ಮಾರುಕಟ್ಟೆ ಧಾರಣೆ
ಕೃಷಿ ಸಚಿವರ ಜೊತೆಗೆ ನಡೆದ ಸಂವಾದದಲ್ಲಿ ಜಿಲ್ಲೆಯ ರೈತ ಮುಖಂಡರು ಮಂಡಿಸಿದ ವಿಚಾರಗಳ ಸಂಪೂರ್ಣ ವಿವರ


ಚಿತ್ರದುರ್ಗ ನ್ಯೂಸ್:
ಬರದ ದವಡೆಗೆ ಸಿಲುಕಿರುವ ಚಿತ್ರದುರ್ಗ ಜಿಲ್ಲೆಗೆ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಬಂದಿದ್ದ ವೇಳೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರು, ರೈತರು, ಸಾವಯವ ಉತ್ಪನ್ನಗಳ ಉದ್ದಿಮೆದಾರರು ಸೇರಿದಂತೆ ಕೃಷಿ ಸಂಬಂಧಿತ ವಲಯದ ಪ್ರಮುಖರ ಜೊತೆಗೆ ಸಂವಾದ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಜಿಲ್ಲೆಯ ರೈತರು ಸಚಿವರ ಬಳಿ ಜಿಲ್ಲೆಯ ಕೃಷಿಗಾಗಿ ಆಗಬೇಕಾಗಿರುವ ಹಲವು ಬೇಡಿಕೆಗಳನ್ನು ಮಂಡನೆ ಮಾಡಿದರು. ಕೆಲ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಇನ್ನೂ ಕೆಲವನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವ ಭರವಸೆ ನೀಡಿದರು.
ಯಾವೆಲ್ಲಾ ರೈತ ಮುಖಂಡರು ಯಾವ ಯಾವ ಬೇಡಿಕೆಗಳನ್ನು ಮಂಡಿಸಿದರು ಎನ್ನುವ ಪೂರ್ಣ ವಿವರ ಇಲ್ಲಿದೆ.
ಆರಂಭದಲ್ಲಿ ರಾಜ್ಯ ರೈತ ಸಂಘದಿಂದ ಬೇಡಿಕೆಗಳನ್ನು ಓದಿ, ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಸಲಾಯಿತು. ಮನವಿ ಪತ್ರದಲ್ಲಿ, ಚಿತ್ರದುರ್ಗ ಜಿಲ್ಲೆ ಸಂಪೂರ್ಣ ಬರಗಾಲಕ್ಕೆ ತುತ್ತಾಗಿದ್ದು, ಕೂಡಲೇ ಬೆಳೆವಿಮೆ ಹಾಗೂ ಪರಿಹಾರವನ್ನು ರೈತರ ಖಾತೆಗೆ ಹಾಕಬೇಕು.
ಪರಿಹಾರ ಮೊತ್ತ ಹೆಕ್ಟೇರ್ಗೆ 25 ಸಾವಿರಕ್ಕೆ ಹೆಚ್ಚಿಸಬೇಕು. ಜಾನುವಾರುಗಳಿಗೆ ಗೋಶಾಲೆ ತೆರೆಯಬೇಕು. ರೈತರ ಎಲ್ಲಾ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು.
ಈಚೆಗೆ ರೈತರು ಸಾವಯವ ಕೃಷಿಗೆ ಒಲವು ತೋರುತ್ತಿದ್ದು, ಹೇರಳವಾಗಿ ಸಾವಯವ ಗೊಬ್ಬರ, ಔಷಧಿಗಳು ಪರ್ಟಿಲೈಜರ್ ಅಂಗಡಿಗಳಲ್ಲಿ ಸಿಗಬೇಕು. ಕೃಷಿ ಇಲಾಖೆಯಿಂದ ಸೆಣಬು ಬೀಜ ವಿತರಿಸಬೇಕು. ರೈತರು ಖರೀದಿಸುವ ಉಪಕರಣಗಳಿಗೆ ಜಿಎಸ್ಟಿ ವಿಧಿಸಬಾರದು. ಪ್ರಸಕ್ತ ವರ್ಷದಿಂದ ಪಿವಿಸಿ ಪೈಪ್ ವಿತರಿಸಬೇಕು. ಎಲ್ಲಾ ಸಾಮಾನ್ಯ ವರ್ಗದ ರೈತರಿಗೂ ಸ್ಪ್ರಿಂಕ್ಲರ್ ಸೆಟ್ ವಿತರಿಸಬೇಕು ಎಂದು ಉಲ್ಲೇಖಿಸಿದ್ದರು.
