ಚಿತ್ರದುರ್ಗ ನ್ಯೂಸ್.ಕಾಂ: ಹೈಕೋರ್ಟ್ ನೀಡಿದ ಜಾಮೀನು ಅರ್ಜಿಯ ಅನುಸಾರ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಮುರುಘಾ ಮಠದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರಿಗೆ ಬುಧವಾರ ಜೈಲಿನಿಂದ ಬಿಡುಗಡೆಗೆ ಆದೇಶ ಮಾಡಿದರೂ, ಶರಣರು ಹೊರಗೆ ಬರಲು ಸಾಧ್ಯವಾಗಲಿಲ್ಲ.
ನ್ಯಾಯಾಲಯದ ಆದೇಶ ಪ್ರತಿ ಜಿಲ್ಲಾ ಕಾರಾಗೃಹಕ್ಕೆ ತಲುಪುವುದು ವಿಳಂಬವಾದ ಕಾರಣ ಬುಧವಾರ ಸಂಜೆ ಶ್ರೀಗಳು ಜೈಲಿನಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ.
ಈ ನಡುವೆ ಸರ್ಕಾರದ ಪರ ವಕೀಲರಾದ ಜಗದೀಶ್, ಎರಡನೇ ಪೋಕ್ಸೋ ಪ್ರಕರಣದಲ್ಲಿ ಶರಣರ ಬಾಡಿ ವಾರೆಂಟ್ ಅನ್ನು ನಾಳೆಯವರೆಗೆ ಮುಂದುವರೆಸಬೇಕು. ಆನಂತರ ಈ ಬಾಡಿ ವಾರೆಂಟನ್ನು ನ್ಯಾಯಾಂಗ ಬಂಧನವಾಗಿ ಪರಿವರ್ತನೆ ಮಾಡಬೇಕು ಎಂದು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದಾರೆ.

ಒಂದು ಕಡೆ ಶರಣರ ಪರ ವಕೀಲರಾದ ಸಂದೀಪ್ ಪಾಟೀಲ್, ಎರಡನೇ ಪ್ರಕರಣದಲ್ಲಿ ತನಿಖೆ, ಚಾರ್ಜ್ಶೀಟ್ ಸಲ್ಲಿಕೆ ಎಲ್ಲವೂ ಮುಗಿದಿರುವುದರಿಂದ ಈ ಪ್ರಕರಣದಲ್ಲಿ ಶರಣರನ್ನು ಜೈಲಿನಲ್ಲಿಟ್ಟುಕೊಳ್ಳಲು ಅವಕಾಶವಿಲ್ಲ ಎಂದು ವಾದಿಸುತ್ತಿದ್ದಾರೆ.
ಇದನ್ನೂ ಓದಿ: ಮುರುಘಾ ಶರಣರಿಗೆ ಬಿಗ್ ರಿಲೀಫ್ | ಬಿಡುಗಡೆಗೆ ಆದೇಶ
ಆದರೆ, ಶರಣರ ಮೇಲೆ ಇರುವುದು ಗಂಭೀರ ಅಪರಾಧದ ಆರೋಪವಾಗಿರುವುದರಿಂದ ಅವರನ್ನು ನ್ಯಾಯಾಂಗ ಬಂಧನದಲ್ಲಿ ಮುಂದುವರೆಸಲು ಪ್ರಾಸಿಕ್ಯೂಷನ್ ಹೇಳಿದೆ.
ಮತ್ತೊಂದೆಡೆ ಬುಧವಾರ ರಾತ್ರಿ ವೇಳೆಗೆ ಶರಣರ ಜಾಮೀನು ಆದೇಶದ ಪ್ರತಿ ನ್ಯಾಯಾಲಯದಿಂದ ಕಾರಾಗೃಹಕ್ಕೆ ತಲುಪಿದೆ. ಇದರೊಟ್ಟಿಗೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಕೂಡಾ ಬಾಡಿ ವಾರೆಂಟ್ ಕೇಳಿ ಕಾರಾಗೃಹಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಗೊಂದಲದಲ್ಲಿ ನಾಳೆ ಅಂದರೆ ಗುರುವಾರ ಮುರುಘಾ ಶರಣರ ಬಿಡುಗಡೆ ಆಗುತ್ತದೆಯೋ ಇಲ್ಲವೋ ಎನ್ನುವ ಗೊಂದಲ ಭಕ್ತರಲ್ಲಿ ಮನೆ ಮಾಡಿದೆ.
ಎರಡನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ವಕೀಲರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಗುರುವಾರ ನಡೆಯಲಿದ್ದು, ಇಲ್ಲಿ ಆಗುವ ತೀರ್ಮಾನದ ಮೇಲೆ ಶರಣರ ಭವಿಷ್ಯ ನಿರ್ಧಾರವಾಗಬಹುದು ಎನ್ನಲಾಗುತ್ತಿದೆ.
ಶರಣರ ಪರ ಹಾಗೂ ಸರ್ಕಾರಿ ವಕೀಲರ ವಾದ-ಪ್ರತಿವಾದ
ಶ್ರೀಗಳ ವಿರುದ್ಧ ದಾಖಲಾಗಿದ್ದ ಎರಡನೇ ಪೋಕ್ಸೋ ಪ್ರಕರಣದಲ್ಲಿ ಹೊರಡಿಸಿದ್ದ ಬಾಡಿ ವಾರೆಂಟ್ ಅನ್ನು ನ್ಯಾಯಾಂಗ ಬಂಧನವಾಗಿ ಪರಿವರ್ತನೆ ಮಾಡಬೇಕು ಎಂದು ಸರ್ಕಾರಿ ವಕೀಲರಾದ ಜಗದೀಶ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಿಚಾರಣೆಯನ್ನು ನ.16ಕ್ಕೆ ಮುಂದೂಡಿದೆ.
