CHITRADURGA NEWS | 06 JULY 2024
ಚಿತ್ರದುರ್ಗ: 9ನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ಪಠ್ಯದಲ್ಲಿ ‘ವಿಶ್ವಗುರು ಬಸವಣ್ಣನವರು – ಸಾಂಸ್ಕೃತಿಕ ನಾಯಕ’ ಎಂಬ ಶೀರ್ಷಿಕೆಯ ಪಾಠದಲ್ಲಿ ಯಾವುದೇ ಬದಲಾವಣೆ ಮಾಡಬೇಡಿ. ಪಠ್ಯದಲ್ಲಿ ಯಾವ ಕಾರಣಕ್ಕೂ ‘ವೀರಶೈವ’ ಪದ ಸೇರಬಾರದು ಎಂದು ಒತ್ತಾಯಿಸಿ ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಸಾಣೇಹಳ್ಳಿಯಲ್ಲಿ ಶುಕ್ರವಾರ ಮುಕ್ತಾಯಗೊಂಡ ‘ವಚನ ಕಮ್ಮಟ’ದಲ್ಲಿ ಬಸವ ಪರಂಪರೆಯ 70ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಿದ್ದರು. ಅವರೆಲ್ಲರ ಪರವಾಗಿ ಹಕ್ಕೊತ್ತಾಯ ಮಾಡಲಾಗುತ್ತಿದೆ. ಪಠ್ಯದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಪಠ್ಯದಿಂದ ‘ವೀರಶೈವ’ ಪದ ಬಿಟ್ಟಿರುವುದಕ್ಕೆ ಕೆಲವರು ತಕರಾರು ಎತ್ತಿರುವುದಕ್ಕೆ ಐತಿಹಾಸಿಕ ಆಧಾರವಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ವಿಎಲ್ಟಿ, ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ | ನಿರ್ಲಕ್ಷಿಸಿದರೆ ₹ 1000 ದಂಡ ಖಚಿತ

ಪಠ್ಯ ರಚನಾ ಸಮಿತಿಯು ಪರಿಷ್ಕರಣೆ ಮಾಡಿರುವ ಪಠ್ಯದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಹಿಂದಿನ ಸರ್ಕಾರದ ಪಠ್ಯ ರಚನಾ ಸಮಿತಿ ಬಸವೇಶ್ವರರ ಬಗ್ಗೆ ಮಾಡಿರುವ ದೋಷಗಳ ಬಗ್ಗೆ ಮಠಾಧೀಶರೆಲ್ಲ ಸೇರಿ ಮಾಧ್ಯಮಗಳ ಮೂಲಕ ಪ್ರತಿಭಟಿಸಿ, ಸರ್ಕಾರದ ಗಮನಕ್ಕೂ ತಂದು ಪಠ್ಯದಲ್ಲಿ ಸತ್ಯ ಸಂಗತಿಗಳನ್ನು ವಿದ್ಯಾರ್ಥಿಗಳಿಗೆ ಕೊಡಲು ಒತ್ತಾಯಿಸಿದ್ದೆವು. ಆಗ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ಪರಿಷ್ಕರಿಸುವುದಾಗಿ ತಿಳಿಸಿತ್ತು.

2024ರಲ್ಲಿ 9ನೇಯ ತರಗತಿಯ ಸಮಾಜ ವಿಜ್ಞಾನ ಭಾಗ – 1 ರಲ್ಲಿ ವಿಶ್ವಗುರು ಬಸವಣ್ಣನವರು – ಸಾಂಸ್ಕೃತಿಕ ನಾಯಕ ಎನ್ನುವ ಪಠ್ಯವಿದ್ದು ಇದು ಬಸವಣ್ಣನವರಿಗೆ ನ್ಯಾಯ ಒದಗಿಸುವಂತಿದೆ. ಇದರಲ್ಲಿ ಬಸವಣ್ಣನವರು ಮತ್ತು ಅವರ ಕ್ರಾಂತಿಯನ್ನು ಕುರಿತಂತೆ ವಾಸ್ತವ ಅಂಶಗಳಿವೆ. ಈ ಪಠ್ಯದಲ್ಲಿ ‘ವೀರಶೈವ’ ಶಬ್ದ ಇಲ್ಲವೆಂದು ‘ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ’ ಯವರು ತಕರಾರು ಮಾಡಿರುವುದಕ್ಕೆ ಐತಿಹಾಸಿಕ ಆಧಾರವಿಲ್ಲ.
