ಹಿರಿಯೂರು
HIRIYURU; ಹಿರಿಯೂರು ಪೊಲೀಸರ ಭರ್ಜರಿ ಕಾರ್ಯಾಚರಣೆ | 24 ಗಂಟೆಯೊಳಗೆ ಕಳ್ಳರ ಬಂಧನ | ಕಳುವಾಗಿದ್ದ 2.52 ಲಕ್ಷ ಮೌಲ್ಯದ ಕಡಲೆ ವಶ

CHITRADURGA NEWS | 09 JULY 2024
ಹಿರಿಯೂರು: ಹಿರಿಯೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಗರ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 2.52 ಲಕ್ಷ ರೂ. ಮೌಲ್ಯದ 60 ಕಡಲೆ ಚೀಲಗಳನ್ನು ಕಳ್ಳರ ಸಮೇತ 24 ಗಂಟೆಯೊಳಗೆ ಬಂಧಿಸಿ, ವಶಕ್ಕೆ ಪಡೆದುಕೊಂಡಿದ್ದಾರೆ.
ಹಿರಿಯೂರು(HIRIYURU) ನಗರದ ತಾಹ್ ಪ್ಯಾಲೇಸ್ ಪಕ್ಕದಲ್ಲಿರುವ ಗೋಡಾನ್ ಒಂದರಲ್ಲಿ ಸಾಗರ್ ಎಂಬುವವರು 60 ಚೀಲ ಕಡಲೆ ಶೇಖರಿಸಿಟ್ಟಿದ್ದರು. ಜುಲೈ 5 ರಂದು ರಾತ್ರಿ ಇಲ್ಲಿದ್ದ ಎಲ್ಲ ಕಡಲೆ ಚೀಲಗಳು ಕಳ್ಳತನವಾಗಿದ್ದವು.
ಇದನ್ನೂ ಓದಿ: ಝೀ ಕನ್ನಡದ ಮಹಾನಟಿ ಶೋ | ಚಿತ್ರದುರ್ಗದ ಗಗನ ಭಾರಿ ಫೈನಲ್ಗೆ ಆಯ್ಕೆ
ಈ ಬಗ್ಗೆ ಸಾಗರ್ ತಂದೆ ಜಯಕುಮಾರ್ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಭಾರತೀಯ ನ್ಯಾಯ ಸಂಹಿತೆ ಕಾಯ್ದೆ ಅಡಿಯಲ್ಲಿ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಮೊ.ನಂ.174/2024 ಕಲಂ.305,331(3),331(4) ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಹಿರಿಯೂರು ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಅವರ ನೇತೃತ್ವದ ಹಿರಿಯೂರು ನಗರ ಠಾಣೆ ಪೊಲೀಸ್ ಸಿಬ್ಬಂದಿಗಳ ತಂಡ ಜು.6 ರಂದು ತಾಂತ್ರಿಕ ಸಾಕ್ಷಿಗಳನ್ನು ಪರಿಶೀಲಿಸಿ, ಹಿರಿಯೂರು ತಾಲೂಕು ಯಲ್ಲದಕೆರೆ ಮೂಲದ 28 ವರ್ಷದ ಬಸವರಾಜ್ ಮೇಲೆ ಅನುಮಾನ ಬಂದಿದೆ.
ಇದನ್ನೂ ಓದಿ: ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಮಹಡಿ ಶಿವಮೂರ್ತಿ ಅವಿರೋಧ ಆಯ್ಕೆ
ಸದರಿ ರೋಪಿತನನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ, ಸಾಕಷ್ಟು ಸಾಲ ಮಾಡಿಕೊಂಡಿದ್ದು, ಸಾಲದ ಕಂತು ಕಟ್ಟುವ ಸಲುವಾಗಿ ತನ್ನ ಸ್ನೇಹಿತ ವೇದಾವತಿ ನಗರದ ಸಿ.ಮಂಜುನಾಥ್ ಸಹಾಯದಿಂದ 60 ಕಡಲೆ ಚೀಲಗಳನ್ನು ಕದ್ದು ಹಿರಿಯೂರು ಟೌನ್ ಬೈಪಾಸ್ ರಸ್ತೆಯಲ್ಲಿರುವ ವೀರಭದ್ರಸ್ವಾಮಿ ಟ್ರೇಡರ್ಸ್ಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ನಂತರ ಎ2 ಆರೋಪಿ ಮಂಜುನಾಥನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಸವರಾಜ್ ಜೊತೆ ಸೇರಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ನ್ಯಾಯಾಂಗ ಬಂಧನಕ್ಕೆ ಆರೋಪಿಗಳು:
ಆರೋಪಿಗಳಿಂದ 2.52 ಲಕ್ಷ ರೂ. ಮೌಲ್ಯದ ಕಡಲೆ ಚೀಲಗಳು, ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ಸುಜುಕಿ ಕಂಪೆನಿಯ ಗ್ರ್ಯಾಂಡ್ ವಿಟೆರಾ ಕಾರು ಹಾಗೂ ಮಹೇಂದ್ರ ಕಂಪೆನಿಯ ಟ್ರಾಕ್ಟರನ್ನು ವಶಪಡಿಸಿಕೊಳ್ಳಲಾಗಿದೆ.
ಇಬ್ಬರೂ ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಶ್ರೀ ಅಯ್ಯಪ್ಪ ಸ್ವಾಮಿ ಪ್ರತಿಷ್ಠಾಪನಾ ರಜತ ಮಹೋತ್ಸವ | ಸಚಿವ ಡಿ.ಸುಧಾಕರ್ ಭಾಗೀ
ಸದರಿ ಪ್ರಕರಣವು ವರದಿಯಾದ 24 ಗಂಟೆಯೊಳಗಾಗಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಮತ್ತು ಮಾಲನ್ನು ವಶಪಡಿಸಿಕೊಂಡ ಹಿರಿಯೂರು ನಗರ ಪೊಲೀಸ್ ಠಾಣೆಯ ಪಿ.ಐ. ರಾಘವೇಂದ್ರ ಕಾಂಡಿಕೆ, ಸಿಬ್ಬಂದಿಗಳಾದ ದೇವೇಂದ್ರಪ್ಪ, ಸಿದ್ದಲಿಂಗೇಶ್ವರ, ಸುದರ್ಶನಗೌಡ, ನಾಗಣ್ಣ, ಸುರೇಶ್ ನಾಯ್ಕ, ಜಾಫರ್ ಸಾದಿಕ್ ಉಲ್ಲಾ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಶ್ಲಾಘಿಸಿದ್ದಾರೆ.