ಮುರುಘಾ ಶರಣರ ವಿರುದ್ಧ ಒಟ್ಟು ಎರಡು ಪೋಕ್ಸೋ ಪ್ರಕರಣಗಳಡಿ, ಮೊದಲನೇ ಪ್ರಕರಣಕ್ಕೆ ಜಾಮೀನು ಮಂಜೂರಾಗಿ, ಬಿಡುಗಡೆಗೆ ಆದೇಶವಾಗಿದೆ. ಆದರೆ, ಎರಡನೇ ಪ್ರಕರಣದಲ್ಲಿ ಶರಣರ ವಿರುದ್ಧ ಹೊರಡಿಸಿದ್ದ ಬಾಡಿ ವಾರೆಂಟ್ ಅನ್ನು ನ್ಯಾಯಾಂಗ ಬಂಧನವಾಗಿ ಪರಿವರ್ತಿಸಲು ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ವಕೀಲರು ಮಾಡಿದ್ದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದ್ದಕ್ಕೆ ಶರಣರ ಪರ ವಕೀಲರಾದ ಸಂದೀಪ್ ಪಾಟೀಲ್ ತಕರಾರು ಸಲ್ಲಿಸಿದರು.
ಇನ್ನೂ ಮಾಧ್ಯಮಗಳ ಜೊತೆ ಈ ವಿಚಾರವಾಗಿ ಮಾತನಾಡಿದ ಹೈಕೋರ್ಟ್ ನ್ಯಾಯವಾದಿ ಸಂದೀಪ್, ಅನಗತ್ಯವಾಗಿ ಶರಣರನ್ನು ಜೈಲಿನಲ್ಲಿ ಮುಂದುವರೆಯುವಂತೆ ಮಾಡಿ ಕಿರುಕುಳ ನೀಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಮುರುಘಾ ಶರಣರ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ಆದೇಶದ ನಂತರ ಕೆಳಗಿನ ನ್ಯಾಯಾಲದಲ್ಲಿ ಶ್ಯೂರಿಟಿ ಸಲ್ಲಿಸಲಾಗಿತ್ತು. ಅದರಂತೆ ಇಂದು ಪರಿಶೀಲನೆ ನಡೆಸಿ ಬಿಡುಗಡೆಗೆ ಆದೇಶ ಮಾಡಿದ್ದಾರೆ.
ಎರಡನೇ ಪ್ರಕರಣದಲ್ಲಿ ಶ್ರೀಗಳು ಬಂಧನ ಅಥವಾ ಕಸ್ಟಡಿಗೆ ಹೋಗಿರಲಿಲ್ಲ. ಕಾನೂನಿನಲ್ಲಿ ಕಸ್ಟಡಿಯಲ್ಲಿದ್ದಾಗ ಮಾತ್ರ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಇದರಲ್ಲಿ ತನಿಖೆ ಮುಗಿದಿದೆ. ಚಾರ್ಜ್ಶೀಟ್ ಕೂಡಾ ಹಾಕಲಾಗಿದೆ. ಹೈಕೋರ್ಟ್ನಲ್ಲಿ ತಡೆಯಾಜ್ಞೆ ಕೂಡಾ ಆಗಿದೆ. ಹೀಗಿದ್ದೂ, ಪೊಲೀಸರ ಕಡೆಯಿಂದ ಮತ್ತೆ ನ್ಯಾಯಾಂಗ ಬಂಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಬಾಡಿ ವಾರೆಂಟ್ ಇದ್ದರೂ, ಜಾಮೀನು ಸಿಕ್ಕಿರುವುದರಿಂದ ಜೈಲಿನಲ್ಲಿ ಇಟ್ಟುಕೊಳ್ಳಲು ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರಿ ವಕೀಲ ಜಗದೀಶ್ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ, ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿದ್ದು, ಎರಡನೇ ಪ್ರಕರಣದಲ್ಲಿ ಬಾಡಿ ವಾರೆಂಟ್ ಇರುವುದರಿಂದ ಇಂದು ಜಾಮೀನು ಸಿಕ್ಕಿದ್ದರೂ ಕಸ್ಟಡಿಯಲ್ಲಿ ಇರಬೇಕಾಗುತ್ತದೆ. ಬಾಡಿ ವಾರೆಂಟ್ ನಾಳೆವರೆಗೆ ಮುಂದುವರೆಯಲಿದೆ. ಇದು ಬಾಕಿ ಇರುವುದರಿಂದ ಬಿಡುಗಡೆ ಆಗುವುದಿಲ್ಲ. ನಾವು ಕೂಡಾ ಪೊಲೀಸ್ ಮೂಲಕ ಕಾರಾಗೃಹಕ್ಕೆ ಬಾಡಿ ವಾರೆಂಟ್ ತಲುಪಿಸಲಿದ್ದೇವೆ. ಇಲ್ಲಿ ಕಿರುಕುಳ ನೀಡುವ ಪ್ರಶ್ನೆಯೇ ಬರುವುದಿಲ್ಲ. ಎಲ್ಲವೂ ಕಾನೂನು ಪ್ರಕ್ರಿಯೆ ಅಷ್ಟೇ ಎಂದಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
