ಅಡಕೆ ಧಾರಣೆ
ಅಡಿಕೆ ಸಿಪ್ಪೆಯನ್ನು ಗೊಬ್ಬರ ಮಾಡುವುದು ಹೇಗೆ ಗೊತ್ತಾ ?

CHITRADURGA NEWS | 18 FEBRUARY 2024
ಚಿತ್ರದುರ್ಗ: ಕಸದಿಂದ ರಸ ಮಾಡಬಹುದು ಎನ್ನುವ ಮಾತೇ ಇದೆ. ಅದರಂತೆ ನಮ್ಮ ಜಮೀನು, ತೋಟ, ಗದ್ದೆಗಳಲ್ಲಿ ನಾವು ಬಿಸಾಡುವ ಕೃಷಿ ತ್ಯಾಜ್ಯಗಳಿಂದಲೇ ಅತ್ಯುತ್ತಮ ಗೊಬ್ಬರ ತಯಾರಿಸಿಕೊಂಡು ಉತ್ತಮ ಬೆಳೆ ಬೆಳೆಯಬಹುದು ಎನ್ನುವುದು ಕೃಷಿ ವಿಜ್ಞಾನಿಗಳ ಅಭಿಪ್ರಾಯ. ಅನುಭವಿ ರೈತರ ಮಾತೂ ಕೂಡಾ.
ರಾಜ್ಯದಲ್ಲಿ ಅಡಿಕೆ ಕೃಷಿ ದಿನೇ ದಿನೇ ವ್ಯಾಪಕತೆ ಪಡೆದುಕೊಳ್ಳುತ್ತಿದೆ. ರೈತರು ಅಡಿಕೆ ಸುಲಿದ ನಂತರ ಅದರಿಂದ ಬರುವ ಸಿಪ್ಪೆಯನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ಪ್ರತಿ ಹಳ್ಳಿಯಲ್ಲೂ ಕಾಣಬಹುದು. ಇದರಿಂದ ಸಾವಿರಾರು ಟನ್ ಅಡಿಕೆ ಸಿಪ್ಪೆ ವ್ಯರ್ಥವಾಗಿ ಹೋಗುತ್ತಿದೆ.
ಇದನ್ನೂ ಓದಿ: ಅಡಿಕೆ ಉತ್ಪಾಧನೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲು
ಪ್ರತಿ ಊರಿನ ಅಕ್ಕಪಕ್ಕದ ರಸ್ತೆಗಳ ಪಕ್ಕದಲ್ಲಿ ನೂರಾರು ಲೋಡು ಅಡಿಕೆ ಸಿಪ್ಪೆ ಬಿದ್ದಿರುತ್ತದೆ. ಕೆಲ ದಿನಗಳ ನಂತರ ಈ ಸಿಪ್ಪೆಗೆ ಬೆಂಕಿ ಹಾಕಿದಾಗ ಒಂದೆರಡು ದಿನ ದಟ್ಟ ಹೊಗೆ ಆವರಿಸುತ್ತದೆ. ಅಲ್ಲಿಗೆ ಸಿಪ್ಪೆಯ ಕಥೆಯೂ ಮುಗಿಯುತ್ತದೆ. ಮರು ವರ್ಷ ಮತ್ತೆ ಇದೇ ಪರಿಸ್ಥಿತಿ.
ಆದರೆ, ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಬಬ್ಬೂರು ಕೃಷಿ ತರಬೇತಿ ಕೇಂದ್ರದಲ್ಲಿ ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಫಾರ್ಮುಲಾವನ್ನು ಕೃಷಿ ವಿಜ್ಞಾನಿಗಳು, ವಿಶ್ವವಿದ್ಯಾನಿಲಯಗಳ ನುರಿತ ಪ್ರಾಧ್ಯಾಪಕರು ರೈತರಿಗೆ ಹೇಳಿಕೊಟ್ಟಿದ್ದಾರೆ.
ಇದನ್ನೂ ಓದಿ: ಫೆಬ್ರವರಿ 17 | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ ಗೊತ್ತಾ
ಅಡಿಕೆ ಸಿಪ್ಪೆ ಬೇಗ ಕೊಳೆಯುವುದಿಲ್ಲ ಎನ್ನುವ ಕಾರಣಕ್ಕೆ ರೈತರು ಅದನ್ನು ಗೊಬ್ಬರವಾಗಿ ಬಳಕೆ ಮಾಡಲು ಹಿಂದೇಟು ಹಾಕುತ್ತಿದ್ದರು. ಆದರೆ, ಬೇಗ ಕಳಸುವ ವಿಧಾನವನ್ನು ಕೃಷಿ ವಿಜ್ಞಾನಿಗಳು ವಿವರಿಸಿದ್ದಾರೆ.

ತರಬೇತಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 75 ಕ್ಕೂ ಹೆಚ್ಚು ಆಸಕ್ತ ರೈತರು ಭಾಗವಹಿಸಿದ್ದು
ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ತಯಾರಿಸುವುದು ಹೇಗೆ:
ಕಾಂಪೋಷ್ಟ ಘಟಕದಲ್ಲಿ ತೆಳುವಾಗಿ ಒಣ ಎಲೆ, ಕೆಂಪು ಮಣ್ಣು ಹರಡಿ ಅದರ ಮೇಲೆ 1/3 ಭಾಗ ಅಡಿಕೆ ಸಿಪ್ಪೆ ತುಂಬಿ ನಂತರ 1 ಕೆಜಿ ಸೂಕ್ಷ್ಮ ಜೀವಿಗಳ ಮಿಶ್ರಣ (ಕಾಂಪೋಸ್ಟ್ ಕಲ್ಚರ್), ಸಗಣಿ ಬಗ್ಗಡ ಸಿಂಪಡಿಸಿ ಪುನಃ 2 ಬಾರಿ ಒಣ ಎಲೆ, ಕೆಂಪು ಮಣ್ಣು ಹರಡಿ ಅದರ ಮೇಲೆ ಅಡಿಕೆ ಸಿಪ್ಪೆ, 1 ಕೆಜಿ ಸೂಕ್ಷ್ಮ ಜೀವಿಗಳ ಮಿಶ್ರಣವನ್ನು ಹರಡುವುದು.
ನಂತರ ಕಾಂಪೋಸ್ಟ್ ಘಟಕದ ಮೇಲ್ಬಾಗವನ್ನು ತೆಂಗಿನ ಗರಿಯಿಂದ ಮುಚ್ಚಿ ಅಥವಾ ಚಪ್ಪರ ಹಾಕಿ 2-3 ದಿನಗಳಿಗೊಮ್ಮೆ ನೀರು ಹಾಕಿ ತೇವಾಂಶವನ್ನು ಕಾಪಾಡಿಕೊಳ್ಳಬೇಕು.
ಇದನ್ನೂ ಓದಿ: ಅಡಿಕೆ ಬೆಳೆಗೆ ಹನಿ ನೀರಾವರಿ, ನರೇಗಾ ಸೌಲಭ್ಯಕ್ಕೆ ಸಚಿವರ ಒಪ್ಪಿಗೆ
ತಿಂಗಳಿಗೊಮ್ಮೆ 3 ತಿಂಗಳವರೆಗೆ ಗುದ್ದಲಿ ಸಹಾಯದಿಂದ ಅಡಿಕೆ ಸಿಪ್ಪೆಯನ್ನು ತಿರುವಿ ಹಾಕಬೇಕು. 3 ತಿಂಗಳ ನಂತರ 20*5*5 ಅಡಿ ಇರುವ ಘಟಕಕ್ಕೆ 5 ಕೆಜಿ ಎರೆಹುಳು ಬಿಡಬೇಕು. ಪ್ರತಿ ವಾರ ತೆಳುವಾಗಿ ಸಗಣಿ ಬಗ್ಗಡ ಹಾಕಿ ತೇವಾಂಶವನ್ನು ಕಾಪಾಡಿಕೊಳ್ಳಬೇಕು.
ಎರೆಹುಳು ಹಾಕಿದ ನಂತರ ಯಾವುದೇ ರೀತಿಯ ಮಿಶ್ರಣ ಮಾಡಬಾರದು. ಮಳೆಗಾಲದಲ್ಲಿ ನೀರು ನಿಂತರೆ ಕೆಳಭಾಗದಲ್ಲಿ ಒಂದು ಪೈಪ್ ಹಾಕಿ ಹೆಚ್ಚಾದ ನೀರನ್ನು ಹೊರಗೆ ಬಿಡಬೇಕು.
ಇದನ್ನೂ ಓದಿ: ಮೊದಲ ದಿನವೇ ರಾಗಿ ಚೆಕ್ಗೆ ಸಹಿ
ಈ ರೀತಿ ಮೇಲಿನ ಎಲ್ಲ್ಲಾ ಪ್ರಕ್ರಿಯೆಗಳನ್ನು ಮಾಡಿದರೆ 6 ತಿಂಗಳಲ್ಲಿ ಉತ್ಕøಷ್ಟವಾದ ಗೊಬ್ಬರ ತಯಾರಾಗುತ್ತದೆ.
ಈ ತರಬೇತಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 75 ಕ್ಕೂ ಹೆಚ್ಚು ಆಸಕ್ತ ರೈತರು ಭಾಗವಹಿಸಿದ್ದು, ಭಾಗವಹಿಸಿದ ರೈತರಿಗೆ ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಿಕೊಳ್ಳಲು ಉಚಿತವಾಗಿ ಕಾಂಪೋಸ್ಟ್ ಕಲ್ಚರನ್ನು ನೀಡಲಾಯಿತು.