ಹೊಸದುರ್ಗ ತಾಲೂಕು ರೈತ ಸಂಘದಿಂದ, ಪ್ರಸ್ತುತ ರೈತ ಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ನೀಡಲಾಗುತ್ತಿರುವ ಪ್ರೋತ್ಸಾಹಧನವನ್ನು ಹೆಕ್ಟೇರ್ಗೆ 10 ಸಾವಿರ ಇರುವುದನ್ನು 20 ಸಾವಿರಕ್ಕೆ ಹೆಚ್ಚಿಸಬೇಕು. ಕೊಬ್ಬರಿ ಖರೀದಿ ಕೇಂದ್ರವನ್ನು ಮರು ಸ್ಥಾಪಿಸಬೇಕು. ಬೆಂಬಲ ಬೆಲೆಯಡಿ ರಾಗಿ ಖರೀದಿಯಲ್ಲಿ ನಡೆದ ಹಗರಣದ ಬಗ್ಗೆ ಶೀಘ್ರ ತನಿಖೆ ನಡೆಸಿ ರೈತರ ಖಾತೆಗೆ ಹಣ ಜಮಾ ಮಾಡಬೇಕು. ಕೃಷಿ ಉಪಕರಣಗಳನ್ನು ಸಬ್ಸಿಡಿ ದರದಲ್ಲಿ ಒದಗಿಸಬೇಕು ಮನವಿ ಸಲ್ಲಿಸಲಾಯಿತು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ: ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಮಾನದಂಡಗಳು ಅವೈಜ್ಞಾನಿಕವಾಗಿವೆ. ಜುಲೈ 31 ಬೆಳೆವಿಮೆ ಪಾವತಿಸಲು ಕೊನೆಯ ದಿನ ಎಂದು ವ್ಯಾಪಕ ಪ್ರಚಾರ ಮಾಡಿ ಬೆಳೆ ಕಟ್ಟಿಸಿಕೊಳ್ಳಲಾಗುತ್ತದೆ. ನಾವು ಸಾಲ ಮಾಡಿ ಬೆಳೆವಿಮೆ ಕಟ್ಟುತ್ತೇವೆ. ಆದರೆ ರೈತರಿಗೆ ಬೆಳೆವಿಮೆ ಪಾವತಿಸಲು ಯಾವುದೇ ದಿನಾಂಕ ನಿಗಧಿಪಡಿಸುವುದಿಲ್ಲ. 7 ವರ್ಷಗಳ ಸರಾಸರಿ ಗಣನೆಗೆ ತೆಗೆದಕೊಂಡು ಬೆಳೆವಿಮೆ ಪಾವತಿಮಾಡಲಾಗುತ್ತಿದೆ. ಇದನ್ನು ಆಯಾ ವರ್ಷವೇ ಗಣನೆಗೆ ತೆಗೆದುಕೊಳ್ಳಬೇಕು. ಆಂದ್ರ ಪ್ರದೇಶದ ಮಾದರಿ ಬೆಳೆವಿಮೆ ಜಾರಿಗೆ ತರಬೇಕು ಎಂದು ಕೃಷಿ ಸಚಿವರಿಗೆ ಮನವಿ ಮಾಡಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ: ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು-ನಾಲ್ಕು ಹಳ್ಳಿಗಳು ವಿ.ವಿ.ಸಾಗರ ಹಿನ್ನೀರಿನಲ್ಲಿ ಮುಳುಗಿವೆ. ವರ್ಷದಿಂದ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಿಲ್ಲ. ನಿಜವಾದ ಭೂರಹಿತ ರೈತರಿಗೆ ಬದುಕಲು ಅವಕಾಶ ನೀಡಬೇಕು. 40 ರಿಂದ 50 ವರ್ಷಗಳ ಕಾಲ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ಕೃಷಿ ಸಚಿವರಿಗೆ ಒತ್ತಾಯಿಸಿದರು.
ಕೊಂಚೆ ಶಿವರುದ್ರಪ್ಪ: ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ಸಮಗ್ರ ನೀರಾವರಿ ಆಗಬೇಕು ಎಂಬ ಉದ್ದೇಶದಿಂದ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸಲಾಗಿದ್ದು, ಈ ಯೋಜನೆಯು ಕುಂಠಿತಗೊಂಡಿದೆ. ಭದ್ರಾ ಮೇಲ್ದಂಡೆ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ರೈತರ ಕೃಷಿ ಪಂಪ್ಸೆಟ್ಗಳಿಗೆ ಹಗಲು ವೇಳೆಯಲ್ಲಿ ವಿದ್ಯುತ್ ನೀಡಬೇಕು. ಯಾವುದೇ ಕಾರಣಕ್ಕೂ ರಾತ್ರಿ ವೇಳೆ ವಿದ್ಯುತ್ ನೀಡಬಾರದು ಎಂದು ಎಂದು ರಾಷ್ಟ್ರೀಯ ಕಿಸಾನ್ ಸಂಘದಿಂದ ಮನವಿ ಮಾಡಿದರು.
