಕೆ.ಸಿ.ಹೊರಕೇರಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಬಸ್ತಿಹಳ್ಳಿ ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number