CHITRADURGA NEWS | 21 JULY 2024
ಚಿತ್ರದುರ್ಗ: ಮಂಗಳೂರು ಬಂದರಿನಿಂದ ಉತ್ತರ ಕರ್ನಾಟಕ ಸಂಪರ್ಕಿಸಲು ಉದ್ದೇಶಿಸಿದ್ದ ನೆಲ್ಯಾಡಿ– ಚಿತ್ರದುರ್ಗ ಚತುಷ್ಪಥ ಹೆದ್ದಾರಿ ನಿರ್ಮಾಣ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಇದೀಗ ಕೈಬಿಟ್ಟಿದೆ. ಈ ನಿರ್ಧಾರದಿಂದ ನೆಲ್ಯಾಡಿ–ಚಿತ್ರದುರ್ಗ ಚತುಷ್ಪಥ ಇಲ್ಲವಾಗಿದೆ. ಭಾರತ್ ಮಾಲಾ ಕಾರ್ಯಕ್ರಮದಡಿ ಸಿದ್ಧವಾಗಿದ್ದ ಯೋಜನೆ ಕಾರ್ಯಸಾಧುವಲ್ಲ ಎಂಬ ವರದಿ ಇದಕ್ಕೆ ಮುಖ್ಯ ಕಾರಣವಾಗಿದೆ.
ಯೋಜನೆ ಕೈಬಿಟ್ಟ ಹಿನ್ನಲೆಯಲ್ಲಿ ಮಂಗಳೂರಿನಿಂದ ಚಿತ್ರದುರ್ಗ ತಲುಪಬೇಕಾದ ಭಾರಿ ವಾಹನಗಳು ಇದೀಗ ಹಾಸನ–ನೆಲಮಂಗಲ ಮಾರ್ಗವಾಗಿ ಚಿತ್ರದುರ್ಗಕ್ಕೆ ಈಗ ತಲುಪಬೇಕಾಗಿದೆ.
ನೆಲ್ಯಾಡಿ–ಮೂಡಿಗೆರೆ, ಮೂಡಿಗೆರೆ ಹ್ಯಾಂಡ್ಪೋಸ್ಟ್–ಚಿಕ್ಕಮಗಳೂರು ಬೈಪಾಸ್, ಚಿಕ್ಕಮಗಳೂರು–ತಮಟದಹಳ್ಳಿ, ತಮಟದಹಳ್ಳಿ–ಚಿತ್ರದುರ್ಗ ಹೀಗೆ ನಾಲ್ಕು ಪ್ಯಾಕೇಜ್ಗಳಾಗಿ ವಿಂಗಡಿಸಿ ರಸ್ತೆ ನಿರ್ಮಿಸುವುದು ಯೋಜನೆಯಾಗಿತ್ತು. ಈ ಪಥ ನಿರ್ಮಾಣ ಮಾಡಿದರೆ ವಾಣಿಜ್ಯ ಚಟುವಟಿಕೆಗಳ ಸುಧಾರಣೆಗೆ ಸಹಾಯ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಅಂತೆಯೇ ನಾಲ್ಕು ಪ್ಯಾಕೇಜ್ಗಳಾಗಿ ವಿಂಗಡಿಸಿ ಅಂದಾಜು ₹6 ಸಾವಿರ ಕೋಟಿ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು.

ಇದನ್ನೂ ಓದಿ: ಡೆತ್ನೋಟ್ ಓದುತ್ತಿದ್ದಂತೆ ಸಿಎಂ ಮೌನ | ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ
ಮಂಗಳೂರಿನಿಂದ ಉಜಿರೆ- ಚಾರ್ಮಾಡಿ- ಮೂಡಿಗೆರೆ- ಚಿಕ್ಕಮಗಳೂರು- ಕಡೂರು- ಹೊಳಲ್ಕೆರೆ ಮೂಲಕ ಚಿತ್ರದುರ್ಗಕ್ಕೆ ಸದ್ಯ 303 ಕಿಲೋ ಮೀಟರ್ ಹೆದ್ದಾರಿ ಇದೆ. ಚಾರ್ಮಾಡಿ ರಸ್ತೆಯನ್ನು ವಿಸ್ತರಣೆ ಮಾಡುವ ಯೋಚನೆ ಕಾರ್ಯಸಾಧುವಲ್ಲ ಎಂಬ ಕಾರಣಕ್ಕೆ ಹೊಸ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿತ್ತು. ಬಂಟ್ವಾಳ- ನೆಲ್ಯಾಡಿ- ಶಿಶಿಲ- ಭೈರಾಪುರ- ಮೂಡಿಗೆರೆ ಸಂಪರ್ಕಿಸುವ ಹೊಸ ರಸ್ತೆ ನಿರ್ಮಿಸಬಹುದು ಎಂದು ನವದೆಹಲಿಯ ಎಲ್ಇಎ ಅಸೋಸಿಯೇಟ್ಸ್ ಸೌತ್ ಏಷ್ಯಾ ಎಂಬ ಖಾಸಗಿ ಸಂಸ್ಥೆ ವರದಿಯಲ್ಲಿ ಹೇಳಿತ್ತು.
