ಮುಖ್ಯ ಸುದ್ದಿ
ನಟ ದರ್ಶನ್ ಕಡೆಯಿಂದ ನಯಾಪೈಸೆ ಪಡೆದಿಲ್ಲ | ರೇಣುಕಸ್ವಾಮಿ ಕುಟುಂಬ

CHITRADURGA NEWS | 16 JANUARY 2025
ಚಿತ್ರದುರ್ಗ: ಕೆಲ ದಿನಗಳಿಂದ ಫೇಸ್ಬುಕ್ನಲ್ಲಿ ನಟ ದರ್ಶನ್ ಅವರು ರೇಣುಕಸ್ವಾಮಿ ಕುಟುಂಬದವರನ್ನು ಭೇಟಿ ಮಾಡಿ ದುಡ್ಡು ಕೊಟ್ಟಿದ್ದಾರೆ. ಆ ದುಡ್ಡಲ್ಲಿ ಕಾರು ಬುಕ್ ಮಾಡಿದ್ದಾರೆ ಎಂಬ ಅನೇಕ ವದಂತಿಗಳನ್ನು ಹಬ್ಬಿಸಲಾಗಿತ್ತು.
ಇದಕ್ಕೆ ರೇಣುಕಸ್ವಾಮಿ ಕುಟುಂಬ ಸ್ಪಷ್ಟನೆ ಕೊಟ್ಟಿದ್ದು, ನಾವು ನಟ ದರ್ಶನ್ ಭೇಟಿ ಮಾಡಿಲ್ಲ, ಅವರೂ ನಮ್ಮನ್ನು ಭೇಟಿ ಮಾಡಿಲ್ಲ. ಅವರಿಂದ ಹತ್ತು ಪೈಸೆಯನ್ನೂ ಪಡೆದುಕೊಂಡಿಲ್ಲ. ರಾಜ್ಯದ ಜನತೆ ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ರೇಣುಕಸ್ವಾಮಿ ಕೊಲೆ | ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿಶ್ಲೇಷಣೆ
ನಮ್ಮ ಮನೆಯಲ್ಲಿರುವ ಹಳೆಯ ಸ್ಕೂಟರ್ ರಿಪೇರಿ ಮಾಡಿಸಲು ದಿಕ್ಕಿಲ್ಲದ ನಾವು ಹೊಸ ಕಾರು ಎಲ್ಲಿಂದ ಬುಕ್ ಮಾಡಲಿ. ಫೇಸ್ಬುಕ್ ಅಥವಾ ಫೇಕ್ಬುಕ್ನಲ್ಲಿ ವಿಜ್ಞಸಂತೋಷಿಗಳು ಇಲ್ಲಸಲ್ಲದ್ದನ್ನು ಬರೆದು ನಮಗೆ ನೋವು ಕೊಡಬೇಡಿ ಎಂದು ಕೊಲೆಯಾದ ರೇಣುಕಸ್ವಾಮಿ ತಂದೆ ಶಿವನಗೌಡರು ಕಣ್ಣೀರು ಹಾಕಿ ಮನವಿ ಮಾಡಿದ್ದಾರೆ.
ಚಿತ್ರದುರ್ಗದ ವಿಆರ್ಎಸ್ ಬಡಾವಣೆಯ ತಮ್ಮ ಮನೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನಟ ದರ್ಶನ್ ಅವರನ್ನು ಭೇಟಿ ಮಾಡಿದ್ದೇವೆ. ಶೆಡ್ಗೆ ಹೋಗಿದ್ದೆವು ಅವರಿಂದ ಏನೋ ಪಡೆದುಕೊಂಡಿದ್ದೇವೆ ಎಂಬಂತೆ ಫೇಸ್ಬುಕ್ನಲ್ಲಿ ಪ್ರಚಾರ ಆಗುತ್ತಿದೆ. ಕೈ ಮುಗಿದು ಕೇಳುತ್ತೇವೆ. ದಯಮಾಡಿ ಇಂಥದ್ದೆಲ್ಲಾ ಹಾಕಬೇಡಿ, ಈಗಾಗಲೇ ನಾವು ಸಾಕಷ್ಟು ನೊಂದಿದ್ದೇವೆ ಎಂದು ಕಣ್ಣೀರಾದರು.
ಇದನ್ನೂ ಓದಿ: ಗ್ರಾಮ ಆಡಳಿತಾಧಿಕಾರಿ ಹುದ್ದೆ | 1:1 ಆಯ್ಕೆಪಟ್ಟಿ ಪ್ರಕಟ | ಆಕ್ಷೇಪಣೆಗೆ ಅವಕಾಶ
ಜಾಮೀನು ರದ್ದು ಮಾಡಿಸಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿರುವುದನ್ನು ಸ್ವಾಗತಿಸುತ್ತೇವೆ. ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇವೆ.
ರೇಣುಕಸ್ವಾಮಿ ಕುಟುಂಬದ ಸಂಬಂಧಿ ಹಾಗೂ ನಿವೃತ್ತ ಪ್ರಾಚಾರ್ಯ ಷಡಾಕ್ಷರಯ್ಯ ಮಾತನಾಡಿ, ಶಿವನಗೌಡರ ಕುಟುಂಬ ಈಗಾಗಲೇ ನೊಂದಿದೆ. ನೊಂದ ಜೀವಗಳಿಗೆ ಮತ್ತಷ್ಟು ನೋವು ಕೊಡುವ ಕೆಲಸ ಯಾರೂ ಮಾಡುವುದು ಬೇಡ. ನಟನ ಬಗ್ಗೆ ನಿಮಗೆ ಅಭಿಮಾನ ಇದ್ದರೆ ಅದು ನಿಮ್ಮಲ್ಲೇ ಇರಲಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಕೊಲೆ ಆರೋಪಿಗೆ ಜಾಮೀನು ರದ್ದು ಕೋರಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದರೆ ಪ್ರಕರಣದಲ್ಲಿ ಸತ್ಯಾಂಶ ಇದೆ ಎನ್ನುವ ಅರ್ಥ ಬರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಫಾಸ್ಟ್ಟ್ರ್ಯಾಕ್ ಕೋರ್ಟ್ ಮೂಲಕ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.
