ಚಿತ್ರದುರ್ಗ ನ್ಯೂಸ್.ಕಾಂ: ಬಯಲು ಸೀಮೆ, ಬರದ ನಾಡು ಚಿತ್ರದುರ್ಗದಂತಹ ಜಿಲ್ಲೆಗಳಲ್ಲಿ ಬೀಳುವ ಮಳೆಯನ್ನು ಆಶ್ರಯಿಸಿ ಭತ್ತ ಬೆಳೆಯಬಹುದು. ಅತ್ಯಂತ ಕಡಿಮೆ ನೀರು ಉಪಯೋಗಿಸಿ ಬೆಳೆಯುವ ಭತ್ತವನ್ನು ಕೃಷಿ ವಿಜ್ಞಾನಿಗಳು ಅಭವೃದ್ಧಿಪಡಿಸಿದ್ದಾರೆ.
ಹೌದು, ಇಂಥದ್ದೊಂದು ಹೊಸ ಕನಸನ್ನು ಕೃಷಿ ವಿಜ್ಞಾನಿ ಏರೋಬಿಕ್ ಭತ್ತದ ತಜ್ಞ ಪ್ರೊ.ಎಚ್.ಇ.ಶಶಿಧರ್ ಸಿರಿಗೆರೆ ತರಳಬಾಳು ಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಅಲ್ಲಿನ ರೈತರ ಎದುರಿನಲ್ಲಿ ಬಿತ್ತಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನಕ್ಕೆ ಇನ್ನೆರಡು ದಿನ ಬಾಕಿ | ಸಿಎಂ ಸ್ವಾಗತಕ್ಕೆ ಭರ್ಜರಿ ಸಿದ್ಧತೆ

ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಶ್ರದ್ಧಾಂಜಲಿ ಸಮಾರಂಭದಲ್ಲಿ ಶ್ರಮಿಸಿದ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಳೆ ಆಶ್ರಯಿಸಿ, ನೀರು ನಿಲ್ಲಿಸದೇ ಬೆಳೆಯುವ ಭತ್ತದ ತಳಿಯನ್ನು ಅಭಿವೃದ್ಧಿ ಪಡಿಸಿದ್ದು, ಅದರ ಹೆಸರು ಏರೋಬಿಕ್. ಇದನ್ನು ಮಳೆಯನ್ನು ಆಶ್ರಯಿಸಿ ಬೆಳೆಯಬಹುದು ಎಂದು ವಿವರಣೆ ನೀಡಿದ್ದಾರೆ.
ಹಳೆಯ ಪದ್ಧತಿ ಪ್ರಕಾರ ಭತ್ತ ನಾಟಿ ಮಾಡುವಾಗ ಬೇರುಗಳು ಆಳವಾಗಿ ಇಳಿಯುತ್ತಿದ್ದವು. ಆದರೆ, ಹೊಸ ತಳಿಗಳು ಬೇರು ಮೇಲೆ ಇರುತ್ತಿದ್ದ ಪರಿಣಾಮ ಹೆಚ್ಚು ನೀರು ಬೇಡುತ್ತಿದ್ದವು. ಬೇರು ಆಳಕ್ಕೆ ಹೋದರೆ ಭೂಮಿಯೊಳಗಿನ ತೇವಾಂಶ ಪಡೆದು ಬೆಳೆಯುತ್ತವೆ. ಈ ರೀತಿಯ ತಳಿಯನ್ನು ಕ್ರಾಸಿಂಗ್ ಮಾಡಿ ಏರೋಬಿಕ್ ಎಂದು ಅಭಿವೃದ್ಧಿಪಡಿಸಿದ್ದು ಇದನ್ನು ರಾಗಿ, ಜೋಳದಂತೆ ಭಿತ್ತನೆ ಮಾಡಿ ಬೆಳೆಯಬಹುದು. ನಾಟಿ ಮಾಡುವ ಅವಶ್ಯಕತೆ ಇಲ್ಲ. ಇದರಲ್ಲಿ ನೀರು ನಿಲ್ಲಿಸುವ ಅಗತ್ಯವೂ ಇಲ್ಲ ಎಂದು ವಿವರಿಸಿದರು.
ಸಾಮಾನ್ಯವಾಗಿ ಈಗ ಇರುವ ಪದ್ಧತಿಯಲ್ಲಿ ಭತ್ತ ಬೆಳೆಯಲು 1 ಕೆ.ಜಿ ಭತ್ತ ಬೆಳೆಯಲು 5 ಸಾವಿರ ಲೀಟರ್ ನೀರಿನ ಅವಶ್ಯಕತೆ ಬರುತ್ತದೆ. ಆದರೆ, ಏರೋಬಿಕ್ ಭತ್ತ ಬೆಳೆಯಲು ಕೇವಲ 500 ರಿಂದ 2 ಸಾವಿರ ಲೀಟರ್ ನೀರು ಸಾಕಾಗುತ್ತದೆ. ಇಲ್ಲಿ ನೀರಿನ ಉಳಿತಾಯವಾಗುತ್ತದೆ ಎಂದರು.

