CHITRADURGA NEWS | 02 JUNE 2025
ಚಿತ್ರದುರ್ಗ: ವಿಶ್ವ ಪರಿಸರ ದಿನದ ಅಂಗವಾಗಿ ಶೀಬಾರದಲ್ಲಿ ಭಾನುವಾರ ಶ್ರೀ ಮುರುಘರಾಜೇಂದ್ರ ಬೃಹನ್ಮಠ, ಎಸ್.ಜೆ.ಎಂ. ಫಾರ್ಮಸಿ ಕಾಲೇಜು, ಪ್ರಿಯದರ್ಶಿನಿ ಬಾಲಕಿಯರ ಪ್ರೌಢಶಾಲೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಸಪ್ತಾಹದ 3ನೇ ದಿನದ ಕಾರ್ಯಕ್ರಮ ನಡೆಯಿತು.
Also Read: ಹಿರಿಯ ವಕೀಲರಾದ ಡಾ.ಎಂ.ಸಿ.ನರಹರಿ ಇನ್ನಿಲ್ಲ

ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ, ಪರಿಸರವಿಲ್ಲದೆ ಮಾನವ ಜೀವನವಿಲ್ಲ. ಮಾನವನ ಬುದ್ಧಿಹೀನ ಕೃತ್ಯಗಳಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿ ಜೀವ ಸಂಕುಲಕ್ಕೆ ಕುತ್ತು ಬಂದಿದೆ ಎಂದು ಅಭಿಪ್ರಾಯಪಟ್ಟರು.
ಶ್ರೀಮಠದಿಂದ ವಿವಿಧೆಡೆ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ ಮಾಡುತ್ತಿರುವುದು ಸ್ವಾಗತಾರ್ಹ. ಈ ಭೂಮಿ ಸುಂದರವಾದ ಪರಿಸರ. ಹಾಗಾಗಿ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಗಿಡಗಳನ್ನು ಬೆಳೆಸುವುದರಿಂದ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಮಂಜುನಾಥ್ ಮಾತನಾಡಿ, ನಮ್ಮ ಜೀವನದ ಅಸ್ತಿತ್ವ ಮತ್ತು ಸುಸ್ಥಿರತೆಯು ನಮ್ಮ ಪರಿಸರದಿಂದ ಮಾತ್ರ ಸಾಧ್ಯ. ಹಾಗಾಗಿ ಮಾನವ ಪರಿಸರ ಪ್ರೇಮಿಯಾಗಿ ಗಿಡ ಮರಗಳನ್ನು ಬೆಳೆsಸುವ ಪ್ರವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
Also Read: ಈ ರೆಟಿನಾಲ್ ಭರಿತ ಆಹಾರವನ್ನು ಸೇವಿಸಿ ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸಿ
ಆಧುನಿಕ ತಂತ್ರಜ್ಞಾನದತ್ತ ವಾಲಿರುವ ಮಾನವ ಜೀವನ ಮತ್ತು ಚಟುವಟಿಕೆಗಳು ಅತ್ಯಂತ ಸಂಕೀರ್ಣಗೊಂಡಿವೆ. ಅರಣ್ಯ ನಾಶ, ಅಧಿಕ ಜನಸಂಖ್ಯೆ, ಅಸಮರ್ಪಕ ಘನ ತ್ಯಾಜ್ಯ, ವಾಯುಮಾಲಿನ್ಯ ಇವುಗಳಿಂದ ಪರಿಸರ ಅವಸಾನದತ್ತ ಸಾಗಿರುವುದು ಕಳವಳಕಾರಿಯಾಗಿದೆ ಎಂದರು.
ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡುತ್ತ, ನಾವು ಜೀವಿಸಲು ಬೇಕಾದ ಸಕಲ ಸವಲತ್ತುಗಳನ್ನು ಪರಿಸರ ನಮಗೆ ನೀಡುತ್ತಿದೆ.
