ಹೊಸದುರ್ಗ
ಸುಜ್ಞಾನ ಸಂಗಮದಿಂದ ಹಳ್ಳಿಗಳಲ್ಲಿ ಸಹಬಾಳ್ವೆ | ಮಾದಾರ ಚನ್ನಯ್ಯ ಶ್ರೀ

CHITRADURGA NEWS | 12 MARCH 2025
ಹೊಸದುರ್ಗ: ಶಾಂತವೀರ ಸ್ವಾಮೀಜಿ ಅವರ ಕಲ್ಪನೆ ಸುಜ್ಞಾನ ಸಂಗಮ ಸಮಾಜಮುಖಿಯಾಗಿ ಹಳ್ಳಿಗಳಲ್ಲಿ ಸೌಹಾರ್ದತೆ ಸಹಬಾಳ್ವೆ ನಡೆಸಲು ಅವರ ಚಿಂತನೆ ಎಲ್ಲರಿಗೂ ಮಾದರಿ ಎಂದು ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ತಿಳಿಸಿದರು.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್ ಎಷ್ಟಿದೆ?
ಹೊಸದುರ್ಗ ತಾಲೂಕಿನ ತಣಿಗೇಕಲ್ಲು ಗ್ರಾಮದಲ್ಲಿ ನಡೆದ ಸುಜ್ಞಾನ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಂತಿ ನೆಮ್ಮದಿಯಿಂದ ಬದುಕಬೇಕಾದರೆ ಎಲ್ಲಾ ಸಮಾಜಗಳು ಸೌಹಾರ್ದತೆಯಿಂದ ಬದುಕಬೇಕು, ಆ ಜಾತಿ ಶ್ರೇಷ್ಠ ಈ ಜಾತಿ ಶ್ರೇಷ್ಠ ಎಂಬ ಕಲ್ಪನೆಯಿಂದ ಹೊರ ಬಂದು ಮಾನವರೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಬೇಕು. ಧರ್ಮ, ಜಾತಿ, ವರ್ಗ, ವರ್ಣ, ಪಂಗಡ ಎಲ್ಲವನ್ನು ಮೀರಿ ಸುಜ್ಞಾನ ಸಂಗಮ ಕಾರ್ಯಕ್ರಮ ನಡೆಯುತ್ತಿದೆ.
ಆಧುನಿಕ ಸಮಾಜದಲ್ಲಿ ಬುದ್ಧಿವಂತರಾದರೆ ಸಾಲದು, ಹೃದಯವಂತಿಕೆ, ಸೌಹಾರ್ದತೆ, ಸಹಬಾಳ್ವೆ ಸಮಾನ ಸಮಾಜವನ್ನು ಕಟ್ಟುವ ಚಿಂತನೆ ನಡೆಸಬೇಕು. ಗ್ರಾಮೀಣ ಪ್ರದೇಶದಲ್ಲಿ ಈ ರೀತಿಯ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿ ಜನಗಳಲ್ಲಿ ಮನಸುಗಳನ್ನು ಬೆಸೆಯುವ ಆಂದೋಲನಗಳು ಅರವಿನ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆದಾಗ ಗ್ರಾಮೀಣ ಜನ ಗದ್ದಲವಿಲ್ಲದೆ ಜಗಳವಿಲ್ಲದೆ ಸುಂದರ ಜೀವನ ನಡೆಸಲು ಸಾಧ್ಯವಾಗುತ್ತದೆ.