ಏರೋಬಿಕ್ ಭತ್ತ ಬೆಳೆಯಲು ಎಷ್ಟು ಖರ್ಚು ಬರಬಹುದು:
ಏರೋಬಿಕ್ ವಿಧಾನದಲ್ಲಿ ಭತ್ತ ಬೆಳೆಯಲು ಒಂದು ಎಕರೆಗೆ ಕನಿಷ್ಟ 10 ರಿಂದ 13 ಸಾವಿರ ರೂ. ಖರ್ಚು ಬರುತ್ತದೆ. ಈ ತಳಿಗೆ ಸೂರ್ಯನ ಕಿರಣಗಳು ಈ ತಳಿಗೆ ಅತ್ಯವಶ್ಯ. ರಾಸಾಯನಿಕ ಬಳಸದೇ, ಫರ್ಟಿಲೈಜರ್ಸ್ ಇಲ್ಲದೆ ಕುರಿ, ಕೋಳಿ, ದನದ ಗೊಬ್ಬರ ಬಳಸಿಕೊಂಡು ಈ ತಳಿಯನ್ನು ಬೆಳೆಯಬಹುದು.
ಇನ್ನೂ ಈ ತಳಿಯನ್ನು ಅಡಕೆ ಹಾಕಿದ ರೈತರು ಕೂಡಾ ಅಡಕೆ ನಾಟಿ ಮಾಡಿದ 1 ರಿಂದ 3 ವರ್ಷಗಳವರೆಗೆ ಅಡಿಕೆ ಸಾಲುಗಳ ನಡುವೆ ಬೆಳೆಯಬಹುದು. ನಾಟಿ ಮಾಡದ 4 ತಿಂಗಳಲ್ಲೇ ಉತ್ತಮ ಇಳುವರಿ ದೊರೆಯುತ್ತದೆ ಎಂದು ರೈತರಿಗೆ ತಿಳಿಸಿದರು.
ಸಾಂಪ್ರದಾಯಿಕ ಭತ್ತದ ಕೃಷಿಯಲ್ಲಿ ಬಿತ್ತನೆಗೆ ಎಕರೆಗೆ 25 ಕೆ.ಜಿ ಭತ್ತದ ಬೀಜ ಬೇಕಾಗುತ್ತದೆ. ಆದರೆ, ಏರೋಬಿಕ್ ಪದ್ಧತಿಯಲ್ಲಿ ಒಂದು ಎಕರೆಗೆ 5 ಕೆ.ಜಿ. ಬೀಜ ಸಾಕಾಗುತ್ತದೆ. ಈ ತಳಿಯಲ್ಲಿ ರೋಗ ನಿರೋಧಕ ಶಕ್ತಿ ಇರುವುದು ರೈತರಿಗೆ ವರದಾನವಾಗಲಿದೆ.
ಸಿರಿಗೆರೆ ಶಾಂತಿವನದಿಂದಲೇ ಪ್ರಯೋಗ ಪ್ರಾರಂಭ:
ಕೃಷಿ ವಿಜ್ಞಾನಿಗಳು ಹೇಳಿದ ಎಲ್ಲ ಮಾಹಿತಿಗಳನ್ನು ಆಸಕ್ತಿಯಿಂದ ಆಲಿಸಿದ ಸಿರಿಗೆರೆ ತರಳಬಾಳು ಮಠದ ಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿ, ಸಾಂಪ್ರದಾಯಿಕವಾಗಿ ಭತ್ತ ಬೆಳೆಯುವ ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ ಏರೋಬಿಕ್ ಭತ್ತ ಬಿತ್ತನೆಗೆ ನಾವು ಮುಂದಾಗುತ್ತೇವೆ ಎಂದರು.
ಏರೋಬಿಕ್ ಭತ್ತದ ಬಗ್ಗೆ ಹಲವು ಕೃಷಿ ವಿಜ್ಞಾನಿಗಳು ನಮ್ಮ ಜೊತೆಗೆ ಚರ್ಚೆ ನಡೆಸಿದ್ದಾರೆ. ರೈತರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶಾಂತಿವನದ ಬಳಿ ಒಂದು ಎಕರೆ ಜಾಗದಲ್ಲಿ ನಾವೇ ಏರೋಬಿಕ್ ಭತ್ತ ಬಿತ್ತನೆ ಮಾಡುತ್ತೇವೆ. ಬೆಳೆದ ನಂತರ ರೈತರು ಬಂದು ನೋಡಿಕೊಂಡು ತಾವು ಬೆಳೆಯಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಎನ್.ಆರ್.ಗಂಗಾಧರಪ್ಪ, ವಿಜ್ಞಾನಿ ಎಸ್.ಬಿ.ಪ್ರಕಾಶ್, ತರಳಬಾಳು ವಿದ್ಯಾಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಸ್.ಬಿ.ರಂಗನಾಥ್, ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಪ್ಪ ಹಾಗೂ ಹಲವು ರೈತರು ಮಠದ ಭಕ್ತರು ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