ಇದೀಗ ಈ ಯೋಜನೆ ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ವಿಧಾನಸಭೆಯಲ್ಲಿ ಕೇಳಿದ್ದರು. ಇದಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಲಿಖಿತ ಉತ್ತರ ನೀಡಿದ್ದಾರೆ.
ಒಂದನೇ ಪ್ಯಾಕೇಜ್(ನೆಲ್ಯಾಡಿ–ಮೂಡಿಗೆರೆ) ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಎರಡನೇ ಪ್ಯಾಕೇಜ್ (ಮೂಡಿಗೆರೆ ಹ್ಯಾಂಡ್ಪೋಸ್ಟ್–ಚಿಕ್ಕಮಗಳೂರು) ಅರಣ್ಯ ವಲಯದಲ್ಲಿ ಹಾದು ಹೋಗಲಿದೆ. ಮೂರನೇ ಪ್ಯಾಕೇಜ್ (ಚಿಕ್ಕಮಗಳೂರು–ತಮಟದಹಳ್ಳಿ) ಮತ್ತು ನಾಲ್ಕನೇ ಪ್ಯಾಕೇಜ್ (ತಮಟದಹಳ್ಳಿ–ಚಿತ್ರದುರ್ಗ) ಹಾದು ಹೋಗುವ ರಸ್ತೆಯಲ್ಲಿ ಅಷ್ಟೊಂದು ವಾಹನ ದಟ್ಟಣೆ ಇಲ್ಲ. ಆದ್ದರಿಂದ ಯೋಜನೆ ಕಾರ್ಯಸಾಧುವಲ್ಲ ಎಂಬ ವರದಿಯನ್ನು ಕಾರ್ಯಾಸಾಧ್ಯತಾ ವರದಿ ಸಿದ್ಧಪಡಿಸಿರುವ ಸಮಾಲೋಚನಾ ಸಂಸ್ಥೆ ತಿಳಿಸಿದೆ. ಈ ಕಾರಣಕ್ಕೆ ಸಂಪೂರ್ಣ ಯೋಜನೆಯನ್ನು ಕೈಬಿಡಲಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಎನ್ಎಚ್ಎಐ ವರದಿ ನೀಡಿದೆ ಎಂದು ತಿಳಿಸಿದ್ದಾರೆ.
ಒಟ್ಟು 357 ಕಿಲೊ ಮೀಟರ್ ರಸ್ತೆಗೆ ₹6 ಸಾವಿರ ಕೋಟಿ ವೆಚ್ಚವಾಗುವ ಅಂದಾಜನ್ನೂ ಮಾಡಿತ್ತು. ಚತುಷ್ಪಥ ರಸ್ತೆ ನಿರ್ಮಾಣವಾದರೆ ದಟ್ಟ ಕಾಡು, ಎತ್ತರದ ಬೆಟ್ಟಗಳನ್ನು ಹೊಂದಿರುವ ಶಿಶಿಲ- ಭೈರಾಪುರ ಪ್ರದೇಶ ಹಾಳಾಗಲಿದೆ. ವನ್ಯಜೀವಿಗಳಿಗೆ ಕುತ್ತು ಎದುರಾಗಲಿದೆ.
ಶಿಶಿಲ- ಭೈರಾಪುರ ಬೆಟ್ಟ ಪ್ರದೇಶ ಬಾಳೂರು, ಮೀಯಾರು ಮತ್ತು ಕಬ್ಬಿನಾಲೆ ಮೀಸಲು ಅರಣ್ಯ ಪ್ರದೇಶ ಒಳಗೊಂಡಿದೆ. ಅಭಿವೃದ್ಧಿಯ ಹೆಸರಿನಲ್ಲಿ ಬೆಟ್ಟಗಳು, ನಿತ್ಯಹರಿದ್ವರ್ಣ ಕಾಡು ನಾಶ ಮಾಡಬಾರದು ಎಂದು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