ಎಚ್.ಆರ್.ತಿಮ್ಮಯ್ಯ: ಚಿತ್ರದುರ್ಗ ಜಿಲ್ಲೆಯ 6 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದೆ. ಆದರೆ, ಅಧಿಕಾರಿಗಳು ತಯಾರಿಸಿರುವ ವರದಿಯಲ್ಲಿ ಹಿರಿಯೂರು ಹಾಗೂ ಚಳ್ಳಕೆರೆ ಬರಪಟ್ಟಿಯಿಂದ ಕೈ ಬಿಟ್ಟು ಹೋಗಿವೆ. ಈ ಬಗ್ಗೆ ಗಮನಹರಿಸಿ ಸರಿಯಾದ ವರದಿ ತರಿಸಿಕೊಂಡು ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು.
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಗಿರೀಶ್, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್, ತಹಶೀಲ್ದಾರ್ ಡಾ.ನಾಗವೇಣಿ ಇದ್ದರು.
–
ನಾನು ರೈತ ಕುಟುಂಬದಿಂದ ಬಂದವನು:
ನಾನು ರೈತರ ಕುಟುಂಬದ ಹಿನ್ನಲೆಯಿಂದ ಬಂದವನು, ರೈತರ ಸಮಸ್ಯೆ ಅರಿತಿದ್ದೇನೆ. ರಾಜ್ಯದ 31 ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಜಿಲ್ಲೆ ಚಿತ್ರದುರ್ಗ. ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಬರ ಪರಿಸ್ಥಿತಿಯ ವಸ್ತು ಸ್ಥಿತಿ ವರದಿ ಸಿದ್ದವಾಗಿದ್ದು, ಇನ್ನೂ ಎರಡು ತಾಲ್ಲೂಕುಗಳ ವಾಸ್ತವ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ, ಸೆಪ್ಟೆಂಬರ್ ಮೊದಲ ವಾರದಲ್ಲಿ ಬರಪೀಡಿತ ತಾಲ್ಲೂಕುಗಳ ಘೋಷಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ರೈತರು ಯಾರು ಆತಂಕ ಪಡಬೇಡಿ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ರೈತರಿಗೆ ಭರವಸೆ ನೀಡಿದರು.
ರಾಜ್ಯ ಸರ್ಕಾರ ರೈತರ ಆಶೀರ್ವಾದದಿಂದ ರಚನೆಯಾಗಿದ್ದು, ಸರ್ಕಾರ ರೈತರ ಪರವಿದೆ. ರೈತರು ಸಲ್ಲಿಸಿರುವ ಮನವಿ, ಸಲಹೆಗಳನ್ನು ಪೂರ್ಣ ಪ್ರಮಾಣದಲ್ಲಿ ಅಧ್ಯಯನ ಮಾಡಿ, ಸಮಸ್ಯೆಯನ್ನು ಸಂಪೂರ್ಣ ವಿಮರ್ಶೆ ಮಾಡಿ, ಶೇ.100ರಷ್ಟು ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಬೆಳೆವಿಮೆ ನೋಂದಣಿಗಾಗಿ ರೈತರು ರೂ.1265 ಕೋಟಿ ಹಣ ಪಾವತಿಸಿ ಬೆಳೆ ವಿಮಾ ಕಂತು ಹಣ ಪಾವತಿಸಿದ್ದಾರೆ. ರೂ.8661 ಕೋಟಿ ಹಣ ರೈತರಿಗೆ ಮರುಪಾವತಿಯಾಗಿದೆ. ಹೀಗಾಗಿ ಒಟ್ಟು 7396 ಕೋಟಿ ರೂ. ಹಣ ಬೆಳೆವಿಮೆಯಿಂದ ಸಿಕ್ಕಿದಂತಾಗಿದೆ. ಬೆಳೆವಿಮೆಯ ಮಾನದಂಡಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ವಿಮಾ ಕಂಪನಿಗಳ ಜೊತೆ ಚರ್ಚಿಸಿ ಸರಿಪಡಿಸುವ ಕೆಲಸ ಮಾಡಲಾಗುವುದು. ಜಿಲ್ಲಾಮಟ್ಟದ ಸಮಸ್ಯೆಗಳನ್ನು ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರು ಬಗೆಹರಿಸಲಿದ್ದಾರೆ ಎಂದರು.
ರಾಜ್ಯ ಸರ್ಕಾರವು ಆಗಸ್ಟ್ 1 ರಿಂದ ರೂ.3 ಲಕ್ಷದಿಂದ 5 ಲಕ್ಷದವರೆಗೆ ಶೂನ್ಯ ಬಡ್ಡಿದರಲ್ಲಿ ಸಾಲಸೌಲಭ್ಯ ನೀಡುತ್ತಿದ್ದು, ರೂ.15 ಲಕ್ಷದವರೆಗೂ ಶೇ.3ರ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತಿದೆ ಎಂದರು. ರೈತರ ಕೃಷಿ ಪಂಪ್ಸೆಟ್ಗಳಿಗೆ ರಾತ್ರಿಯ ಬದಲು ಹಗಲು ವೇಳೆಯಲ್ಲಿ ವಿದ್ಯುತ್ ಸರಬರಾಜು ಪೂರೈಕೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)
—