ವರ್ಗ, ವರ್ಣ, ಲಿಂಗ ಬೇಧಗಳನ್ನು ಅಳಿಸಿ ಸಕಲಜೀವಾತ್ಮರಿಗೆ ಲೇಸನ್ನೇ ಬಯಸುವ ಚಲನಶೀಲ ವ್ಯವಸ್ಥೆಯನ್ನು ನಿರ್ಮಿಸಲು ಬಸವಣ್ಣನವರು 900 ವರ್ಷಗಳ ಹಿಂದೆ ಕ್ರಾಂತಿ ಮಾಡಿದ್ದು ಜಗತ್ತಿನ ಇತಿಹಾಸದಲ್ಲೇ ದಾಖಲಾಗಿದೆ. ಲಿಂಗತತ್ವದ ಮೂಲಕವೇ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ ಬಸವಣ್ಣನವರು ಶ್ರಮಿಕ ವರ್ಗದ ಎಲ್ಲ ಕಾಯಕಜೀವಿಗಳನ್ನು ಒಗ್ಗೂಡಿಸಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಮತ್ತು ನ್ಯಾಯ ಎಂಬ ಸಮಾಜವಾದಿ ಪರಿಕಲ್ಪನೆಗಳ ಹಿನ್ನಲೆಯಲ್ಲಿ ಹೊಸ ಸಮಾಜವನ್ನು ನಿರ್ಮಿಸಿದ್ದು ವಚನಗಳಲ್ಲೇ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಇಂಥ ಐತಿಹಾಸಿಕ ಕ್ರಾಂತಿ ಪುರುಷ ಬಸವಣ್ಣನವರನ್ನು ವಿಶ್ವಗುರು ಎಂದು ಜಗತ್ತೇ ಗೌರವಿಸುತ್ತಿದೆ.
ಕ್ರಾಂತಿಯ ಸ್ಮರಣೆ ಮತ್ತು ನವಸಮಾಜ ನಿರ್ಮಾಣದ ಪರಿಕಲ್ಪನೆಯನ್ನು ವರ್ತಮಾನದಲ್ಲೂ ಜಾರಿಗೆ ತರುವ ಉದ್ದೇಶದಿಂದ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಸ್ವಾಗತಾರ್ಹ.
ಪ್ರಸ್ತುತ ಪಠ್ಯದಲ್ಲಿ ಯಾವ ಕಾರಣಕ್ಕೂ ‘ವೀರಶೈವ’ ಪದ ಸೇರಬಾರದು. ಹಾಗೆ ಸೇರಿದರೆ ಅದು ಬಸವಣ್ಣನವರ ತತ್ವಗಳಿಗೆ ಮಸಿ ಬಳಿದು ಸತ್ಯಕ್ಕೆ ಅಪಚಾರ ಮಾಡಿದಂತೆ. ಹಾಗಾಗಿ ಪ್ರಸ್ತುತ ಪಠ್ಯವನ್ನೇ ಮುಂದುವರಿಸಲು ಬಸವ ಪರಂಪರೆಯ ಮಠಾಧೀಶರೆಲ್ಲರೂ ಹಕ್ಕೊತ್ತಾಯ ಮಾಡುತ್ತಿದ್ದೇವೆ. ಬಸವಣ್ಣನವರನ್ನು ಲಿಂಗಾಯತ ಧರ್ಮದ ಧರ್ಮಗುರು ಎಂದು ಐತಿಹಾಸಿಕ ಆಧಾರಗಳು ಖಚಿತವಾಗಿ ಹೇಳುತ್ತಿರುವಾಗ ಆ ಸತ್ಯವನ್ನು ಮರೆಮಾಚಿ ಸುಳ್ಳನ್ನು ಪಠ್ಯಗಳಲ್ಲಿ ಸೇರ್ಪಡಿಸುವುದು ಸುಸಂಬದ್ಧವಲ್ಲ.
ನಾಡಿನ ಶರಣಕ್ರಾಂತಿಯ ಇತಿಹಾಸವನ್ನು ಆಳವಾಗಿ ಅರಿತಿರುವ ತಾವು ಸುಳ್ಳು ವದಂತಿಗಳಿಗೆ ಮಾನ್ಯತೆ ಮಾಡದೆ, ಯಾರ ಒತ್ತಾಯಕ್ಕೂ ಮಣಿಯದೆ ಈಗಿರುವ ಪಠ್ಯವನ್ನೇ ಮುಂದುವರಿಸಬೇಕು. ಈ ವಿಚಾರವಾಗಿ ವಚನ ಕಮ್ಮಟದಲ್ಲಿ ಭಾಗವಹಿಸಿದ್ದ ಶ್ರೀಗಳೆಲ್ಲರೂ ಒತ್ತಾಯಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
