ಮುಖ್ಯ ಸುದ್ದಿ
ಪ್ರೊ.ಎಂ.ಜಿ.ರಂಗಸ್ವಾಮಿ ರಚಿಸಿರುವ ಐದು ಕೃತಿಗಳ ಲೋಕಾರ್ಪಣೆ
CHITRADURGA NEWS | 03 FEBRUARY 2025
ಚಿತ್ರದುರ್ಗ: ಬ್ರಿಟಿಷರನ್ನು ಸ್ಮರಿಸುವುದು ವಸಾಹತು ಶಾಹಿಯನ್ನು ಪೋಷಣೆ ಮಾಡಿದಂತೆ ಆಗುವುದಿಲ್ಲ. ಬದಲಾಗಿ ದೇಶದ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಿಕೊಳ್ಳುವುದಾಗಿದೆ ಎಂದು ಇತಿಹಾಸ ಸಂಶೋಧಕ ಲಕ್ಷ್ಮಣ ತೆಲಗಾವಿ ಅಭಿಪ್ರಾಯಪಟ್ಟರು.
Also Read: Kannada Novel: 18. ಜಂಗಮಯ್ಯರಿಗೆ ಪುತ್ರೋತ್ಸವ
ನಗರದ ಐಎಂಎ ಸಭಾಂಗಣದಲ್ಲಿ ಶನಿವಾರ ಸಂಜೆ ಸಿವಿಜಿ ಪ್ರಕಾಶನ, ತೇಜಸ್ ಇಂಡಿಯಾ, ಬಾಪೂಜಿ ವಿದ್ಯಾಸಂಸ್ಥೆ, ಅಭಿರುಚಿ ವೇದಿಕೆಯಿಂದ ಆಯೋಜಿಸಿದ್ದ ಪ್ರೊ.ಎಂ.ಜಿ.ರಂಗಸ್ವಾಮಿ ಅವರ ಐದು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು
ಬ್ರಿಟಿಷರ ಆಡಳಿತ ಕಾಲದಲ್ಲಿ ಚಿತ್ರದುರ್ಗ ವಿಭಾಗದ ಕಮೀಷನರ್ ಆಗಿ ಕಾರ್ಯನಿರ್ವಹಿಸಿದ್ದ ಆರ್.ಎಸ್.ಡಾಬ್ಸ್ ಈ ಜಿಲ್ಲೆಗೆ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಅವರ ಸ್ಮರಣಾರ್ಥವಾಗಿ ಜಿಲ್ಲೆಯಲ್ಲಿ ಡಾಬ್ಸ್ ಸ್ಮಾರಕ ನಿರ್ಮಾಣವಾಗಬೇಕು ಎಂದರು.
ಡಾಬ್ಸ್ ಹೆಸರಿನಲ್ಲಿ ತುಮಕೂರಿನ ಡಾಬಸ್ ಪೇಟೆ ಪಟ್ಟಣ ಹೊರತುಪಡಿಸಿ ಯಾವುದೇ ಕುರುಹುಗಳಿಲ್ಲ. ಹಳೇ ಮೈಸೂರು ಭಾಗದಲ್ಲಿ ಬ್ರಿಟಿಷ್ ವೈಸ್ರಾಯ್, ಅಧಿಕಾರಿಗಳ ಹಲವು ಸ್ಮಾರಕಗಳಿವೆ. ಆದರೆ ದುರ್ಗದಲ್ಲಿ ಯಾವ ಸ್ಮಾರಕಗಳೂ ಇಲ್ಲ ಎಂದು ಹೇಳಿದರು.
ಜಿಲ್ಲೆಯ ಜೀವನಾಡಿ ವಾಣಿವಿಲಾಸ ಜಲಾಶಯಕ್ಕೆ ಮೂಲ ಯೋಜನೆ ರೂಪಿಸಿದ್ದೇ ಡಾಬ್ಸ್. ಈಗಿನ ರಾಷ್ಟ್ರೀಯ ಹೆದ್ದಾರಿ-48ಕ್ಕೆ ಅವರೇ ಕಾರಣಕರ್ತರು. ಹಿರಿಯೂರು ಸೇತುವೆ ಸೇರಿದಂತೆ ಹಲವು ಜನೋಪಯೋಗಿ ಕೆಲಸಗಳನ್ನು ಅವರು ಮಾಡಿದ್ದಾರೆ ಎಂದರು.
ಬ್ರಿಟಿಷರು ಭಾರತದ ಮೇಲೆ ಆಕ್ರಮಣ ಮಾಡಿದ್ದು ನಿಜ. ಇಲ್ಲಿನ ಆಡಳಿತದ ಅವಧಿಯಲ್ಲಿ ಅನೇಕ ಸುಧಾರಣೆ ಮಾಡಿದ್ದಾರೆ. ಹಾಳುಗೆಡವಿದ್ದ ಸ್ಮಾರಕಗಳನ್ನು ಅವರೇ ದುರಸ್ತಿ ಮಾಡಿದ್ದಾರೆ. ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ಅವರು ಕೊಟ್ಟ ಕೊಡುಗೆಗಳನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಕಸಾಪ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಮಾತನಾಡಿ ಇತಿಹಾಸ ದಾಖಲು ಮಾಡುವುದೆಂದರೆ ಬದುಕಿನ ಹುಡುಕಾಟವೇ ಆಗಿದೆ. ಭೂತಕಾಲದ ನೆನಪುಗಳೊಂದಿಗೆ ವರ್ತಮಾನದ ಬೆಳಕಿನೊಂದಿಗೆ ಸಾಹಿತಿ ಭವಿಷ್ಯದ ಹುಡುಕಾಟ ನಡೆಸುತ್ತಾನೆ. ಸಾಹಿತಿ ಅನಧಿಕೃತ ಶಾಸನಕರ್ತನೂ ಆಗಿರುತ್ತಾನೆ ಎಂದರು.
ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಬಾಪೂಜಿ ವಿದ್ಯಾಸಂಸ್ಥೆಯ ಕೆ.ಎಂ.ವೀರೇಶ್, ಸಿವಿಜಿ ಚಂದ್ರು, ಎಸ್.ಲಿಂಗಪ್ಪ ಇದ್ದರು.
Also Read: ಕೇಂದ್ರದ ಬಜೆಟ್ನಿಂದ ಯಾರಿಗೆ ಅನುಕೂಲ | ಹಾಲಿ, ಮಾಜಿ ಸಂಸದರು ಏನು ಹೇಳಿದ್ರು ?
ಕಾರ್ಯಕ್ರಮದಲ್ಲಿ ಪ್ರೊ.ಎಂ.ಜಿ.ರಂಗಸ್ವಾಮಿ ಅವರ ಡಾಬ್ಸ್ ಆಡಳಿತದ ನೋಟಗಳು, ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್, ದುರುಗ ಸೀಮೆ ಸಾಧಕರು, ಹಿರಿಯೂರು ಸೀಮೆ ಜನಪದ ದೈವಗಳು, ಮಾರಿಕಣಿವೆ ಮಡಿಲಲ್ಲಿ ಕೃತಿಗಳು ಬಿಡುಗಡೆಯಾದವು.