Also Read: ಟೀಚರ್ಸ್ ಕಾಲೋನಿ, ಜಡ್ಜ್ ಕ್ವಾಟ್ರಸ್ ರಸ್ತೆಗೆ ಡಾಂಬಾರು ಭಾಗ್ಯ ಯಾವಾಗ
ತಣಿಗೇಕಲ್ಲು ಗ್ರಾಮ ಬೇರೆ ಹಳ್ಳಿಗಳಿಗೆ ಮಾದರಿಯಾಗಿದೆ, ಎಲ್ಲಾ ಗ್ರಾಮಗಳು ಈ ರೀತಿ ಎಲ್ಲಾ ಜಾತಿಯವರನ್ನು ಸೇರಿ ಒಂದು ಕಾರ್ಯಕ್ರಮಗಳನ್ನು ಮಾಡಿದಾಗ ಜಾತಿ ಜಾತಿಗಳ ಮಧ್ಯ ಸೌಹಾರ್ದತೆ ಸ್ನೇಹ ಬೆಳೆಯಲು ಸಾಧ್ಯವಾಗುತ್ತದೆ. ಇಂಥ ಪ್ರಯತ್ನಕ್ಕೆ ಎಲ್ಲ ಗ್ರಾಮಗಳು ಮುಂದಾಗಲಿ ಎಂದು ಸ್ವಾಮೀಜಿಯವರು ಕರೆಕೊಟ್ಟರು.
ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ರಾಜಕೀಯ ಕತ್ತರಿಯಾದರೆ ಧರ್ಮ ಮತ್ತು ಮಠಗಳು ಸೂಜಿಯಾಗಿ ಸಮಾಜವನ್ನು ಕೊಡಿಸುತ್ತಿವೆ. ಗ್ರಾಮೀಣ ಜನರು ರಾಜಕಾರಣಿಗಳ ಮಾತನ್ನು ಕೇಳಿ ತಮ್ಮ ಬದುಕಿಗೆ ಕತ್ತರಿ ಹಾಕಿಸಿಕೊಳ್ಳದೆ ಗುರುಗಳ ಮಾತುಗಳನ್ನು ಕೇಳಿ ಸಮಾಜಗಳ ಮಧ್ಯೆ ಸೂಜಿಯಾಗಿ ಒಲೆಯುವ ಒಂದುಗೂಡಿಸುವ ಕೆಲಸ ಆಗಬೇಕಾಗಿದೆ
ಸುಜ್ಞಾನ ಸಂಗಮ ಕಾರ್ಯಕ್ರಮದ ಮೂಲಕ ಶ್ರೀ ಶಾಂತವೀರ ಸ್ವಾಮೀಜಿ ಅವರು ಜಾತಿ ಜಾತಿಗಳ ಮಧ್ಯೆ ಪ್ರೀತಿಯ ಬೆಸುಗೆಯನ್ನು ಮನಸು ಮನಸುಗಳನ್ನು ಸೂಜಿಯಂತೆ ಕೂಡಿಸುವ ಅವರ ಪ್ರಯತ್ನ ಶ್ಲಾಘನೀಯ.
ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಸುಜ್ಞಾನ ಸಂಗಮ ಸಮಾಜದಲ್ಲಿ ಅಜ್ಞಾನವನ್ನು ಓಡಿಸಿ ಜ್ಞಾನವನ್ನು ಬಿತ್ತುವ ಜನಗಳಿಗೆ ಅರವಿನ ಹಬ್ಬವನ್ನು ಆಚರಿಸುವ ಅವಕಾಶ ಎಲ್ಲರಿಗೂ ಮಾದರಿ. ಮಾನವ ಧರ್ಮದ ಹಾದಿಯಲ್ಲಿ ನಡೆದು ಸರಳತೆ ಸಹಜತೆಯೊಂದಿಗೆ ಜೀವನವನ್ನು ನಡೆಸಿದಾಗ ಸಂತೃಪ್ತ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.
Also Read: ಪ್ರಯಾಣಿಕರ ಗಮನಕ್ಕೆ | ಹುಬ್ಬಳ್ಳಿ – ಚಿತ್ರದುರ್ಗ ಎಕ್ಸ್ಪ್ರೆಸ್ ರೈಲು ಸಂಚಾರ ರದ್ದತಿ ಮುಂದುವರಿಕೆ
ಕನಕಗುರು ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿದರು. ಉಪನ್ಯಾಸಕ ಚಟ್ನಳ್ಳಿ ಮಹೇಶ್ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕುಂಚಿಟಿಗ, ನಾಯಕ, ಮಾದರ ಸಮಾಜಗಳ ಭಕ್ತರು ಸೇರಿದಂತೆ ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