ನಿಸರ್ಗವನ್ನು ಉಳಿಸುವ ಮತ್ತು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಹೊಣೆಗಾರಿಕೆ ನಿರ್ವಹಿಸುತ್ತ ದೇಶದ ವಿವಿಧ ಸಾರ್ವಜನಿಕ ಕಾರ್ಯಗಳನ್ನು ಶ್ರೀಮಠವು ಮಾಡುತ್ತ ಬಂದಿದೆ. ಕಳೆದ ಸಾಲಿನಲ್ಲಿ ನೆಟ್ಟ ಗಿಡಗಳು ಇಂದು ಮರಗಳಾಗಿ ಬೆಳೆದಿವೆ. ಶೀಬಾರದ ಬಳಿ ಸುಮಾರು 40ಕ್ಕು ಹೆಚ್ಚು ನಿರಾಶ್ರಿತ ಕುಟುಂಬಗಳಿವೆ. ಅವರಿಗೆ ಲೋಕಾಯುಕ್ತರು ವಸತಿ ಸೌಲಭ್ಯ ಕಲ್ಪಿಸಿಕೊಡಬೇಕಾಗಿ ಮನವಿ ಮಾಡಿಕೊಂಡರು.
ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮಿಗಳು ಮಾತನಾಡಿ, ನಾವುಗಳು ಪ್ರತಿನಿತ್ಯ ಕಾಯಕದ ಜತೆ ಸಾಗುತ್ತ ಪರಿಸರ ಸಂರಕ್ಷಣೆಯತ್ತಲೂ ಗಮನಹರಿಸಬೇಕು. ಮರ ಗಿಡಗಳಿಂದಲೇ ನಾವೆಲ್ಲ ಉಸಿರಾಡುತ್ತೇವೆ. ನಿಸರ್ಗದ ಜತೆ ಕೂಡಿ ಬಾಳಿದರೆ ನಮ್ಮ ಬಾಳು ಬಂಗಾರವಾಗುತ್ತದೆ. ಮರಗಳನ್ನು ಕಡಿಯುವುದನ್ನು ಕಡಿಮೆ ಮಾಡಬೇಕು. ದೈನಂದಿನ ಜೀವನದಲ್ಲಿ ಇಂಥ ಕ್ರಮಗಳನ್ನು ಅನುಸರಿಸುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕು ಎಂದು ಹೇಳಿದರು.
Also Read: ವಸತಿ ಶಾಲೆ ಪ್ರವೇಶ | ಜೂನ್ 3,4 ರಂದು ಕೌನ್ಸಲಿಂಗ್
ನಗರಸಭೆ ಆಯುಕ್ತೆ ಎಂ.ರೇಣುಕಾ ಮಾತನಾಡಿ, ಪರಿಸರ ಸಂರಕ್ಷಣೆ ಮಾಡುತ್ತಿರುವ ಶ್ರೀಮಠಕ್ಕೆ ನಮ್ಮ ಇಲಾಖೆ ವತಿಯಿಂದ ಸಹಕಾರ ಸಹಾಯ ನೀಡಲಾಗುವುದು. ಇದೊಂದು ಮಾನವೀಯ ಕಳಕಳಿಯ ಕಾರ್ಯವಾಗಿದೆ. ಮಾನವ ಪರಿಸರದ ಕೂಸು. ಅವನ ಹಸ್ತಕ್ಷೇಪದಿಂದಾಗಿ ಪರಿಸರ ವ್ಯಾಪಕವಾಗಿ ಹಾನಿಗೀಡಾಗಿದೆ. ಅದನ್ನು ತಡೆಯುವ ಕೆಲಸ ಆಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರಣ್ಯಾಧಿಕಾರಿಗಳಾದ ರಾಮದಾಸ್ ಚೌಹಾಣ್, ಪ್ರಭು ಮತ್ತು ಚಾಂದ್ ಅವರನ್ನು ಸನ್ಮಾನಿಸಲಾಯಿತು.
ಎಸ್.ಜೆ.ಎಂ. ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ನಾಗರಾಜ್, ನಾಗರಾಜ ಸಂಗಂ, ಶೀಬಾರದ ಗ್ರಾಮಸ್ಥರು, ಎಸ್.ಜೆ.ಎಂ. ಶಿಕ್ಷಣ ಸಂಸ್ಥೆ ಶಾಲಾ ಕಾಲೇಜುಗಳ ಸಿಬ್ಬಂದಿ ಭಾಗವಹಿಸಿದ್ದರು.
ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಅಶ್ವಿನಿ ಸ್ವಾಗತಿಸಿದರು. ಡಾ. ಬಸವರಾಜ್ ನಿರೂಪಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
